ದಾವಣಗೆರೆ (Davanagere): ಸ್ಮಶಾನದಲ್ಲಿ ಅಕ್ರಮ ಮಣ್ಣು ಸಾಗಾಟ ಮತ್ತು ಪೂರ್ವಜರ ಸಮಾಧಿಗಳ ವಿರೂಪ ಗೊಳಿಸಿರುವ ಅಕ್ರಮ ಮಣ್ಣು ಸಾಗಾಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಂಡು ಸ್ಮಶಾನದಲ್ಲಿ ಈ ಮುಂಚಿನ ಸ್ಥಿತಿ ಕಾಪಾಡಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿಯ ನೇತೃತ್ವದಲ್ಲಿ ಕಬ್ಬೂರಿನ ಗ್ರಾಮಸ್ಥರು ದಾವಣಗೆರೆ ತಾಲೂಕು ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.
ದಾವಣಗೆರೆ ತಾಲೂಕಿನ ಕಬ್ಬೂರು ಗ್ರಾಮದಲ್ಲಿ 30- 40 ವರ್ಷಗಳಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದ, ಮಡಿವಾಳ, ಗೊಲ್ಲ, ಭೋವಿ ಇತರೆ ಜನಾಂಗದ ನಮ್ಮ ಪೂರ್ವಜರ ದೇಹಗಳನ್ನು ಸಮಾಧಿ ಮಾಡಿದ ಸ್ಮಶಾನವನ್ನು ಅಕ್ರಮವಾಗಿ ಎಂಟರಿಂದ ಹತ್ತು ಅಡಿಗಳಷ್ಟು ಬಗೆದು ಅಕ್ರಮ ಮಣ್ಣು ಸಾಗಾಟ ಮಾಡಿ, ಪೂರ್ವಜರ ಅಸ್ತಿಪಂಜರಗಳನ್ನು ಕಿತ್ತುಹಾಕಿ ವಿರೂಪ ಗೊಳಿಸಿ ಸಾಗಾಟ ಮಾಡಲಾಗಿದೆ. ನೂರಾರು ಲೋಡು ಅಕ್ರಮ ಮಣ್ಣು ಸಾಗಾಟ ನಡೆಸಲಾಗಿದೆ. ಸ್ಮಶಾನವನ್ನು ವಿರೂಪ ಗೊಳಿಸಿ ನಮ್ಮ ನಂಬಿಕೆಗಳಿಗೆ, ಭಾವನೆಗಳಿಗೆ ಧಕ್ಕೆ ಉಂಟು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನೂರಾರು ಮಂದಿ ಕಬ್ಬೂರು ಗ್ರಾಮಸ್ಥರು ಪ್ರತಿಭಟನೆ ನಡೆಸಿ ದಾವಣಗೆರೆ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಪ್ರತಿಭಟನೆಯಲ್ಲಿ ಮನವಿ ಸಲ್ಲಿಸಿ ಮಾತನಾಡಿದ ಜಿಲ್ಲಾ ಸಂಚಾಲಕ ದಸಂಸ ಮುಖಂಡ ಮಂಜುನಾಥ ಕುಂದುವಾಡ, ಕಬ್ಬೂರಿನ ಗೋಮಾಳದಲ್ಲಿ ಅನೇಕ ತಿಂಗಳುಗಳಿಂದ ಅಕ್ರಮ ಮಣ್ಣು ಗಣಿಗಾರಿಕೆ ನಡೆಯುತ್ತಿದೆ. ಅಲ್ಲದೆ ಪರಿಶಿಷ್ಟ ಜಾತಿ ಮತ್ತು ಪಂಗಡದ, ಹಿಂದುಳಿದ ವರ್ಗಗಳ ಅನೇಕರು ತಮ್ಮ ಪೂರ್ವಜರ ಅಂತ್ಯ ಸಂಸ್ಕಾರ ಮಾಡಿಕೊಂಡು ಪೂಜೆ ಪುನಸ್ಕಾರ ಮಾಡಿಕೊಂಡು ಬರುತ್ತಿದ್ದ ಸ್ಮಶಾನದಲ್ಲಿ ಮಣ್ಣು ಮಾಫಿಯ ದಂಧೆಕೋರರು ದಿನಾಂಕ:10.01.2025ರ ತಡರಾತ್ರಿಯಲ್ಲಿ ಪೂರ್ವಜರ ಸಮಾಧಿಗಳನ್ನು ಸಹ ನಾಶ ಮಾಡಿ ಅಲ್ಲಿನ ಅಸ್ಥಿಪಂಜರಗಳನ್ನು ಯಾವುದೇ ಕುರುಹುಗಳು ಸಿಗದಂತೆ ಮಾಡಿ ಅಲ್ಲಿನ ಮಣ್ಣನ್ನು ಸಾಗಾಟ ಮಾಡಿ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ಟ್ರಾಕ್ಟರ್, ಜೆ ಸಿ ಬಿ ಮಾಲೀಕರನ್ನು ಪ್ರಶ್ನಿಸಿದಾಗ ಅವರು ದೌರ್ಜನ್ಯದ ಮಾತುಗಳನ್ನಾಡಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಸ್ಥಳೀಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಕಂದಾಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ತೆಗೆದುಕೊಂಡಿರುವುದಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಕುರಿತು ಮಾತನಾಡಿದ ದಲಿತ ಮುಖಂಡ ಮಂಜು ಕಬ್ಬೂರು, ಕಬ್ಬೂರು ಗ್ರಾಮದಲ್ಲಿ ಹಲವಾರು ವರ್ಷಗಳಿಂದ ಕೆರೆ ಅಂಗಳ ಮತ್ತು ಗೋಮಾಳ, ಸರ್ಕಾರಿ ಜಮೀನುಗಳು ಒತ್ತುವರಿಯಾಗಿವೆ. ಈಗ ಅಕ್ರಮ ಸಾಗಾಟಗಾರರು ನಮ್ಮ ಪೂರ್ವಜರ ಅಂತ್ಯ ಸಂಸ್ಕಾರ ಮಾಡಿದ್ದ ಸ್ಮಶಾನವನ್ನು ಬಿಟ್ಟಿಲ್ಲ. ಈ ಕೂಡಲೇ ಕಂದಾಯ ಇಲಾಖೆ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡು ಈ ಕೆಳಗಿನ ಬೇಡಿಕೆಗಳನ್ನು ಈಡೇರಿಸಬೇಕು. ನಮ್ಮ ಪೂರ್ವಜರ ಸ್ಮಶಾನವನ್ನು ಗುರುತಿಸಿ, ನಾಶಪಡಿಸಿರುವ ನಮ್ಮ ಪೂರ್ವಜರ ಅಸ್ಥಿಪಂಜರಗಳನ್ನು ಪತ್ತೆ ಹಚ್ಚೆ ಅದೇ ಸ್ಥಳದಲ್ಲಿ ಸ್ಮಶಾನ ನಿರ್ಮಿಸಿ ಅಲ್ಲಿ ನಾಮಫಲಕಗಳನ್ನು ಅಳವಡಿಸಿಕೊಟ್ಟು, ನೊಂದ ಕುಟುಂಬಗಳಿಗೆ ಪರಿಹಾರ ಕೊಡಬೇಕು. ಕೆರೆಯನ್ನು ಒತ್ತುವರಿಮುಕ್ತಗೊಳಿಸಿ ತಡೆಬೇಲಿ ನಿರ್ಮಾಣ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
“ಜಾನುವಾರುಗಳಿಗೆ ಮೇವು ಸಿಗುವಂತೆ ಮಾಡಿ, ಗೋಮಾಳವನ್ನು ಒತ್ತುವರಿ ಮಾಡಿರುವ, ಅಕ್ರಮ ಮಣ್ಣು ಸಾಗಾಟ ಮಾಡಿದವರ ಹಾಗೂ ಕ್ರಮ ಕೈಗೊಳ್ಳದೇ ಸಹಕಾರ ನೀಡುತ್ತಿರುವ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಗ್ರಾಮ ಲೆಕ್ಕಾಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಹಾಗೂ ಒತ್ತುವರಿಯಾಗಿರುವ ಗೋಮಾಳದ ಜಾಗವನ್ನು ಒತ್ತುವರಿಮುಕ್ತ ಮಾಡಿಕೊಡಬೇಕು. ಗೋಮಾಳದಲ್ಲಿ ನಿವೇಶನ ಹಾಗೂ ವಸತಿರಹಿತ ಎಸ್.ಸಿ. ಮತ್ತು ಎಸ್.ಟಿ. ಜನಾಂಗದವರಿಗೆ ಸುಮಾರು 10 ಎಕರೆ ಜಾಗದಲ್ಲಿ ವಸತಿಗೆ ಅನುಕೂಲ ಕಲ್ಪಿಸಿಕೊಡಬೇಕು. ಉಳಿದ ಜಾಗವನ್ನು ಜಾನುವಾರುಗಳ ಮೇವಿಗೆ ಮೀಸಲಿಟ್ಟು ಅರಣ್ಯ ಇಲಾಖೆಗೆ ವಹಿಸಬೇಕು” ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ವಿಜಯಲಕ್ಷ್ಮಿ ,ಎನ್ ಎಂ ಕೋಟಿ, ಅಂಜನಪ್ಪ, ಗೋವಿಂದಪ್ಪ, ಬಸವರಾಜಪ್ಪ, ಮಂಜಪ್ಪ, ಕುಮಾರಪ್ಪ, ಮಲ್ಲಿಕಾರ್ಜುನ, ಶೇಖರಪ್ಪ, ಎಂದು ರಾಮಚಂದ್ರಪ್ಪ, ಸಂದೀಪ್, ಮಹೇಶ್, ಯಲ್ಲೇಶ, ,ವಿಷ್ಣು ಶಿವಕುಮಾರ, ರಂಗಸ್ವಾಮಿ, ರಾಜಪ್ಪ, ಎಲ್ಲಪ್ಪ, ಧನ್ಯಕುಮಾರ, ಮಂಜುನಾಥ ಸೇರಿದಂತೆ ಕಬ್ಬೂರಿನ ನೂರಾರು ಗ್ರಾಮಸ್ಥರು ಭಾಗವಹಿಸಿದ್ದರು.
Read also: ಸೋನಿಯಾ ಹೆಗಲಿಗೆ ಡಿ.ಕೆ. ಶಿವಕುಮಾರ್ ಗಂಟು