ಒಂದು ರಾತ್ರಿಯಿಡೀ ರಾಜ್ಯ ರಾಜಕಾರಣದ ಒಳಸುಳಿಗಳನ್ನು ತೆರೆದಿಟ್ಟಿದ್ದರು.ಹೀಗೆ ಮಾತನಾಡುವಾಗ ತನ್ನ ತಂದೆ ಪ್ರಕಾಶರಿಗಾದ ಅನ್ಯಾಯದ ನೋವು ಅವರಲ್ಲಿತ್ತು.
ಆ ಬಿಸಿಯಲ್ಲಿ ಸುಟ್ಟ ಸಿಗರೇಟುಗಳ ,ಖಾಲಿಯಾದ ಬಾಟಲುಗಳ ಲೆಕ್ಕ ಇಟ್ಟವರಿರಲಿಲ್ಲ.
ಆ ರಾತ್ರಿ ಮಾತಾಡಿದ ಪೈಕಿ,ಸಿದ್ದಲಿಂಗಯ್ಯನವರ ಕವಿತೆ ಸಾಲುಗಳನ್ನು ಉಚ್ಛರಿಸಿದ್ದೇ ಹೆಚ್ಚು.ನಡುನಡುವೆ ಪಕ್ಷದ ನಾಯಕರ ಜಾತೀಯತೆಯನ್ನು,ಸ್ವಜನಪಕ್ಷಪಾತವನ್ನು ಝಾಡಿಸುತ್ತಿದ್ದ ರೀತಿ ಕಣ್ಣಿಗೆ ಕಟ್ಟಿದಂತಿದೆ.
ಸಣ್ಣವರಿದ್ದಾಗ ತನ್ನಪ್ಪ ಎಂ.ಪಿ.ಪ್ರಕಾಶರು,ಪಟೇಲರ “ಪುಣ್ಯ”ದ ಮನೆಯಿಂದ ಫೋನು ಮಾಡುತ್ತಿದ್ದುದು, ಆಗ ತಾನು ತನ್ನ ಸಹೋದರಿಯೊಂದಿಗೆ ಪೇನ ಪೆಟಿಗಿ,ತಬಲ ತೆಗೆದುಕೊಂಡು ಹೋಗಿ ಇಟ್ಟು,ಬೆರಗುಗಣ್ಣಿನಿಂದ ನೋಡುತ್ತಿದ್ದುದನ್ನು, ಅಲ್ಲಿದ್ದವರ ಟೇಬಲುಗಳ ಮೇಲೆ ಎಣ್ಣೆ ಬಾಟಲುಗಳು ಸೇರಿದಂತೆ ಅಪ್ಪ ಪ್ರಕಾಶರು ಕಣ್ಮುಚ್ಚಿ ಹಾರ್ಮೋನಿಯಮ್ ನುಡಿಸುತ್ತಿದ್ದ ರೀತಿಯನ್ನು, ಅಶ್ವತ್ಥರ ಹಾಡು,ಹರಿಖೋಡೆಯವರ ಶಹಬ್ಬಾಸಗಿರಿ…ಪಟೇಲರ ಗುಟುಕರಿಸುತ್ತಲೆ ನಗುವ ರೀತಿ….ಎಲ್ಲವನ್ನೂ ಹೇಳಿಕೊಂಡು ತಮ್ಮನ್ನೂ ,ತಮ್ಮನ್ನು ಬಿಡಲಾರದ ಚಟಗಳನ್ನೂ ಮುಕ್ತವಾಗಿ ಹೇಳಿಕೊಂಡಿದ್ದರು.
ಅವತ್ತು ನನಗನಿಸಿದ್ದು ಇಷ್ಟು..
ಊರ ಜನರೇ ಚಂದಾ ಎತ್ತಿ ಗೆಲ್ಲಿಸಿದ ಪ್ರಕಾಶರಂತಹವರ ಮಕ್ಕಳು ಐ ಮೀನ್ ರಾಜಕಾರಣದ ಬೇಸ್ ಇದ್ದ ಇಂತಹ ರಾಜಕುವರರೇಕೆ ಹೀಗಾಕ್ತಾರೆ ?
