ದಾವಣಗೆರೆ : ನಿವೃತ್ತ ಪೊಲೀಸ್ ಅಧಿಕಾರಿ ಎಲ್.ರೇವಣಸಿದ್ಧಪ್ಪ, ಶೈಕ್ಷಣಿಕ ಸಂಘಟಕ, ಹೋರಾಟಗಾರ ಮತ್ತು ಹಿರಿಯ ಪ್ರಾಧ್ಯಾಪಕ ಪ್ರೊ.ಸಿ.ಎಚ್.ಮುರಿಗೇಂದ್ರಪ್ಪ ಮತ್ತು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯ ಸಮಾಜ ಸೇವಕ ಎಂ.ರಾಮಪ್ಪ ಅವರಿಗೆ ಈ ಬಾರಿ ವಿಶ್ವವಿದ್ಯಾನಿಲಯ ವತಿಯಿಂದ ಡಿ.ಲಿಟ್- ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತಿದೆ. ರಾಜ್ಯಪಾಲರು ಈ ಆಯ್ಕೆ ಮಾಡಿದ್ದಾರೆ ಎಂದು ಪ್ರೊ.ಕುಂಬಾರ ಹೇಳಿದರು.
ಶ್ರೀಯುತರು ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಿದ ಗುರುತರ ಸೇವೆ, ಸಮಾಜಪರ ಕಾಳಜಿಯ ಕಾರ್ಯಗಳು ಮತ್ತು ಶೈಕ್ಷಣಿಕ ಉನ್ನತಿಗೆ ನೀಡಿದ ಕೊಡುಗೆಗಳನ್ನು ಪುರಸ್ಕಾರಕ್ಕೆ ಪರಿಗಣಿಸಲಾಗಿದೆ ಎಂದು ಹೇಳಿದರು.
ಡಾ. ವಾಸುದೇವ ಕಲ್ಕುಂಟೆ ಆತ್ರೆ
ಡಾ. ವಾಸುದೇವ್ ಕಲ್ಕುಂಟೆ ಆತ್ರೆ (ವಿ.ಕೆ. ಆತ್ರೆ) ಅವರು ಭಾರತದ ಅತ್ಯಂತ ಗೌರವಾನ್ವಿತ ವಾಯುಯಾನ ಮತ್ತು ರಕ್ಷಣಾ ವಿಜ್ಞಾನಿಗಳಲ್ಲಿ ಒಬ್ಬರಾಗಿದ್ದು, ಅವರ ವೃತ್ತಿಜೀವನವು ದೇಶದ ತಾಂತ್ರಿಕ ಸ್ವಾವಲಂಬನೆಯ ಗುರಿಯೊಂದಿಗೆ ಆಳವಾಗಿ ಜೋಡಣೆಗೊಂಡಿದೆ. 1939 ರಲ್ಲಿ ಬೆಂಗಳೂರು ನಗರದಲ್ಲಿ ಜನಿಸಿದ ಅವರು, ಬಾಲ್ಯದಲ್ಲಿಯೇ ಎಂಜಿನಿಯರಿಂಗ್ ಮೇಲಿನ ಆಸಕ್ತಿಯನ್ನು ಬೆಳೆಸಿಕೊಂಡು, ಮುಂದಿನ ದಿನಗಳಲ್ಲಿ ಭಾರತದ ಆಧುನಿಕ ರಕ್ಷಣಾ ಸಂಶೋಧನಾ ವ್ಯವಸ್ಥೆಯನ್ನು ರೂಪಿಸುವಲ್ಲಿ ಮಹತ್ವದ ಪಾತ್ರವಹಿಸಿದರು.
