ದಾವಣಗೆರೆ (Davanagere): ಎರಡು ವರ್ಷ ಕೇಂದ್ರದಲ್ಲಿ ಕಾಂಗ್ರೆಸ್ ಗೆ ಪಕ್ಷಕ್ಕೆ ಅಧಿಕಾರ ನೀಡಿದರೆ ಪಾಕಿಸ್ತಾನವನ್ನು ನಿರ್ನಾಮ ಮಾಡುತ್ತೇವೆ ಎಂದು ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ ಶೆಟ್ಟಿ ತಿಳಿಸಿದರು.
ದಾವಣಗೆರೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ಈ ದೇಶದ ಮೊದಲ ಪ್ರಧಾನಿ ದಿವಂಗತ ಪಂಡಿತ್ ಜವಾಹರ್ ಲಾಲ್ ನೆಹರು ಅವರ ಪುಣ್ಯಸ್ಮರಣೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಕಳೆದ 11 ವರ್ಷದ ಹಿಂದೆ ಅಧಿಕಾರಕ್ಕೆ ಬಂದ ಬಿಜೆಪಿ ಪಕ್ಷ ಅಂದಿನಿಂದಲೂ ಪಾಕಿಸ್ತಾನದ ಹೆಸರೇಳಿ ರಾಜಕೀಯ ಮಾಡುತ್ತಾ ಬಂದಿದ್ದು ಪಾಕಿಸ್ತಾನದ ವಿರುದ್ಧ ಯುದ್ದ ನಡೆಸಿದರೆ ಎಲ್ಲಿ ನಮ್ಮ ಅಸ್ತಿತ್ವ ಇರುವುದಿಲ್ಲ ಎಂಬ ಭಯದಿಂದ ಪಾಕಿಸ್ತಾನದ ವಿರುದ್ಧ ಸರಿಯಾದ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದರು.
ಇದುವರೆಗೂ ಬಿಜೆಪಿ ಪಕ್ಷದ ಯಡಿಯೂರಪ್ಪನವರ ಮಕ್ಕಳಾಗಲಿ, ಜಿಎಂ ಸಿದ್ದೇಶ್ವರ ಮಕ್ಕಳಾಗಲಿ, ರೇಣುಕಾಚಾರ್ಯ ಮಕ್ಕಳಾಗಲಿ ಎಂದಿಗೂ ಬೀದಿಗಿಳಿದು ಹೋರಾಟ ನಡೆಸದೆ ಕೇವಲ ಬಡವರ ಮಕ್ಕಳನ್ನು ಹಿಂದೂ ಮುಸ್ಲಿಂ ಹೆಸರಿನಲ್ಲಿ ಗಲಾಟೆಗೆ ಪ್ರಚೋದಿಸುತ್ತಿದ್ದಾರೆ ಎಂದು ದೂರಿದರು.
ಪಂಡಿತ್ ಜವಾಹರ್ ಲಾಲ್ ನೆಹರು ಅವರು ದೇಶದ 545 ರಾಜ್ಯಗಳನ್ನು ಒಗ್ಗೂಡಿಸಿ ಭಾರತ ಬಲಿಷ್ಠ ರಾಷ್ಟ್ರವನ್ನಾಗಿಸಲು ಸಾಕಷ್ಟು ಶ್ರಮ ಪಟ್ಟರು ಎಂದು ಸ್ಮರಿಸಿದರು.
Read also : ಬೆಂಗಳೂರು ಕೃಷಿ ವಿವಿ : ರುಕ್ಸರ್ಖಾನಮ್ಗೆ ಸ್ವರ್ಣ ಪದಕ
ಮಾಜಿ ಮೇಯರ್ ಕೆ. ಚಮನ್ ಸಾಬ್ ಮಾತನಾಡಿ ಈ ದೇಶಕ್ಕೆ ಸ್ವತಂತ್ರ ಲಭಿಸಿದಾಗ ಒಂದು ಗುಂಡು ಸೂಜಿಯನ್ನು ಸಹ ನಿರ್ಮಾಣ ಮಾಡದಷ್ಟು ಪರಿಸ್ಥಿತಿಯಲ್ಲಿ ಇದ್ದೆವು ಇಂದು ಬ್ರಹ್ಮೋಸ್ ತಯಾರಿಸಲು ಸಾಧ್ಯವಾಗಿದ್ದು ಪಂಡಿತ್ ನೆಹರು ಅವರ ದೂರದೃಷ್ಟಿಯಿಂದ ಎಂದು ತಿಳಿಸಿದರು.
ಪಂಡಿತ್ ಜವಾಹರ್ ಲಾಲ್ ನೆಹರು ಅವರು ಸ್ಥಾಪಿಸಿದ ಅನೇಕ ಸಂಸ್ಥೆಗಳನ್ನು ಇಂದು ಮೋದಿ ಸರ್ಕಾರ ಮಾರಾಟ ಮಾಡುತ್ತಿದೆ ಎಂದು ಆರೋಪಿಸಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್. ಮಲ್ಲಿಕಾರ್ಜುನ್ ಮಾತನಾಡಿ ಸ್ವತಂತ್ರ ಲಭಿಸಿದಾಗ ದೇಶ ಸೂಚನೆಯ ಪರಿಸ್ಥಿತಿಯಲ್ಲಿದ್ದು ಅಂದು ಇಡೀ ದೇಶಕ್ಕೆ ಆಹಾರ ಉತ್ಪಾದನೆ, ಕೈಗಾರಿಕೆ, ನೀರಾವರಿ ಕಲ್ಪಿಸಲು ಪಂಚವಾರ್ಷಿಕ ಯೋಜನೆಗಳನ್ನು ಜಾರಿಗೆ ತರುವ ಮೂಲಕ ದೇಶವನ್ನು ಸುಭಿಕ್ಷೆ ರಾಷ್ಟ್ರವನ್ನಾಗಿಸಲು ನೆಹರು ಅವರ ಕೊಡುಗೆ ಅಪಾರ ಎಂದು ಬಣ್ಣಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಎ. ನಾಗರಾಜ್, ಸಾಗರ್, ಮಾಜಿ ಸದಸ್ಯ ಸೀಮೆಎಣ್ಣೆ ಮಲ್ಲೇಶ್, ಗೋಪಿ ನಾಯ್ಕ, ಕೊಡಪಾನ ದಾದಾಪೀರ್, ಕವಿತಾ ಚಂದ್ರಶೇಖರ್, ದ್ರಾಕ್ಷಾಯಣಮ್ಮ, ಕಾವ್ಯ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಮಹಮ್ಮದ್ ಸಮೀವುಲ್ಲಾ,ಶಹನಾಜ್ ಮತ್ತಿತರರಿದ್ದರು.