ದಾವಣಗೆರೆ ಡಿ.23 (Davanagere): ಪ.ಜಾತಿ ಮತ್ತು ಪ.ವರ್ಗದವರ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳ ತಡೆಗೆ ತ್ವರಿತ ಕ್ರಮದ ಜೊತೆಗೆ ಸರ್ಕಾರದಿಂದ ದೊರಕುವ ಸೌಲಭ್ಯಗಳನ್ನು ಸಕಾಲದಲ್ಲಿ ತಲುಪಿಸಬೇಕೆಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ. ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಲಾದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ 4ನೇ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
2024 ರ ಜನವರಿಯಿಂದ ಇಲ್ಲಿಯವರೆಗೆ 60 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 3 ಕೊಲೆ, 8 ಅತ್ಯಾಚಾರ, 49 ಇತರೆ ದೌರ್ಜನ್ಯ ಪ್ರಕರಣಗಳು ಸೇರಿವೆ. ಇದರಲ್ಲಿ 28 ಕ್ಕೆ ಚಾರ್ಜ್ಶೀಟ್ ಸಲ್ಲಿಕೆಯಾಗಿದ್ದು ಎಫ್ಐಆರ್ ಹಂತದಲ್ಲಿ ರೂ.39.70 ಲಕ್ಷ, ಚಾರ್ಜ್ಶೀಟ್ ಹಂತದಲ್ಲಿ ರೂ.79.88 ಲಕ್ಷ ಸೇರಿ ರೂ.1.19 ಕೋಟಿ ಪರಿಹಾರ ನೀಡಲಾಗಿದೆ. ಇದರಲ್ಲಿ ಪ. ಜಾತಿಯ 68 ಹಾಗೂ ಪ.ಪಂಗಡದ 56 ಸಂತ್ರಸ್ಥರು ಸೇರಿದಂತೆ 124 ಜನರಿಗೆ ಪರಿಹಾರ ನೀಡಲಾಗಿದೆ ಎಂದರು.
ಸಮಿತಿ ಸದಸ್ಯರು ಪ್ರಸ್ತಾಪಿಸಿ ಊರು ಮತ್ತು ಹಾಸ್ಟೆಲ್ನಿಂದ ಶಾಲಾ, ಕಾಲೇಜುಗಳಿಗೆ ಬರಲು ವಿದ್ಯಾರ್ಥಿಗಳಿಗೆ ಬಸ್ಗಳ ಸಮಸ್ಯೆಯಾಗುತ್ತಿದೆ ಎಂದಾಗ ಮುಂದಿನ 2,3 ತಿಂಗಳಲ್ಲಿ ನಿಗಮಕ್ಕೆ ಹೊಸ ಬಸ್ಗಳು ಬರುವ ನಿರೀಕ್ಷೆ ಇದ್ದು. ನಂತರ ವಿದ್ಯಾರ್ಥಿಗಳ ಕಾಲೇಜ್ ಹಾಗೂ ಹಾಸ್ಟೆಲ್ಗಳಿಗೆ ಹೋಗುವುದಕ್ಕೆ ಹೆಚ್ಚಿನ ಗಮನ ವಹಿಸಿ ಅನುಕೂಲ ಮಾಡಲಾಗುವುದು ಎಂದು ತಿಳಿಸಿದರು.
ಪ.ಜಾತಿ ಮತ್ತು ಪ. ಪಂಗಡದವರಿಗಾಗಿಯೇ ಸರ್ಕಾರ ಜಾರಿಗೊಳಿಸಿರುವ ಹಲವಾರು ಯೋಜನೆಯ ಸವಲತ್ತುಗಳ ಬಗ್ಗೆ ಸಮುದಾಯದಲ್ಲಿ ಅರಿವು ಮೂಡಿಸಿ, ಯೋಜನೆಯ ಸೌಲಭ್ಯವನ್ನು ಅರ್ಹರಿಗೆ ತಲುಪಿಸುವ ಕಾರ್ಯವನ್ನು ಸಮಿತಿಯ ಸದಸ್ಯರು ಪ್ರಾಮಾಣಿಕವಾಗಿ ಮಾಡಲು ಮುಂದಾಗಬೇಕು. ನಿಜವಾಗಿ ದೌರ್ಜನ್ಯಕ್ಕೆ ಒಳಗಾಗುತ್ತಿರುವವರನ್ನು ಗುರುತಿಸಿ, ಅವರಿಗೆ ಪರಿಹಾರ ಹಾಗೂ ಸೌಲಭ್ಯ ತಲುಪಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಹೆಚ್ಚುವರಿ ಪೋಲಿಸ್ ಅಧೀಕ್ಷಕ ವಿಜಯ್ಕುಮಾರ್ ಎಂ ಸಂತೋಷ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ನಾಗರಾಜ್, ನಾಮ ನಿರ್ದೇಶಿತ ಸದಸ್ಯರಾದ ಅಣಜಿ ಅಂಜಿನಪ್ಪ, ಕುಂದವಾಡ ಮಂಜುನಾಥ ಹಾಗೂ ಇನ್ನಿತರರು ಇದ್ದರು.
Read also : Political analysis | ವಿಜಯೇಂದ್ರ ಸೇಫ್ಟಿಗೆ ನಡ್ಡಾ ಬರುತ್ತಿದ್ದಾರೆ