ದಾವಣಗೆರೆ (Davanagere): ವೈಮಾನಿಕ ದಾಳಿ ಎದುರಾದಾಗ ಸ್ಥಳೀಯ ಜನರು ಭಯಭೀತರಾಗದೇ ತುರ್ತು ಪರಿಸ್ಥಿತಿಯನ್ನು ಹೇಗೆ ಎದುರಿಸಬೇಕೆಂದು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಅಣುಕು ಪ್ರದರ್ಶನ ಕೈಗೊಳ್ಳಲಾಯಿತು ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ತಿಳಿಸಿದರು.
ಭಾನುವಾರ ನಗರದ ಮಹಾನಗರಪಾಲಿಕೆ ಆರವಣದಲ್ಲಿ ನಡೆದ ಅಣುಕು ಪ್ರದರ್ಶನದ ನಂತರ ಮಾತನಾಡಿದ ಅವರು, ತುರ್ತು ಪರಿಸ್ಥಿತಿ ಎದುರಿಸಲು ಜನರಿಗೆ ತಿಳಿಸುವ ಎಚ್ಚರಿಕೆ ಗಂಟೆಯೂ ಸರಿಯಾದ ಸಮಯಕ್ಕೆ ಶಬ್ದ ಮಾಡುವಂತೆ ಗಮನ ವಹಿಸಲಾಗುತ್ತದೆ. ಗಾಯಾಳುಗಳಾದ ಸಾರ್ವಜನಿಕರನ್ನು ಅಂಬ್ಯುಲೆನ್ಸ್ ಗೆ ವರ್ಗಾಯಿಸುವಾಗ ನಿಧಾನವಾಗಿ ತುಂಬಾ ಜಾಗರೂಕತೆಯಿಂದ ಸ್ಥಳಾಂತರಿಸಬೇಕು. ಯುದ್ದದಂತಹ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಸರ್ಕಾರ ಹೇಗೆ ಕೆಲಸ ನಿರ್ವಹಿಸುತ್ತದೆ ಎಂದು ಅವರು ತಿಳಿಸಿದರು.
ನಗರದಲ್ಲಿ ವೈಮಾನಿಕ ದಾಳಿಯಾದಾಗ ಅದಕ್ಕೆ ಇಲಾಖೆ ಅಧಿಕಾರಿಗಳು ಯಾವ ತರಹ ಕಾರ್ಯಾಚರಣೆ, ಪರಿಹಾರ ಕಂಡುಕೊಳ್ಳುತ್ತೇವೆ ಎನ್ನುವುದನ್ನು ತಿಳಿಸುವ ಅಣುಕು ಪ್ರದರ್ಶನ ಇದಾಗಿದೆ. ಬಾಂಬ್ ಬಿದ್ದಿದೆ ಎಂದು ಮಾಹಿತಿ ತಿಳಿದ ಕೂಡಲೇ ಬಾಂಬ್ ಸ್ಕ್ವಾಡ್ ತಕ್ಷಣ ಹೋಗಿ ಸ್ಥಳೀಯ ಪರಿಸ್ಥಿತಿ ಅರಿತು
ಸ್ಪೋಟಗೊಳ್ಳದ ಬಾಂಬ್ ಗಳನ್ನು ನಿಷ್ಕ್ರಿಯಗೊಳಿಸಿದರು. ಪೊಲೀಸ್ ಅಗ್ನಿಶಾಮಕ ದಳ ಅಂಬುಲೆನ್ಸ್ ಸ್ವಯಂಸೇವಕರು ಬಂದು ಭಯಭೀತರಾದ ಜನರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದರು.
ಗಾಯಾಳುಗಳನ್ನು ಆಸ್ಪತ್ರೆಗೆ ಸ್ಥಳಾಂತರಗೊಳಿಸಲಾಯಿತು. ಪ್ರಥಮ ಚಿಕಿತ್ಸೆಯ ಕ್ಯಾಂಪ್ ಗಳನ್ನು ಪ್ರಾರಂಭಿಸಲಾಯಿತು. ಅವುಗಳ ಪರಿಸ್ಥಿತಿಗನುಗುಣವಾಗಿ ಕಾರ್ಯಗಳನ್ನು ನಿಭಾಯಿಸುವ ಬಗ್ಗೆ ಪ್ರಾತ್ಯಕ್ಷಿಕೆಯನ್ನು ಕೈಗೊಳ್ಳಲಾಯಿತು.
