ದಾವಣಗೆರೆ,ಫೆ.20 : ಸಂವಿಧಾನ ರಚನೆಯಾಗಿ ಸುಮಾರು ದಶಕಗಳು ಕಳೆದರೂ ಅಸಮಾನತೆ ಹೋಗಲಾಡಿಸಲು ಸಾಧ್ಯವಾಗಿಲ್ಲ, ಅಸಮಾನತೆ ನಿವಾರಣೆಗೆ ಮಾನವ ಸಂಪನ್ಮೂಲ ಅಭಿವೃದ್ದಿಯಿಂದ ಮಾತ್ರ ಸಾಧ್ಯವಿದ್ದು ಈ ನಿಟ್ಟಿನಲ್ಲಿ ಯುವ ಜನರ ಅಭಿವೃದ್ದಿ ಕೈಗೊಳ್ಳಬೇಕಾಗಿದೆ ಎಂದು ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಎಂ. ಕರೆಣ್ಣನವರ ತಿಳಿಸಿದರು.
ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ, ಇವರ ಸಹಯೋಗದಲ್ಲಿ ಬಿ.ಎಸ್.ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ ದಿನವನ್ನು ಉದ್ಪಾಟಿಸಿ ಮಾತನಾಡಿದರು.
ಸಾಮಾಜಿಕ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ನವೀಕೃತ ಬದ್ದತೆ” ಎಂಬ ಘೋಷವಾಕ್ಯ ದೊಂದಿಗೆ ನಾವು ಇಂದು ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ, 2007ನೇ ಇಸವಿಯಿಂದ ಈ ವಿಶ್ವದಲ್ಲಿ ಸಾಮಾಜಿಕ ನ್ಯಾಯ ಅನ್ನುವುದನ್ನು ಜನರಿಗೆ ತಿಳಿಸಿಕೊಡಬೇಕು ಎನ್ನುವ ಉದ್ದೇಶದಿಂದ ಆರಂಭವಾಯಿತು.
ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಸಾಮಾಜಿಕ ನ್ಯಾಯದ ಪರಿಕಲ್ಪನೆ ಸರಿಯಾಗಿ ತಿಳಿದಿರಲಿಲ್ಲ. ಆದ್ದರಿಂದ 2007ರಲ್ಲಿ ಇದರ ಬಗ್ಗೆ ಚರ್ಚೆಯಾಗಿ, 2009ರಿಂದ ಇಂದಿನವರೆಗೂ ನಾವು ವಿಶ್ವ ಮಟ್ಟದಲ್ಲಿ ಸಾಮಾಜಿಕ ನ್ಯಾಯ ದಿನವನ್ನು ಆಚರಿಸುತ್ತಿದ್ದೇವೆ. ಇದು ಬರಿ ಭಾರತಕ್ಕೆ ಅಷ್ಟೇ ಸೀಮಿತವಾಗಿಲ್ಲ, ವಿಶ್ವ ಸಂಸ್ಥೆಯ ಭಾಗವಾಗಿರುವ ಎಲ್ಲಾ ರಾಷ್ಟ್ರಗಳಿಗೂ ಇದು ಸಂಬಂಧಿಸಿದೆ ಎಂದರು.
ಸಮಾನತೆ ಮತ್ತು ಗೌರವಯುತ ಜೀವನ ನಡೆಸಲು ಎಲ್ಲರಿಗೂ ಅನುಕೂಲವಾಗುವಂತಹ ಎಲ್ಲಾ ರೀತಿಯ ಸಹಕಾರಗಳನ್ನು ಒದಗಿಸಿಕೊಡುವುದು, ಸಮಾಜದಲ್ಲಿ ಎಲ್ಲರೂ ಸಮಾನರು ಎನ್ನುವ ಮನೋಭಾವ ಮೂಡಿಸುವುದು. ಪ್ರತಿಯೊಬ್ಬ ಮನುಷ್ಯನಿಗೂ ಸಮಾನವಾದ ಹಕ್ಕುಗಳನ್ನು ಸರ್ಕಾರ ಅಥವಾ ಸಂಸ್ಥೆಗಳು ನೀಡುತ್ತಿವೆಯೇ ಎಂದು ಪರಿಶೀಲಿಸುವುದು. ಪ್ರತಿಯೊಬ್ಬ ವ್ಯಕ್ತಿಯೂ ಘನತೆಯಿಂದ ಬದುಕುವ ವಾತಾವರಣ ನಿರ್ಮಿಸುವುದು ಸಾಮಾಜಿಕ ನ್ಯಾಯ ಆಗಿದೆ ಎಂದರು.