ಡಾ. ಆತ್ರೆ ಅವರು ಭಾರತದಲ್ಲೇ ತಮ್ಮ ಪ್ರಾರಂಭಿಕ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ, 1967 ರಲ್ಲಿ ಕೆನಡಾದ ಯೂನಿವರ್ಸಿಟಿ ಆಫ್ ವಾಟರ್ಲೂನಲ್ಲಿ ಎಂಜಿನಿಯರಿಂಗ್ ವಿಷಯದಲ್ಲಿ ಪಿಎಚ್.ಡಿ ಪದವಿಯನ್ನು ಪಡೆದರು. ಕೆಲ ವರ್ಷಗಳು ಕೆನಡಾದಲ್ಲಿ ಕಾರ್ಯನಿರ್ವಹಿಸಿದ ನಂತರ, ದೇಶ ಸೇವೆಯ ಉದ್ದೇಶದಿಂದ ಭಾರತಕ್ಕೆ ಮರಳಿ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO)ಗೆ ಸೇರಿದರು. ಈ ನಿರ್ಧಾರವು ಭಾರತದ ರಕ್ಷಣಾ ವಿಜ್ಞಾನ ಕ್ಷೇತ್ರದಲ್ಲಿ ಅವರ ದೀರ್ಘ ಮತ್ತು ಪ್ರಭಾವಶಾಲಿ ಸೇವೆಯ ಆರಂಭವಾಗಿತ್ತು.
ಡಿಆರ್ಡಿಒನಲ್ಲಿ ಹಂತ ಹಂತ ವಾಗಿ ಉನ್ನತ ಸ್ಥಾನಗಳಿಗೆ ಏರಿದ ಡಾ. ಆತ್ರೆ ಅವರು, ಸಂಸ್ಥೆಯ ಮಹಾನಿರ್ದೇಶಕರಾಗಿ ಹಾಗೂ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು.1999 ರಿಂದ 2004 ರವರೆಗೆ ಅವರು ಭಾರತದ ರಕ್ಷಣಾ ಸಚಿವರ ವೈಜ್ಞಾನಿಕ ಸಲಹೆಗಾರರಾಗಿ ಕಾರ್ಯನಿರ್ವಹಿಸಿದರು.
ಈ ಅವಧಿಯಲ್ಲಿ ಲೈಟ್ ಕಾಂಬಾಟ್ ಏರ್ಕ್ರಾಫ್ಟ್ (ತೇಜಸ್), ಕಾವೇರಿ ಏರೋ ಎಂಜಿನ್, ಅರ್ಜುನ್ ಮುಖ್ಯ ಯುದ್ಧ ಟ್ಯಾಂಕ್, ಕ್ಷಿಪಣಿ ವ್ಯವಸ್ಥೆಗಳು ಮತ್ತು ಎಲೆಕ್ಟ್ರಾನಿಕ್ ವಾರ್ಫೇರ್ ತಂತ್ರಜ್ಞಾನಗಳAತಹ ಪ್ರಮುಖ ಸ್ವದೇಶಿ ರಕ್ಷಣಾ ಯೋಜನೆಗಳಿಗೆ ತಂತ್ರಾತ್ಮಕ ಮಾರ್ಗದರ್ಶನ ನೀಡಿದರು. ಈ ಯೋಜನೆಗಳು ಇಂದಿಗೂ ಭಾರತದ ರಕ್ಷಣಾ ಸಾಮರ್ಥ್ಯದ ಮೂಲಸ್ತಂಭಗಳಾಗಿವೆ.
ನೀರಿನಡಿ ತಂತ್ರಜ್ಞಾನಗಳ ಕ್ಷೇತ್ರದಲ್ಲಿ ಡಾ. ಆತ್ರೆ ಅವರ ಕೊಡುಗೆ ಅತ್ಯಂತ ಮಹತ್ವದ್ದಾಗಿದೆ. ಸೋನಾರ್ ಮತ್ತು ಟ್ರಾನ್ಸ್ಡ್ಯೂಸರ್ ತಂತ್ರಜ್ಞಾನಗಳಲ್ಲಿ ಅವರು ಭಾರತದಲ್ಲಿ ಮುಂಚೂಣಿಯವರಾಗಿದ್ದು, ಧ್ವನಿ (DHWANI) ಎಂಬ ನೀರಿನಡಿ ಸಂಶೋಧನಾ ಮೂಲಸೌಕರ್ಯವನ್ನು ಸ್ಥಾಪಿಸುವ ಮೂಲಕ ದೇಶದ ಸಮುದ್ರ ರಕ್ಷಣಾ ಸಾಮರ್ಥ್ಯಕ್ಕೆ ಬಲ ನೀಡಿದರು. ಜೊತೆಗೆ, ಸಾಗರಧ್ವನಿ ಎಂಬ ಸಾಗರಶಾಸ್ತ್ರೀಯ ಸಂಶೋಧನಾ ಹಡಗಿನ ಅಭಿವೃದ್ಧಿಯಲ್ಲೂ ಅವರು ಪ್ರಮುಖ ಪಾತ್ರ ವಹಿಸಿದರು.
