ದಾವಣಗೆರೆಯಂತಹ ಥಳುಕು ಬಳುಕಿನ ನಗರ ಪ್ರದೇಶದ ಆಕರ್ಷಣೆಯ ಹೊಳೆಯಲ್ಲಿ ಮುಳುಗಿ ಹೋದವರೇ ಹೆಚ್ಚು.ಇಂತಹ ಹುಚ್ಚುಹೊಳೆಯ ಸೆಳೆತಕ್ಕೆ ಸಿಗದೆ ಈಜಿ,ತಮ್ಮ ಗುರಿಯತ್ತ ದೃಷ್ಟಿ ನೆಟ್ಟಿರುವ ತೇಜಸ್ವಿ ಪಟೇಲರ ಇಚ್ಛಾಶಕ್ತಿ ದೊಡ್ಡದು.
ಕರ್ನಾಟಕ ಕಂಡ ಮುತ್ಸದ್ದಿ, ಮುಖ್ಯಮಂತ್ರಿಗಳಾಗಿದ್ದ ಜಯದೇವಪ್ಪ ಹಾಲಪ್ಪ ಪಟೇಲರ ಹತ್ತಿರದ ರಕ್ತಸಂಬಂಧಿಯಾಗಿದ್ದೂ ರಾಜಕಾರಣದಲ್ಲಿ,ರೈತ ಹೋರಾಟಗಳಲ್ಲಿ ತನ್ನದೇ ಮಾರ್ಗವನ್ನು ಕಂಡುಕೊಳ್ಳುವುದು ಅಷ್ಟು ಸುಲಭದ ಮಾತಲ್ಲ.
ಜನರ ರುಚಿ_ಅಭಿರುಚಿಗಳು ಬದಲಾಗಿರುವುದನ್ನು ರಾಜಕಾರಣಿಗಳು ಅತ್ಯಂತ ಸ್ಪಷ್ಟವಾಗಿಯೇ ಗ್ರಹಿಸಿದ್ದಾರೆ. ಹಳ್ಳಿಗಳು ಆರ್ಥಿಕವಾಗಿ ಶ್ರೀಮಂತವಾಗಿವೆ ಎಂದು ಅನ್ನಿಸಿಕೊಂಡರೂ ಕೂಡ,ಹಾಡು ಮರೆತ,ಕುಣಿತ ಮರೆತ,ನಾಟಕಗಳಿಲ್ಲದ ,ನಗುವಿಲ್ಲದ,ಅಳು ಇಲ್ಲದ ,ಸಾಂಸ್ಕೃತಿಕವಾಗಿ ಭಿಕಾರಿಗಳಾದ ಥೇಟ್ ಅಣುಬಾಂಬುಗಳಂತೆ ತೋರುತ್ತಿವೆ!
ಹೀಗಾಗಿ ಹೊಸ ಪೀಳಿಗೆಯ ಯುವ ಸಮುದಾಯಗಳ ಆದ್ಯತೆಗಳೇ ಇಂದಿಗೂ ಸ್ಪಷ್ಟವಾಗಿಲ್ಲ.ಈ ಸಮುದಾಯಗಳಿಗೆ ಸಮಾಜವಾದಿ,ಗಾಂಧೀವಾದಿ,ಎಡಪಂಥೀಯ ಚಳುವಳಿಗಳ ಸ್ಪರ್ಶವಿಲ್ಲದಕ್ಕೋ…ಏನೋ ಯಂತ್ರ ಮಾನವರಂತೆ ಕಾಣಿಸುತ್ತಾರೆ.
ಗಾಂಧಿ,ಲೋಹಿಯಾರ,ಮಾರ್ಕ್ಸ್ ನ ಚಿಂತನೆಗಳ ಸೋಂಕಿಲ್ಲದೆ ಭಾರತದ ರಾಜಕಾರಣದ ‘ಶಕೆ’ಯೊಂದು ಅಂತ್ಯಕ್ಕೆ ಬಂದು ನಿಂತಿದೆ ಎಂದೆನ್ನಿಸುತ್ತದೆ.
