ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ ಹಾಗೂ ದೀನ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆಯ ಸಹಯೋಗದಲ್ಲಿ 2025–26ನೇ ಸಾಲಿನ ಬೃಹತ್ ಉದ್ಯೋಗ ಮೇಳವನ್ನು ದಾವಣಗೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾಗಿದೆ. ಇಂದಿನ ಯುವಜನತೆಗೆ ಉದ್ಯೋಗದ ಅಗತ್ಯ ಎಷ್ಟು ತುರ್ತುವೋ, ಅದಕ್ಕೆ ತಕ್ಕಂತೆ ಈ ಮೇಳವು ಭವಿಷ್ಯದ ದಾರಿ ತೋರಿಸುವ ಮಹತ್ವದ ವೇದಿಕೆಯಾಗಿದೆ.
“ಈ ಉದ್ಯೋಗ ಮೇಳಕ್ಕೆ ಭಾಗವಹಿಸುವಂತೆ ಎಲ್ಲಾ ಯುವಕ ಯುವತಿಯರಿಗೆ ಸಂದೇಶ ತಲುಪಿಸುವುದೇ ಕಾರ್ಯಕ್ರಮದ ಮೂಲ ಉದ್ದೇಶ. ಉದ್ಯೋಗವಿಲ್ಲದೆ ಕಂಗಾಲಾಗಿರುವ ಅನೇಕ ಯುವಕರಿಗೆ ಇದು ಆಶಾಕಿರಣ. ಒಂದೇ ವೇದಿಕೆಯಲ್ಲಿ ಸುಮಾರು 80ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ವಿವಿಧ ವಲಯಗಳ ಉದ್ಯೋಗಾವಕಾಶಗಳನ್ನು ನೀಡಲು ಆಗಮಿಸುತ್ತಿರುವುದು ವಿಶೇಷತೆ. ಉತ್ಪಾದನಾ ಕ್ಷೇತ್ರ, ಬ್ಯಾಂಕಿಂಗ್ ಮತ್ತು ಹಣಕಾಸು, ಐಟಿ ಮತ್ತು ಡಿಜಿಟಲ್ ಸೇವೆಗಳು, ಮಾರುಕಟ್ಟೆ, ರಿಟೇಲ್, ಆರೋಗ್ಯ ಸೇವೆ, ಶಿಕ್ಷಣ, ಲಾಜಿಸ್ಟಿಕ್ಸ್, ಇನ್ಶೂರೆನ್ಸ್, ಕೌಶಲ್ಯಾಭಿವೃದ್ಧಿ ಸೇರಿದಂತೆ ಅನೇಕ ವಲಯಗಳಲ್ಲಿ ಉದ್ಯೋಗ ಅವಕಾಶಗಳು ಲಭ್ಯವಿವೆ.
ಈ ಮೇಳವು ಕೇವಲ ಪದವೀಧರರಿಗೆ ಮಾತ್ರವಲ್ಲ; ಎಲ್ಲಾ ರೀತಿಯ ಪದವಿ ಹಾಗೂ ಡಿಪ್ಲೋಮಾ ಹೊಂದಿರುವ ವಿದ್ಯಾರ್ಥಿಗಳಿಗೆ ಸುವರ್ಣ ಅವಕಾಶ ಒದಗಿಸುತ್ತದೆ. ಪಿಯುಸಿ, ಐಟಿಐ, ಡಿಪ್ಲೋಮಾ, ಬಿಎ, ಬಿಕಾಂ, ಬಿಎಸ್ಸಿ, ಎಂಜಿನಿಯರಿಂಗ್, ಎಂಕಾಂ, ಎಂಎ ಸೇರಿದಂತೆ ವಿವಿಧ ವಿದ್ಯಾರ್ಹತೆಗಳಿದ್ದ ಯುವಕರಿಗೆ ತಮ್ಮ ಅರ್ಹತೆಗೆ ತಕ್ಕ ಉದ್ಯೋಗವನ್ನು ಪಡೆಯುವ ಅವಕಾಶ ಇಲ್ಲಿದೆ. ಹೊಸದಾಗಿ ಪದವಿ ಪಡೆದವರಿಗೂ, ಅನುಭವ ಹೊಂದಿದವರಿಗೂ ಸಮಾನ ಅವಕಾಶ ನೀಡ ಲಾಗುತ್ತದೆ.