ಡಿಆರ್ಡಿಒಯಿಂದ ನಿವೃತ್ತಿಯಾದ ಬಳಿಕವೂ ಡಾ. ಆತ್ರೆ ಅವರು ವಿಜ್ಞಾನ, ತಂತ್ರಜ್ಞಾನ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಸಕ್ರಿಯರಾಗಿಯೇ ಉಳಿದರು. ಭಾರತೀಯ ಎಂಜಿನಿಯರಿಂಗ್ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ (IIEST), ಶಿಬ್ಪುರದ ಅಧ್ಯಕ್ಷರಾಗಿಯೂ ಸೇರಿದಂತೆ ಅನೇಕ ಸಲಹಾ ಮತ್ತು ನಾಯಕತ್ವದ ಪಾತ್ರಗಳನ್ನು ವಹಿಸಿಕೊಂಡರು.
ಅವರ ವಿಶಿಷ್ಟ ಸೇವೆಗೆ ಗೌರವವಾಗಿ ಡಾ. ಆತ್ರೆ ಅವರಿಗೆ ಪದ್ಮ ಭೂಷಣ (2000) ಮತ್ತು ಪದ್ಮ ವಿಭೂಷಣ (2016) ಸೇರಿದಂತೆ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳನ್ನು ನೀಡಲಾಗಿದೆ. ಸ್ವದೇಶಿ ರಕ್ಷಣಾ ತಂತ್ರಜ್ಞಾನಗಳ ಅಭಿವೃದ್ಧಿಗೆ ಅವರ ದೃಷ್ಟಿ, ನಾಯಕತ್ವ ಮತ್ತು ನಿಷ್ಠೆ ಭಾರತೀಯ ವಿಜ್ಞಾನ ಇತಿಹಾಸದಲ್ಲಿ ಶಾಶ್ವತವಾದ ಸ್ಥಾನ ಪಡೆದಿದೆ.
ಎಲ್. ರೇವಣ್ಣಸಿದ್ಧಯ್ಯ, ವಿಶ್ರಾಂತ ಐ.ಪಿ.ಎಸ್ ಅಧಿಕಾರಿ
ಎಲ್. ರೇವಣ್ಣಸಿದ್ಧಯ್ಯನವರು, ಕರ್ನಾಟಕದ ವಿಶ್ರಾಂತ ಡೈರೆಕ್ಟರ್ ಜನರಲ್ (ಕಾರಾಗೃಹ) ಮತ್ತು ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದು, ಸದರಿಯವರು 1940 ರಲ್ಲಿ ಕರ್ನಾಟಕದಲ್ಲಿ ಜನಿಸಿದವರಾಗಿದ್ದಾರೆ. ಇವರು ಐ.ಪಿ.ಎಸ್. ಕರ್ನಾಟಕ ಕೇಡರ್ ಅಧಿಕಾರಿಯಾಗಿ 1965 ರಲ್ಲಿ ನೇಮಕಗೊಂಡಿದ್ದು, ಜಿಲ್ಲಾ ವರಿಷ್ಠಾಧಿಕಾರಿಯಾಗಿ ಸೇವೆಯನ್ನು ಪ್ರಾರಂಭಿಸಿದ್ದು, ಸುಮಾರು ನಾಲ್ಕು ದಶಕಗಳವರೆಗೆ ನಮ್ಮ ರಾಜ್ಯದಲ್ಲಿ ಪೊಲೀಸ್ ಇಲಾಖೆಯಲ್ಲಿ ಅನೇಕ ಸ್ತರದ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಅಂದಿನ ದಿನಗಳಲ್ಲಿ ಹೊಸದಾಗಿ ವ್ಯವಸ್ಥಿತವಾಗಿದ್ದ ಪತ್ತೇದಾರಿ ದಳ (ಸಿ.ಒ.