೧
ಕೆಲ ದಶಕಗಳ ಹಿಂದೆ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ-ಹಗರಿಬೊಮ್ಮನಹಳ್ಳಿ ತಾಲೂಕುಗಳೆರೆಡೂ ಸೇರಿ ಒಂದು ಶಾಸಕರ ಮತಕ್ಷೇತ್ರವಿತ್ತು. ಬಹಳ ಹಿಂದುಳಿದ ಪ್ರದೇಶವಾದ ಈ ತಾಲೂಕಿನಲ್ಲಿ ಕುಡಿಯುವ ನೀರಿನಿಂದ ಹಿಡಿದು ಬಹಿರ್ದೆಸೆಗೆ ಹೋಗುವವರೆಗೂ ಸಮಸ್ಯೆಗಳ ಆಗರವೇ ಇದ್ದವು. ಮಳೆ ಬಿದ್ದರೆ ಮಾತ್ರ ಬ್ಯಾಸಾಯ,ಇಲ್ಲದಿದ್ದರೆ ನೀ ಸಾಯ,ನಾ ಸಾಯ ಎನ್ನುವಂಥ ಪರಿಸ್ಥಿತಿ.
ಚುನಾವಣೆಗಳಲ್ಲಿ ಬಹುತೇಕವಾಗಿ ಅಂದಿನ ಕಾಂಗ್ರೆಸ್ಸಿನಿಂದ ಯಾರೇ ನಿಂತ್ರೂ ಸರಾಗವಾಗಿ ಚುನಾಯಿತರಾಗಿ ಬರುತ್ತಿದ್ದರು.ಹಸ್ತದ ಗುರುತಿನ ಎದುರು ಬಹಳ ಅಪರೂಪಕ್ಕೆಂಬಂತೆ ಬಡ ರೈತನೊಬ್ಬ ನೇಗಿಲು ಹೊತ್ತ ಚಿತ್ರದ ಗುರುತು ನನ್ನಂತಹ ಹುಡುಗರಲ್ಲಿ ಸಂಚಲನ ಮೂಡಿಸಿತ್ತು.
ಊರಗೋಡೆಗಳ ಮೇಲೆ ಅತ್ಯಂತ ಸುಂದರವಾಗಿ ಮನೆಗಳ ಹೊಸಿಲಿಗೆ,ಬಳಿಯುತ್ತಿದ್ದ ಕೆಂಪು ಉರುಮಂಜಿನಿಂದ ನೇಗಿಲು ಹೊತ್ತ ರೈತನ ಚಿತ್ರ ಬಿಡಿಸಿ ಎಲ್ಲೋ ಮೂಲೆಯಲ್ಲಿ ತನ್ನ ಚಿಕ್ಕ ರುಜು ಹಾಕಿದ ಕಲಾವಿದ ಯಾರಿರಬಹುದು ಎಂದು ಯೋಚಿಸುತ್ತಿದ್ದೆ.ತುಂಡು ಪಂಚೆ ತೊಟ್ಟು ನೇಗಿಲು ಹೊತ್ತ ರೈತ -ಥೇಟ್ ನಮ್ಮಪ್ಪನಂತೆಯೇ ತೋರಿದ್ದುದೂ ಸೆಳೆತಕ್ಕೆ ಕಾರಣವಾಗಿರಬಹುದು.ಸೋ ಕಾಲ್ಡ್ ಕಾಂಗ್ರೆಸ್ಸು ಆಗ ಸಿರಿವಂತಿಕೆ ಪಾರ್ಟಿಯಂತೆ ತೋರಿ,ನೇಗಿಲು ಹೊತ್ತ ರೈತನ ಜನತಾ ಪಾರ್ಟಿ ಸಂಪತ್ತಿಗೆ ಸವಾಲು ಹಾಕಿದಂತೆ ತೋರಿತು.