ಬಾಂಬ್ ದಾಳಿಯಾದ ತಕ್ಷಣ ಈ ಅವಘಡ ಸಂಭವಿಸಿರುವ ಬಗ್ಗೆ, ತುರ್ತು ಸಂಖ್ಯೆ 112 ಮುಖಾಂತರ ಜಿಲ್ಲಾ ನಿಯಂತ್ರಣ ಕೊಠಡಿಗೆ ಮಾಹಿತಿಯನ್ನು ನೀಡುತ್ತಿರುವುದು ಹಾಗೂ ಎಚ್ಚರಿಕೆ ಗಂಟೆಯನ್ನು ಘೋಷಿಸುತ್ತಿರಬೇಕು. ಮಾಹಿತಿ ತಲುಪಿದ ಕೂಡಲೇ ತುರ್ತು ಆಪದ್ಬಾಂದವನಾಗಿ 112 ವಾಹನ ಆಗಮಿಸಿದ್ದು, ಸಾರ್ವಜನಿಕರೆಲ್ಲರಿಗೂ ಆತ್ಮಸ್ಥೆರ್ಯವನ್ನು ತುಂಬಿ ಘಟನಾ ಸ್ಥಳದ ಹತ್ತಿರ ಸುಳಿಯದಂತೆ ಜಾಗೃತಿ ವಹಿಸಬೇಕು. ಹಾಗೂ ಸಾರ್ವಜನಿಕರ ರಕ್ಷಣೆಗಾಗಿ ಕಾರ್ಯಪುವೃತ್ತರಾಗಿರುವುದು.
ನಂತರ ಕಂಟ್ರೋಲ್ ರೂಂ ನಿಂದ ಬೆಸ್ಕಾಂ ಇಲಾಖೆಗೆ ಮಾಹಿತಿ ರವಾನೆ ಮಾಡಿ, ಇಂತಹ ಅನಿರೀಕ್ಷಿತ ಸಂದರ್ಭಗಳಲ್ಲಿ, ವಿದ್ಯುತ್ ಅವಘಡಗಳು ಸಂಭವಿಸುವ ಸಾಧ್ಯತೆ ಇರುವುದರಿಂದ, ನೆರೆದಿರುವ ಸಾರ್ವಜನಿಕರಿಗೆ ಹಾಗೂ ರಕ್ಷಣೆಗೆ ಆಗಮಿಸಲಿರುವ ವಿವಿಧ ಇಲಾಖೆಯ ಪಡೆಗಳಿಗೆ ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ವಿದ್ಯುಚ್ಛಕ್ತಿ ಸಂಪರ್ಕವನ್ನು ಕಡಿತಗೊಳಿಸಬೇಕು.
