ದಾವಣಗೆರೆ (Davanagere) : ಸರ್ಕಾರವು ಹಸಿವು ಮುಕ್ತ ಕರ್ನಾಟಕವನ್ನು ನಿರ್ಮಿಸುವ ಆಶಯದೊಂದಿಗೆ ರಾಜ್ಯಾದ್ಯಂತ ಇಂದಿರಾ ಕ್ಯಾಂಟಿನ್ಗಳನ್ನು ಪ್ರಾರಂಭಿಸಿದೆ. ಕಡಿಮೆ ದರದಲ್ಲಿ ನಗರ, ಗ್ರಾಮೀಣ ಪ್ರದೇಶದ ಬಡವರು, ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು, ದಿನಗೂಲಿ ನೌಕರರು ಮತ್ತು ಕಡಿಮೆ ಆದಾಯದವರಿಗೆ ಅತಿ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಉಪಹಾರ, ಊಟ ಮತ್ತು ರಾತ್ರಿ ಊಟವನ್ನು ಒದಗಿಸುತ್ತಿರುವ ಇಂದಿರಾ ಕ್ಯಾಂಟಿನ್ ಹಸಿದವರ ಪಾಲಿಗೆ ಅನ್ನದಾತ ಎಂದು ಪೌರಾಡಳಿತ ಹಾಗೂ ಹಜ್ ಸಚಿವ ರಹೀಂಖಾನ್ ಹೇಳಿದರು.
ಬುಧವಾರ ದಾವಣೆಗರೆ ನಗರದಲ್ಲಿನ ಹೈಸ್ಕೂಲ್ ಮೈದಾನದಲ್ಲಿನ ಇಂದಿರಾ ಕ್ಯಾಂಟಿನ್ಗೆ ಭೇಟಿ ನೀಡಿ ಇಲ್ಲಿನ ವ್ಯವಸ್ಥೆಗಳನ್ನು ಪರಿಶೀಲನೆ ನಡೆಸಿ ಊಟ ಮಾಡುತ್ತಿದ್ದವರ ತಟ್ಟೆಯಿಂದಲೇ ಚಪಾತಿ, ಪಲ್ಯ, ಅನ್ನಸಾಂಬಾರ್ ಸವಿಯುವ ಮೂಲಕ ಗುಣಮಟ್ಟದ ಪರೀಕ್ಷೆ ನಡೆಸಿದರು.
ಈ ವೇಳೆ ಕ್ಯಾಂಟಿನ್ಗೆ ಆಗಮಿಸಿದ್ದ ಕಾನೂನು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರು, ಪ್ಯಾರಾಮೆಡಿಕಲ್ ಕೋರ್ಸ್ ಮಾಡುತ್ತಿರುವ ವಿದ್ಯಾರ್ಥಿನಿಯರು ಮತ್ತು ರೈತರು, ಕಾರ್ಮಿಕರೊಂದಿಗೆ ಸಂವಾದ ನಡೆಸಿ ಮಾತನಾಡಿದರು.
Read also : ರೌಡಿಶೀಟರ್ಗಳ ಪರೇಡ್ | ಕಾನೂನು ಕೈಗೆತ್ತಿಕೊಂಡರೆ ಕಠಿಣ ಕ್ರಮ : ಎಸ್ಪಿ
ಹಸಿವು ಮುಕ್ತ ಕರ್ನಾಟಕ ಮಾಡಬೇಕೆಂಬ ಆಶಯದೊಂದಿಗೆ ಮುಖ್ಯಮಂತ್ರಿಗಳ ಮಹತ್ವಾಕಾಂಕ್ಷೆ ಕನಸಿನ ಯೋಜನೆಗಳಲ್ಲಿ ಒಂದಾದ ಇಂದಿರಾ ಕ್ಯಾಂಟಿನ್ ಆರಂಭಿಸಲಾಯಿತು. ಇಲ್ಲಿ ಬೆಳಗಿನ ಉಪಹಾರ ರೂ.5 ಕ್ಕೆ, ಮಧ್ಯಾಹ್ನ ಮತ್ತು ರಾತ್ರಿ ಊಟ ರೂ. 10ಕ್ಕೆ ನೀಡಲಾಗುತ್ತಿದೆ. ಯಾರೊಬ್ಬರೂ ಹಸಿವಿನಿಂದ ಇರಬಾರದು ಎಂಬುದು ಸರ್ಕಾರದ ಪ್ರಮುಖ ಆಶಯವಾಗಿದೆ. ಆದ್ದರಿಂದ ಬಡವರಿಗೆ ದಿನದಲ್ಲಿ ಮೂರು ಹೊತ್ತು ಕಡಿಮೆ ದರದಲ್ಲಿ ಲಭ್ಯವಿರುವ ಪೌಷ್ಟಿಕಾಂಶದಿAದ ಕೂಡಿದ ಆಹಾರವನ್ನು ಒದಗಿಸಲಾಗುತ್ತದೆ ಎಂದರು.
ಹಾಗೆಯೇ ಅಲ್ಲಿನ ಸಿಬ್ಬಂದಿಯ ಬಳಿ ಪ್ರತಿದಿನ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ಖರ್ಚಾಗುವ ಪ್ರಮಾಣ ಇನ್ನಿತರೆ ಮೂಲಭೂತ ಸೌಲಭ್ಯಗಳ ಕುರಿತು ಮಾಹಿತಿ ಪಡೆದುಕೊಂಡರು. ಉತ್ತಮ ಗುಣಮಟ್ಟ ಹಾಗೂ ಶುಚಿ ರುಚಿಯಾದ ಆಹಾರ ಒದಗಿಸುವಂತೆ ತಾಕೀತು ಮಾಡಿದರು.
ಪ್ರಸ್ತುತ ರಾಜ್ಯಾದ್ಯಂತ 196 ಕ್ಯಾಂಟಿನ್ ಕಾರ್ಯನಿರ್ವಹಿಸುತ್ತಿದ್ದು, ಬಿಬಿಎಂಪಿ, ನಗರಸಭೆ, ಪುರಸಭೆ ವ್ಯಾಪ್ತಿಯಲ್ಲಿ ಹೆಚ್ಚುವರಿಯಾಗಿ 186 ಕ್ಯಾಂಟಿನ್ ತೆರೆಯಲಾಗುತ್ತಿದೆ ಎಂದು ಮಾಹಿತಿ ನೀಡಿದರು.