ದಾವಣಗೆರೆ ಮೇ.16 (Davanagere) : ದಾವಣಗೆರೆ ಜಿಲ್ಲೆಯಲ್ಲಿ ಸ್ವ-ಸಹಾಯ ಸಂಘಗಳು ತಯಾರಿಸಿದ ಉತ್ಪನಗಳಿಗೆ ಮಾರುಕಟ್ಟೆ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ಲೋಕಸಭಾ ಸದಸ್ಯರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ಜಿಲ್ಲಾ ಪಂಚಾಯತ್, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಕೃಷಿ ಇಲಾಖೆ, ಕೌಶಲ್ಯ ಅಭಿವೃದ್ದಿ ಇಲಾಖೆ, ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಪಿಎಂಎಫ್ಎಂಇ ಫಲಾನುಭವಿಗಳಿಗೆ ಸಮಾಲೋಚನಾ ಸಮಾರಂಭ ಮತ್ತು ಮಾರುಕಟ್ಟೆ ನೆರವು ಹಾಗೂ ವ್ಯಾಪಾರ ಅಭಿವೃದ್ದಿ ಕಾರ್ಯಾಗಾರವನ್ನು ಶುಕ್ರವಾರ ಗ್ಲಾಸ್ ಹೌಸ್ ನಲ್ಲಿ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಪ್ರಥಮ ಬಾರಿಗೆ ಜಿಲ್ಲೆಯಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಮುದ್ರಾ ಯೋಜನೆಯಡಿ ಎರಡು ವಿಧಗಳಿವೆ. ಶಿಶು ಮತ್ತು ತರುಣ, ಸ್ವಸಹಾಯ ಸಂಘದವರು ಇದರ ಉಪಯೋಗವನ್ನು ಪಡೆದುಕೊಳ್ಳಬೇಕು. ಸ್ವಸಹಾಯ ಸಂಘದವರು ತಯಾರಿಸಿರುವ ಬೆಡ್ಶೀಟ್ ಹಾಗೂ ಶಾಲುಗಳನ್ನು ಹಾಸ್ಟೆಲ್ ಹಾಗೂ ಸಿ.ಜಿ.ಆಸ್ಪತ್ರೆಯವರು ಖರೀದಿ ಮಾಡಬೇಕು. ಸುಮಾರು 1,20,227 ಜನ ಸ್ವಸಹಾಯ ಸಂಘದ ಮಹಿಳಾ ಸದಸ್ಯರಿದ್ದು ನೀವು ಇನ್ನೂ ಹೆಚ್ಚಿನ ರೀತಿಯಲ್ಲಿ ಉತ್ಪಾದನೆ ಮಾಡಿ ಮಾರಾಟ ಮಾಡಬೇಕು. ನಗರದ ಗಾಜಿನ ಮನೆಯ ಹತ್ತಿರ ಒಂದು ಖಾಯಂ ಮಾರುಕಟ್ಟೆ ಮಳಿಗೆ ತೆರೆಯಬೇಕು. ಕೋಡುಬಳೆ, ನಿಪ್ಪಟ್ಟುಗಳಿಗೆ ಒಳ್ಳೆಯ ಪ್ಯಾಕೇಜ್ ನೀಡಬೇಕು.
ವಿದ್ಯಾರ್ಥಿ ನಿಲಯಗಳಿಗಾಗಿ ಉತ್ಪನ್ನ ಖರೀದಿಸಿದರೆ ಸಂಘಗಳಿಗೆ ನೆರವು ನೀಡಿದಂತೆ ಆಗುತ್ತದೆ. ವಿವಿಧ ಆಹಾರೋತ್ಪನ್ನಗಳನ್ನು ಸಮಾಜ ಕಲ್ಯಾಣ ಇಲಾಖೆಯಿಂದ ತಾಲ್ಲೂಕಿನಲ್ಲಿ ನಡೆಸುತ್ತಿರುವ ವಿದ್ಯಾರ್ಥಿ ನಿಲಯಗಳಿಗಾಗಿ ಕಡ್ಡಾಯವಾಗಿ ಖರೀದಿಸಿದಲ್ಲಿ ಸಂಘದವರಿಗೆ ನೆರವು ದೊರೆಯಬಹುದು. ನಮ್ಮ ಸಂಘದವರು ತಯಾರಿಸುವ ಯಾವುದೇ ವಸ್ತುಗಳನ್ನು ಸಭೆ, ಸಮಾರಂಭಗಳಿಗಾಗಿ ಗ್ರಾಮ ಪಂಚಾಯಿತಿಗಳು ಖರೀದಿಸಬೇಕು ಎಂದರು.