ಇಂತದ್ದೇ ಹವಾದಲ್ಲಿ ಎಲ್ಲಿಯೋ ಇದ್ದ ಚೆನ್ನಬಸವನಗೌಡರು ಗೆದ್ದು ಎಮ್ಮೆಲ್ಲೆಯಾದರು.ಅವರು ಒಂದು ದಿನವೂ ಎಲೆಕ್ಷನ್ನಿಗೆ, ಓಟುಹಾಕುವವರಿಗೆ ವಗ್ಗಾಣಿ- ಮಂಡಕ್ಕಿ ಸಹ ಕೊಡಿಸಲಿಲ್ಲ. ಕೊಡಿಸಲು ಅವರಿಗೆ ಹಣವಿರಲಿಲ್ಲ.ಜನರೇ ಚಂದಾ ಎತ್ತಿ ಗೆಲ್ಲಿಸಿದರು.
ಅಪ್ಪಟ ಗಾಂಧಿವಾದಿಯಾಗಿದ್ದ ಗೌಡರು,ಮೆದು ಮಾತಿನವರು.ನಿಸ್ಪೃಹ ರಾಜಕಾರಣಿ.ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಲು ಸರಕಾರದ ಬಳಿ ಹಣವೇ ಇರಲಿಲ್ಲ.ಹಾಗೂ ಹೀಗೂ ಮಾಡಿ ಆ ಕಾಲಕ್ಕೆ ಊರಿನ ಹುಡುಗರಿಗೆ ಉದ್ಯೋಗಕ್ಕಾಗಿ ಮಾಲವಿ ಡ್ಯಾಮಿನ ಬಳಿ ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯ ಬಸ್ ಡ್ರೈವರುಗಳ ತರಬೇತಿ ಕೇಂದ್ರ ತರುವಲ್ಲಿ ಯಶಸ್ವಿಯಾದರು.ಆ ಕಾಲಕ್ಕೆ ಅದು ಬಹಳ ದೊಡ್ಡ ಸುದ್ದಿಯಾಗಿತ್ತು.
ಇಂತಹ ಸಣ್ಣಪುಟ್ಟ ಕೆಲಸಗಳನ್ನಷ್ಟೆ ಮಾಡಲು ಅವರಿಂದ ಸಾಧ್ಯವಾಯಿತು.ಆದರೆ ಕೃಷಿಕರ ಪರವಾದ ಅನೇಕ ಕಾಯಿದೆಗಳು ಜಾರಿಯಾಗುವಲ್ಲಿ ಇವರ ಪಾತ್ರ ಬಹಳವಿತ್ತು.ರಾಜಕಾರಣಿಯೊಬ್ಬ ಹೀಗೂ ಇದ್ದರೆ ಎಂಬ ಅಚ್ಚರಿಗಾಗಿ ಚೆನ್ನಬಸವನಗೌಡರ ವ್ಯಕ್ತಿತ್ವವನ್ನಿಲ್ಲಿ ಹೇಳಲೇಬೇಕು.ಎಮ್ಮೆಲ್ಲೆಯಾದರೂ ಯಾವ ಐ.ಬಿ.ಗಳಲ್ಲೂ ಉಳಿದುಕೊಳ್ಳದೆ ಸಾಮಾನ್ಯರಂತೆ ಊರಜನರ ಪಡಸಾಲೆಯ ಮೇಲೆಯೆ ಅಹವಾಲು ಸ್ವೀಕರಿಸುತ್ತಿದ್ದರು.
