ದಾವಣಗೆರೆ : ಮೋದಿ ಸರ್ಕಾರದ ಬಂಡವಾಳ ಶಾಹಿ ಪರ ನೀತಿಗಳಿಂದಾಗಿ ಜನರ ಬದುಕು ಬೀದಿಗೆ ಬಂದಿದೆ. ದೇಶದಲ್ಲಿ ಅತಿ ದಿನ 7,000ಕ್ಕೂ ಹೆಚ್ಚು ಜನ ಸಾಯುತ್ತಿದ್ದಾರೆ ಎಂದು ಎಸ್ಯುಸಿಐ ಕಮ್ಯುನಿಸ್ಟ್ ಪಕ್ಷದ ರಾಜ್ಯ ಕಾರ್ಯದರ್ಶಿ ಕೆ. ಉಮಾ ಹೇಳಿದರು.
ನಗರದ ಎಸಿ ಕಚೇರಿ ಮುಂಭಾಗದಲ್ಲಿ ನಡೆದ ಪಕ್ಷದ ಅಭ್ಯರ್ಥಿ ಅಣಬೇರು ತಿಪ್ಪೇಸ್ವಾಮಿಯವರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಹಾವೇರಿಯ ಯುವಕನೊಬ್ಬ ತಾಯಿಯ ಹಸಿವು ನೀಗಿಸಲು ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದೆಹಲಿಯಲ್ಲಿ ಮಕ್ಕಳು ಹಸಿವೆಯಿಂದ ಸಾಯುತ್ತಿದ್ದರೂ, ಮತಿಭ್ರಮಣೆಗೊಂಡ ತಾಯಿಯೊಬ್ಬಳು ‘ನನಗೆ ಊಟ ಕೊಡಿ’ ಎಂದು ಅಂಗಲಾಚುತ್ತಿದ್ದಳು. ಜನರ ಈ ಹಸಿವಿನ ಕೂಗು ಪ್ರಧಾನಿ ಮೋದಿಯವರಿಗೆ ಕೇಳಿಸದೆ? ಎಂದು ಪ್ರಶ್ನೆ ಮಾಡಿದರು.
18ನೇ ಲೋಕಸಭಾ ಚುನಾವಣೆಯು ಘೋಷಣೆಯಾಗಿರುವ ಇಂದಿನ ಸಂದರ್ಭದಲ್ಲಿ ದೇಶವು ಕಂಡು ಕೇಳರಿಯದ ಘೋರ ಘಟನೆಗಳಿಗೆ ಸಾಕ್ಷಿಯಾಗುತ್ತಿದೆ. ಒಂದು ಕಡೆ, ಆಡಳಿತಾರೂಢ ಎನ್ ಡಿ ಎ, ಇನ್ನೊಂದೆಡೆ, ಇಂಡಿಯಾ ಮೈತ್ರಿಗಳು ಅಬ್ಬರದ ಚುನಾವಣಾ ಪ್ರಚಾರದಲ್ಲಿ ತೊಡಗಿವೆ. ಆದರೆ ಇವರು ಯಾರು ಕೂಡ ದೇಶದ ಜನರ ಬದುಕಿನ ಸಮಸ್ಯೆಗಳ ಕುರಿತು ಮಾತನಾಡುತ್ತಿಲ್ಲ. ಅವರು ಪದವಿಗಳಿಗಾಗಿ ಟಿಕೆಟ್ ಗಳಿಗಾಗಿ ಚುನಾವಣೆ ನಡೆಸುತ್ತಿದ್ದಾರೆ.
ಆಳ್ವಿಕ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ನೇತೃತ್ವದಲ್ಲಿ ಇಂಡಿಯಾ ಒಕ್ಕೂಟ ರಚನೆಯಾಗಿದೆ. ಎಡವಾದಿ ಪಕ್ಷಗಳಾದ ಸಿಪಿಐ ಸಿಪಿಐಎಂ ಕೂಡ ಪ್ಯಾಸಿವ್ಯಾದಿ ಬಿಜೆಪಿಯನ್ನು ಸೋಲಿಸಬೇಕು ಎಂಬ ಕಾರಣ ನೀಡಿ ಈ ಒಕ್ಕೂಟ ಸೇರಿದ್ದಾರೆ. ಆದರೆ, ಬಹುಕಾಲ ದೇಶವನ್ನಾಳಿದ ಕಾಂಗ್ರೆಸ್ ತುರ್ತು ಪರಿಸ್ಥಿತಿ ಯನ್ನು ಹೇರಿ ಜನರ ಪ್ರಜಾತಾಂತ್ರಿಕ ಹಕ್ಕುಗಳನ್ನು ಕಸಿದಿದೆ. ಅಂದಿನ ಕಾಂಗ್ರೆಸ್ಸಿನ ನೀತಿಗಳನ್ನೇ ಇಂದು ಬಿಜೆಪಿಯು ಮುಂದುವರೆಸಿದೆಯಷ್ಟೆ!. ಇವರೆಲ್ಲರೂ ಕೂಡ ಒಂದೇ. ಈಗ ಚುನಾವಣೆಗಳಲ್ಲಿ ಹಣ ಸುರಿದು ಇವರು ಮತಗಳನ್ನು ಖರೀದಿ ಮಾಡುತ್ತಾರೆ ಎಂದು ಹೇಳಿದರು.
ಮೋದಿಯವರು ಮಹಿಳೆಯ ಮಾನ ರಕ್ಷಣೆಯ ಕುರಿತು ಭೇಟಿ ಬಚಾವೋ ಎಂದು ಭಾಷಣ ಮಾಡುತ್ತಾರೆ. ಆದರೆ, ಬೆಳಗಾವಿಯಲ್ಲಿ ಹೆಣ್ಣು ಮಗಳನ್ನು ಬೆತ್ತಲೆ ಮಾಡಿದಾಗ, ಮಹಿಳಾ ಕುಸ್ತಿಪಟುಗಳ ಮೇಲೆ ತಮ್ಮ ಪಕ್ಷದ ಕುಸ್ತಿ ಫೆಡರೇಷನ್ ಅಧ್ಯಕ್ಷ ಲೈಂಗಿಕ ಕಿರುಕುಳ ನೀಡಿದ. ಪ್ರತಿಭಟನೆಗೂ ನ್ಯಾಯ ಸಿಗದೇ ಆ ಹೆಣ್ಣು ಮಕ್ಕಳು ಸ್ಪರ್ಧೆಯಿಂದ ಹಿಂದೆ ಸರಿದಾಗ, ಬಿಲ್ಕಿಸ್ ಬಾನು ಪ್ರಕರಣದ 11 ಜನ ಆರೋಪಿಗಳನ್ನು ಬಿಡುಗಡೆ ಮಾಡಿದ ಸಂದರ್ಭದಲ್ಲಿ ಅವರ ಪಕ್ಷವು ಸಂಭ್ರಮಿಸಿದಾಗ, ಎಲ್ಲಿದೆ ಭೇಟಿ ಬಚಾವೋ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದ ರೈತರು , ಕಾರ್ಮಿಕರು, ಬಡವರ ಪರವಾಗಿ ಹೋರಾಟಗಳನ್ನು ಬೆಳೆಸುತ್ತಿದೆ. ಜನರು ನಮ್ಮ ಅಭ್ಯರ್ಥಿ ತಿಪ್ಪೇಸ್ವಾಮಿಯವರನ್ನು ಗೆಲ್ಲಿಸಿದರೆ ದಾವಣಗೆರೆಯ ರೈತ ಕಾರ್ಮಿಕರ ದುಡಿಯುವ ಜನರ ಹೋರಾಟಗಳನ್ನು ಅವರು ಲೋಕಸಭೆಯಲ್ಲಿ ಮೊಳಗಿಸುತ್ತಾರೆ. ಆದ್ದರಿಂದ ಜನರು ಹೆಚ್ಚಿನ ಪ್ರಮಾಣದಲ್ಲಿ ತಿಪ್ಪೇಸ್ವಾಮಿಯವರ ಪರವಾಗಿ ಪ್ರಚಾರ ಮಾಡಿ ಅವರನ್ನು ಗೆಲ್ಲಿಸಬೇಕೆಂದು ಅವರು ಮತಯಾಚಿಸಿದರು.
ಪಕ್ಷದ ಅಭ್ಯರ್ಥಿ ಅಣಬೇರು ತಿಪ್ಪೇಸ್ವಾಮಿಯ ಕೂಡ ಮಾತನಾಡಿ, ಜನರ ಬೆಂಬಲವನ್ನು ಯಾಚಿಸಿದರು.
ಸಭೆಯ ಅಧ್ಯಕ್ಷತೆ ಜಿಲ್ಲಾ ಕಾರ್ಯದರ್ಶಿ ಮಂಜುನಾಥ್ ಕೈದಾಳೆ ವಹಿಸಿದ್ದರು. ರಾಜ್ಯ ಸಮಿತಿ ಸದಸ್ಯರಾದ ಅಪರ್ಣಾ ಬಿ ಆರ್, ಜಿಲ್ಲಾ ಸಮಿತಿ ಸದಸ್ಯರಾದ ಮದು ತೊಗಲೇರೆ, ಮಂಜುನಾಥ್ ಕುಕ್ವಾಡ, ಟಿವಿಎಸ್ ರಾಜು ಸೇರಿದಂತೆ ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಹಾಗೂ ನೂರಾರು ಸಾರ್ವಜನಿಕರು ಉಪಸ್ಥಿತರಿದ್ದರು.