ಹಿಂದೆಂದೂ ಕಂಡಿರದಂತಹ ರಾಜಕಾರಣದ ಒಳಸುಳಿಗೆ ಭಾರತ ಇಂದು ಸಿಲುಕಿದೆ.ಹಸಿ ಹಸಿ ಸುಳ್ಳು,ವಿಕೃತೀಕರಿಸಿದ ಚರಿತ್ರೆಯನ್ನೆ ಸತ್ಯ ಎಂದು ನಂಬುವಂತೆ ಮಾಡುವ ಕಾಲಘಟ್ಟದಲ್ಲಿ ಇಂದು ನಾವಿದ್
ರವೀಂದ್ರ ಮತ್ತವನ ಒಡನಾಡಿಗಳು ಹೂವಿನಹಡಗಲಿಯ ಬಿಚ್ಚುಗತ್ತಿ ಬೀದಿ,ಅಕ್ಕಿಪೇಟೆ,ಸೊಪ್ಪಿನಿಂದ ಓಣಿ,ಈಟೇರ ಓಣಿ,ಹುಚ್ಚಣ್ಣಶೆಟ್ಟರ ಅಂಗಡಿ,ಅಟವಾಳಿಗಿ ಡಾಕ್ಟರ್ ಬೀದಿ,ರಾಮದೇವರ ಗುಡಿ,ಬಾಬುವಿನ ಜೈನರ ಓಣಿಗಳಲ್ಲಿ ಓಡಾಡಿದ್ದು ನನ್ನು ನೆನಪಿಸಿಕೊಂಡಾಗಲೆಲ್ಲ ಷೇಕ್ ಅಬ್ದುಲ್ಲಾ ನೆನಪಾಗುತ್ತಾರೆ.
ಆ ದಿನ,ಕಾಶ್ಮೀರದ ಬೀದಿಯಲ್ಲಿ ಹಿಂದೂ ಸಮಾಜದಿಂದ ಬಹಿಷ್ಕೃತಗೊಂಡಿದ್ದ ಮಹಿಳೆ ಸತ್ತಿರುತ್ತಾಳೆ.ಆಧುನಿಕ ಶಿಕ್ಷಣ ಪಡೆದು ತನ್ನ ತವರು ರಾಜ್ಯ ಕಾಶ್ಮೀರಕ್ಕೆ ಅದೇ ತಾನೆ ಬಂದಿದ್ದ ಷೇಕ್ ಅಬ್ದುಲ್ಲಾ, ಬೀದಿಯಲ್ಲಿ ಬಿದ್ದ ಹಿಂದೂ ಮಹಿಳೆಯ ಶವವನ್ನು ಹೊತ್ತೊಯ್ದು ಹಿಂದೂ ಸಂಪ್ರದಾಯದಂತೆಯೇ ಅಂತ್ಯಸಂಸ್ಕಾರ ನೆರವೇರಿಸುತ್ತಾರೆ.
ಮುಂದೆ ಇದೇ ಷೇಕ್ ಅಬ್ದುಲ್ಲಾ ಮುಸ್ಲಿಮ್ ಹಾಗೂ ಹಿಂದೂ ಸಮುದಾಯಗಳ ಮಾಸ್ ಲೀಡರ್ ಆಗಿ ಬೆಳೆಯುತ್ತಾರೆ.ದೇಶ ವಿಭಜನೆಯ ಸಂದರ್ಭದಲ್ಲಿ ಪಾಕಿಸ್ತಾನಿ ಸೈನಿಕರು ಕಾಶ್ಮೀರವನ್ನು ಆಕ್ರಮಿಸಿಕೊಳ್ಳಲು ಬಂದಾಗ ರಾಜಾ ಹರಿಸಿಂಗ್ ಓಡಿ ಹೋಗಿ ದಿಲ್ಲಿಯಲ್ಲಿ ಕೂಡುತ್ತಾರೆ.
ಆಗ ಷೇಕ್ ಅಬ್ದುಲ್ಲಾ ಸ್ವಾತಂತ್ರ್ಯ ಹೋರಾಟಗಾರರನ್ನು ಕಟ್ಟಿಕೊಂಡು ಪಾಕ್ ಸೈನಿಕರ ವಿರುದ್ಧ ಹೋರಾಡುತ್ತಾರೆ.ಅಮೇರಿಕಾ ಪಾಕ್ ಸೈನಿಕರಿಗೆ ಸಹಾಯ ಮಾಡಿದರೆ,ಪಾಕಿಸ್ತಾನ ಕೋಮುವಾದಿ ನೆಲೆಯಲ್ಲಿ ಷೇಕ್ ಅಬ್ದುಲ್ಲಾರನ್ನು ಆಹ್ವಾನಿಸುತ್ತದೆ.