ಈ ದಿನಾಚರಣೆಯು ಕೇವಲ ವೇದಿಕೆಯ ಕಾರ್ಯಕ್ರಮವಾಗಿ ಉಳಿಯಬಾರದು. ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಜನರಿಗೆ ತಲುಪಿಸಬೇಕು. ಯಾವುದೇ ಒಂದು ಜನಾಂಗಕ್ಕೆ ಅಥವಾ ವಿಶಿಷ್ಟ ವೃತ್ತಿಯ ಜನರಿಗೆ ತೊಂದರೆಯಾಗುತ್ತಿದ್ದರೆ ಅದು ಸಾಮಾಜಿಕ ನ್ಯಾಯದ ವಿರುದ್ಧವಾಗಿರುತ್ತದೆ. ಇದನ್ನು ಕೇವಲ ಮಾತಿನಲ್ಲಿ ಹೇಳದೆ, ಪ್ರಾಯೋಗಿಕವಾಗಿ ಜಾರಿಗೆ ತರಬೇಕು ಎಂದರು.
Read also : ಫೆ. 20 ವಿಶ್ವ ಸಾಮಾಜಿಕ ನ್ಯಾಯ ದಿನ : ಸಮಾನತೆ ಮತ್ತು ಘನತೆಯೇ ಸಮಾಜದ ಅಡಿಪಾಯ
ಬಾಲಕ ಕಳ್ಳತನ ಮಾಡಿದಾಗ, ನಮ್ಮ ಕಾನೂನು ವ್ಯವಸ್ಥೆ ಮತ್ತು ಸಾಮಾಜಿಕ ನ್ಯಾಯವು ಆ ಬಾಲಕನಿಗೂ ನ್ಯಾಯ ಒದಗಿಸಬೇಕು ಮತ್ತು ಯಾರ ವಸ್ತು ಕಳ್ಳತನವಾಗಿದೆಯೋ ಅವರಿಗೂ ನ್ಯಾಯ ಒದಗಿಸಬೇಕು. ಕೇವಲ ಶಿಕ್ಷೆ ನೀಡುವುದಷ್ಟೇ ಅಲ್ಲದೆ, ಆ ಪರಿಸ್ಥಿತಿಯ ಹಿಂದಿನ ಕಾರಣಗಳನ್ನು ಅರ್ಥೈಸಿಕೊಳ್ಳುವುದು ಕೂಡ ಸಾಮಾಜಿಕ ನ್ಯಾಯದ ಭಾಗವಾಗಿದೆ, ಶಿಕ್ಷಣ ಎಂದರೆ ಮಾಹಿತಿಯನ್ನು ಕಲೆ ಹಾಕಿಕೊಳ್ಳುವುದು, ಮಾಹಿತಿಯನ್ನು ಕರಗತ ಮಾಡಿ ಕೊಳ್ಳುವುದು, ಮಾಹಿತಿಯನ್ನು ಮನಸ್ಸಿನಲ್ಲಿ ತೆಗೆದುಕೊಳ್ಳುವುದು, ಅದನ್ನು ನಮ್ಮ ಜೀವನಕ್ಕೆ, ನಮ್ಮ ದೇಶಕ್ಕೆ, ನಮ್ಮ ರಾಷ್ಟ್ರಕ್ಕೆ, ನಮ್ಮ ಆರ್ಥಿಕತೆಗೆ, ನಮ್ಮ ದೇಶದ ಭದ್ರತೆಗೆ ಉಪಯೋಗಿಸಿಕೊಳ್ಳುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು. ಪ್ರತಿ ವರ್ಷದಂತೆ ಈ ವರ್ಷವು 60 ಯೂನಿಟ್ ರಕ್ತ ಸಂಗ್ರಹಿಸಿ ಆರೋಗ್ಯ ಇಲಾಖೆಗೆ ನೀಡಲಾಗುತ್ತದೆ ಎಂದು ಪ್ರಾಂಶುಪಾಲ ಗುರು ಅವರು ತಿಳಿಸಿದರು.
ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ನವೀನ್ ಮಠದ್, ತಾಲ್ಲೂಕು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖಾಧಿಕಾರಿ ರಾಘವೇಂದ್ರ, ಹಿಂದುಳಿದ ವರ್ಗಗಳ ತಾಲ್ಲೂಕು ವಿಸ್ತಾರಣಾಧಿಕಾರಿ ಪುಷ್ಪಾ , ಕಾಲೇಜಿನ ಉಪನ್ಯಾಸಕರುಗಳು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಉಪನ್ಯಾಸಕ ಅಣ್ಣೇಶ್ ನಿರೂಪಿಸಿದರು. ಕು. ಚಂದನ ಪ್ರಾರ್ಥಿಸಿದರು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಮಮತಾ ಸ್ವಾಗತಿಸಿದರು.
