ಹರಿಹರ (Harihara): ವಿಭಿನ್ನ ಧರ್ಮ, ಜಾತಿ, ಪಂಥ, ವರ್ಣಾದಿಗಳಿದ್ದರೂ ಜಗತ್ತಿನ ಮಾನವರೆಲ್ಲರೂ ಪರಸ್ಪರ ಸಹೋದರರೆಂದು ಇಸ್ಲಾಂಧರ್ಮ ಬೋಧಿಸುತ್ತದೆ ಎಂದು ಜಮಾತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಅಕ್ಬರ್ ಅಲಿ ಉಡುಪಿ ಹೇಳಿದರು.
ಜಮಾತೆ ಇಸ್ಲಾಮಿ ಹಿಂದ್ನ ತಾಲ್ಲೂಕು ಘಟಕದ ಆಶ್ರಯದಲ್ಲಿ ನಗರದ ಅಲಿ ಮಸೀದಿಯಲ್ಲಿ ಬಕ್ರೀದ್ ಹಬ್ಬದ ನಿಮಿತ್ತ ಆಯೋಜಿಸಿದ್ದ ಈದ್ ಮಿಲನ್ ಕಾರ್ಯಕ್ರಮದಲ್ಲಿ ಅವರು ಪ್ರವಚನ ನೀಡಿದರು.
ಜಗತ್ತಿಗೆ ಒಬ್ಬನೆ ಸೃಷ್ಟಿಕರ್ತನಿದ್ದಾನೆ, ನಾವುಗಳು ಆತನನ್ನು ಬೇರೆ, ಬೇರೆ ಹೆಸರಿನಿಂದ ಗುರುತಿಸುತ್ತೇವೆ. ನಮ್ಮ ಧರ್ಮವನ್ನು ಪ್ರೀತಿಸಿದಂತೆಯೆ ಇತರೆ ಧರ್ಮಗಳನ್ನು ಗೌರವಿಸುವ ಮನೋಭವ ಬೆಳೆಸಿ ಕೊಳ್ಳಬೇಕಿದೆ. ಈ ಮನೋಭಾವವು ಸಾಕಷ್ಟು ಕಲಹ, ಸಂಘರ್ಷಗಳನ್ನು ನಿವಾರಿಸುತ್ತದೆ ಎಂದರು.
ದೀಪಾವಳಿ, ಕ್ರಿಸ್ಮಸ್ ಹಬ್ಬದಲ್ಲಿ ನಾವೂ ಭಾಗವಹಿಸುತ್ತೇವೆ, ನಮ್ಮ ರಂಜಾನ್, ಬಕ್ರೀದ್ ಹಬ್ಬದಲ್ಲಿ ಇತರೆ ಧರ್ಮದವರೂ ಭಾಗವಹಿಸಿ ಸಂತಸವನ್ನು ಹಂಚಿಕೊಳ್ಳಬೇಕು. ಧರ್ಮಗಳ ಸಾರವನ್ನು ಅರಿತರೆ ಅಲ್ಲಿ ಸೌಹಾರ್ದತೆ, ಸ್ನೇಹ, ಶಾಂತಿಗೆ ಮಾತ್ರ ಅವಕಾಶ ಇರುತ್ತದೆ ಎಂದರು.
Read also : ಜೂ.16 ರಂದು ನಗರಕ್ಕೆ ಸಿಎಂ ಸಂಚಾರ ಮಾರ್ಗದಲ್ಲಿ ಭಾರಿ ಬದಲಾವಣೆ : ಡಿಸಿ
ಸೃಷ್ಟಿಕರ್ತನು ಅನುಯಾಯಿಯೊಬ್ಬರ ತ್ಯಾಗ ಗುಣವನ್ನು ಪರೀಕ್ಷಿಸಿದ ಸಂದರ್ಭದ ಪ್ರತೀಕವಾಗಿ ಬಕ್ರೀದ್ ಹಬ್ಬವನ್ನು ಆಚರಿಸಲಾಗುತ್ತಿದೆ. ತ್ಯಾಗದ ಪ್ರತೀಕವಾದ ಬಕ್ರೀದ್ ಹಬ್ಬದ ನಿಜವಾದ ಆಚರಣೆ ಎಂದರೆ ತನಗೆ ಇಷ್ಟವಾದದ್ದನ್ನು ಸಂದರ್ಭ ಬಂದರೆ ತ್ಯಾಗ ಮಾಡುವುದಾಗಿದೆ ಎಂದರು.