ಆಗ ಷೇಕ್ ಅಬ್ದುಲ್ಲಾ ,ಕಾಶ್ಮೀರ ಎಂದೆಂದಿಗೂ ಭಾರತದ ಅವಿಭಾಜ್ಯ ಅಂಗ ಎಂದು ಘೋಷಿಸುತ್ತಾರೆ.ಕಾಶ್ಮೀರಕ್ಕೆ ಪ್ರತ್ಯೇಕ ಸ್ಥಾನಮಾನಗಳನ್ನು ಕಲ್ಪಿಸಿಕೊಡುವ 370 ನೇ ವಿಧಿಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.
ನಂತರದ್ದು,ಇತಿಹಾಸ.
ಷೇಕ್ ಅಬ್ದುಲ್ಲಾರ ಮಗ ಫಾರೂಕ್ ಅಬ್ದುಲ್ಲಾ ,ಮತ್ತವರ ಮಗ ಓಮರ್ ಅಬ್ದುಲ್ಲಾ ಕೂಡ ಕಾಶ್ಮೀರದ ಮುಖ್ಯಮಂತ್ರಿಯಾಗ್ತಾರೆ.
ಈ ಹೊತ್ತು ಮನರಂಜನೆ,ಹಣ ಮಾಡುವುದನ್ನೇ ಮುಖ್ಯವಾಗಿರಿಸಿಕೊಂಡ ಸಿನಿಮಾ ಮಾಧ್ಯಮ ಕೂಡ ಕೋಮು ಗಲಭೆಗೆ ಪ್ರಚೋದಿಸುವ ರೀತಿಯಲ್ಲಿ,ಇಲ್ಲವೇ ಕೀಳರಿಮೆ ಯಲ್ಲಿ ಬಳಲುವಂತೆ ಮಾಡುವ ಸಿನಿಮಾಗಳ,ಟೀವಿಗಳ ಕುರಿತು ಎಚ್ಚರದಿಂದ ಇರಬೇಕು.
ಮಾಧ್ಯಮಗಳ ಮೂಲಕ ನಡೆಸುವ ಸಾಂಸ್ಕೃತಿಕ ದಾಳಿ ಯಾವ ಯುದ್ಧಗಳೂ ಉಂಟುಮಾಡದಷ್ಟು ಡ್ಯಾಮೇಜು ಮಾಡಬಲ್ಲುದು.ಇಂತದ್ದರಲ್ಲಿ ರಾಜಕಾರಣ ಉದ್ಯಮವಾಗಿದ್ದರಲ್ಲಿ ಆಶ್ಚರ್ಯ ಏನೈತೆ? ಎಂದು ಪ್ರಶ್ನಿಸಿದ್ದರು.
ದಾವಣಗೆರೆ ಎಂಬ ನಗರದ ಹಂಗಿನ ಅರಮನೆಯಿಂದ ಹೊರಬರಲು ಸದಾ ಚಡಪಡಿಸುತ್ತಿದ್ದ ರವೀಂದ್ರ ಕೊನೆಗೂ ಹೋರಾಟದಲ್ಲಿ ಗೆದ್ದರು.ಫಾರೂಕ್,ಒಮರ್ ಅಬ್ದುಲ್ಲಾ ರಂತೆ ತನ್ನ ನೆಲದ ಜನರಿಗೂ ವಿಶೇಷ ಸ್ಥಾನಮಾನ ಕಲ್ಪಿಸಿಕೊಡುವ ೩೭೦ ನೇ ವಿಧಿಯ ಸವಲತ್ತುಗಳನ್ನು ಜನತೆಗೆ ಒದಗಿಸುವಲ್ಲಿ ಯಶಸ್ವಿಯಾದರು.
ರವೀಂದ್ರರಿಗೆ ಪ್ರಜಾಪ್ರಭುತ್ವದ ಆಶಯಗಳು ಕೆಟ್ಟುಹೋದದ್ದರ ಬಗ್ಗೆ ಕಡುಕೋಪವಿತ್ತು. ಅಮಲಿನಲ್ಲೂ ಆ ಹೊತ್ತು ,”ನೀವು ಹೇಳಿ, ಈಗ ನಾನು ಎಷ್ಟೇ ಕೆಲಸ ಮಾಡಿದ್ದರೂ ಸಹ ಗೆಲ್ಲಬೇಕು ಎಂದರೆ ಹದಿನೈದರಿಂದ ಇಪ್ಪತ್ತು ಕೋಟಿ ರೂಪಾಯಿ ಬೇಕು.ನಾನು ಇದೇ ಹಣವನ್ನು ಬ್ಯುಸಿನೆಸ್ಸಿಗೆ ತೊಡಗಿಸಿದರೆ ನೆಮ್ಮದಿಯಿಂದ ಜೀವನ ಮಾಡಬಹುದು .ಆದರೆ ನಮ್ಮಪ್ಪ ಮಾಡಿದ ರಾಜಕಾರಣ ಇಲ್ಲಿಗೆ ನಿಲ್ಲಿಸಬಾರದು ಅಂತ ಒಳಮನಸ್ಸು ಹೇಳ್ತದೆ.ಏನ್ ಮಾಡೋದು..?ಹೇಳ್ರಿ?”ಎಂದು ಅಂದು ಕೇಳಿದ ಪ್ರಶ್ನೆಗಳಿಗೆ ನನ್ನಲ್ಲಿ ಇಂದಿಗೂ ಉತ್ತರವಿಲ್ಲ.