ಆ ಮನೆಯವರು ಕೊಟ್ಟ ಟೀ..ಮಜ್ಜಿಗೆಯಲ್ಲಿಯೇ ಆತಿಥ್ಯ ಮುಗ್ದುಹೋಗುತ್ತಿತ್ತು.ಒಂದು ಬಾರಿ ಹಿಂದುಳಿದವರ ಮನೆಯಲ್ಲಿ,ಮತ್ತೊಂದು ಬಾರಿ ಹರಿಜನ ಕೇರಿಯಲ್ಲಿ,ಗೌಡರೋಣಿಯಲ್ಲಿ,ಬ್ರಾಮ್ಮಣರೋಣಿಯಲ್ಲಿ ಮೀಟಿಂಗುಗಳು ನಡೆಯುತ್ತಿದ್ದವು.ಸಂಜೆಯಾಗುತ್ತಿದ್ದ ಹಾಗೆ ,ಅಷ್ಟ ಮಾಡ್ರೀ..ಎಂದು ಹೇಳಿ ಕೆಂಪು ಬಸ್ಸನ್ನೇರಿ ಹಗರಿಬೊಮ್ಮನಹಳ್ಳಿಗೆ ಹೋಗುತ್ತಿದ್ದರು.ಅಲ್ಲಿಂದ ,ಅಲ್ಲಿಯೇ ಯಾರದೋ ಮನೆಯ ಮುಂದೆ ನಿಲ್ಲಿಸಿದ ಹಳೇ ಸೈಕಲ್ಲೇರಿ ಕತ್ತಲ ರಾತ್ರಿಯಲ್ಲಿ ಬಾಚಿಗೊಂಡನಹಳ್ಳಿಯ ಮನೆ ಸೇರುತ್ತಿದ್ದರು.
ಆಕ್ರಮಣಕಾರಿ ರಾಜಕಾರಣದ ಈ ಕಾಲದಲ್ಲಿ ,ತುಂಡು ಪಂಚೆಯನ್ನೆ ಮೇಲಕ್ಕೆ ಕಟ್ಟಿಕೊಂಡು ಹೊಲದಲ್ಲಿ ಕಮತ ಮಾಡುವ ಸಿಟ್ಟಿಂಗ್ ಎಮ್ಮೆಲ್ಲೆ ಹೋಗಲಿ, ಗ್ರಾಮ ಪಂಚಾಯಿತಿ ಮೆಂಬರು ಕೂಡ ಕಾಣಸಿಗುವುದಿಲ್ಲ.
ಬಾಚಿಗೊಂಡನಹಳ್ಳಿ ಚೆನ್ನಬಸವನಗೌಡರು ಮತ್ತೊಂದು ಬಾರಿ ಗೆಲ್ಲಲಿಲ್ಲ.ಸೋತರೂ ನಿರ್ಲಿಪ್ತರಂತಿದ್ದ ಆ ಮುಖಭಾವ ಇನ್ನೂ ಮನದಲ್ಲಿ ಅಚ್ಚೊತ್ತಿದ್ದಂತಿದೆ.
ಅವರು ತೀರಿ ಹೋದ ದಿನ, ಅಂತ್ಯಸಂಸ್ಕಾರಕ್ಕೂ ಹಣವಿರಲಿಲ್ಲ.ಅವರದ್ದೇ ಅಕೌಂಟಿನಲ್ಲಿ ಕೇವಲ ಮೂವತ್ತೆರೆಡು ರೂಪಾಯಿಗಳಿದ್ದುವಂತೆ!.
ಈ ಹೊತ್ತು ಹರಪನಹಳ್ಳಿ,ಹಗರಿಬೊಮ್ಮನಹಳ್ಳಿ ,ಕೊಟ್ಟೂರು ,ಹಡಗಲಿ,ಕೂಡ್ಲಿಗಿ,ಹೊಸಪೇಟೆ,ಸಂಡೂರಿನಂತಹ ಊರುಗಳುದ್ದಕ್ಕೂ ತರಹೇವಾರಿ ಬಣ್ಣಬಣ್ಣದ ಪೋಷ್ಟರುಗಳ ಮಧ್ಯೆ ಶುಭ್ರವಸ್ತ್ರಧಾರಿ ಬಾಚಿಗೊಂಡನಹಳ್ಳಿ ಚೆನ್ನಬಸವನಗೌಡರ ಆ ಮುಖ ಕಾಡುತ್ತದೆ.ಹಾಗೆಯೇ,ಅಂತ್ಯಸಂಸ್ಕಾರದ ದಿನ, ಕೆಲ ಯುವಕರು ತನ್ನ ನಾಯಕನ ಅಂತಿಮ ಯಾತ್ರೆಗಾಗಿ ಪರದಾಡಿದ ನೋವು,ಆಗ ಪಿ.ಯು.ಸಿ.ಓದುತ್ತಿದ್ದ ನನ್ನಂತಹ ಎಷ್ಟೋ ಹುಡುಗರ ಎದೆ ಕಲಕಿತ್ತು.
