ದಾವಣಗೆರೆ (Davanagere): ಬ್ಯಾಂಕುಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಶೀಘ್ರ ನೇಮಕಾತಿ ಮಾಡಬೇಕು, 5 ದಿನಗಳ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೆ ತರಬೇಕು, ತಾತ್ಕಾಲಿಕವಾಗಿ ಕೆಲಸ ಮಾಡುತ್ತಿರುವ ನೌಕರರನ್ನು ಖಾಯಂಗೊಳಿಸಬೇಕು ಎಂದು ಬ್ಯಾಂಕ್ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆಯ ಜಿಲ್ಲಾ ಸಂಚಾಲಕ ಹಾಗೂ ಕೆನರಾ ಬ್ಯಾಂಕ್ ಎಂಪ್ಲಾಯೀಸ್ ಯೂನಿಯನ್ನ ರಾಷ್ಟ್ರೀಯ ಕಾರ್ಯದರ್ಶಿ ಕೆ.ರಾಘವೇಂದ್ರ ನಾಯರಿ ಸರ್ಕಾರವನ್ನು ಒತ್ತಾಯಿಸಿದರು.
ಮಂಗಳವಾರ ದೇಶದಾದ್ಯಂತ ಎಲ್ಲ ಬ್ಯಾಂಕುಗಳ ಪ್ರಾದೇಶಿಕ ಕಛೇರಿಗಳ ಮುಂಭಾಗ ಪ್ರತಿಭಟನಾ ಮತಪ್ರದರ್ಶನ ನಡೆಸಲು ಬ್ಯಾಂಕ್ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆಯು ಕರೆ ನೀಡಿರುವ ಹಿನ್ನಲೆಯಲ್ಲಿ ದಾವಣಗೆರೆಯ ಸಿದ್ದವೀರಪ್ಪ ಬಡಾವಣೆಯ ಕೆನರಾ ಬ್ಯಾಂಕಿನ ಪ್ರಾದೇಶಿಕ ಕಛೇರಿಯ ಮುಂಭಾಗ ಆಯೋಜಿಸಿದ್ದ ಪ್ರತಿಭಟನಾ ಮತಪ್ರದರ್ಶನದಲ್ಲಿ ಮಾತನಾಡುತ್ತಿದ್ದರು.
ಕೆನರಾ ಬ್ಯಾಂಕ್ ಅಧಿಕಾರಿಗಳ ಸಂಘಟನೆಯ ಪ್ರಾದೇಶಿಕ ಕಾರ್ಯದರ್ಶಿ ಪ್ರದೀಪ್ ಪಾಟೀಲ್ ಮಾತನಾಡಿ, ಬ್ಯಾಂಕುಗಳಲ್ಲಿ ಅಗತ್ಯ ಪ್ರಮಾಣದ ನೇಮಕಾತಿ ಮಾಡುವ ಮೂಲಕ ಗ್ರಾಹಕರಿಗೆ ಅತ್ಯುತ್ತಮ ಸೇವೆಯನ್ನು ಒದಗಿಸಬೇಕು ಹಾಗೂ ಐದು ದಿನಗಳ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೆ ಬರಬೇಕು ಎನ್ನುವುದು ನಮ್ಮ ಹಲವಾರು ವರ್ಷಗಳ ಬೇಡಿಕೆಯಾಗಿದೆ. ಈ ಬಗ್ಗೆ ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್ ಹಾಗೂ ಕಾರ್ಮಿಕ ಸಂಘಟನೆಗಳ ನಡುವೆ ಈಗಾಗಲೇ ಒಪ್ಪಂದ ಆಗಿದ್ದರೂ ಸಹ ಕೇಂದ್ರ ಸರಕಾರ ಈ ಕುರಿತು ಮೌನ ತಾಳಿದೆ ಎಂದು ಆರೋಪಿಸಿದರು.
ದಾವಣಗೆರೆ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಕಾರ್ಯದರ್ಶಿ ಹೆಚ್.ಎಸ್.ತಿಪ್ಪೇಸ್ವಾಮಿ ಮಾತನಾಡಿ, ಸರಕಾರವು ಈ ಕೂಡಲೇ ಮಧ್ಯಪ್ರವೇಶಿಸಿ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದರೆ ಮಾರ್ಚ್ 24 ಮತ್ತು 25 ರಂದು ಅಖಿಲ ಭಾರತ ಬ್ಯಾಂಕ್ ಮುಷ್ಕರ ನಡೆಯಲಿದೆ ಎಂದು ಎಚ್ಚರಿಸಿದರು.
Read also : ವಿಶೇಷಚೇತನರ ಮಾಸಿಕ ಪಿಂಚಣಿ : ಸಂಸತ್ತಿನಲ್ಲಿ ಗಮನಸೆಳೆದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್
ಪ್ರತಿಭಟನಾ ಮತಪ್ರದರ್ಶನದಲ್ಲಿ ಬ್ಯಾಂಕ್ ಕಾರ್ಮಿಕ ಸಂಘಟನೆಗಳ ನಾಯಕರುಗಳಾದ ಹೆಚ್.ಸುಗುರಪ್ಪ, ಅನುರಾಧಾ ಸಂಪನ್ನ ಮುತಾಲಿಕ್, ಪರಶುರಾಮ, ಕೆ.ಗಂಗಾಧರ್, ವಿನೋದ್ ವರ್ಣೇಕರ್, ಸಿದ್ದಲಿಂಗೇಶ್ ಕೋರಿ, ಎಸ್.ಪ್ರಶಾಂತ್, ಡಿ.ಹರ್ಷದ್, ಎಲ್.ಗೋಪಾಲಕೃಷ್ಣ, ವಿ.ಆರ್.ಹರೀಶ್, ಅನಿಲ್ ಟಿ.ಎಸ್., ಗೋಪಾಲಕೃಷ್ಣ, ಬಿ.ಎ.ಸುರೇಶ್, ರಶ್ಮಿ ನಾಗರಾಜ್, ಕೆ.ಜಯಲಕ್ಷ್ಮಿ, ವಿಶ್ವಚೇತನ್, ಆಶಾ ವಿದ್ಯಾಸಾಗರ್, ಸುಷ್ಮ ಜೋಷಿ, ರೋಹಿಣಿ ಮಂಡ್ರೆ, ಎಲ್.ಲತಾ, ನಾಗರತ್ನಮ್ಮ, ರೇಣುಕಮ್ಮ ಮತ್ತಿತರರು ಭಾಗವಹಿಸಿದ್ದರು.