ಆದರೂ, ಧರ್ಮಸಿಂಗರ ಪುತ್ರ ಅಜಯ್ ಸಿಂಗ್,ಖರ್ಗೆಯವರ ಮಗ ಪ್ರಿಯಾಂಕ್,ಕಾಶಪ್ಪನವರ ಪುತ್ರ ವಿಜಯಾನಂದ,ಪಟೇಲರ ಮಗ ಮಹಿಮಾ ಪಟೇಲ್,ಭೈರೇಗೌಡರ ಪುತ್ರ ಕೃಷ್ಣಭೈರೇಗೌಡ,ಇನ್ನೂ ಇಂತಹ ಅನೇಕ “ರಾಜಕುಮಾರ”ರೊಂದಿಗೆ ಸೇರಿ ಏನಾದರೂ ಗಟ್ಟಿ ರಾಜಕಾರಣ ಮಾಡಬೇಕು ಎಂಬ ಕನಸನ್ನೂ ಹೊಂದಿದ್ದರು.
ಸೋತು ಹೋದ ಮುಖಗಳ ಕಂಡು ಕೇಕೆ ಹಾಕಿ ನಗುವವರ ಮಧ್ಯೆ ಪ್ರಿನ್ಸ್ ರವೀಂದ್ರರಂತಹ ಯುವಕರ ರಾಜಕಾರಣದಿಂದಾಗಿ ಕೋಮು ವ್ಯಾಧಿಗೆ ಒಳಗಾದವರ ಈ ಹೊತ್ತಿನ ರೋಗವನ್ನಾದರೂ ತಡೆಯಬಹುದಿತ್ತು.
ಸಾಬರ ಹುಡುಗರೊಂದಿಗೆ ರಂಜಾನು ಹಬ್ಬ ಆಚರಿಸುತ್ತ,ಹೋಳಿ ಹಬ್ಬದ ದಿನ ಬಣ್ಣದಾಟವಾಡಿ ,ಹಲಗೆ ಬಾರಿಸುತ್ತ ಕುಣಿದು ಕುಪ್ಪಳಿಸುವ ಯುವ ನಾಯಕನ ನಿರ್ಗಮನವಾಗಿದೆ.
ಹೂವಿನ ಹಡಗಲಿಯ ರಾಮದೇವರ ಗುಡಿ ಓಣಿ,ಬಿಚ್ಚುಗತ್ತಿ ಬೀದಿ,ಅಕ್ಕಿಪೇಟೆ,ಮಾರವಾಡಿಗಳ ಬೀದಿ,ಕುರುಬರ ,ನಾಯಕರ,ಮಾದರ ಓಣಿಗಳಲ್ಲೂ ಸಹ ದಟ್ಟ ಮೌನ ಆವರಿಸಿದೆ.
ಒಂದೊಳ್ಳೆ ಕೆಲಸಗಳನ್ನು ಮಾಡಬೇಕೆಂದರೂ ಬಿಡಲಾರದ ಈ ರಾಜಕಾರಣದ ಸಹವಾಸ ದೋಷಗಳಿಗೆ,ಮತ್ತು ಸ್ವಯಂಕೃತಾಪರಾಧಗಳಿಗೆ ಬಲಿಯಾದ ದುರಂತ ಯುವನಾಯಕ- ಎಂ.ಪಿ.ಪ್ರಕಾಶರ ಪುತ್ರ ರವೀಂದ್ರರ ನೆನಪು ಈ ಹೊತ್ತು ಹೆಚ್ಚು ಕಾಡುತ್ತದೆ.
ಬಿ.ಶ್ರೀನಿವಾಸ