ದಾವಣಗೆರೆ (Davanagere): ಆಧುನಿಕ ಯುಗದಲ್ಲಿ ವೈಭವದ ಮದುವೆಗಳಿಗೆ ಗಮನ ನೀಡದೆ ಸಾಮೂಹಿಕ ವಿವಾಹಕ್ಕೆ ಹೆಚ್ಚಿನ ಒತ್ತು ನೀಡಿದಾಗ ಮಾತ್ರ ದುಂದುವೆಚ್ಚಗಳಿಗೆ ಕಡಿವಾಣ ಬೀಳಲಿದೆ ಎಂದು ಶಾಸಕ ಕೆ.ಎಸ್.ಬಸವಂತಪ್ಪ ಸಲಹೆ ನೀಡಿದರು.
ತಾಲೂಕಿನ ಹೆಬ್ಬಾಳು ಗ್ರಾಮದಲ್ಲಿ ಶ್ರೀಕ್ಷೇತ್ರ ಹೆಬ್ಬಾಳು ಮಠದಲ್ಲಿ ಬುಧವಾರ ಬಸವ ಜಯಂತಿ ಅಂಗವಾಗಿ ಆಯೋಜಿಸಿದ್ದ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಮಾತನಾಡಿದ ಅವರು, ಧಾರ್ಮಿಕ ಕಾರ್ಯಕ್ರಮದಲ್ಲಿ ನಾವೆಲ್ಲರೂ ಪಾಲ್ಗೊಳ್ಳುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಒತ್ತಡ ಜೀವನದಿಂದ ದೂರವಿರಲು ಸಹಾಯಕವಾಗುತ್ತದೆ ಎಂದರು.
ಬಡವರು ವಿವಾಹ ಹೆಸರಿನಲ್ಲಿ ಸಾಲಸೂಲ ಮಾಡಿ ಮದುವೆ ಮಾಡುವುದನ್ನು ತಪ್ಪಿಸಲು ಸಾಮೂಹಿಕ ವಿವಾಹ ಉತ್ತಮ ನಡೆಯಾಗಿದೆ. ಏಕೆಂದರೆ ಬಡವರಿಗೆ ಇತ್ತೀಚಿನ ದಿನಗಳಲ್ಲಿ ವಿವಾಹ ಎಂದರೆ ಹಣಕಾಸಿನ ದೊಡ್ಡ ಸಮಸ್ಯೆಯಾಗುತ್ತಿವೆ. ಇಂಥ ಸಾಮೂಹಿಕ ವಿವಾಹ ಏರ್ಪಡಿಸುವುದರಿಂದ ಬಡವ-ಬಲ್ಲಿದ, ಜಾತಿ, ಧರ್ಮದ ಸಂಕೋಲೆಯಿಂದ ಹೊರ ಬರಲು ಸಹಾಯಕವಾಗುತ್ತದೆ. ಭಾವೈಕ್ಯತೆಯ ಸಂಕೇತ ಬಿಂಬಿಸುವ ಇಂತಹ ಕಾರ್ಯಕ್ರಮಗಳು ಪ್ರತಿಯೊಂದು ಗ್ರಾಮಗಳಲ್ಲಿ ನಡೆಯಬೇಕೆಂದು ಆಶಿಸಿದರು.
ಈ ಭಾಗದಲ್ಲಿ ಹೆಬ್ಬಾಳು ಶ್ರೀಗಳು ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಸಾಮಾಜಿಕವಾಗಿ ಜನರ ಕಲ್ಯಾಣಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಮಾಜದಲ್ಲಿ ಬದಲಾವಣೆ ತರಲು ಶ್ರಮಿಸುತ್ತಿದ್ದಾರೆ. ಅವರ ಕೆಲಸಗಳಿಗೆ ಎಲ್ಲರೂ ಅಗತ್ಯ ಸಹಾಯ, ಸಹಕಾರ ನೀಡಬೇಕು. ಬಸವ ಜಯಂತ್ಯುತ್ಸವದಂದು ಸ್ವಾಮೀಜಿಗಳ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವದಂಪತಿಗಳಿಗೆ ಶುಭ ಹಾರೈಸಿದರು.
ಸಾನ್ನಿಧ್ಯ ವಹಿಸಿ ಮಾತನಾಡಿದ ಹೆಬ್ಬಾಳು ಮಠದ ಶ್ರೀಮಹಾಂತರುದ್ರೇಶ್ವರ ಸ್ವಾಮೀಜಿ, ಭಾರತೀಯ ಸಂಸ್ಕೃತಿಯಲ್ಲಿ ವಿವಹಕ್ಕೆ ಹೆಚ್ಚಿನ ಮಹತ್ವವಿದೆ. ಇಲ್ಲಿನ ಧಾರ್ಮಿಕ ಸಂಸ್ಕಾರಗಳು ವಿಶ್ವಕ್ಕೆ ಮಾದರಿಯಾಗಿವೆ ಎಂದರು.
ವಿವಾಹವಾದ ನವಜೋಡಿಗಳು ಮುಂದಿನ ಬದುಕಿನಲ್ಲಿ ಪರಸ್ಪರ ಅರಿತು ಬಾಳುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಬೇಕು ಎಂದು ಕಿವಿಮಾತು ಹೇಳಿದರು.
Read also : ಹರಿಹರ ಗ್ರಂಥಾಲಯ “ಬಸವ ಜಯಂತಿ”
ಸಾಮೂಹಿಕ ವಿವಾಹ ಮಹೋತ್ಸವದಲ್ಲಿ 20 ಜೋಡಿಗಳು ನೂತನ ದಾಂಪತ್ಯ ಜೀವನಕ್ಕೆ ಕಾಲಿರಿಸಿದವು.
ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಅಣಜಿ ಎಸ್.ಕೆ. ಚಂದ್ರಣ್ಣ, ಹೆಬ್ಬಾಳು ರುದ್ರಮುನಿ, ಬಾಬಣ್ಣ, ಶೇಖರಪ್ಪ, ಶಿವಪ್ಪ, ಪ್ರಶಾಂತ್ ಹಾಗೂ ಗ್ರಾಮಸ್ಥರು, ನವಜೋಡಿಗಳ ತಂದೆ-ತಾಯಿ, ಸಂಬಂಧಿಕರು ಭಾಗವಹಿಸಿದ್ದರು.