Read also : ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ಅರ್ಜಿ ಆಹ್ವಾನ
ಮಹಿಳಾ ಸ್ವಸಹಾಯ ಸದಸ್ಯರು, ಸಾಂಬಾರಪುಡಿ, ಚಟ್ನಿಪುಡಿ, ಉಪ್ಪಿನಕಾಯಿ, ಹಪ್ಪಳ, ಸಂಡಿಗೆ, ಸಾವಯವ ಬೆಲ್ಲ, ಸಿರಿಧಾನ್ಯದ ಉತ್ಪನ್ನಗಳು, ಅಲ್ಲದೇ ದಿನಬಳಕೆಯ ಅಗರಬತ್ತಿ, ಕರಕುಶಲ ವಸ್ತುಗಳು, ಸ್ಪಂಜ್ ಮಾಲೆಗಳು, ನೆಲಹಾಸುಗಳು, ಬಣ್ಣಬಣ್ಣದ ಶಾಲುಗಳು, ಮಣ್ಣಿನಿಂದ ತಯಾರಿಸಿದ ಉತ್ಪನ್ನಗಳ ಜೊತೆಗೆ ಇನ್ನೂ ಹಲವು ಉತ್ಪನ್ನಗಳ ಪ್ರದರ್ಶನ ಮತ್ತು ಮರಾಟ ಮಳಿಗೆಗಳನ್ನು ತೆರೆಯಲಾಯಿತು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುರೇಶ್.ಬಿ.ಇಟ್ನಾಳ್ ಮಾತನಾಡಿ, ಜಿಲ್ಲೆಯಲ್ಲಿ ಪಿಎಂಎಫ್ಎಂಎಸ್ ಸ್ಕಿಂನಲ್ಲಿ 184 ಜನ ಫಲಾನುಭವಿಗಳು ಇದರ ಪ್ರಯೋಜ ಪಡೆದಿದ್ದಾರೆ.1436 ಲಕ್ಷ ಸಾಲವನ್ನು ನೀಡಲಾಗಿದ್ದು, ಇದಕ್ಕೆ ಸಬ್ಸಿಡಿ ನೀಡಲಾಗಿದೆ. ಇದರಲ್ಲಿ 68 ಜನ ರೊಟ್ಟಿ ಮಾಡುತ್ತಿದ್ದು, 36 ಜನ ಉಪ್ಪಿನಕಾಯಿ ತಯಾರು, 30 ಜನ ಮಿಲೆಟ್ಸ್ ತಯಾರು ಮಾಡುತ್ತಿದ್ದು, ಇನ್ನೂ ಕೆಲವರು ವಿವಿಧ ರೀತಿಯ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ.
ನಲ್ ಜಲ್ ಮಿತ್ರ ಕಾರ್ಯಕ್ರಮ ಜಲ್ ಜೀವನ್ ಮಿಷನ್ ಯೋಜನೆಯಡಿ ಗ್ರಾಮ ಪಂಚಾಯತಿಯಲ್ಲಿ ಪ್ರತಿ ಮನೆಗಳಿಗೆ ಅಳವಡಿಸಲಾದ 24 ಗಂಟೆ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ ಪ್ರತಿ ಪಂಚಾಯತಿಯಿಂದ ಇಬ್ಬರು ಮಹಿಳಾ ಸದಸ್ಯರನ್ನು ನಿರ್ವಹಣಾ ಸಿಬ್ಬಂದಿಯಾಗಿ ಆಯ್ಕೆ ಮಾಡಿ 50 ಮಹಿಳಾ ಸದಸ್ಯರಿಗೆ 17 ದಿನಗಳ ಕಾಲ ತರಬೇತಿ ಮತ್ತು 23 ದಿನಗಳ ಪ್ರಾಯೋಗಿಕ ಸೇರಿ ಒಟ್ಟು 40 ದಿನಗಳ ಕಾಲ ತರಬೇತಿಯನ್ನು ನೀಡಲಾಗಿದೆ.
ತರಬೇತಿ ಪಡೆದ ಅಭ್ಯರ್ಥಿಗಳಿಗೆ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲು ಪೂರಕವಾದ ಟೂಲ್ ಕಿಟ್ ವಿತರಣೆ ಮಾಡಲಾಯಿತು.
ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರಾದ ಕೌಸರ್ ರೇಷ್ಮಾ ತೋಟಗಾರಿಕೆ ಉಪನಿರ್ದೇಶಕರಾದ ರಾಘವೇಂದ್ರ ಪ್ರಸಾದ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ಉಪಸ್ಥಿತರಿದ್ದರು.