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೇವಲ ಪದವಿ ಸಾಕಾಗುವುದಿಲ್ಲ; ಆತ್ಮವಿಶ್ವಾಸ, ಸಂವಹನ ಕೌಶಲ್ಯ, ತಂತ್ರಜ್ಞಾನ ಅರಿವು, ತಂಡದ ಮನೋಭಾವನೆ ಮತ್ತು ಕಲಿಯುವ ಮನಸ್ಸು ಮುಖ್ಯ. ಈ ಉದ್ಯೋಗ ಮೇಳವು ಯುವಕರಿಗೆ ನೇರ ಸಂದರ್ಶನದ ಮೂಲಕ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ಅವಕಾಶ ನೀಡುತ್ತದೆ. ಒಂದೇ ದಿನದಲ್ಲಿ ಹಲವಾರು ಕಂಪನಿಗಳ ಸಂದರ್ಶನಕ್ಕೆ ಹಾಜರಾಗುವ ಅವಕಾಶ ಸಿಗುವುದು ವಿರಳ. ಆದ್ದರಿಂದ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವುದು ಅಗತ್ಯ.
ಉದ್ಯೋಗ ಮೇಳಗಳು ಕೇವಲ ಉದ್ಯೋಗ ನೀಡುವ ವೇದಿಕೆಗಳಲ್ಲ; ಅವು ಯುವಜನತೆಯ ಆತ್ಮವಿಶ್ವಾಸವನ್ನು ಹೆಚ್ಚಿಸುವ, ಉದ್ಯಮ ಲೋಕದ ಅವಶ್ಯಕತೆಗಳನ್ನು ಅರಿಯುವ ಹಾಗೂ ತಮ್ಮ ಕೌಶಲ್ಯವನ್ನು ಮೌಲ್ಯಮಾಪನ ಮಾಡಿಕೊಳ್ಳುವ ಅವಕಾಶಗಳೂ ಹೌದು. ಅನೇಕ ಕಂಪನಿಗಳು ಸ್ಥಳದಲ್ಲೇ ಆಯ್ಕೆ ಪ್ರಕ್ರಿಯೆ ನಡೆಸಿ ನೇಮಕಾತಿ ಪತ್ರ ನೀಡುವ ಸಾಧ್ಯತೆ ಇದೆ. ಕೆಲ ಕಂಪನಿಗಳು ತರಬೇತಿ ಮತ್ತು ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನೂ ಪರಿಚಯಿಸಲಿವೆ.
ಇಂದಿನ ಯುವಜನತೆಗೆ ನಾವು ನೀಡಬೇಕಾದ ಸಂದೇಶ ಸ್ಪಷ್ಟ – “ ಉದ್ಯೋಗಕ್ಕಾಗಿ ಕಾಯಬೇಡಿ, ಅವಕಾಶವನ್ನು ಹುಡುಕಿ!” ಈ ಭೃಹತ್ ಉದ್ಯೋಗ ಮೇಳವೇ ಆ ಅವಕಾಶ. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ, ತಮ್ಮ ಬಯಕೆಯ ಉದ್ಯೋಗವನ್ನು ಪಡೆದು ಜೀವನದಲ್ಲಿ ಹೊಸ ಅಧ್ಯಾಯ ಆರಂಭಿಸಬೇಕು.
ಪೋಷಕರು, ಶಿಕ್ಷಕರು ಹಾಗೂ ಸಮಾಜದ ಜವಾಬ್ದಾರಿಯುತ ವ್ಯಕ್ತಿಗಳು ಯುವಕರನ್ನು ಈ ಮೇಳದಲ್ಲಿ ಭಾಗವಹಿಸಲು ಪ್ರೇರೇಪಿಸಬೇಕು. ಒಂದು ದಿನದ ಪ್ರಯತ್ನ ಜೀವನಪೂರ್ತಿ ಬದಲಾವಣೆ ತರಬಹುದು.
ದಾವಣಗೆರೆ ಹಾಗೂ ಸುತ್ತಮುತ್ತಲಿನ ಎಲ್ಲಾ ನಿರುದ್ಯೋಗಿ ಯುವಕರು, ಪದವೀಧರರು ಮತ್ತು ಉದ್ಯೋಗಾಕಾಂಕ್ಷಿಗಳು ಈ ಸುವರ್ಣಾವಕಾಶವನ್ನು ಕೈಚೆಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ಸಿನ ದಾರಿಯಲ್ಲಿ ಮೊದಲ ಹೆಜ್ಜೆ ಇಡಿ.
*ಅಭ್ಯರ್ಥಿಗಳೇ ಉದ್ಯೋಗದ ದಾರಿ ನಿಮ್ಮ ಮುಂದೆ ತೆರೆದಿದೆ!*
ಡಾ. ವೆಂಕಟೇಶ್ ಬಾಬು
ಎಸ್ ಪ್ಲೇಸ್ಮೆಂಟ್ ಆಫೀಸರ್
ದಾವಣಗೆರೆ