ಜನರ ಆದ್ಯತೆಗಳು ಬದಲಾದ ಹಾಗೆ ರಾಜಕೀಯ ಪಕ್ಷಗಳೂ ಸಹ ತಮ್ಮ ಆದ್ಯತೆಗಳನ್ನೂ ಬದಲಾಯಿಸಿಕೊಂಡು ಗೆಲ್ಲುವು (?)ದನ್ನೇ ಗುರಿಯಾಗಿಸಿಕೊಂಡರು.
ಇಂತಹ ಸಂದಿಗ್ಧ ಸ್ಥಿತಿಯಲ್ಲಿ ದಿನ ಬೆಳಗಾದರೆ ನಾವು ಓದುವ ದಿನಪತ್ರಿಕೆಯ ಮೂಲೆಯೊಂದರಲ್ಲಿ ಯಾವುದೋ ಹಳ್ಳಿಯೊಂದರಲ್ಲಿ ತೇಜಸ್ವಿ ಪಟೇಲರು ನಡೆಸಿದ ರೈತ ಹೋರಾಟದ ಚಿತ್ರ-ವರದಿಗಳಿರುತ್ತವೆ.
ತೇಜಸ್ವಿ ಪಟೇಲರು ನನಗೆ ನೇರಾನೇರ ಪರಿಚಿತರೇನಲ್ಲ.ಆದರೆ ಕಳೆದ ಎರಡು ಎರಡೂವರೆ ದಶಕಗಳಿಂದಲೂ ಅವರು ಮಣ್ಣಿಗಂಟಿಕೊಂಡು ಮಾಡುವ ಹೋರಾಟಗಳನ್ನು ಬಲ್ಲೆ.ನಾನು,ಬಳ್ಳಾರಿಯ ಕೂಡ್ಲಿಗಿ,ಹರಪನಹಳ್ಳಿ, ಸಿರುಗುಪ್ಪ, ಸೊಂಡೂರುಗಳಲ್ಲಿ ಮತ್ತು ಹಾವೇರಿಯ ಹಾನಗಲ್,ರಾಣೆಬೆನ್ನೂರುಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗಿನಿಂದಲೂ ತೇಜಸ್ವಿಯವರ ಹೋರಾಟದ ವಿವಿಧ ಮಜಲುಗಳನ್ನು ಓದಿದ್ದೆ.ಗೆಳೆಯರಿಂದ ಕೇಳಿದ್ದೆ.
ದಾವಣಗೆರೆಯ ಈ ನೆಲ,ವರ್ತಮಾನದ ತಲ್ಲಣಗಳಿಗೆ ಸಾಕ್ಷಿಯಾದಷ್ಟು ಬಹುಶಃ ಬೇರೆ ಯಾವುದೂ ಇರಲಿಕ್ಕಿಲ್ಲ.ಈ ನೆಲಕ್ಕೂ ಐತಿಹಾಸಿಕವಾದ ಗುಣವಿದೆ.ಎಪ್ಪತ್ತರ ದಶಕದಲ್ಲಿ ರಾಜ್ಯದ ಹಲವಾರು ಪ್ರಗತಿಪರರೆಲ್ಲ ಸೇರಿಕೊಂಡು “ಸಮಾಜವಾದಿ ಪ್ರಗತಿಶೀಲ ಮಹಾಸಭಾ “ಎಂದೇನೋ ಮಾಡಿಕೊಂಡಿದ್ದರು.
