ದಾವಣಗೆರೆ (Davangere) : ಸಚಿವ ಸಂಪುಟ ಪುರ್ರಚನೆ ಮಾಡಿದರೆ ಅಧಿಕಾರ ಅನುಭವಿಸಿ ಜಡ್ಡುಗಟ್ಟಿ ಹೋಗಿರುವ ಹಳಬರ ಸಚಿವ ಸ್ಥಾನಕ್ಕೆ ಕೋಕ್ ನೀಡಿ ಹೊಸಬವರಿಗೆ ಅವಕಾಶ ನೀಡಬೇಕೆಂದು ಚನ್ನಗಿರಿ ಶಾಸಕ ಬಸವರಾಜ ಶಿವಗಂಗಾ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ಈಗಿನ ಸಚಿವರ ರಿಪೋರ್ಟ್ ನೋಡಿ ಅವರನ್ನೆಲ್ಲ ಕೈ ಬಿಡಬೇಕು. ಸಂಪುಟದಲ್ಲಿ 8 ರಿಂದ 10 ಜನರನ್ನು ಬಿಡಬೇಕು. ಹೊಸಬರಿಗೆ ಅವಕಾಶ ಕೊಡಬೇಕು. 5 ರಿಂದ 6 ಬಾರಿ ಗೆದ್ದ ಶಾಸಕರಿಗೆ ಸಚಿವ ಸ್ಥಾನ ಸಿಕ್ಕಿಲ್ಲ. ಅವರಿಗೂ ಸಚಿವ ಸ್ಥಾನ ಸಿಗಬೇಕು ಎಂದು ಸಚಿವ ಸಂಪುಟ ಪುನರ್ರಚನೆ ವಿಚಾರವಾಗಿ ರೀತಿ ಪ್ರತಿಕ್ರಿಯೆ ನೀಡಿದರು.
ಕೆಲ ಸಚಿವರ ಸಾಧನೆ ಶೂನ್ಯ:
ಎರಡು ವರ್ಷದ ಸಾಧನೆ ಎಂದು ಹೇಳುತ್ತಾರೆ. ಆದರೆ ಕೆಲವು ಸಚಿವರು ಏನು ಸಾಧನೆ ಮಾಡಿಲ್ಲ. ಹೊಸದಾಗಿ ಆಯ್ಕೆಯಾದ ಶಾಸಕರಿಗೆ ಸಚಿವ ಸ್ಥಾನ ನೀಡಿದರೆ ರಾಜ್ಯದಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಾರೆ. ಹಳಬರಿಗೆ ಸಚಿವ ಸ್ಥಾನಕ್ಕೆ ಕೋಕ್ ಕೊಟ್ರೆ ಒಳ್ಳೆಯದು. ಹಳಬರು ಅಧಿಕಾರ ಅನುಭವಿಸಿ ಜಿಡ್ಡು ಹಿಡಿದು ಹೋಗಿದ್ದಾರೆ ಎಂದು ಹೇಳಿದರು.
ಸಚಿವ ಸ್ಥಾನ ಕೊಟ್ರೆ ನಿಭಾಯಿಸುವೆ:
ನಾನು ಸನ್ಯಾಸಿ ಅಲ್ಲ, ಹೈಕಮಾಂಡ್ ಸಚಿವ ಸ್ಥಾನ ಕೊಟ್ಟರೆ ಸಮರ್ಥವಾಗಿ ನಿಭಾಯಿಸುತ್ತೇನೆ. ಮಾತ್ರವಲ್ಲ ನಾನು ಏನ್ ಕೆಲಸ ಮಾಡ್ತಿನಿ ಎಂದು ಆರು ತಿಂಗಳ ಬಾಂಡ್ ಬೇಕಾದ್ರೆ ಕೊಡ್ತಿನಿ ಎಂದರು.
ಜಿಲ್ಲೆಯಲ್ಲಿ ಹಿರಿಯ ಶಾಸಕ ಡಿ.ಜಿ.ಶಾಂತನಗೌಡ್ರು ಇದ್ದಾರೆ. ಅವರು ಹಿರಿಯ ರಾಜಕಾರಣಿ ಅವರಿಗೆ ಕೊಟ್ರೆ ನಾನು ಖುಷಿ ಪಡುತ್ತೇನೆ. ಒಂದು ಜಿಲ್ಲೆಗೆ ಎರಡು ಸಚಿವ ಸ್ಥಾನ ಕೊಡಬಾರದು ಅಂತ ಏನಾದ್ರು ಇದೆಯಾ?, ಹೈಕಮಾಂಡ್ ಈಗಿನ ಸಚಿವರ ರಿಪೋರ್ಟ್ ನೋಡಿ ಅವರನ್ನೆಲ್ಲ ಕೈ ಬಿಡಬೇಕು ಎಂದು ಸಲಹೆ ನೀಡಿದರು.
Read also :Davanagere | ಜೂ.14ಕ್ಕೆ ಮುಟ್ಟಿಸಿಕೊಂಡವರು’ ಪುಸ್ತಕ ಬಿಡುಗಡೆ
ಅಧಿಕಾರ ಹಂಚಿಕೆ ಬಗ್ಗೆ ಮಾತಾಡಲ್ಲ:
ಎರಡೂವರೆ ವರ್ಷ ಅಧಿಕಾರ ಹಂಚಿಕೆ ವಿಚಾರ ಕುರಿತು ಈಗ ಮಾತನಾಡೋದು ಬೇಡ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತಮವಾದ ಕೆಲಸ ಮಾಡುತ್ತಿದ್ದಾರೆ. ಉತ್ತಮ ಆಡಳಿತ, ಉತ್ತಮ ಮಳೆ, ಬೆಳೆ ಇದೆ. ಈಗ ಈ ವಿಷಯ ಕುರಿತು ಚರ್ಚೆ ಮಾಡುವುದು ಬೇಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದರು.