ದಾವಣಗೆರೆ (Davanagere): ಆವರಗೆರೆಯ ಹಳ್ಳದ ಖರಾಬು ಜಮೀನಿನಲ್ಲಿ ಮನೆಗಳನ್ನು ಕಟ್ಟಿಕೊಂಡಿರುವ ನಿರ್ಗತಿಕರಿಗೆ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಅಲ್ಲಿನ ನಿವಾಸಿಗಳು ಕರ್ನಾಟಕ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ನಗರದ ಅಂಬೇಡ್ಕರ್ ವೃತ್ತದಿಂದ ಪಾದಯಾತ್ರೆ ಜಾಥಾ ಮೂಲಕ ತಹಶೀಲ್ದಾರ್ ಕಚೇರಿಗೆ ತೆರಳಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿಯ ಜಿಲ್ಲಾ ಸಂಚಾಲಕ ಡಿ. ಹನುಮಂತಪ್ಪ, ಸಮಿತಿಯ ಆವರಗೆರೆಯ ಸರ್ವೆ ನಂ. 264, 265, 225, 110ರ ಮಧ್ಯ ಖರಾಬು ಜಮೀನಿನಲ್ಲಿ ಸುಮಾರು 6 ವರ್ಷಗಳಿಂದ ಸುಮಾರು 250 ಮನೆಗಳನ್ನು ನಿರ್ಮಿಸಿಕೊಂಡು ವಾಸವಿದ್ದ ಬಡಜನರಿಗೆ ಕಳೆದ 2021ರ ಮಾರ್ಚ್ 4ರಂದು ಮಹಾನಗರ ಪಾಲಿಕೆ ಮತ್ತು ತಾಲ್ಲೂಕು ಆಡಳಿತ ಯಾವುದೇ ಮುನ್ಸೂಚನೆ ನೀಡಿದೆ ರಾತ್ರೋರಾತ್ರಿ ಇವರುಗಳನ್ನು ಒಕ್ಕಲೆಬ್ಬಿಸಿತ್ತು. ಜೆಸಿಬಿಯಿಂದ ಇವರುಗಳು ವಾಸವಿದ್ದ ಮನೆಗಳನ್ನು ಒಡೆದುಹಾಕಿ ತೆರವುಗೊಳಿಸಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಬಗ್ಗೆ ಇಲ್ಲಿನ ನಿರಾಶ್ರಿತರು ಅಂದಿನ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದಾಗ ಮುಂದಿನ ದಿನಗಳಲ್ಲಿ ವಸತಿ ಕಲ್ಪಿಸುವುದಾಗಿ ಭರವಸೆ ನೀಡಿದ್ದರಿಂದ ಇಲ್ಲಿರುವ ನಿರಾಶ್ರಿತರು ಅಲ್ಲಿಯೇ ಅಕ್ಕಪಕ್ಕದ ಖರಾಬು ಜಮೀನಿನಲ್ಲಿ ತಾತ್ಕಲಿಕ ವಸತಿ ನಿರ್ಮಿಸಿಕೊಂಡಿದ್ದರು. ಆದ್ದರಿಂದ ಈ ಬಡಜನರಿಗೆ ಹಕ್ಕುಪತ್ರ ನೀಡಬೇಕೆಂದು ಮನವಿ ಮಾಡಿದರು.
Read also : Davanagere | ಸರ್ಕಾರಿ ಶಾಲೆ ಮಕ್ಕಳಿಗೆ ಪುಸ್ತಕ, ಸಿಹಿ ವಿತರಣೆ
ಈ ಸಂದರ್ಭದಲ್ಲಿ ಆರ್.ಗಿರೀಶ್, ಜಿ.ಮಂಜುನಾಥ್, ಹೆಚ್.ಬಸವರಾಜ್, ಜೆ.ಡಿ ಕೃಷ್ಣಮೂರ್ತಿ, ಅಂಬರೀಶ್, ಎಂ. ಬಿ ಪರಶುರಾಮ್, ವಿ. ಪ್ರವೀಣ್ ಕುಮಾರ್, ಕಾಳಪ್ಪ, ಕೆ. ಮರಿಯಪ್ಪ, ಕೆ. ದರ್ಶನ್, ಹನುಮಂತಪ್ಪ, ಎಂ. ಎಸ್ ಕೆಂಚಮ್ಮ, ರೇಖಾ, ಹೊನ್ನಮ್ಮ, ಮಂಗಳ, ಚಂದ್ರಮ್ಮ, ರೇಣುಕಮ್ಮ ಮತ್ತಿತರರು ಹಾಜರಿದ್ದರು.