ಹರಿಹರ (Harihara): ಸರ್ಕಾರಿ ಶಾಲೆಗಳಲ್ಲಿರುವ ಶಿಕ್ಷಕರು ಹೆಚ್ಚು ಪ್ರತಿಭಾವಂತರಿದ್ದು ಪೋಷಕರು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಬೇಕೆಂದು ಶಾಸಕ ಬಿ.ಪಿ.ಹರೀಶ್ ಕೋರಿದರು.
ನಗರದ ಡಿಆರ್ಎಂ ಸರ್ಕಾರಿ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಆಯೋಜಿಸಿದ್ದ ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮ-2025 ಉದ್ಘಾಟಿಸಿ ಅವರು ಮಾತನಾಡಿದರು.
ಮಧ್ಯಾಹ್ನದ ಬಿಸಿ ಊಟ, ಮೊಟ್ಟೆ, ಹಾಲು, ಕಡಿಮೆ ಶುಲ್ಕ, ಪುಸ್ತಕ, ಬ್ಯಾಗ್, ಶೂ ಇತರೆ ಪರಿಕರ, ಸೌಲಭ್ಯಗಳನ್ನು ಉಚಿತವಾಗಿ ನೀಡಿ ಗುಣಮಟ್ಟದ ಬೋಧಕರನ್ನು ಹೊಂದಿರುವ ಸರ್ಕಾರಿ ಶಾಲೆಗಳತ್ತ ಸಮುದಾಯವು ಗಮನ ಹರಿಸಬೇಕೆಂದರು.
ಈ ಹಿಂದೆ ರಾಜ್ಯದ ಮಹಾನಗರಗಳ ವಿದ್ಯಾರ್ಥಿಗಳಷ್ಟೆ ಎಸ್ಎಸ್ಎಲ್ಸಿ, ಪಿಯುಸಿ ಇತರೆ ಪರೀಕ್ಷೆಗಳಲ್ಲಿ ರಾಜ್ಯ ಮಟ್ಟದ ಸಾಧನೆ ಮಾಡುತ್ತಿದ್ದರೂ ಇತ್ತೀಚಿನ ವರ್ಷಗಳಲ್ಲಿ ರಾಜ್ಯದ ಗ್ರಾಮೀಣ ಹಾಗೂ ಉತ್ತರ ಕರ್ನಾಟಕದ ವಿದ್ಯಾರ್ಥಿಗಳು ರಾಜ್ಯವೆ ಬೆರಗಾಗುವಂತಹ ಶೈಕ್ಷಣಿಕ ಸಾಧನೆ ಮಾಡುತ್ತಿರುವುದು ಮೆಚ್ಚುವ ವಿಷಯ ಎಂದರು.
ಅಕ್ಷರ ದಾಸೋಹ ರಾಜ್ಯ ಜಂಟಿ ನಿರ್ದೇಶಕ ಹಸನ್ ಮೊಯಿನುದ್ದೀನ್ ಮಾತನಾಡಿ, ಅಜೀಂ ಪ್ರೇಮ್ಜಿ ಫೌಂಡೇಷನ್ನ ಸಹಕಾರದಲ್ಲಿ ರಾಜ್ಯದಲ್ಲಿ ಅಕ್ಷರ ದಾಸೋಹ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ, ಇದರಿಂದಾಗಿ ಸರ್ಕಾರಿ ಶಾಲೆಗಳ ಮಕ್ಕಳಲ್ಲಿ ಪೌಷ್ಟಿಕಾಂಶ ಕೊರತೆ ನಿವಾರಣೆಯಾಗುತ್ತಿದೆ, ಸರ್ಕಾರಿ ಶಾಲೆಗಳಲ್ಲಿ ಪ್ರವೇಶಾತಿ ಹೆಚ್ಚಿಸಲು ರಾಜ್ಯದ 48 ಶಾಲೆಗಳಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಿ.ಕೊಟ್ರೇಶಪ್ಪ ಮಾತನಾಡಿ, ಸರ್ಕಾರಿ ಶಾಲಾ, ಕಾಲೇಜುಗಳಲ್ಲಿ ಶಿಕ್ಷಣ ಪಡೆದವರು ಇಂದು ದೊಡ್ಡ ಸ್ಥಾನಗಳಲ್ಲಿದ್ದಾರೆ, ಸರ್ಕಾರಿ ಶಾಲೆಗಳೆಂದು ಮೂಗು ಮುರಿಯುವ ಅಗತ್ಯವಿಲ್ಲ, ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರಿ, ಶಾಲೆಗಳು ಬದ್ಧವಾಗಿವೆ ಎಂದರು.
Read also : ಗ್ಲಾಸ್ ಹೌಸ್ ವೀಕ್ಷಣೆಗೆ ನಗರಸಾರಿಗೆ ಬಸ್ ವ್ಯವಸ್ಥೆ
ಶಾಲೆಯ ಉಪಪ್ರಾಚಾರ್ಯ ಸಿದ್ಧರಾಮೇಶ್ವರ ಮಾತನಾಡಿ, ಕನ್ನಡ, ಉರ್ದು ಮತ್ತು ಆಂಗ್ಲ ಭಾಷೆ ಮಾಧ್ಯಮಗಳಲ್ಲಿ ಈ ಶಾಲೆಯಲ್ಲಿ ಬೋಧನೆ ಇದೆ, ಸ್ವಾತಂತ್ರ್ಯ ಪೂರ್ವದಲ್ಲಿ ಆರಂಭವಾದ ಈ ಶಾಲೆಯಲ್ಲಿ ಪ್ರತಿಭಾವಂತ ಶಿಕ್ಷಕರ ತಂಡವಿದೆ, ಉತ್ತಮ ಶೈಕ್ಷಣಿಕ ವಾತಾವರಣವಿದೆ ಎಂದರು.
ಶಾಲೆಯ ಹಳೆ ವಿದ್ಯಾರ್ಥಿಯಾದ ಕಾರ್ಮಿಕ ಮುಖಂಡ ಎಚ್.ಕೆ.ಕೊಟ್ರಪ್ಪ ಮಾತನಾಡಿ, ಈ ಶಾಲೆಗೆ ಸೇರಿದ ಕೋಟ್ಯಾಂತರ ರೂ. ಮೌಲ್ಯದ 2 ಎಕರೆ 30 ಗುಂಟೆ ಜಮೀನನ್ನು ಗುರುತಿಸಿ ಶಾಲೆಗೆ ಹಸ್ತಾಂತರಿಸುವ ಮಹತ್ವದ ಕೆಲಸವನ್ನು ಶಾಲೆಯ ಹಳೆಯ ವಿದ್ಯಾರ್ಥಿಗಳು ಹಾಗೂ ಕಂದಾಯ, ಭೂಮಾಪನಾ ಇಲಾಖೆಗಳ ಸಹಕಾರದಲ್ಲಿ ಸಾಕಾರಗೊಂಡಿದೆ ಎಂದರು.
ಅಕ್ಷರ ದಾಸೋಹ ಜಿಲ್ಲಾ ಶಿಕ್ಷಣಾಧಿಕಾರಿ ಮಂಜುನಾಥ ಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ದುರುಗಪ್ಪ, ಡಿಆರ್ಎಂ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ರಾಜಶೇಖರ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಇಸ್ಮಾಯಿಲ್ ಜಬಿಉಲ್ಲಾ, ಸಿಆರ್ಪಿ ಶ್ರೀಲಲಿತಾ ಹಾಗೂ ಶಿಕ್ಷಕರಿದ್ದರು.