ಭಾರತದ ಸೆಪ್ಟಿಕ್ ಟ್ಯಾಂಕು
ಅವ್ವನೋ-ಅವ್ವನ ಮಗಳೋ
ಅಕ್ಕನೋ-ತಂಗಿಯೋ
ಅಟ್ಲೀಸ್ಟ್ ಸಂಬಂಧಗಳಾದರೂ ಇವೆ
ಮಾತುಗಳಿಗೆ
ಏಸೊಂದು ಗದ್ದಲ
ಊರೊಳಗೆ
ಟೀವಿಗಳಲ್ಲಿ…ಗಲ್ಲಿಗಳಲ್ಲಿ
ಗದ್ದಲವೋ ಗದ್ದಲ!
ನಮದಾದರೂ ಏನೈತೋ ಸಂಬಂಜ!
ತಲೆ ಮ್ಯಾಲೆ ಮಲ
ಹೊತ್ತು ನಡೆವವನ ಓಣಿ-ಕೇರಿಗಳ
ಮೌನ ಸಂಕಟಗಳ ಹೊರೆಯ ಹೊರತು?
ಇತಿಹಾಸ
ಕೂಡ
ಉಪವಾಸ ಕೂಡುವ ಈ ಕಾಲದಲಿ?
ಹೊಟ್ಟೆ ಹಸಿದಿದ್ದರೂ ,
ಹಸಿದವರ ಕಂಡು
ಕಣ್ಣೀರು ಹಾಕಿದ ತಾಯಂದಿರ ಮಕ್ಕಳು …
ಹೊತ್ತು ತಿರುಗಿದೆವು ನಾವು,
ಅನಂತನಾಗರ ಬರ,
ರಂಗಣ್ಣನ ಪಬ್ಲಿಕ್ಕಿನ ಮಾತು
ಬೆಳವಾಡಿಯ ಡೈಲಾಗು
ಕಣ್ಣನ್ ಮಾಮನ ಡೈಲಾಗು ಡೆಲಿವರಿ
ಕಮಲ ಹಾಸನ್ನರ ಮಾತು
ಎಲ್ಲವಕ್ಕೂ ಕಟ್ಟಬೇಕಿದೆ ಕರ!
ಅವರು ದೈತ್ಯರು
ನಾವು ದಲಿತರು!
ಎನ್ನುವುದೂ ಹಳೆಯ ಮಾತು!
ಮಾತಿಗೆ… ಒಂದು ನುಡಿಗೆ ಬಡಬಡಿಸುವವರಿಗೆ
ಕಾಣಿಸಲಿಲ್ಲ
ಭಂಗಿಯೊಬ್ಬನ ತಲೆ ಮೇಲಿಂದ ಸುರಿವ ಮಲ
ಕಾಣಿಸಲಿಲ್ಲ
‘ಸೆಪ್ಟಿಕ್ ಬ್ಯಾಂಕು ಕ್ಲೀನಿಂಗಿಗಾಗಿ ಸಂಪರ್ಕಿಸಿ’-
ಗೋಡೆಯಬರೆಹವೂ!
Read also : Kannada Poem: ಬರ್ಕೋ ನನ್ನ ಗುರುತು
ಭಾರತದ ಥಿಂಕ್ ಟ್ಯಾಂಕ್ ಅಲ್ಲಲ್ಲ
ಸೆಪ್ಟಿಕ್ ಟ್ಯಾಂಕೂ ತುಂಬಿದೆ
ಎನ್ನೋದೂ ಈಗಿನ ಹೊಸ ಮಾತು!
ಬಿ.ಶ್ರೀನಿವಾಸ