ನಾನು,ದೊಡ್ಡವನಾಗಿ ಕೆಲಸಕ್ಕೆ ಸೇರಿದ ಮೇಲೆ ಮಾಡಲೇಬೇಕಾದ ಎರಡು ಕನಸುಗಳಿದ್ದವು
ಒಂದು; ಲಿಂಬಿಹುಳಿ ಪೆಪ್ಪರುಮಿಂಟು ಎಷ್ಟು ಬೇಕಾದರೂ ಖರೀದಿಸಿ ಹಂಚಿ ತಿನ್ನೋದು,
ಮತ್ತೊಂದು
ಬಾಚಿಗೊಂಡನಹಳ್ಳಿ ಚೆನ್ನಬಸವನಗೌಡರ ತರಹ ರಾಜಕಾರಣಿಯಾಗೋದು.ದುರದೃಷ್ಟವಶಾತ್ ನನ್ನ ಎರಡೂ ಕನಸುಗಳೂ ಇದುವರೆಗೂ ಈಡೇರಲಿಲ್ಲ
೨
ನನ್ನೂರಿನಲ್ಲಿ ಆ ಕಾಲಕ್ಕೆ ಎಂ.ಎ.ಓದಿದ ಮಲ್ಲಣ್ಣ ಎಂಬುವವರಿದ್ದರು.ಆತ ಯಾವಾಗಲೂ ಅಂತರ್ಮುಖಿಯಾಗಿರುತ್ತಿದ್ದರು.ಸದಾ ಓದುವುದರಲ್ಲಿಯೇ ಮಗ್ನರಾಗಿರುತ್ತಿದ್ದ ಇವರು,ಆಗೊಮ್ಮೆ ಈಗೊಮ್ಮೆ ತುಸುಹೊತ್ತು ರಾಟಿ ಕೊತ್ಲಪ್ಪ ಎಂಬುವರ ಪುಟ್ಟ ಬಟ್ಟೆ ಅಂಗಡಿಯ ಹೊರಗೆ ಹಾಕಿದ ಕಬ್ಬಿಣದ ಚೇರಿನಲ್ಲಿ ಕುಂತು ರೈತಾಪಿ ಮಕ್ಕಳನ್ನು ಶಾಲೆ,ಕಾಲೇಜು ಸೇರಿಸಲು ಸಲಹೆ ನೀಡುತ್ತ, ಪ್ರಜಾವಾಣಿ ಪೇಪರ್ ಓದಿ ವಿದ್ಯಮಾನಗಳನ್ನು ಚರ್ಚೆ ಮಾಡುತ್ತಿದ್ದರು.
ಅಚ್ಚ ಬಿಳಿಯ ಅರ್ಧ ತೋಳಿನ ಷರಟು,ತೆಳು ಬಾದಾಮಿ ಕಲರಿನ ಪ್ಯಾಂಟು ಧರಿಸಿರುತ್ತಿದ್ದ ಮಲ್ಲಣ್ಣನವರೂ ಸಹ ಎಲ್ಲರಂತೆ ಸಾಮಾನ್ಯರ ಬದುಕನ್ನೆ ಬದುಕುತ್ತಿದ್ದರು.ಮುಂಜಾನೆದ್ದು ಕೈಯಲ್ಲಿ ತಂಬಿಗಿ ಹಿಡಿದು ಎರಡಕ್ಕೆ ಹೋಗುವಾಗಲೂ ಯಾವುದೋ ಗಂಭೀರ ಚಿಂತೆನೆಯಲ್ಲಿದ್ದವರಂತೆ ತೋರುತ್ತಿದ್ದರು.
