ಮೊನ್ನೆ ದಿಲ್ಲಿಯ ಬಿಜೆಪಿ ಕಂಪೋಂಡಿನಿಂದ ತೇಲಿ ಬಂದ ಸುದ್ದಿ ಕರ್ನಾಟಕದ ಕಮಲ ಪಾಳಯದಲ್ಲಿ ಸಂಚಲನ ಮೂಡಿಸಿದೆ. ಕೇಂದ್ರ ಸಚಿವರಾದ ರಾಜನಾಥ್ ಸಿಂಗ್ ಮತ್ತು ನಿತೀನ್ ಗಡ್ಕರಿ ಅವರನ್ನು ಹೊಸ ಆಪರೇಷನ್ನಿಗೆ ನಿಯೋಜಿಸಲಾಗಿದೆ ಎಂಬುದು ಈ ಸುದ್ದಿ.
ಅಂದ ಹಾಗೆ ಕರ್ನಾಟಕದಲ್ಲಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಇಲ್ಲಿನ ಬೆಳವಣಿಗೆಗಳ ಮೇಲೆ ಕಣ್ಣಿಡಲು,ಅದರ ಆಧಾರದ ಮೇಲೆ ಕಾರ್ಯಾಚರಣೆ ನಡೆಸಲು ಬಿಜೆಪಿ ವರಿಷ್ಟರು ಇಬ್ಬರು ನಾಯಕರಿಗೆ ಸೂಚಿಸಿದ್ದರು.
ಈ ಪೈಕಿ ಒಬ್ಬರು ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್,ಮತ್ತೊಬ್ಬರು ಮಹಾರಾಷ್ಟ್ರದ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್. ಹೀಗೆ ಕರ್ನಾಟಕದ ರಾಜಕೀಯ ಬೆಳವಣಿಗೆಗಳ ಮೇಲೆ ಕಣ್ಣಿಡಲು ಈ ಇಬ್ಬರು ನಾಯಕರನ್ನು ನೇಮಿಸಲು ಒಂದು ಕಾರಣವಿತ್ತು.ಅದೆಂದರೆ ಇಬ್ಬರೂ ನಾಯಕರು ಕರ್ನಾಟಕಕ್ಕೆ ಆತುಕೊಂಡ ರಾಜ್ಯದವರು.ಮತ್ತು ಇಲ್ಲಿನ ಎಲ್ಲ ಪಕ್ಷಗಳ ಮುಖಂಡರೊಂದಿಗೆ ಸಂಪರ್ಕ ಇದ್ದವರು ಎಂಬುದು. ಕುತೂಹಲದ ಸಂಗತಿ ಎಂದರೆ ಬಿಜೆಪಿ ವರಿಷ್ಟರ ಈ ಲೆಕ್ಕಾಚಾರ ಹುಸಿಯಾಗಲಿಲ್ಲ.
ಅದರಲ್ಲೂ ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಕರ್ನಾಟಕದ ರಾಜಕಾರಣದ ಒಂದು ಮಹತ್ವದ ಅಂಶವನ್ನು ಹಿಡಿದುಕೊಂಡು ವಿವರವಾಗಿ ಅಧ್ಯಯನ ಮಾಡಿದರು.
ಅದರ ಪ್ರಕಾರ,2023 ರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿದ ಕಾಂಗ್ರೆಸ್ ಶೇಕಡಾ 42.88 ರಷ್ಟು ಮತಗಳನ್ನು ಪಡೆದಿದ್ದರೆ,ಇದಕ್ಕೆ ಪ್ರತಿಯಾಗಿ ಬಿಜೆಪಿ ಮತ್ತು ಜೆಡಿಎಸ್ ಶೇಕಡಾ 49.29 ರಷ್ಟು ಮತಗಳನ್ನು ಹಂಚಿಕೊಂಡಿದ್ದವು.
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ವಿರೋಧಿ ಮತಗಳನ್ನು ಕನ್ ಸಾಲಿಡೇಟ್ ಮಾಡಿದರೆ ಕಾಂಗ್ರೆಸ್ ಓಟಕ್ಕೆ ಕಡಿವಾಣ ಹಾಕಬಹುದು ಎಂಬುದು ಪ್ರಮೋದ್ ಸಾವಂತ್ ಲೆಕ್ಕಾಚಾರ.
ಈ ಲೆಕ್ಕಾಚಾರಕ್ಕೆ ಪೂರಕವಾಗಿ ಕೇಂದ್ರ ಸಚಿವ ಅಮಿತ್ ಷಾ ಅವರಿಗೆ ರಿಪೋರ್ಟು ಕಳಿಸಿಕೊಟ್ಟ ಪ್ರಮೋದ್ ಸಾವಂತ್:ಕರ್ನಾಟಕದ ನೆಲೆಯಲ್ಲಿ ಬಿಜೆಪಿ-ಜೆಡಿಎಸ್ ನಡುವೆ ಮೈತ್ರಿ ಸಾಧಿತವಾದರೆ 2024 ರ ಲೋಕಸಭಾ ಚುನಾವಣೆಯಲ್ಲಿ ಇಪ್ಪತ್ತು ಪ್ಲಸ್ ಸೀಟುಗಳನ್ನು ಗೆಲ್ಲಬಹುದು. ಇಲ್ಲದಿದ್ದರೆ ಬಿಜೆಪಿಯ ಗಳಿಕೆ ಪ್ರಮಾಣ ಆರರಿಂದ ಎಂಟಕ್ಕೆ ಸೀಮಿತವಾಗಬಹುದು ಎಂದು ವಿವರಿಸಿದ್ದರು.