ಡಿ) ಕೋರ್ ಆಫ್ ಡಿಟೆಕ್ಟಿವ್ ಇನ್ಸಪೆಕ್ಟರ್ ಜನರಲ್ ಆಗಿ ನಿಯೋಜಿಸಲ್ಪಟ್ಟ ಎಲ್. ರೇವಣ್ಣಸಿದ್ದಯ್ಯನವರು ಆ ವ್ಯವಸ್ಥೆಯ ಕಾರ್ಯ ನಿರ್ವಹಣೆಯ ಗುಣಮಟ್ಟವನ್ನು ಸ್ಕಾಟ್ಲ್ಯಾಂಡ್ ಯಾರ್ಡ್ ಪತ್ತೆದಾರಿ ತಂಡದ ಸಮಾನತೆಗೆ ಬೆಳೆಸುವ ಸಾಧನೆಯನ್ನು ಮಾಡಿ ತೋರಿಸಿದರು. ಬೆಂಗಳೂರು ನಗರ ಪೊಲೀಸ್ ಕಮೀಷನರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅವಧಿಯಲ್ಲಿ ಕೆಲವು ವಿಶೇಷ ಯೋಜನೆಗಳನ್ನು ಹೊಯ್ಸಳ ಪೊಲೀಸ್ ಪಡೆ, ಮಕ್ಕಳ ಸಹಾಯವಾಣಿ, ವನಿತಾ ಸಹಾಯವಾಣಿ ಹಾಗೂ ಸಂಚಾರಿ ಪೊಲೀಸ್ ಸ್ಟೇಷನ್ ನಂತಹ ಕಾರ್ಯ ಯೋಜನೆಗಳನ್ನು ಜಾರಿಗೆ ತಂದ ಪರಿಪೂರ್ಣತೆಯ ಕೀರ್ತಿ ಇವರಿಗೆ ಸೇರಿದೆ.
ರೇವಣ್ಣಸಿದ್ಧಯ್ಯನವರು ಡಿ.ಜಿ ಮತ್ತು ಐ.ಜಿ.ಪಿ (ಕಾರಾಗೃಹ) ಯಾಗಿದ್ದ ಅವಧಿಯಲ್ಲಿ – ಕೈದಿಗಳಿಗೆ ಅತ್ಯುತ್ತಮ ಸಲಹೆಗಾರ – ಅವರ ಮನ ಪರಿವರ್ತನೆಯಲ್ಲಿ ಶ್ಲಾಘನೀಯ ಸೇವೆ ಸಲ್ಲಿಸಿರುತ್ತಾರೆ. ಅಲ್ಲದೆ, ಬಂಧಿಖಾನೆಗಳಲ್ಲಿ ನೈರ್ಮಲ್ಯತೆ ಮತ್ತು ಸುಧಾರಿತ ಸೌಲಭ್ಯಗಳನ್ನು ಜಾರಿಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸ್ ಸೇವೆಯು ಸಮಾಜದಲ್ಲಿ ಕೋಮು ಸಾಮರಸ್ಯಗಳನ್ನು ಮತ್ತು ಸೌಹಾರ್ಧತೆಯನ್ನು ಸೃಜಿಸುವ ದಿಸೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಮಾನ್ಯರು ಇಂತಹ ಮಹಾತ್ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ.
ಇವರು ಸೇವೆಯಿಂದ ನಿವೃತ್ತಿಯಾದ ನಂತರ ಅನೇಕಾನೇಕ ಶಿಕ್ಷಣ ಸಂಸ್ಥೆಗಳ ಸಲಹೆಗಾರರಾಗಿ, ಮುಖ್ಯಸ್ಥರಾಗಿ ಮತ್ತು ದಾನಿಗಳಾಗಿ ಗುರುತರ ಮತ್ತು ಜವಾಬ್ದಾರಿಯುತವಾಗಿ ಸಲ್ಲಿಸುತ್ತಿರುವ ಸೇವೆಯನ್ನು ಗುರುತಿಸಿ, ೨೦೨೬ರ ಜನವರಿ ೩೦ರಂದು ನಡೆಯುವ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯದಿಂದ “ಡಿ.ಲಿಟ್ – ಗೌರವ ಡಾಕ್ಟರೇಟ್” ಪದವಿಯನ್ನು ಪ್ರದಾನ ಮಾಡಲಾಗುತ್ತಿದೆ.