ಹೈಸ್ಕೂಲು ಹುಡುಗರಾದ ನಮಗೆ ಪ್ರಜಾವಾಣಿಯೆಂಬ ಪತ್ರಿಕೆಯ ಅಕ್ಷರಗಳ ವರದಿಗಾರರೂ,ಇಂಗ್ಲೀಷಿನ ಡೆಕ್ಕನ್ ಹೆರಾಲ್ಡ್ ಪೇಪರಿಗೂ ನ್ಯೂಸ್ ಕಳಿಸುತ್ತಿದ್ದವರು ಇವರೇ ಎಂದು ತಿಳಿದು ಅವರ ಬಗ್ಗೆ ಗೌರವ ಜಾಸ್ತಿಯಾಗಿತ್ತು. ಇವರ ಬಗ್ಗೆ ತಿಳಿದುಕೊಂಡ ಎಂ.ವೈ.ಘೋರ್ಪಡೆಯವರು,ಅದೊಂದು ದಿನ,ಮಲ್ಲಣ್ಣನವರನ್ನು ಕರೆದು ನಿಮ್ಮಂಥ,ವಿದ್ಯಾವಂತರು,ಪ್ರಾಮಾಣಿಕ ಕಾಳಜಿಯ ವ್ಯಕ್ತಿಗಳು ರಾಜಕಾರಣಕ್ಕೆ ಬರಬೇಕೆಂದು ಒತ್ತಾಯಿಸಿ ಜಿಲ್ಲಾ ಪಂಚಾಯಿತಿ ಎಲೆಕ್ಷನ್ನಿಗೆ ಟಿಕೆಟು ಕೊಟ್ಟರು.
ನನಿಗೆ ನಿಮ್ಮ ಓಟು ಬ್ಯಾಡ
ಚುನಾವಣಾ ಪ್ರಚಾರದ ಆ ದಿನ,ಮೇನ್ ಬಾಯ್ಸ್ ಸ್ಕೂಲಿನ ಮೈದಾನದಲ್ಲಿ,ಬಹುಸಂಖ್ಯಾತ ಬಡವರು ,ಹಿಂದುಳಿದ ತನ್ನ ಜನರನ್ನು ನೋಡಿದ ಮಲ್ಲಣ್ಣನವರು,”ನೋಡಿ,ನಾನು ಗೆಲ್ಲಬೇಕು,ಸೇವೆ ಮಾಡಬೇಕು ಎಂಬುದೆಲ್ಲ ಎರಡನೇದ್ದು, ಮೊದಲನೆಯದ್ದು ಏನಪ್ಪಾಂದ್ರೆ,ನೀವುಗಳು ಕುಡಿಯೋದನ್ನು ಬಿಡಬೇಕು,ಮಕ್ಕಳನ್ನು ಶಾಲೆಗಳಿಗೆ ಕಳಿಸಬೇಕು,ದೇವದಾಸಿ ಪದ್ಧತಿಗೆ ಹೆಣ್ಣುಮಕ್ಕಳನ್ನು ದೂಡದೆ ಇರ್ತೀವಿ ಅಂತಂದ್ರೆ ಮಾತ್ರ ನನಿಗಿ ಓಟು ಹಾಕಿರಿ.ಇಲ್ಲಾಂದ್ರ ನನಿಗೆ ನಿಮ್ಮ ಓಟು ಬ್ಯಾಡ “ಎಂದು ಕುಳಿತುಬಿಟ್ಟರು.
ಪಾಪದ ಜನ ಪ್ರಾಮಾಣಿಕವಾಗಿಯೇ ಅವರ ಮಾತನ್ನು ನಡೆಸಿದರೆಂದೆನ್ನಿಸುತ್ತದೆ. ಕನಿಷ್ಟ ಮಂಡಾಳು ವಗ್ಗಾಣಿ ಕೂಡ ಇಲ್ಲದ ಆ ಚುನಾವಣೆಯಲ್ಲಿ ಮಲ್ಲಣ್ಣ ಸೋತರು! ಸೋತದಿನವೂ ಅದೇ ರಾಟಿ ಕೊತ್ಲಪ್ಪನವರ ಕಬ್ಬಿಣದ ಚೇರಿನ ಮ್ಯಾಲೆ ಕುಂತ ನಿರ್ಭಾವುಕ ಚಿತ್ರ ಕಣ್ಮುಂದೆ ಬರುತ್ತಿದೆ.