ಇಸ್ಲಾಮ್ ಧರ್ಮದ ಸಾರವನ್ನು ಇತರೆ ಧರ್ಮದವರಿಗೆ ತಿಳಿಸಲು, ಸೌಹಾರ್ದತೆಯನ್ನು ಮೆರೆಯಲು ಜಮಾತೆ ಇಸ್ಲಾಮಿ ಹಿಂದ್ ದೇಶದಾದ್ಯಂತ ಹಲವು ದಶಕಗಳಿಂದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಆ ಮೂಲಕ ಪರಸ್ಪರರಲ್ಲಿ ಸ್ನೇಹ ಬೆಳೆಯಲು ದಾರಿಯಾಗಿದೆ ಎಂದರು.
ಆರಂಭದಲ್ಲಿ ಎರಡು ನಿಮಿಷಗಳ ಮೌನಾಚರಣೆ ಮಾಡಿ ಈಚೆಗೆ ಅಹಮದಾಬಾದಿನಲ್ಲಿ ನಡೆದ ವಿಮಾನದುರಂತದಲ್ಲಿ ಮಡಿದವರಿಗೆ ಶ್ರದ್ದಾಂಜಲಿ ಅರ್ಪಿಸಲಾಯಿತು.
ಮಾಜಿ ಶಾಸಕ ಎಸ್.ರಾಮಪ್ಪ, ತಾಪಂ ಮಾಜಿ ಅಧ್ಯಕ್ಷ ಟಿ.ಜೆ.ಮುರುಗೇಶಪ್ಪ, ಅಂಜುಮನ್ ಸಂಸ್ಥೆ ಅಧ್ಯಕ್ಷ ಆರ್.ಸಿ.ಜಾವೀದ್, ದಾವಣಗೆರೆ ಜಿಲ್ಲಾ ವಕ್ಫ್ ಸಲಹಾ ಸಮಿತಿ ಉಪಾಧ್ಯಕ್ಷ ಶಾಮೀರ್ ಆಲಂ ಖಾನ್, ನಗರಸಭಾ ಸದಸ್ಯರಾದ ಶಂಕರ್ಖಟಾವ್ಕರ್, ಕೆ.ಬಿ.ರಾಜಶೇಖರ್, ಮುಖಂಡರಾದ ಬಿ. ರೇವಣಸಿದ್ದಪ್ಪ, ಬಿ.ಮೊಹ್ಮದ್ ಸಿಗ್ಬತ್ಉಲ್ಲಾ, ಎಚ್.ನಿಜಗುಣ, ಸಾಹಿತಿ ಚನ್ನಬಸಪ್ಪ ಹುಲಿಕಟ್ಟಿ, ಎಂ.ಬಿ.ಅಣ್ಣಪ್ಪ, ಬಿ.ಮೊಹ್ಮದ್ ಫೈರೋಜ್, ಜಾನಪದಕಲಾವಿದ ಪರಮೇಶ್ವರಪ್ಪ ಕತ್ತಿಗೆ, ಎಂ.ಆರ್.ಸೈಯದ್ ಸನಾಉಲ್ಲಾ, ಎಚ್.ನಿಜಗುಣ, ಮಕ್ಕಳ ತಜ್ಞ ವೈದ್ಯ ಗುಲಾಂನಬಿ, ಜಮಾತೆಇಸ್ಲಾಮಿ ಹಿಂದ್ ಹರಿಹರ ಘಟಕ ಅಧ್ಯಕ್ಷ ಅಬ್ದುಲ್ ಖಯೂಂ ಎಕ್ಕೆಗೊಂದಿ, ಪತ್ರಕರ್ತ ಬಿ.ಮಗ್ದುಮ್ ಸಾಬ್ ಹಾಗೂ ಇತರರಿದ್ದರು.