ಮಂಗಳೂರು/ದಾವಣಗೆರೆ : ಪ್ರತಿದಿನ ಪ್ರಾತಃಕಾಲ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಯಾರು ತಮ್ಮ ದಿನನಿತ್ಯದ ಆರೋಗ್ಯದ ಸಾಧನೆಯೊಂದಿಗೆ ಪ್ರಾರಂಭಿಸುತ್ತಾರೋ ಅವರುಗಳಿಗೆ ಖಾಯಿಲೆಗಳು ಹತ್ತಿರ ಸುಳಿಯುವುದಿಲ್ಲ. ಬದಲಾಗಿ ಆರೋಗ್ಯದ ಸುಯೋಗವು ಪ್ರಾಪ್ತವಾಗುತ್ತದೆ ಎಂದು ಆದರ್ಶ ಯೋಗ ಪ್ರತಿಷ್ಠಾನ (ರಿ), ದಾವಣಗೆರೆ ಶ್ರೀ ಮಹಮ್ಮಾಯಿ ವಿಶ್ವಯೋಗ ಮಂದಿರ ಹಾಗೂ ಯೋಗ ಚಿಕಿತ್ಸಾ ಕೇಂದ್ರದ ಸಂಸ್ಥಾಪಕರು, ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕøತ ಹಿರಿಯ ಯೋಗ ತಜ್ಞರೂ ಆದ ಡಾ|| ರಾಘವೇಂದ್ರ ಗುರೂಜಿಯವರು ಅಭಿಪ್ರಾಯಪಟ್ಟರು.
ಇತ್ತೀಚೆಗೆ ಮಂಗಳೂರಿನ ರಾಧಾಕೃಷ್ಣ ದೇವಸ್ಥಾನದ ಬಾಳಂಭಟ್ ಸಭಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಿ.ಎಸ್.ಎಸ್. ಸಮಾಜ ಸುಧಾರಕ ಸಂಘ (ರಿ) ಮಂಗಳೂರು ಇವರ 52ನೇ ವಾರ್ಷಿಕ ಮಹಾಸಭೆ, ಸಾಮೂಹಿಕ ಬ್ರಹ್ಮೋಪದೇಶ, ಶ್ರೀ ಸತ್ಯನಾರಾಯಣ ಪೂಜೆ, ಸರ್ವ ಸಮಾಜದ ಹಿರಿಯರಿಗೆ ಹಾಗೂ ಪ್ರತಿಭಾನ್ವಿತರಿಗೆ ಸನ್ಮಾನ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ ಸುಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ “ದೈನಂದಿನ ದಿನಚರಿಯಲ್ಲಿ ಆರೋಗ್ಯದ ಅವಶ್ಯಕತೆ” ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿ ಮಾತನಾಡಿದರು.
ನಾವು ಎಲ್ಲಾ ವಿಷಯಕ್ಕೂ ಮುಹೂರ್ತವನ್ನು ನೋಡಿ ಮುಂದುವರೆಯುತ್ತೇವೆ. ಆದರೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಯಾವ ಮುಹೂರ್ತವನ್ನು ನೋಡುವುದಿಲ್ಲ. ಇದು ನಮ್ಮೆಲ್ಲರ ದೌರ್ಬಲ್ಯವಾಗಿದೆ. ಒಳ್ಳೆಯ ಆರೋಗ್ಯ, ಸದಾ ಚಟುವಟಿಕೆಯಿಂದಿರಲು ಸರ್ವಶ್ರೇಷ್ಠವಾದ ಮುಹೂರ್ತ ಬ್ರಾಹ್ಮೀ ಮುಹೂರ್ತವಾಗಿದೆ ಅಂದರೆ ಬೆಳಿಗ್ಗೆ 3-30 ರಿಂದ 4-30 ರ ಒಳಗೆ ಹಾಸಿಗೆಯಿಂದ ಎದ್ದು ಶುಚಿರ್ಭೂತರಾಗಿ ದೇವರಿಗೆ ಪ್ರಾರ್ಥನೆ ಸಲ್ಲಿಸಿ, ಒಂದಿಷ್ಟು ಶಾರೀರಿಕ, ಮಾನಸಿಕ ವ್ಯಾಯಾಮವನ್ನು ಮಾಡಿ ದೈನಂದಿನ ಕೆಲಸಗಳನ್ನು ಪ್ರಾರಂಭಿಸಬೇಕು ಎಂದು ತಿಳಿಸುತ್ತಾ ನಮ್ಮ ಹೊಟ್ಟೆಯ ಆರೋಗ್ಯ, ಮನಸ್ಸಿನ ಆರೋಗ್ಯ, ಉಸಿರಾಟಕ್ಕೂ ಆರೋಗ್ಯಕ್ಕೂ ಇರುವ ಸಾಮ್ಯತೆ ಹೀಗೆ ಹತ್ತು ಹಲವು ವಿಷಯಗಳನ್ನು ಡಾ|| ರಾಘವೇಂದ್ರ ಗುರೂಜಿಯವರು ತಿಳಿಸಿಕೊಟ್ಟರು.
Read also : Political analysis | ಮೋದಿ ಕೈಗೆ ತಲುಪಿದೆ ಸೀಕ್ರೆಟ್ ರಿಪೋರ್ಟು?
ಇದೇ ಸಂದರ್ಭದಲ್ಲಿ ಡಾ|| ಗುರೂಜಿಯವರನ್ನು ಆತ್ಮೀಯವಾಗಿ ಗೌರವಿಸಿ ಜೀವಮಾನ ಸಾಧನೆಯನ್ನೊಳಗೊಂಡ ಸುಂದರವಾದ ಸನ್ಮಾನ ಪತ್ರ ನೀಡಿ ಶಾಲು ಹೊದಿಸಿ ಮೈಸೂರು ಪೇಟ ತೊಡಿಸಿ ಫಲಪುಷ್ಪ ತಾಂಬೂಲದೊಂದಿಗೆ ಗೌರವಾರ್ಪಣೆ ಅರ್ಪಿಸಿದರು.
ಈ ಸಂದರ್ಭದಲ್ಲಿ ಸಮಾಜದ ಹಿರಿಯರಾದ ಗಣೇಶ್ ನಾಯಕ್ ಕದ್ರಿ, ವಸಂತ್ ನಾಯಕ್ ಗುಡ್ಡೇಕೇರಿ ಇವರನ್ನು ಸಹ ಸನ್ಮಾನಿಸಲಾಯಿತು.
ಅಧ್ಯಕ್ಷತೆ ಸುದೇಶ್ಕುಮಾರ್ ಬೋಳಾರ, ಪ್ರಧಾನ ಕಾರ್ಯದರ್ಶಿ ಎಂ. ಮುರಳಿ ಮನೋಹರ ನಾಯಕ್ ಜೆಪ್ಪು, ಕಾರ್ಯದರ್ಶಿ ಅವಿನಾಶ್ ನಾಯಕ್, ಸುಧೀರ್ ನಾಯಕ್ ಜೆಪ್ಪು, ಕೋಶಾಧಿಕಾರಿ ಗೌತಮ್ರಾವ್, ಉಪಾಧ್ಯಕ್ಷ ಪ್ರೀತಮ್ ನಾಯಕ್ ಹಾಗೂ ಹರಿಣಿಶಾಮ್ ನಾಯಕ್, ಸರ್ವ ಸಮಾಜ ಬಾಂಧವರೂ ಹಾಗೂ ಸರ್ವ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ಜರುಗಿತು.