ದಾವಣಗೆರೆ : 2026-2027ರ ಬಜೆಟ್ ನಲ್ಲಿ ದಲಿತರ ಜನಸಂಖ್ಯೆ ಅನುಗುಣವಾಗಿ ಶೇ. 24.1ರಷ್ಟು ಅನುದಾನ ಮೀಸಲಿರಿಸಿ, ಹಣ ದುರ್ಬಳಕೆ ತಡೆಯಲು ಎಸ್ಸಿಎಸ್ಪಿ/ಟಿಎಸ್ಪಿ ಕಾಯ್ದೆ ಸೆಕ್ಷನ್ 7 (ಸಿ) ರದ್ದುಪಡಿಸಬೇಕು ಹಾಗೂ ವಿವಿಧ ಬೇಡಿಕೆಗಳಿಗೆ ಸೂಕ್ತ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಸಂವಿಧಾನದ ರಾಜ್ಯ ನಿರ್ದೇಶಿತ ತತ್ವಗಳ ಪರಿಚ್ಚೇದ 37 ಮತ್ತು 46 ರಲ್ಲಿ ಶೋಷಿತ ಸಮುದಾಯಗಳನ್ನು ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಸಬಲೀಕರಣಗೊಳಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಂಡಿಸುವ ಒಟ್ಟು ಬಜೆಟ್ ಗಾತ್ರದಲ್ಲಿ ಪ.ಜಾತಿ ಮತ್ತು ಪ.ಪಂಗಡಗಳ ಜನಸಂಖ್ಯೆಯ ಅನುಗುಣವಾಗಿ ಅನುದಾನ ಮೀಸಲಿಡಲು ಸೂಚಿಸಿದೆ.
ಮೀಸಲಿರಿಸಿದ ಅನುದಾನವನ್ನು ರದ್ದಾಗದಂತೆ ಮತ್ತು ಇತರೆ ಯೋಜನೆಗಳಿಗೆ ವರ್ಗಾಯಿಸದಂತೆ ಉದ್ದೇಶಿತ ಯೋಜನೆಗಳಿಗೆ ಬಳಕೆಯಾಗಬೇಕೆಂದೂ ನಿರ್ದೇಶನ ನೀಡಿದೆ. ಆದರೆ, 2023 ರಿಂದ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ತನ್ನ ಆಡಳಿತಾವಧಿಯಲ್ಲಿ ಪ.ಜಾತಿ ಹಾಗೂ ಪ.ಪಂಗಡ (ಎಸ್ ಸಿ ಎಸ್ ಪಿ /ಟಿ ಎಸ್ ಪಿ)ಗಳ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಅನುದಾನವನ್ನು ಏಕಪಕ್ಷೀಯವಾಗಿ ಸುಮಾರು 25 ಸಾವಿರ ಕೋಟಿಗೂ ಹೆಚ್ಚು ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸುವ ಮೂಲಕ ಅವಕಾಶ ವಂಚಿತ ಪ.ಜಾತಿಗಳಿಗೆ ವಂಚನೆ ಮಾಡಿದೆ ಎಂದು ಹೇಳಿದ್ದಾರೆ.
ಕರ್ನಾಟಕ ಪ.ಜಾತಿ ವಿಶೇಷ ಯೋಜನೆ ಮತ್ತು ಪ.ಪಂಗಡದ ಉಪಯೋಜನೆ (ಎಸ್ಸಿಎಸ್ಪಿ/ಟಿಎಸ್ಪಿ) ಕಾಯ್ದೆ 2013ರ ಪ್ರಕಾರ ರಾಜ್ಯ ಸರ್ಕಾರ ಪ್ರತಿ ವರ್ಷ ತನ್ನ ವಾರ್ಷಿಕ ಒಟ್ಟು ಬಜೆಟ್ ನ ಶೇ. 24.1ರಷ್ಟು ಮೊತ್ತವನ್ನು ಈ ಸಮುದಾಯ ಗಳ ಅಭಿವೃದ್ಧಿಗಾಗಿ ಖರ್ಚುಮಾಡ ಬೇಕೆಂದು ಕಾಯ್ದೆಯಲ್ಲಿ ಸ್ಪಷ್ಟವಾಗಿ ತಿಳಿಸಿದೆ.
