ಬೆಂಗಳೂರು ಡಿ1: ಪುಟ್ಟಣ್ಣ ಕಣಗಾಲ್ ಅವರು ಕನ್ನಡ ಸಂಸ್ಕೃತಿಯ ನೇಕಾರರಾಗಿ, ಭಾವನೆಗಳು ಮತ್ತು ಕಲೆಯ ಬೆಸುಗೆ ಹಾಕಿದರು. ಸಾಹಿತ್ಯ ಮತ್ತು ಸಿನಿಮಾದ ಬೆಸುಗೆ ಹಾಕಿದರು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರು ಅಭಿಪ್ರಾಯಪಟ್ಟರು.
ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಆಯೋಜಿಸಿದ್ದ ದಿ ಎಸ್.ಆರ್.ಪುಟ್ಟಣ್ಣ ಕಣಗಾಲ್ ಅವರ 93ನೇ ಜನ್ಮದಿನೋತ್ಸವವನ್ನು ಉದ್ಘಾಟಿಸಿ, ಸಂಸ್ಥೆ ನೀಡುವ ರಾಜ್ಯೋತ್ಸವ ಪ್ರಶಸ್ತಿಯನ್ನು ಪುರಸ್ಕೃತರಿಗೆ ನೀಡಿ ಗೌರವಿಸಿ ಮಾತನಾಡಿದರು.
ಓದುಗರಿಗೆ ಸಿನಿಮಾವನ್ನೂ, ನೋಡುಗರಿಗೆ ಸಾಹಿತ್ಯವನ್ನೂ ತಲುಪಿಸುವ ಮೂಲಕ ಎರಡು ಕಲಾ ಮಾಧ್ಯಮಗಳ ಜೀವಂತಿಕೆ ಹೆಚ್ಚಿಸಿದರು. ಕನ್ನಡದ ಮಹತ್ವದ ಕಾದಂಬರಿಗಳನ್ನು ಮತ್ತು ಸಾಹಿತ್ಯ ಕೃತಿಗಳನ್ನು ಯಶಸ್ವಿಯಾಗಿ ಚಲನಚಿತ್ರಗಳಿಗೆ ಅಳವಡಿಸಿ, ಸಾಹಿತ್ಯ ಮತ್ತು ಚಲನಚಿತ್ರ ಮಾಧ್ಯಮಗಳ ನಡುವೆ ಸೇತುವೆಯಾಗಿದ್ದರು ಎಂದರು.
ಶರಪಂಜರ, ನಾಗರಹಾವು, ಬೆಳ್ಳಿಮೋಡ, ಗೆಜ್ಜೆಪೂಜೆ , ಕಥಾಸಂಗಮ’ ‘ಮಾನಸ ಸರೋವರ’, ‘ರಂಗನಾಯಕಿ’ ಕಣಗಾಲ್ ಅವರ ಕಲಾತ್ಮಕ ಬೆಸುಗೆಯ ಕೆಲವು ಮಾಸ್ಟರ್ ಪೀಸ್ ಗಳು ಎಂದು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು.
Read also : Political analysis|ರಾಹುಲ್ ಗಾಂಧಿಗೆ ಒಪ್ಪಂದದ ಕತೆ ಬೇಕಿಲ್ಲ…..
ಸಿನಿಮಾ ನಿರ್ದೇಶಕರಿಗೆ ಸ್ಟಾರ್ ವ್ಯಾಲ್ಯೂ ತಂದುಕೊಟ್ಟ ಕನ್ನಡದ ಮೊದಲ ನಿರ್ದೇಶಕ ಎನ್ನಬಹುದು. ಕಣಗಾಲ್ ಸಿನಿಮಾಗಳು ಕೇವಲ ಮನರಂಜನೆಯಾಗಿರದೆ, ನೆರಳು ಬೆಳಕಿನ ಮೂಲಕ ಸಮಾಜದ ವಾಸ್ತವ ಮತ್ತು ಮಾನವ ಸಂಬಂಧಗಳ ಸೂಕ್ಷ್ಮತೆಯನ್ನು ಕಟ್ಟಿಕೊಡುತ್ತಿದ್ದವು ಎಂದು ಶ್ಲಾಘಿಸಿದರು.
ಅವರ ಉತ್ತಮ ಗುಣಮಟ್ಟದ ಸಿನಿಮಾಗಳು ಕನ್ನಡದ ಕೀರ್ತಿಯನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದವು. ಸಿನಿಮಾದಲ್ಲಿ ಸ್ತ್ರೀವಾದವನ್ನು ಅಚ್ಚುಕಟ್ಟಾಗಿ ಮುನ್ನಲೆಗೆ ತಂದು, ಹೆಣ್ಣುಸಂಕುಲದ ತಲ್ಲಣಗಳನ್ನು ಮನಮುಟ್ಟುವಂತೆ ಕಟ್ಟಿಕೊಟ್ಟರು ಎಂದು ವಿವರಿಸಿದರು.
ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನ್ನಡ ಸಿನಿಮಾ ಅಭಿವೃದ್ಧಿಗೆ ನಿರಂತರ ಪ್ರೋತ್ಸಾಹ ಮತ್ತು ನೆರವು ನೀಡುತ್ತಿದ್ದಾರೆ. ಏಕರೂಪ ಟಿಕೆಟ್ ದರ ನಿಗಧಿ ಮಾಡುವ ಸಂಬಂಧ ನ್ಯಾಯಾಲಯದಲ್ಲಿರುವ ವಿವಾದ ಬಗೆಹರಿಯುತ್ತಿದ್ದಂತೆ ಆ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
