ವೃತ್ತಿ ರಂಗಭೂಮಿ ರಂಗಾಯಣದ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಅವರ “ಕಡಕೋಳ ನೆಲದ ನೆನಪುಗಳು” ಕೃತಿಗೆ ದಲಿತ ಸಾಹಿತ್ಯ ಪರಿಷತ್ತು ಕೊಡಮಾಡುವ ರಾಷ್ಟ್ರೀಯ ಪುರಸ್ಕಾರಕ್ಕೆ ಭಾಜನಗೊಂಡಿದೆ.
ಇದೇ ಡಿಸೆಂಬರ್ 20 ಮತ್ತು 21 ರಂದು ರಾಯಚೂರು ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜರುಗುವ 11ನೆಯ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಪ್ರಶಸ್ತಿ ಪುರಸ್ಕಾರ ಪ್ರದಾನ ಮಾಡಲಾಗುವುದು.
ಸಂಸ್ಕೃತಿ ಚಿಂತಕ ನಾಡೋಜ ಬರಗೂರು ರಾಮಚಂದಪ್ಪ ಸಮ್ಮೇಳನ ಉದ್ಘಾಟನೆ ಮಾಡುವರು. ಡಾ. ಜಯದೇವಿ ಗಾಯಕವಾಡ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸುವರು.
ಖ್ಯಾತ ಸಾಹಿತಿ ಕುಂ. ವೀರಭದ್ರಪ್ಪ ರಾಷ್ಟ್ರೀಯ ಪುಸ್ತಕ ಪ್ರಶಸ್ತಿ ಪ್ರದಾನ ಮಾಡುವರೆಂದು ಕೇಂದ್ರ ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಅರ್ಜುನ ಗೊಳಸಂಗಿ ತಿಳಿಸಿದ್ದಾರೆ.
