ದಾವಣಗೆರೆ : ಡ್ರಗ್ಸ್, ಗಾಂಜಾ ಸೇರಿದಂತೆ ಯಾವುದೇ ರೀತಿಯ ಮಾದಕ ವಸ್ತುಗಳನ್ನು ಸೇವಿಸಬೇಡಿ. ದಾಸರಾದರೆ ಭವಿಷ್ಯವೇ ಸರ್ವನಾಶವಾಗುತ್ತದೆ. ಹಾಗಾಗಿ, ಯುವಪೀಳಿಗೆಯಲ್ಲಿ ಮಾದಕ ವಸ್ತುಗಳ ಅಪಾಯ ಕುರಿತಂತೆ ಹೆಚ್ಚಾಗಿ ಜಾಗೃತಿ ಮೂಡಿಸಬೇಕಾದ ಅಗತ್ಯತೆ ಇದೆ ಎಂದು ದೂಡ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಹೇಳಿದರು.
ಇಲ್ಲಿನ ಜಯದೇವ ವೃತ್ತದಲ್ಲಿ ಜಿಲ್ಲಾ ಜವಾಹರ್ ಬಾಲ್ ಮಂಚ್ ವತಿಯಿಂದ ಮಾದಕ ವಸ್ತುಗಳು ಸಮಾಜಕ್ಕೆ ಹಾಗೂ ದೇಶಕ್ಕೆ ಮಾರಕ ಎಂಬ ಘೋಷವಾಕ್ಯದೊಂದಿಗೆ ಸಿದ್ಧಗಂಗಾ ಶಾಲಾ ಮಕ್ಕಳಿಂದ ಬೃಹತ್ ಮಾನವ ಸರಪಳಿ ಹಾಗೂ ಕಾಲ್ನಡಿಗೆ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಾದಕ ವಸ್ತುಗಳ ದಾಸರಾಗಿ ಯುವಪೀಳಿಗೆ ಭವಿಷ್ಯ ಹಾಳು ಮಾಡಿಕೊಳ್ಳುತ್ತಿದೆ. ಪೊಲೀಸ್ ಇಲಾಖೆ, ಜಿಲ್ಲಾಡಳಿತ, ರಾಜ್ಯ ಸರ್ಕಾರವು ಸಾಕಷ್ಟು ಜಾಗೃತಿ ಮೂಡಿಸುವ ಕೆಲಸಗಳನ್ನು ಮಾಡುತ್ತಿವೆ. ಗಾಂಜಾ ಸೇವನೆ, ಮಾದಕ ವಸ್ತುಗಳ ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ದೇಶದ ಅಭಿವೃದ್ಧಿ ದೃಷ್ಟಿಗೂ ಕಂಟಕ. ಇದಕ್ಕೆ ಕಡಿವಾಣ ಹಾಕಬೇಕಿದೆ. ಪ್ರತಿಯೊಬ್ಬರೂ ಸ್ವಯಂಪ್ರೇರಿತರಾಗಿ ಯಾವಾಗಲೂ ಮಾದಕ ವಸ್ತುಗಳ ಸೇವನೆ ಮಾಡುವುದಿಲ್ಲ. ಇಂಥವರ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಎಂದು ಸಲಹೆ ನೀಡಿದರು.
ಜವಾಹರ್ ಬಾಲ್ ಮಂಚ್ ಜಿಲ್ಲಾಧ್ಯಕ್ಷ ಮೊಹಮ್ಮದ್ ಜಿಕ್ರಿಯಾ ಮಾತನಾಡಿ, ಮಾದಕ ವಸ್ತುಗಳ ವಿರುದ್ಧ ಹೋರಾಟ ನಡೆಸಬೇಕಾಗಿದೆ. ಯುವಪೀಳಿಗೆಯವರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನವಾಗಿ ಸಾವಿರಾರು ವಿದ್ಯಾರ್ಥಿಗಳು ಮಾನವ ಸರಪಳಿ ರಚಿಸಿ, ಕಾಲ್ನಡಿಗೆ ಜಾಥಾದ ಮೂಲಕ ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದರು. .
ಸಿದ್ದಗಂಗಾ ಶಾಲೆಯ ಸಾವಿರಾರು ವಿದ್ಯಾರ್ಥಿಗಳು ಬಿತ್ತಿ ಪತ್ರಗಳನ್ನು ಹಿಡಿದು ಜಯದೇವ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಜಾಗೃತಿ ಮೂಡಿಸಿದರು.
ಜವಾಹರ್ ಬಾಲ್ ಮಂಚ್ ರಾಜ್ಯಾಧ್ಯಕ್ಷ ಹೆಚ್. ಜಿ. ಮೈನುದ್ದಿನ್, ರಾಜ್ಯ ಕಾರ್ಯದರ್ಶಿ ಲಿಯಾಖತ್ ಆಲಿ, ಜಿಲ್ಲಾ ಪದಾಧಿಕಾರಿಗಳಾದ ಫಯಾಜ್ ಅಹ್ಮದ್, ಕೆ. ಹೆಚ್. ಪ್ರೇಮಾ, ನಾಗರಾಜ್, ಶಿಲ್ಪಾ, ಭರತ್, ವೀರೇಶ್, ಅಫ್ರೀದ್, ಪ್ರವೀಣ್, ರಾಜ್ಯ ಪದಾಧಿಕಾರಿಗಳಾದ, ಸಲ್ಮಾ ಬಾನು, ಖಾಜ, ಅಮ್ಜದ್, ಯುವ ಕಾಂಗ್ರೆಸ್ ಮುಖಂಡರಾದ ಮುಜಾಹಿದ್, ಹರೀಶ್, ಬಾಷಾ ಮತ್ತಿತರರು ಹಾಜರಿದ್ದರು.