೩.
ಒಮ್ಮೆ ನನ್ನಪ್ಪನನ್ನು ವ್ಯವಸಾಯ ಸೇವಾ ಸಹಕಾರ ಸಂಘಕ್ಕೆ ನಾಮಕರಣ ನಿರ್ದೇಶಕರನ್ನಾಗಿ ಮಾಡಲಾಯಿತು.ಮಾಸಲು ಪಂಚೆ,ಅಲ್ಲಲ್ಲಿ ಹರಿದು ಹೋದ ಅಂಗಿ ಧರಿಸಿದ ಅಪ್ಪ ನೇರ ನುಡಿಗೆ ಹೆಸರುವಾಸಿಯಾಗಿದ್ದ. ಸುತ್ತು ಬಳಸಿ ಮಾತಾಡಿ ತಿಳಿಯದವನಿಗೆ ಯಾಕೋ ಈ ಸೊಸೈಟಿ,ಸರಕಾರ,ಇವೆಲ್ಲ ಜನರಿಗೆ ಸಹಕಾರಿಯಾಗುವ ಬದಲಿಗೆ ಕಿರಿಕಿರಿ ಉಂಟುಮಾಡುತ್ತಿರುವಂತೆ ಕಂಡಿತು. ಅವತ್ತಿನಿಂದಲೇ ಸಂಘದ ಮೀಟಿಂಗುಗಳಿಗೆ ಹೋಗುವುದನ್ನು ನಿಲ್ಲಿಸಿದ.ಹೀಗೆ ಮೂರೂ ಮೀಟಿಂಗುಗಳ ತಪ್ಪಿಸಿದಾಗ ಸೆಕ್ರೆಟರಿ ಕೊತ್ಲಪ್ಪನವರು, ಗಳೇವು ಹೊಡಕೊಂಡು ಹೊಲಕ್ಕೆ ಹೊಂಟವನನ್ನ ತಡೆದು ನಿಲ್ಲಿಸಿ”ನೋಡು …ನೀನು ಬರಿ ಹೊಲ ಗದ್ದೆ ,ರಂಟೆ ಕುಂಟೆ,ಅಂತ ಹೋದ್ರೆ ನಿನಿಗೆ ಬಂದಿರೋ ಪದವಿ ಹೋಗುತ್ತೆ “ಎಂದರು.
“ಪದವಿ ….?”ಅಪ್ಪ ಮುಗ್ಧತೆಯಿಂದ ಕೇಳಿದ್ದ
“ಹೌದು ಅದು ಪದವೀನೆ,ಅದಕ್ಕಾಗಿ ಎಷ್ಟೊಂದು ಜನ ಕಾದು ಕುಳಿತಿದ್ದಾರೆ ಗೊತ್ತಾ.? ನೀನು ಎರಡರಲ್ಲಿ ಒಂದನ್ನು ಮಾಡು,ಒಂದು ಸೊಸೈಟಿ ಡೈರಕ್ಟ್ರಾಗು,ಇಲ್ಲಾಂದ್ರೇ…ಗಳೇವು ಹೊಲ, ಫಲ ,ಅಂತ ಸುಮ್ನಿದ್ದುಬಿಡು “ಎಂದರು. ಈ ಬಾರಿ ಅಪ್ಪ “ನಿಮ್ ಸೊಸೈಟಿ ಪದವಿ ನಿಮಗೇ ಇರಲಿ, ನನಗೆ ಇದೇ ಸಾಕು “ಎಂದು ಗಳೇವು ಹೊಡಕೊಂಡು ಹೊಂಟೇಬಿಟ್ಟ. ಅಂದಿನ ಆ ಚಿತ್ರ… ,ಇಂದು ನನ್ನಲ್ಲಿ ಮೂಡಿಸಿದ ಸಂಚಲನಕ್ಕೆ ಬೆರಗಾಗಿ ಹೋಗಿದ್ದೇನೆ. ಅಪ್ಪ….. ನೆನಪಾಗೋದು ಹೀಗೆ.
