ದಾವಣಗೆರೆ (Davanagere): ಇಂದಿನ ಪರಿವರ್ತನಾ ದಿನಗಳಲ್ಲಿ ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯುವ ಕೆಲಸವನ್ನು ವಕೀಲರು ಮಾಡಬೇಕಿದೆ ಎಂದು ರಾಜ್ಯ ವಕೀಲರ ಪರಿಷತ್ ನ ಉಪಾಧ್ಯಕ್ಷ ವಿನಯ್ ಬಾಳಾ ಸಾಹೇಬ್ ಮಾಂಗಳೆಕರ್ ಹೇಳಿದರು.
ನಗರದ ವಕೀಲರ ಭವನದಲ್ಲಿ ಹಮ್ಮಿಕೊಂಡಿದ್ದ ವಕೀಲರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಇಂದು ಕಾನೂನು ವಲಯ ಸಾಕಷ್ಟು ಬದಲಾಗುತ್ತಾ ಇದೆ. ಕೃತಕ ಬುದ್ಧಿಮತ್ತೆ ಸಾಕಷ್ಟು ಪರಿಣಾಮಕಾರಿ ಬದಲಾವಣೆ ತರುತ್ತಿದೆ. ಇದು ನಮ್ಮ ವೃತ್ತಿಗೆ ಸಹಕಾರಿ. ಇದನ್ನು ಬಳಸಿಕೊಂಡು ನಾವು ನಮ್ಮ ನೈತಿಕತೆ ಮರೆಯದೆ ಸಮಾಜದ ಪ್ರತಿಯೊಬ್ಬರಿಗೂ ನ್ಯಾಯ ಒದಗಿಸಬೇಕು ಎಂದರು.
ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಹೆಗಡೆ ಮಾತನಾಡಿ, ಅಂಬೇಡ್ಕರ್ ಅವರು ಸಂವಿಧಾನದ ರಚನಾಕಾರರು. ಅವರ ಕೊಡುಗೆ ದೊಡ್ಡದಿದೆ. ಆದರೂ ಸರ್ಪಪ್ಪಲಿ ರಾಧಾಕೃಷ್ಣ ಅವರ ವಕೀಲಿ ದಕ್ಷತೆ ಕಾರಣಕ್ಕೆ ಅವರ ಹೆಸರಲ್ಲಿ ವಕೀಲರ ದಿನ ಆಚರಿಸಲಾಗುತ್ತಿದೆ ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್. ಎಚ್. ಅರುಣ್ ಕುಮಾರ್ ಮಾತನಾಡಿ, ಜಿಲ್ಲಾ ಸಂಘಕ್ಕೆ ರಾಜ್ಯ ಪರಿಷತ್ ನಿಂದ ಬರುವ ಕಾರ್ಯಾಗಾರದ ಅನುದಾನ ಹೆಚ್ಚಿಸಬೇಕು. ನಮ್ಮ ಬಾರ್ ರಾಜ್ಯದಲ್ಲಿಯೇ ಹೆಸರುವಾಸಿ ಆಗಿದೆ. ಸಂವಿಧಾನ ರಚನಾ ಕರಡು ಸಮಿತಿಯಲ್ಲಿ ಇದ್ದ ಸದಸ್ಯರಾದವರು ನಮ್ಮ ಸಂಘದವರು ಎಂಬುದು ಹೆಮ್ಮೆಯ ವಿಷಯ ಎಂದರು.
ಹಿರಿಯ ವಕೀಲರಾದ ಎ.ಆರ್. ಗುರುಬಸವರಾಜ್, ಲೋಕೀಕೆರೆ ಸಿದ್ದಪ್ಪ ಮಾತನಾಡಿದರು.
ವಿವಿಧ ಪೀಠದ ಜಿಲ್ಲಾ ನ್ಯಾಯಾಧೀಶರು ವೇದಿಕೆಯಲ್ಲಿ ಇದ್ದರು.ಜಿಲ್ಲಾ ಸರ್ಕಾರಿ ವಕೀಲರು, ಹಿರಿಯ ವಕೀಲರನ್ನು ಸನ್ಮಾನಿಸಲಾಯಿತು. ಹಿರಿಯ ವಕೀಲ ಎಂ.ಆರ್. ಮಹೇಶ್ವರಪ್ಪ ತಮ್ಮ ಪುಸ್ತಕ ಭಂಡಾರವನ್ನು ಜಿಲ್ಲಾ ನ್ಯಾಯಾಲಯದ ಗ್ರಂಥಾಲಯಕ್ಕೆ ಅರ್ಪಿಸಿದರು.
ಎಸ್. ಬಸರಾಜ್ ಕಾರ್ಯಕ್ರಮ ನಿರೂಪಿಸಿದರು. ನ್ಯಾಯಾಲಯ ಸಿಬ್ಬಂದಿ ಅನಿತಾ ಪ್ರಾರ್ಥಿಸಿದರು. ಉಪಾಧ್ಯಕ್ಷ ಜಿ.ಕೆ. ಬಸವರಾಜ್ ಪ್ರಾರ್ಥಿಸಿದರು. ಸಹ ಕಾರ್ಯದರ್ಶಿ ಎ.ಎಸ್.ಮಂಜುನಾಥ್ ವಂದಿಸಿದರು.
ಯುವ ವಕೀಲರು ಆರಂಭದಲ್ಲೇ ಹಣಕ್ಕಾಗಿ ಕೆಲಸ ಮಾಡಬೇಡಿ. ಮೊದಲು ವೃತ್ತಿಯಲ್ಲಿ ಪಳಗಿ. ಮುಂದೆ ದುಡ್ಡು ತಾನಾಗಿಯೇ ಬರುತ್ತದೆ.
ರಾಜೇಶ್ವರಿ ಹೆಗಡೆ, ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು.
Read also : Crime news | ಬೈಕ್ ಕೊಡಿಸದಿದ್ದಕ್ಕೆ ಯುವಕ ಆತ್ಮಹತ್ಯೆ