ಘಟನಾ ಸ್ಥಳಕ್ಕೆ ಶ್ವಾನದಳದವನ್ನು ಬಾಂಬ್ ಸ್ಫೋಟ ನಡೆದ ಸ್ಥಳದಲ್ಲಿ ಯಾವುದಾದರೂ ಸಿಡಿಯದೇ ಉಳಿದ ಅಥವಾ ಸಿಡಿಯಬಹುದಾದ ಸ್ಫೋಟಕ ವಸ್ತುಗಳು ಅಥವಾ ಇನ್ನಿತರೆ ಅಪಾಯಕಾರಿ ವಸ್ತುಗಳ ಲಭ್ಯತೆಯ ಬಗ್ಗೆ ಶೋಧನೆಯನ್ನು ನಡೆಸಿ, ಅಪಾಯಕಾರಿ ವಸ್ತುಗಳ ವಾಸನೆಯ ಗ್ರಹಿಕೆಯ ಮುಖಾಂತರ ಶ್ವಾನದಳದ ತಂಡ ಎಲ್ಲೆಡ ಹುಡುಕಾಟವನ್ನು ನಡೆಸಿ, ಅಲ್ಲದೇ ತಾಂತ್ರಿಕ ಉಪಕರಣಗಳ ಸಹಾಯದಿಂದ ಶೋಧ ಕಾರ್ಯವನ್ನು ಮುಂದುವರೆಸಿದ್ದು, ಯಾವುದಾದರೂ ಅಪಾಯಕಾರಿ ವಸ್ತುಗಳು ಕಂಡುಬಂದಲ್ಲಿ ಅವುಗಳನ್ನು ವಶಕ್ಕೆ ಪಡೆದುಕೊಂಡು ಅಥವಾ ಸ್ಫೋಟಕ ವಸ್ತುಗಳಿದ್ದಲ್ಲಿ ಅವುಗಳನ್ನು ನಿಷ್ಕ್ರಿಯಗೊಳಿಸಿ, ಸ್ಥಳಾಂತರಿಸುವ ನಿಟ್ಟಿನಲ್ಲಿ ತೀವ್ರ ಕಾರ್ಯಾಚರಣೆ ನಡೆಸಲಾಗುತ್ತದೆ.
ಇದೀಗ ಆಂಬುಲೆನ್ಸ್ ಆಗಮನ: ಈ ರೀತಿಯ ಅವಘಡಗಳು ಸಂಭವಿಸಿದಲ್ಲಿ ಅದೆಷ್ಟೋ ಅಮಾಯಕರು ಸಾವಿಗೀಡಾಗಿರುತ್ತಾರೆ. ಅಥವಾ ಗಂಭೀರವಾಗಿ ಗಾಯಗೊಂಡಿರುತ್ತಾರೆ, ಅಥವಾ ಜನರು ಸಾವು ಬದುಕಿನ ಮಧ್ಯೆ ಹೋರಾಡುತ್ತಿರುತ್ತಾರೆ. ಇಂತಹ ಸನ್ನಿವೇಶದಲ್ಲಿ ತುರ್ತು ಚಿಕಿತ್ಸೆ ಒದಗಿಸುವ ಸಲುವಾಗಿ ಆಂಬುಲೆನ್ಸ್ ಸ್ಥಳಕ್ಕೆ ಧಾವಿಸಿ ವೈದ್ಯಕೀಯ ಚಿಕಿತ್ಸೆಗಾಗಿ ಏರ್ಪಾಡು ಮಾಡಬೇಕು. ವೈದ್ಯೋ ನಾರಾಯಣೋ ಹರಿ ಎನ್ನುವಂತೆ ವೈದ್ಯರ ಸೇವೆ ಇಂತಹ ಸಂದರ್ಭಗಳಲ್ಲಿ ಅತ್ಯಂತ ಮಹತ್ವದ್ದಾಗಿದ್ದು, ಗಾಯಗೊಂಡಿದ್ದವರನ್ನಲ್ಲ ರಕ್ಷಿಸಿ ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳಾಂತರಿಸುವ ಕಾರ್ಯ ಮಾಡಬೇಕು.
ಅಗ್ನಿಶಾಮಕ ದಳದ ಆಗಮನ: ಅನಿರೀಕ್ಷಿತ ಸ್ಫೋಟದಿಂದಾಗಿ ಮಹಾನಗರ ಪಾಲಿಕೆಯ ಕಟ್ಟಡಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಇದರಿಂದ ಸಾರ್ವಜನಿಕರನ್ನು ರಕ್ಷಿಸಲು ಅಗ್ನಿಶಾಮಕ ದಳ ಆಗಮಿಸಿದ್ದು ಆದಷ್ಟು ಬೇಗನೇ ಬೆಂಕಿಯನ್ನು ನಂದಿಸಲು ಕಾರ್ಯಪ್ರವೃತ್ತರಾಗಿ ಅತ್ಯಂತ ಚಾಕಚಕ್ಯತೆಯಿಂದ ಕರ್ತವ್ಯವನ್ನು ನಿರ್ವಹಿಸಬೇಕು. ಕಟ್ಟಡಕ್ಕೆ ಹೊತ್ತಿಕೊಂಡಿರುವ ಅಗ್ನಿಯನ್ನು ಆರಿಸುವುದು ಮಾತ್ರವಲ್ಲದೇ, ಈ ಅಗ್ನಿ ಅವಘಡದಿಂದ ತೊಂದರೆಗೊಳಗಾಗಿರುವ ನಾಗರೀಕರ ರಕ್ಷಣೆಯ ಜವಾಬ್ದಾರಿಯನ್ನು ಹೊತ್ತುಕೊಂಡು, ಹೆಚ್ಚಿನ ಪ್ರಾಣಹಾನಿಯಾಗದಂತೆ ಗಾಯಾಳುಗಳನ್ನು ಸ್ಥಳಾಂತರಿಸಬೇಕು.