ಪ್ರೊ. ಸಿ.ಹೆಚ್. ಮುರಿಗೇಂದ್ರಪ್ಪ, ವಿಶ್ರಾಂತ ಪ್ರಾಧ್ಯಾಪಕರು, ದಾವಣಗೆರೆ.
ಪ್ರೊ. ಸಿ.ಹೆಚ್. ಮುರಿಗೇಂದ್ರಪ್ಪನವರು, ವಿಶ್ರಾಂತ ಪ್ರಾಧ್ಯಾಪಕರು, ದಾವಣಗೆರೆ ಇವರು – 1955 ರಲ್ಲಿ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಕುಂದೂರು ಗ್ರಾಮದಲ್ಲಿ ಜನಿಸಿದ್ದು ಇವರು ಪ್ರಾಥಮಿಕ, ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಗ್ರಾಮಾಂತರ ಪ್ರದೇಶದಲ್ಲಿ, ಸ್ನಾತಕ ಪದವಿಯನ್ನು ಮೈಸೂರಿನಲ್ಲಿ ಹಾಗೂ ಸ್ನಾತಕೋತ್ತರ ಪದವಿಯನ್ನು ಕರ್ನಾಟಕ ವಿಶ್ವವಿದ್ಯಾನಿಲಯ, ಧಾರವಾಡದಲ್ಲಿ ಪೂರ್ಣಗೊಳಿಸಿದ್ದಾರೆ.
ಮಾನ್ಯರು, ದಾವಣಗೆರೆಯ ಎ.ವಿ.ಕೆ ಮಹಿಳಾ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ರಾಜ್ಯಶಾಸ್ತç ಉಪನ್ಯಾಸಕರಾಗಿ 1983 ರಲ್ಲಿಸೇವೆಯನ್ನು ಪ್ರಾರಂಭಿಸಿ, 2010 ರಲ್ಲಿ ಪ್ರಾಧ್ಯಾಪಕರಾಗಿ, 2015 ರಲ್ಲಿ ಸೇವೆಯಿಂದ ನಿವೃತ್ತಿ ಹೊಂದಿರುತ್ತಾರೆ. ಇವರ ವೃತ್ತಿ ಜೀವನದ ಅವಧಿಯಲ್ಲಿ – ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ಹಾಗೂ ಕಾಲೇಜು ಅಧ್ಯಾಪಕರ ಒಕ್ಕೂಟದ ಅಧ್ಯಕ್ಷರಾಗಿ, ಅಧ್ಯಾಪಕರುಗಳ ಸೇವೆಗೆ ಸಂಬAಧಿಸಿದ ಅನೇಕ ರೀತಿಯ ಸೇವಾ ಸೌಲಭ್ಯಗಳನ್ನು ಸರ್ಕಾರದಿಂದ ದೊರಕಿಸಿ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಇವರು ಕುವೆಂಪು ವಿಶ್ವವಿದ್ಯಾನಿಲಯದ ಚುನಾಯಿತ ಸೆನೆಟ್ ಮತ್ತು ಸಿಂಡಿಕೇಟ್ ಸದಸ್ಯರಾಗಿ ವಿಶ್ವವಿದ್ಯಾನಿಲಯದ ವ್ಯಾಪ್ತಿಯ ಮಹಾವಿದ್ಯಾಲಯಗಳಲ್ಲಿ – ವಿದ್ಯಾರ್ಥಿಗಳು ಮತ್ತು ಬೋಧಕ ವರ್ಗದವರಿಗೆ ಆವರಿಸಿದ್ದ ಶೈಕ್ಷಣಿಕ ಮತ್ತು ಪರೀಕ್ಷಾಂಗಸಮಸ್ಯೆಗಳನ್ನು ಪರಿಹರಿಸಲು ಶ್ರಮಿಸಿದ್ದಾರೆ.