ಅದರಲ್ಲಿ ಸಮಾಜನಿಷ್ಟ ಚಿಂತಕರೆಲ್ಲ ಇದ್ದರು.ಆ ಕಾಲದ ಎಂ.ಡಿ.ನಂಜುಂಡಸ್ವಾಮಿ, ಬಿ.ಕೃಷ್ಣಪ್ಪ,ಆಲನಹಳ್ಳಿಕೃಷ್ಣ,ಲಂಕೇಶ್, ಕೆ.ರಾಮದಾಸ್,ಪೂ.ಚಂ.ತೇಜಸ್ವಿ ಸೇರಿದಂತೆ ಬಹುದೊಡ್ಡ ಬೌದ್ಧಿಕ ಗುಂಪು ದಾವಣಗೆರೆಯ ಮೋತಿ ಮಹಲ್ ನಲ್ಲಿ ( ಈಗಿನ ಎ.ವಿ.ಕೆ.ಕಾಲೇಜು ಎದುರಿಗಿರುವ ಮೋತಿ ಮಹಲ್ )ಐತಿಹಾಸಿಕವಾದ ಸಭೆ ನಡೆಸಿದ್ದರು.
ನೂರಾರು ಬುದ್ದಿಜೀವಿಗಳು ರೈತ,ದಲಿತ,ಎಡಪಂಥೀಯ ರಾಜಕಾರಣದ ಕನಸು ಕಂಡ ಅತಿರಥ ಮಹಾರಥರು ಎಲ್ಲಾ ಸೇರಿದ್ದರು.ದುರದೃಷ್ಟವಶಾತ್ ಆ ಸಭೆಯಲ್ಲಿ ಒಂದು ನಿರ್ಣಯಕ್ಕೆ ಬರಲಾಗದೆ,ಹಲವು ಭಿನ್ನತೆಗಳಿಂದಾಗಿ ,ದಲಿತ ಸಂಘರ್ಷ ಸಮಿತಿಯಾಗಿ,ರೈತ ಚಳುವಳಿಯಾಗಿ,ಎಡ ಚಿಂತನೆಗಳ ವಿದ್ಯಾರ್ಥಿ ಸಂಘಟನೆಗಳಾಗಿ ಭಾಗವಾಗಿ ಒಡೆದು ಹೋದವು.ಇದೊಂದು ಐತಿಹಾಸಿಕ ಸಮಾವೇಶವಾಗುವ ಹಂತದಲ್ಲಿ ಚದುರಿದ ಚಿತ್ರಗಳಾಗಿಹೋದವು.
ಕರ್ನಾಟಕ ಕಂಡ ಇಂತಹ ಚಳುವಳಿಗಳಿಗೆ ನಾಂದಿ ಹಾಡಿದ್ದು ಇದೇ ದಾವಣಗೆರೆಯ ನೆಲ.! ಚಳುವಳಿಗಳ,ರೈತ ಹೋರಾಟಗಳ ಈ ಎಲ್ಲಾ ಹೋರಾಟಗಳ ರಾಜಕೀಯ ಪ್ರಜ್ಞೆ ಇಂದಿಗೂ ಅಚ್ಚರಿ ಹುಟ್ಟಿಸುವಂತಿದೆ.ಆದರೆ ದುರಂತವೆಂದರೆ ಎಲ್ಲಾ ಹೋರಾಟಗಳಂತೆ,ಅಂತಿಮವಾಗಿ ಹೋರಾಟಗಾರರೂ ತುಲಾಭಾರದ ಆಸೆಗೆ ಬೀಳುವ ಈ ಕಾಲದಲ್ಲಿ ಕಬ್ಬು ಬೆಳೆಗಾರರ ಹಿತರಕ್ಷಣೆಯನ್ನೇ,ರೈತ,ಬಡವರ ಪರ ಹೋರಾಟವನ್ನೇ ಧ್ಯೇಯವನ್ನಾಗಿಟ್ಟುಕೊಂಡು ಹೋರಾಟದ ಹಾದಿ ಹಿಡಿದಿರುವ ತೇಜಸ್ವಿ ಪಟೇಲರದು ಸಂತನ ಹಾದಿ.ನಾನು,ಮಣ್ಣಿಗಂಟಿಕೊಂಡೇ ಇರುವೆ ಎಂದು ಹಠವಿಡಿದ ಮಗುವಿನಂತೆ ಕಾಣುವ ತೇಜಸ್ವಿಯವರು, ಆಂತರ್ಯದಲ್ಲಿ ಚಳುವಳಿಗಳೊಂದಿಗೆ ಆರ್ಗ್ಯಾನಿಕ್ ಆದಂತಹ ಸಂಬಂಧಗಳನ್ನು ಇಟ್ಟುಕೊಂಡವರು.