೪
ಈಗ್ಗೆ ಕೆಲ ದಿನಗಳ ಹಿಂದೆ ಹರಿಹರದ ಪ್ಲೆಕ್ಸ ,ಬ್ಯಾನರ್ ಪ್ರಿಂಟ್ ಹಾಕುವ ಅಂಗಡಿಗೆ ಕಾರ್ಯನಿಮಿತ್ತ ಹೋಗಿದ್ದೆ. ಗ್ರಾಮದ( ಭಾನುವಳ್ಳಿ ಎಂದು ನೆನಪು) ಯುವಕರ ಗುಂಪೊಂದು ಟೀ ಶರ್ಟುಗಳ ಮೇಲೆ ಪ್ರಿಂಟ್ ಹಾಕಿಸಲು ಬಂದಿದ್ದರು.ಆ ಟೀ ಶರ್ಟುಗಳ ದಾನಿಗಳು ಶರಟಿನ ಮೇಲೆ “ಶ್ರೀ ವಾಲ್ಮೀಕಿ ವಂದೇ ಕೋಕಿಲಂ”ಎಂದು ಹಾಕಿಸಬೇಕೇಂದು ಯುವಕರಿಗೆ ಮತ್ತು ಪ್ರಿಂಟ್ ಹಾಕುವವನಿನಗು ಹೇಳಿದ್ದರು. ವಾಲ್ಮೀಕಿ ಮಹರ್ಷಿ ಚಿತ್ರದೊಂದಿಗೆ ಹಾಕುವೆನೆಂದು ಅಂಗಡಿಯವನು ಹೇಳಿದ.
ಅದಕ್ಕೆ ಹುಡುಗರು ಸುತರಾಂ ಒಪ್ಪಲಿಲ್ಲ.ತಾವು ಧರಿಸುವ ಟೀ ಶರ್ಟುಗಳ ಮೇಲೆ “ಕಿಚ್ಚ ಸುದೀಪ್ ಹುಡುಗರು “ಎಂದು ನಟ ಸುದೀಪ್ ಚಿತ್ರದೊಂದಿಗೆ ಪ್ರಿಂಟ್ ಹಾಕಲು ದಬಾಯಿಸಿದರು. ಮೊದಲೇ ಅಲ್ಪಸಂಖ್ಯಾತ ಸಮುದಾಯದ ಆತ ಅಳುಕಿನಿಂದಲೇ ಪ್ರಿಂಟ್ ಹಾಕಿದ.
೫
ಹಲವು ದಶಕಗಳ ಹಿಂದೆ ಇದೇ ಹೊಸಪೇಟೆ ಊರಿನ ಕಮ್ಯುನಿಸ್ಟ್ ಪಾರ್ಟಿಯ ಆಫೀಸಿನ ಮುಂದಿನ ಧ್ವಜಕಟ್ಟೆಯನ್ನು ಖಾಸಗಿ ಬಂಡವಾಳಶಾಹಿ ಕಂಪೆನಿಯೊಂದು ನಿರ್ಮಿಸಿಕೊಟ್ಟಿತ್ತು!ಸ್ಟಡಿ ಕ್ಲಾಸಿನಲ್ಲಿ ಹೇಳಿದ್ದಕ್ಕೂ ಧ್ವಜ ಕಂಬದ ಕಟ್ಟೆಯ ಮೇಲಿರುವ ಪ್ರಾಯೋಜಕತ್ವಕ್ಕೂ ಒಂದಕ್ಕೊಂದು ತಾಳೆ ಆಗುತ್ತಿರಲಿಲ್ಲ. ಬಂಡವಾಳಶಾಹಿಗಳ ವಿರುದ್ಧ ಹೋರಾಡುತ್ತಲೇ ಇದ್ದವರಿಗೆ ಇದು ಕಂಡರೂ ಅವರಿಗೆ ಯಾಕೆ ತಾಗಲಿಲ್ಲವೋ..?