ಎಸ್ಸಿ, ಎಸ್ಟಿ ಸಮುದಾಯಗಳು ಹೆಚ್ಚಾಗಿ ವಾಸಿಸುವ ಪ್ರದೇಶದಲ್ಲಿ ಮೂಲ ಸೌಕರ್ಯ ಸೃಷ್ಟಿಸಲು ಮತ್ತು ಅಲಕ್ಷಿತ ಆ ಸಮುದಾಯಗಳನ್ನು ಬಡತನ ರೇಖೆಯಿಂದ ಮೇಲಕ್ಕೆತ್ತಿ ಸಮಾಜದ ಮುಖ್ಯ ವಾಹಿನಿಯೊಂದಿಗೆ ಬೆರೆಯುವಂತೆ ಮಾಡು ವುದು ಈ ಕಾಯ್ದೆಯ ಉದ್ದೇಶವಾಗಿದೆ. ಸದರಿ ಯೋಜನೆಯ ಉದ್ದೇಶ ತುಂಬಾ ಸ್ಪಷ್ಟವಾಗಿದ್ದರೂ ಗ್ಯಾರಂಟಿ ಯೋಜನೆಗಳಿಗೆ 25 ಸಾವಿರ ಕೋಟಿ ದಲಿತರ ಅಭಿವೃದ್ಧಿ ನಿಧಿಯನ್ನು ವರ್ಗಾಯಿಸಿರುವ ಸರ್ಕಾರದ ಕ್ರಮವನ್ನು ದಸಂಸ ತೀವ್ರವಾಗಿ ಖಂಡಿಸಿದೆ.
Read also : ಜಿನೀವಾದ WHO ಪ್ರಾದೇಶಿಕ ಸದಸ್ಯರಾಗಿ ಡಾ.ಎಲ್.ರಾಕೇಶ್ ಆಯ್ಕೆ
ಸರ್ಕಾರ 25ಸಾವಿರ ಕೋಟಿ ಹಣವನ್ನು ಪುನಃ ಹಿಂದಿರುಗಿಸುವ ಮೂಲಕ ದಲಿತಪರ ಕಾಳಜಿ ತೋರಿಸಬೇಕೆಂದು ಅಗ್ರಹಿಸಿ, ಪ್ರಸಕ್ತ 2026-27ನೇ ಸಾಲಿನ ಒಟ್ಟು ಬಜೆಟ್ ನ ಶೇ 24.1ರಷ್ಟು ಎಸ್ ಸಿ ಎಸ್ ಪಿ /ಟಿ ಎಸ್ ಪಿ ಅನುದಾನ ಮೀಸಲಿರಿಸಿ, ಮೀಸಲಿರಿಸಿದ ಅನುದಾನ ದುರ್ಬಳಕೆ ತಡೆಯಲು ಎಸ್ ಸಿ ಎಸ್ ಪಿ /ಟಿ ಎಸ್ ಪಿ ಕಾಯ್ದೆಯಿಂದಲೇ ಸೆಕ್ಷನ್ 7( ಅ) ಯನ್ನು ರದ್ದುಪಡಿಸುವಂತೆ, ದಲಿತ ಮತ್ತು ಇತರೆ ಹಿಂದುಳಿದ ವರ್ಗಗಳ ಈ ಕೆಳಕಂಡ ಅತ್ಯಗತ್ಯ ಬೇಡಿಕೆಗಳಿಗೆ ಸೂಕ್ತ ನ್ಯಾಯ ಒದಗಿಸಬೇಕೆಂದು ರಾಜ್ಯ ಸರ್ಕಾರವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ಒತ್ತಾಯಿಸಿದೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಮಂಜುನಾಥ ಕುಂದುವಾಡ,ವಿಜಯಲಕ್ಷ್ಮೀ ಕೆ., ಮಹಂತೇಶ್, ಚಿತ್ತನಹಳ್ಳಿ ನಾಗರಾಜ್,ಕುಂದುವಾಡ ಹಾಲೇಶ್, ಅರತಿ,ಭಾಗ್ಯಮ್ಮ,ಹನುಮಂತಪ್ಪ ಗಂಗನಕಟ್ಟೆ ಇತರರು ಇದ್ದರು.