ನೆಲಕೆ ಬಿದ್ದ ರೈತನ ಬೆವರ ಹನಿ,ಎಂದಿಗೂ ರೈತನನ್ನು ಸಾಯಲು ಬಿಡುವುದಿಲ್ಲ ಎಂಬುದನ್ನು ಮನಗಂಡಿರುವ ತೇಜಸ್ವಿಪಟೇಲ್,ರಂಗ ಚಟುವಟಿಕೆಗಳಿರಲಿ,ಪ್ರಗತಿಪರರ ಚಿಂತನ ಶಿಬಿರಗಳಿರಲಿ,ಸದಾ ಸಕ್ರಿಯರಾಗಿರುತ್ತಾರೆ.ಸಿರಿವಂತ ಕೌಟುಂಬಿಕ ಹಿನ್ನೆಲೆ,ರಾಜಕೀಯದಲ್ಲಿ ಹೆಜ್ಜೆಗುರುತು ಮೂಡಿಸಿದ ವರ್ಣರಂಜಿತ ಮುಖ್ಯಮಂತ್ರಿ ಜೆ.ಹೆಚ್.ಪಟೇಲರ ಪ್ರಭಾವಳಿ,ತನ್ನ ಸುತ್ತ ತನ್ನದೇ ಜಾತಿಯ ಬಹುಸಂಖ್ಯಾತ ಸಮುದಾಯಗಳು ಇದ್ದರೂ ಇಂತಹ ಸೆಳೆತಗಳಿಂದ ತಪ್ಪಿಸಿಕೊಂಡು ಬದುಕುವುದೂ ಸಾಹಸ.ಇವರನ್ನು ನೋಡಿದಾಗಲೆಲ್ಲ ಇಂತಹ ಸೆಳೆತಗಳಿಂದ ಸದಾ ಒಂದಷ್ಟು ಅಂತರವನ್ನು ಕಾಪಿಟ್ಟುಕೊಂಡು, ಕನಿಷ್ಟ ನೈತಿಕ ಪ್ರಜ್ಞೆಯನ್ನಾದರೂ ಉಳಿಸಿಕೊಂಡಿರುವರಲ್ಲ ಎಂದು ಸಮಾಧಾನ ಆಗುತ್ತದೆ.
ಕಳೆದ ಮೇ ತಿಂಗಳಲ್ಲಿ ನಡೆದ ಮೇ ಸಾಹಿತ್ಯ ಮೇಳಕ್ಕೆ ಆಹ್ವಾನಿಸಿದಾಗ ಆಪ್ತವಾಗಿ ಮಾತನಾಡಿದ್ದರು.ಕಾರ್ಯಕ್ರಮದಲ್ಲಿ ಸಾಮಾನ್ಯ ಪ್ರೇಕ್ಷಕನಾಗಿ ಭಾಗವಹಿಸಿದ್ದರು.
ಕಳೆದ ದಶಕಗಳಲ್ಲಿ ಕೃಷಿ,ನೀರಾವರಿಯಂತಹ ಬೃಹತ್ ಮತ್ತು ದೂರಗಾಮಿ ಯೋಜನೆಗಳಿಗೆ ನೀಡಿದ ರಾಜಕೀಯ ಪಕ್ಷಗಳ ಆದ್ಯತೆ ಇಂದು ಸಂಪೂರ್ಣವಾಗಿ ಬದಲಾಗಿ ಹೋಗಿವೆ. ಕಳೆದ ದಶಕದಲ್ಲಿ ಶಾಲಾಶಿಕ್ಷಣ,ಕಂಪ್ಯೂಟರಿಕೃತ ಉದ್ಯಮಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದ ಸರ್ಕಾರಗಳು ಬರಬರುತ್ತಾ ಅಭಿವೃದ್ಧಿಯೆಂಬ ಹೆಸರಿನ ನೀರಗುಳ್ಳೆಯನ್ನೆ ಸೃಷ್ಟಿಸುತ್ತಾ ಬಂದರು.