ಅಗ್ನಿಶಾಮಕ ದಳದ ಈ ರಕ್ಷಣಾ ಕಾರ್ಯಕ್ಕೆ ಗೃಹರಕ್ಷಕ ದಳ, ಎನ್.ಸಿ.ಸಿ ಮತ್ತು ಸೌಟ್ಸ್ & ಗೈಡ್ಸ್ ಸಂಸ್ಥೆಗಳ ಸ್ವಯಂ ಸೇವಕರು ಸಹ ಸಾಥ್ ನೀಡುತ್ತಿದ್ದು, ದಾಳಿಗೀಡಾದವರನ್ನು ಶೀಘ್ರವಾಗಿ ಸ್ಥಳಾಂತರ ಮಾಡುತ್ತಿರುವ ಸನ್ನಿವೇಶ ಇದೀಗ ಅಗ್ನಿಶಾಮಕ ದಳದವರು ಕಟ್ಟಡಕ್ಕೆ ಹೊತ್ತಿಕೊಂಡಿದ್ದ ಬೆಂಕಿಯನ್ನು ಆರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ಈ ತುರ್ತು ಸ್ಪಂದನಾ ಕಾರ್ಯಕ್ಕೆ ಎಲ್ಲರೂ ಜೋರಾದ ಚಪ್ಪಾಳೆಯೊಂದಿಗೆ ಅಭಿನಂದಿಸೋಣ.
ಎಸ್.ಡಿ.ಆರ್.ಎಫ್ ತಂಡದ ಆಗಮನ: ರಾಜ್ಯ ವಿಪತ್ತು ಸ್ಪಂದನಾ ಪಡೆ ಇದೀಗ ಘಟನಾ ಸ್ಥಳಕ್ಕೆ ಧಾವಿಸಿದ್ದು, ಈ ಕಟ್ಟಡದ ಅವಶೇಷಗಳಲ್ಲಿ ಸಿಲುಕಿಕೊಂಡಿರುವ ಸಾರ್ವಜನಿಕರನ್ನು ರಕ್ಷಿಸುವ ಸಲುವಾಗಿ, ಹಾಗೂ ಸಂರಕ್ಷಿಸಲು ಸಾಧ್ಯವಾಗದ ಸ್ಥಳದಲ್ಲಿ ಸಿಲುಕಿಕೊಂಡಿರುವ ಜನರನ್ನು ರಕ್ಷಿಸಲು ಇದೀಗ ಗೋಡೆಯನ್ನು ಕೊರೆದು, ತುರ್ತಾಗಿ ಹೊಸ ಮಾರ್ಗವನ್ನು ಸೃಷ್ಟಿಸಬೇಕು. ಸಾಮಾನ್ಯ ಜನರು ತಲುಪಲು ಸಾಧ್ಯವಾಗದಂತಹ ಸಂದರ್ಭದಲ್ಲಿ ಭರವಸೆಯ ಬೆಳಕಾಗಿ ಬಂದು ನೆರವಾಗಿರುವುದು ನಮ್ಮ ಕರ್ನಾಟಕ ರಾಜ್ಯ ವಿಪತ್ತು ಸ್ಪಂದನಾ ಪಡೆ. ತನ್ನ ವಿಶೇಷ ಕಾರ್ಯಕ್ಷಮತೆಯನ್ನು ಪ್ರದರ್ಶಿಸಿ ಸಂಕಷ್ಟದಲ್ಲಿದ್ದ ಸಾರ್ವಜನಿಕರ ರಕ್ಷಣೆ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ವಿಧಿವಿಜ್ಞಾನ ಪ್ರಯೋಗಾಲಯ ಹಾಗೂ ಸೋಕೋ ಸೀನ್ ಆಫ್ ಕ್ರೈಮ್ ಆಫೀಸರ್ ಗಳ ಆಗಮನ: ಘಟನಾ ಸ್ಥಳದಲ್ಲಿ ಲಭ್ಯವಿರುವ ಅಪಾಯಕಾರಿ ಸ್ಪೋಟಕ ವಸ್ತುಗಳ ಮಾದರಿಯನ್ನು ಸಂಗ್ರಹಿಸುವ ಕೆಲಸದಲ್ಲಿ ತೊಡಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ವಿವಿಧ ರೀತಿಯ ಸಾಕ್ಷ್ಯಗಳನ್ನು ಸಂಗ್ರಹಣೆ ಮಾಡಿ, ಈ ದುಷ್ಕೃತ್ಯದ ಹಿಂದಿನ ಸೂತ್ರಧಾರಿಗಳ ಪತ್ತೆ ಹಚ್ಚಲು ನೆರವಾಗುವುದಲ್ಲದೇ, ಈ ರೀತಿಯ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಲು ಸ್ಥಳದಲ್ಲಿ ಸಿಗುವ ಸೂಕ್ಷ್ಮ, ಸಾಕ್ಷ್ಯಾಧಾರಗಳು ಪ್ರಮುಖ ಪಾತ್ರ ವಹಿಸುತ್ತದೆ.
ವಿಧ್ವಂಸವಾಗಿದ್ದ ಕಟ್ಟಡದ ಸುತ್ತಮುತ್ತಲಿನ ಪ್ರದೇಶವನ್ನು ಸಂರಕ್ಷಿಸಿ, ಪುನರ್ ನಿರ್ಮಿಸಿ, ಸ್ವಚ್ಛವಾಗಿ, ಸುಂದರವಾಗಿಡಲು ಇದೀಗ ಮಹಾನಗರ ಪಾಲಿಕೆಯ ಪೌರ ಕಾರ್ಮಿಕರ ತಂಡ ಆಗಮಿಸಿ ತನ್ನ ಕಾಯಕವನ್ನು ಪ್ರಾರಂಭಿಸಿದೆ.
ಸ್ವಚ್ಛ ಸುಂದರ ಪರಿಸರದ ನಿರ್ಮಾಣದಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುವ ಪೌರ ಕಾರ್ಮಿಕರು, ಸದಾ ಎಲೆಮರೆಯ ಕಾಯಿಯಂತೆ ತಮ್ಮ ಕಾರ್ಯವನ್ನು ನಿರ್ವಹಿಸಿ ನಮ್ಮೆಲ್ಲರಿಗಾಗಿ ಅಚ್ಚುಕಟ್ಟಾದ ಶುಚಿಯಾದ ನಗರವನ್ನು ನಿರ್ಮಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಸುರೇಶ್.ಬಿ.ಇಟ್ನಾಳ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಅಪರ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್, ಪಾಲಿಕೆ ಆಯುಕ್ತೆ ರೇಣುಕ, ಬೆಸ್ಕಾಂ, ಆರೋಗ್ಯ ಇಲಾಖೆ, ಅಗ್ನಿಶಾಮಕ ದಳ, ವಿಪತ್ತು ಸ್ಪಂದನಾ ಪಡೆ, ಗೃಹ ರಕ್ಷಕ ಪಡೆ, ಎನ್.ಸಿ.ಸಿ ಮತ್ತು ಸೌಟ್ಸ್ & ಗೈಡ್ಸ್, ಪೌರ ಕಾರ್ಮಿಕರು ಹಾಗೂ ವಿವಿಧ ಇಲಾಖೆಗಳ ಸಿಬ್ಬಂದಿಗಳು ಉಪಸ್ಥಿತರಿದ್ದರು.