ಕೊನೆಯದಾಗಿ
ಸದಾಶಿವರ ಒಂದು ಕಥೆಯಲ್ಲಿ,ಒಂದೂರಿನಲ್ಲಿ ಒಬ್ಬ ರಾಣಿಯಿದ್ಲಂತೆ.ಆಕೆಗೆ ಜಗತ್ತಿನ ಅತ್ಯಂತ ಸುಂದರವಾದ ದಂತದ ಅರಮನೆ ಕಟ್ಟಿಸುವ ಆಸೆಯಾಯಿತು.ಅದಕ್ಕಾಗಿ ಪ್ರಜೆಗಳ ಮುಂದಿನ ಎರಡು ಹಲ್ಲುಗಳನ್ನೂ ಕಡ್ಡಾಯವಾಗಿ ಕೊಡಬೇಕೆಂದು ಆಜ್ಞಾಪಿಸಲಾಯಿತು.ನೋಡನೋಡುತ್ತಿದ್ದಂತೆಯೆ ದಂತದ ಅರಮನೆ ಎದ್ದು ನಿಂತಿತು.ಕಣ್ಣು ಸೂರೆಗೊಳ್ಳುವ ಸೌಂದರ್ಯ ಹೊತ್ತ ಅರಮನೆಯನ್ನು ನೋಡಲು ಜನ ತಂಡೋಪತಂಡವಾಗಿ ಬಂದರು.
ಬೊಚ್ಚು ಬಾಯಿ ತೆರೆದು ಅರಮನೆಯ ಸೌಂದರ್ಯವನ್ನು ಕಣ್ತುಂಬಿಕೊಂಡರು.ತಮ್ಮದೇ ಹಲ್ಲುಗಳಿಂದ ಮಾಡಿದ ದಂತದ ಅರಮನೆ ಇದು ,ಎಂಬುದನ್ನು ಮೈ ಮರೆತು ನೋಡಿದರು. ಇಲ್ಲಿಗೆ ಸದಾಶಿವರ ಕಥೆ ಮುಗಿಯುತ್ತದೆ.
ಆದರೆ….ದಿನನಿತ್ಯವೂ ವಿಧಾನಸೌಧವನ್ನು ನೋಡುತ್ತ ನಿಂತ ಸಾವಿರಾರು ಜನರನ್ನು ನೋಡಿದಾಗಲೆಲ್ಲ ಈ ಕಥೆ ನೆನಪಾಗುತ್ತದೆ.
ಅಲ್ಲಿಂದ… ಕಥೆ ಮತ್ತೆ ಶುರುವಾಗುತ್ತದೆ.!
ಎಡಪಂಥೀಯ,ಪಗತಿಪರ ಚಿಂತಕ,ಯುವ ರಾಜಕಾರಣಿ ಎಂಬ ಮುಖವಾಡದ ವ್ಯಕ್ತಿಯೋರ್ವ ಸರ್ಕಾರದ ಹಾಸ್ಟೆಲುಗಳ ಹಾಸಿಗೆ ಪೂರೈಕೆದಾರರಿಂದ ಅಕ್ರಮವಾಗಿ ಹಣ ಪಡೆದಿರುವನೆಂದು ಆತನ ವಿರುದ್ಧ ವಂಚನೆ ಕೇಸ್ ಹಾಕಲಾಗಿದೆ.ಜನರ ನಡುವೆ,ಹಲವು ಹತ್ತು ಜನಸೇವೆ ಮಾಡುವವರ ಮದ್ಯೆಯಿದ್ದೂ ಕೂಡ ಇಂತಹವರು ಇದ್ದಾರೆ ಎಂದರೆ,ಪ್ರಜಾಪ್ರಭುತ್ವದ ಮೇಲಿನ ಅಲ್ಪಸ್ವಲ್ಪ ನಂಬಿಕೆಯೂ ಹಾಳಾಗಿಹೋಗಿಬಿಡುತ್ತದೆ
ಬಿ.ಶ್ರೀನಿವಾಸ