ಎಂಭತ್ತರ ದಶಕದ ರೈತ ,ಕಾರ್ಮಿಕ ಚಳುವಳಿಗಳು ಸೃಷ್ಟಿಸಿದ್ದ ಆರೋಗ್ಯಕರ ಪ್ರತಿರೋಧದ ವಾತಾವರಣ, ಜನತಾ ಪರಿವಾರದ ಪ್ರಯೋಗಾತ್ಮಕ ರಾಜಕಾರಣ ಭರವಸೆ ಮೂಡಿಸಿತ್ತಾದರೂ, ತದನಂತರದಲ್ಲಿ ಅದೂ ಕೂಡ ಹತ್ತರಲ್ಲಿ ಹನ್ನೊಂದು ಎನ್ನುವಂತಾಯಿತು. ಜನರ ಆಹಾರ,ಸೂರು,ಆರೋಗ್ಯ -ಸರ್ಕಾರಗಳಿಗೆ ಆದ್ಯತೆಯ ಕೆಲಸವಾಗಬೇಕಿತ್ತು.ಆದರೆ ಹಾಗಾಗಲಿಲ್ಲ.ಎಲ್ಲ ಪಕ್ಷಗಳಿಗೂ ಗೆಲ್ಲುವುದೊಂದೇ ಮಾನದಂಡವಾಯಿತು.
ಹುಚ್ಚರು ತಮ್ಮ ಹುಚ್ಚಾಸ್ಪತ್ರೆಗಳನ್ನೇ ವಶಪಡಿಸಿಕೊಂಡಂತೆ* ,ಈ ಹೊತ್ತು ರಾಜಕಾರಣಿಗಳು ವರ್ತಿಸುತ್ತಿದ್ದಾರೆ.ಇಂತಹ ಕಾಲಘಟ್ಟದಲ್ಲಿ ಚಲನಶೀಲ ಸಂಬಂಧಗಳ ಮುಂದುವರಿಕೆಯಂತೆ ಕಾಣುವ ತೇಜಸ್ವಿ ಪಟೇಲರು ರಾಜ್ಯ,ರಾಷ್ಟ್ರ ರಾಜಕಾರಣದ ಮುಖ್ಯವಾಹಿನಿಯಲ್ಲಿರಬೇಕಿತ್ತು ಎಂದೆನಿಸುತ್ತದೆ.
ಹಿಂದೆಂದೂ ಕಂಡಿರದಂತಹ ರಾಜಕಾರಣದ ಒಳಸುಳಿಗೆ ಇಂದು ಭಾರತ ಸಿಲುಕಿದೆ.ಹಸಿ ಹಸಿ ಸುಳ್ಳು,ವಿಕೃತೀಕರಿಸಿದ ಚರಿತ್ರೆಯನ್ನೆ ಸತ್ಯ ಎಂದು ನಂಬುವಂತೆ ಮಾಡುವ ಕಾಲಘಟ್ಟದಲ್ಲಿ ನಾವಿದ್ದೇವೆ.ಇಂತಹ ಸಂಕೀರ್ಣ ಪರಿಸ್ಥಿತಿಯಲ್ಲಿ ತೇಜಸ್ವಿ ಪಟೇಲರರು ತಮ್ಮ ರೈತ ಹೋರಾಟಗಳಿಂದ ಮತ್ತಷ್ಟು ಮುಂದಕ್ಕೆ ಜಿಗಿಯುವ ಅವಶ್ಯಕತೆಯಂತೂ ಇದ್ದೇ ಇದೆ.
ತೇಜಸ್ವಿ ಪಟೇಲರಿಗೆ ಮತ್ತೊಮ್ಮೆ ಶುಭಾಶಯಗಳು.
ಬಿ.ಶ್ರೀನಿವಾಸ,ದಾವಣಗೆರೆ