ಕುವೆಂಪು ವಿಶ್ವವಿದ್ಯಾನಿಲಯ ಸ್ಥಾಪನೆಯಾದ ನಂತರ ದಾವಣಗೆರೆಯಲ್ಲಿ ಸ್ನಾತಕೋತ್ತರ ಅಧ್ಯಯನ ವಿಭಾಗಗಳನ್ನು ಪ್ರಾರಂಭಿಸುವುದರ ಬಗ್ಗೆ ಮೂಂಚೂಣಿ ಹೋರಾಟಗಾರರಾಗಿ ಶ್ರಮಿಸಿದ್ದಾರೆ. ದಾವಣಗೆರೆಯಲ್ಲಿ ನೂತನ ವಿಶ್ವವಿದ್ಯಾನಿಲಯವನ್ನು ಪ್ರಾರಂಭಿಸುವ ಸಲುವಾಗಿ – ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ಮಠಾಧಿಪತಿಗಳು, ಚುನಾಯಿತ ಜನಪ್ರತಿನಿಧಿಗಳು ಹಾಗೂ ಅತ್ಯಂತ ಹಿರಿಯ ಶಿಕ್ಷಣಾಸಕ್ತರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, 2009 ರಲ್ಲಿ ವಿಶ್ವವಿದ್ಯಾನಿಲಯದ ಸ್ಥಾಪನೆಯ ಸಂದರ್ಭದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಪ್ರೊ. ಸಿ.ಹೆಚ್. ಮುರಿಗೇಂದ್ರಪ್ಪ ಇವರು ಪ್ರಾಧ್ಯಾಪಕ ವೃತ್ತಿಯೊಂದಿಗೆ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ ಪ್ರಾಧ್ಯಾಪಕರಿಗೆ ಹಾಗೂ ಗ್ರಾಮೀಣ ಭಾಗದದಲ್ಲಿ ವಿದ್ಯಾರ್ಥಿಗಳ ಅಭ್ಯುದಯಕ್ಕಾಗಿ ಸಲ್ಲಿಸಿರುವ ಸಮಾಜಮುಖಿ ಸೇವೆಯನ್ನು ಗುರುತಿಸಿ, 2026 ರ ಜನವರಿ 30 ರಂದು ನಡೆಯುವ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯದಿಂದ “ಡಿ.ಲಿಟ್ – ಗೌರವ ಡಾಕ್ಟರೇಟ್” ಪದವಿ ಪ್ರದಾನ ಮಾಡಲಾಗುತ್ತಿದೆ.
ಎಂ. ರಾಮಪ್ಪ, ಸಮಾಜ ಸೇವಕರು, ಚಳ್ಳಕೆರೆ, ಚಿತ್ರದುರ್ಗ.
ಎಂ. ರಾಮಪ್ಪ ಇವರು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನೇರಲಗುಂಟೆ ಎಂಬ ಗ್ರಾಮದಲ್ಲಿ 1961 ರ ಜೂನ್ 01 ರಂದು ಜನಿಸಿರುತ್ತಾರೆ. ಇವರು ತಮ್ಮ ಹುಟ್ಟೂರಿನಲ್ಲಿಯೇ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಪಡೆದು, ವಿದ್ಯಾರ್ಥಿ ಜೀವನದಲ್ಲಿಯೇ ಸಾಮಾಜಿಕ ಸೇವಾ ಮನೋಭಾವಕ್ಕಾಗಿ ಅವರ ಶಿಕ್ಷಕರಿಂದ ಮತ್ತು ಊರಿನ ಪ್ರಮುಖರಿಂದ ಮೆಚ್ಚುಗೆ ಗಳಿಸಿರುತ್ತಾರೆ.
