ಜಗಳೂರು:ಐತಿಹಾಸಿಕ ಪುಣ್ಯಕ್ಷೇತ್ರ ತಾಲೂಕಿನ ಕಟ್ಟಿಗೆಹಳ್ಳಿ ಗ್ರಾಮದ ಶ್ರೀ ಬಸವೇಶ್ವರ ಸ್ವಾಮಿ ರಥೋತ್ಸವ ನೂರಾರು ಭಕ್ತ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಫೆ.24 ರಂದು ಕಂಕಣ ಧಾರಣೆಯಿಂದ ಆರಂಭವಾದ ರಥೋತ್ಸವದ ಧಾರ್ಮಿಕ ಆಚರಣೆ ಬುಧವಾರ ರಥ ಕಟ್ಟುವ ಕಾಯಕ ನೆರವೇರಿತು.
ಗುರುವಾರ ಬೆಳಿಗ್ಗೆ ಭಕ್ತರು ಸ್ವಾಮಿಯನ್ನು ಪಲ್ಲಕ್ಕಿಯಲ್ಲಿ ಇರಿಸಿ ಗಂಗಾಪೂಜಾ ಕಾರ್ಯ ನೇರವೇರಿಸಿದರು. ಗಂಗಾ ಪೂಜೆಯ ನಂತರ ಸ್ವಾಮಿಯ ಮೂರ್ತಿಯನ್ನು ಕಿರುತೇರಿನಲ್ಲಿ ಕುಳ್ಳಿರಿಸಿ ಪಾದಗಟ್ಟೆಯವರೆಗೆ ಎಳೆದು ಭಕ್ತರು ಪೂಜೆ ಸಲ್ಲಿಸಿದರು.
ಹರಕೆ ಹೊತ್ತ ಭಕ್ತರು, ದಿಂಡು ಉರುಳು ಸೇವೆ, ಜವಳ ತೆಗೆಯುವ ಹರಕೆ ತೀರಿಸಿದರು.
ನಂತರ ಸಂಜೆ 5 ಗಂಟೆಗೆ ರಥೋತ್ಸವಕ್ಕೆ ಹೂವಿನ ಹಾರದಿಂದ ಅಲಂಕೃತಗೊಳಿಸಿ ನಂತರ ಉತ್ಸವ ಮೂರ್ತಿ ಯನ್ನು ರಥೋತ್ಸವದಲ್ಲಿ ಪ್ರತಿಷ್ಠಾಪಿಸ ಲಾಯಿತು.
ಈ ವೇಳೆ ಭಕ್ತರು ರಥದ ಗಾಲಿಗೆ ತೆಂಗಿನ ಕಾಯಿ, ಬಾಳೆಹಣ್ಣು ಸಮರ್ಪಿಸಿ “ಹರಹರ ಮಹಾದೇವ” ಬಸವೇಶ್ವರ ಮಹಾರಾಜ್ ಕೀ ಜೈ ಎಂದು ಜೈಕಾರ ಮೊಳಗಿಸಿದರು.
ನಂತರ ಮುಕ್ತಿ ಬಾವುಟ ಹರಾಜು ಪ್ರಕ್ರಿಯೆಯಲ್ಲಿ ಹರಾಜಿನಲ್ಲಿ ಬಸ್ತಿಹಳ್ಳಿ ಬಸವರಾಜಪ್ಪ 1.5 ಲಕ್ಷ ರೂಪಾಯಿಗೆ ತಮ್ಮದಾಗಿಸಿಕೊಂಡರು.
Read also : 2027ರ ವೇಳೆಗೆ ತುಮಕೂರು-ದಾವಣಗೆರೆ ನೇರ ರೈಲ್ವೆ ಮಾರ್ಗ ಪೂರ್ಣ: ಅಧಿಕಾರಿಗಳಿಗೆ ಗಡುವು ನೀಡಿದ ಸಚಿವ ವಿ. ಸೋಮಣ್ಣ
ಭಕ್ತರು ರಥೋತ್ಸವವನ್ನು ಪಾದಗಟ್ಟೆಯವರೆಗೆ ಎಳೆಯಲಾಯಿತು.ತಮಟೆ,ಡೊಳ್ಳು, ಸಮಾಳ, ನಂಧಿ ದ್ವಜ ಕುಣಿತ ಪುರವಂತರ ವೀರಭದ್ರನ ಕುಣಿತ ಮಂಗಳವಾದ್ಯಗಳು ರಥೋತ್ಸವಕ್ಕೆ ಸೇರಿದಂತೆ ವಿವಿಧ ಜಾನಪದ ಕಲಾ ಪ್ರಕಾರಗಳ ರಥೋತ್ಸವಕ್ಕೆ ಮೆರಗು ತಂದವು.
ರಥೋತ್ಸವ ವೇಳೆ ಮಾಜಿ ಶಾಸಕ ಎಚ್.ಪಿ.ರಾಜೇಶ್, ಕೆಪಿಸಿಸಿ ಎಸ್ ಟಿ ಘಟಕದ ಮಾಜಿ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ,ಕೆಪಿಸಿಸಿ ಎಸ್ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಡಿ,ಕೀರ್ತಿಕುಮಾರ್, ಬಿಸ್ತುವಳ್ಳಿ ಬಾಬು ಸೇರಿದಂತೆ ಗಣ್ಯರು ಭಾಗವಹಿಸಿದ್ದರು.
ಭಕ್ತರ ಮೇಲೆ ಹೆಜ್ಜೇನು ದಾಳಿ:
ಶ್ರೀ ಬಸವೇಶ್ವರ ಸ್ವಾಮಿ ರಥೋತ್ಸವದ ಆರಂಭವಾಗುವ ಕೆಲ ಗಂಟೆಗಳ ಹಿಂದೆ ಮಧ್ಯಾಹ್ನ 3 ಗಂಟೆ ಸುಮಾರಿನ ಬಿರುಬಿಸಿಲಿನಲ್ಲಿ ಹೆಜ್ಜೇನು ದಾಳಿಗೆ ಗ್ರಾಮದ ಹಾಲೇಕಲ್ಲು ಮಂಜಣ್ಣ ಮತ್ತು ಸಾವಜ್ಜಿ ತಿಪ್ಪೇಸ್ವಾಮಿ ಎಂಬುವವರು ತುತ್ತಾದ ಪರಿಣಾಮ ಇಬ್ಬರ ಸ್ಥಿತಿ ಗಂಭೀರವಾಗಿದ್ದು ಒಬ್ಬರನ್ನು ದಾವಣಗೆರೆಯ ಎಸ್.ಎಸ್.ಆಸ್ಪತ್ರೆಗೆ ಮತ್ತೋರ್ವರನ್ನು ಜಗಳೂರಿನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