ರಾಮಪ್ಪ ನವರು 1984 ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತçದಲ್ಲಿ ಪದವಿಯನ್ನು ಪಡೆದಿರುತ್ತಾರೆ. ಸದರಿಯವರಿಗೆ ಉನ್ನತ ಶಿಕ್ಷಣ ಕ್ಷೇತ್ರದಲ್ಲಿನ ಆಸಕ್ತಿಯಿಂದಾಗಿ ಇವರು 1985 ರಲ್ಲಿ ಚಳ್ಳಕೆರೆಯ ಪ್ರೌಢಶಾಲೆಯಲ್ಲಿ ತಮ್ಮ ಬೋಧನಾ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ತದನಂತರ 1986 ರಲ್ಲಿ ಮೈಸೂರಿನ ಮಾತೃ ಮಂಡಳಿ ಶಿಕ್ಷಣ ಸಂಸ್ಥೆಯಲ್ಲಿ ಅರ್ಥಶಾಸ್ತç ಉಪನ್ಯಾಸಕರಾಗಿ 28 ವರ್ಷಗಳ ವರೆಗೆ ಸೇವೆಯನ್ನು ಸಲ್ಲಿಸಿ, ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಶ್ಲಾಘನೀಯ ಸಾಧನೆಗೈದಿದ್ದಾರೆ.
ಇವರು ಸಾರ್ವಜನಿಕ ಕ್ಷೇತ್ರದಲ್ಲಿ ಸದಾ ಜನಪರ ಚಿಂತನೆ ಹೊಂದಿದವರಾಗಿದ್ದು, ನಾಗರೀಕ ಕಲ್ಯಾಣ, ಶಿಕ್ಷಣದ ವಿಸ್ತರಣೆ ಯುವಜನರ ಸಬಲೀಕರಣ ಹಾಗೂ ಗ್ರಾಮೀಣಾಭಿವೃದ್ಧಿ ಕಾರ್ಯಚಟುವಟಿಕೆಗಳಲ್ಲಿ ವ್ಯಾಪಕ ಮತ್ತು ಪರಿಣಾಮಕಾರಿಯಾದಂತಹ ಸೇವೆ ಸಲ್ಲಿಸಿದ್ದಾರೆ. ಸಮಾಜ ಸೇವೆ ಜೊತೆಗೆ ಪರಿಸರಾಭಿವೃದ್ಧಿ ಮತ್ತು ನಿಸರ್ಗದ ಸಂರಕ್ಷಣೆಯು ಮಾನವನ ಅಭಿವೃದ್ಧಿಗೆ ಪೂರಕವಾಗಿದೆಯೆಂಬುದು ರಾಮಪ್ಪನವರ ಪರಿಕಲ್ಪನೆಯಾಗಿದೆ.
ಮಾನ್ಯರು ಸಮಾಜದಲ್ಲಿ ಬದಲಾವಣೆಯನ್ನು ತರಬೇಕೆಂಬ ಉದ್ದೇಶದಿಂದ ಅವರು ಕೈಗೊಂಡ ಪ್ರತಿಯೊಂದು ಕಾರ್ಯವು ಪ್ರಾಮಾಣಿಕತೆ, ಸ್ಪಷ್ಟ ದೃಷ್ಟಿಕೋನ ಮತ್ತು ಶ್ರಮದ ಚಿಹ್ನೆಯಾಗಿ ಅವರ ಬದ್ಧತೆಯನ್ನು ಪ್ರದರ್ಶಿಸಿದೆ ಮತ್ತು ನಿಜವಾದ ಜನ ಶಿಕ್ಷಕರನ್ನಾಗಿಸಿದೆ. ಶಿಕ್ಷಣದಿಂದ ಸೇವೆಗೆ ಮತ್ತು ಸೇವೆಯಿಂದ ಸಮಾಜಕ್ಕೆ ಎಂಬ ಪರಿಕಲ್ಪನೆಯಿಂದ ರಾಮಪ್ಪನವರು ಶಿಕ್ಷಣ ಮತ್ತು ಸಮಾಜಮುಖಿಯಾಗಿ ಸಲ್ಲಿಸಿರುವ ಸೇವೆಯನ್ನು ಗುರುತಿಸಿ, ದಾವಣಗೆರೆ ವಿಶ್ವವಿದ್ಯಾನಿಲಯದಿಂದ “ಡಿ.ಲಿಟ್ – ಗೌರವ ಡಾಕ್ಟರೇಟ್” ಪದವಿಯನ್ನು ಪ್ರದಾನ ಮಾಡಲಾಗುತ್ತಿದೆ.