ಯಾವಾಗ ಪ್ರಮೋದ್ ಸಾವಂತ್ ಇಂತಹದೊಂದು ರಿಪೋರ್ಟು ಕಳಿಸಿಕೊಟ್ಟರೋ? ಇದಾದ ನಂತರ ಅಮಿತ್ ಷಾ ಕೂಡಾ ಈ ವಿಷಯದಲ್ಲಿ ಆಸ್ಥೆ ವಹಿಸಿ ಜೆಡಿಎಸ್ ವರಿಷ್ಟರಾದ ದೇವೇಗೌಡ ಮತ್ತು ಕುಮಾರಸ್ವಾಮಿ ಅವರ ಜತೆ ಮಾತುಕತೆ ನಡೆಸಿದರು.ಪ್ರಧಾನಿ ನರೇಂದ್ರಮೋದಿಯವರ ಇಶಾರೆಯ ಮೇಲೆ ಬಿಜೆಪಿ-ಜೆಡಿಎಸ್ ಮೈತ್ರಿ ವಿಷಯವನ್ನು ಫೈನಲೈಸ್ ಮಾಡಿದರು.
ಮುಂದೆ ಈ ಮೈತ್ರಿ ಎಷ್ಟು ಪವರ್ ಫುಲ್ಲಾಗಿ ವರ್ಕ್ ಔಟ್ ಆಯಿತೆಂದರೆ ಲೋಕಸಭಾ ಚುನಾವಣೆಯಲ್ಲಿ ಅದು ಹತ್ತೊಂಬತ್ತು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತು. ಗಮನಿಸಬೇಕಾದ ಸಂಗತಿ ಎಂದರೆ ಅವತ್ತು ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ ಕನಿಷ್ಟ 22 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಲೆಕ್ಕಾಚಾರ ಕಾಂಗ್ರೆಸ್ಸಿಗಿತ್ತಾದರೂ ಬಿಜೆಪಿ-ಜೆಡಿಎಸ್ ಮಿತ್ರಕೂಟ ಅದನ್ನು ವಿಫಲಗೊಳಿಸಿತ್ತು.
ಯಾವಾಗ ಇದು ಸಾಧ್ಯವಾಯಿತೋ? ಆಗ ಎರಡನೇ ಹಂತದ ಆಪರೇಷನ್ನಿಗೆ ಇಳಿದ ಪ್ರಮೋದ್ ಸಾವಂತ್ ಮತ್ತು ದೇವೇಂದ್ರ ಫಡ್ನವೀಸ್ ಮತ್ತೊಂದು ಅಂಶವನ್ನು ಮುಂದಿಟ್ಟುಕೊಂಡು ವರ್ಕ್ ಔಟ್ ಮಾಡತೊಡಗಿದರು.
READ ALSO : Political Analysis | ಶುರುವಾಗಲಿದೆ ನಿಖಿಲ್ ಪಟ್ಟಾಭಿಷೇಕ ಯಾತ್ರೆ
ಅದೆಂದರೆ ಸಿಎಂ ಸಿದ್ಧರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಮಧ್ಯೆ ಶೀತಲ ಸಮರವಾಗಿ ಮಾರ್ಪಟ್ಟಿದ್ದ ಅಧಿಕಾರ ಹಂಚಿಕೆ ಒಪ್ಪಂದ.
ಅದರ ಪ್ರಕಾರ ಎರಡೂವರೆ ವರ್ಷಗಳ ಕಾಲ ಸಿದ್ದರಾಮಯ್ಯ ಸಿಎಂ.ಎರಡೂವರೆ ವರ್ಷಗಳ ಕಾಲ ಡಿ.ಕೆ.ಶಿವಕುಮಾರ್ ಸಿಎಂ ಅಂತ ಒಂದು ಬಣ ಹೇಳತೊಡಗಿದರೆ,ನೋ,ನೋ ಸಿದ್ಧರಾಮಯ್ಯ ಅವರೇ ಐದು ವರ್ಷಗಳ ಕಾಲ ಸಿಎಂ ಅಂತ ಮತ್ತೊಂದು ಬಣ ವಾದಿಸತೊಡಗಿತ್ತು. ಇಂತಹ ವಾದಗಳ ಎಳೆ ಹಿಡಿದ ಪ್ರಮೋದ್ ಸಾವಂತ್ ಮತ್ತು ದೇವೇಂದ್ರ ಫಡ್ನವೀಸ್ ಒಂದು ತೀರ್ಮಾನಕ್ಕೆ ಬಂದಿದ್ದರು.
ಅದರ ಪ್ರಕಾರ,ಅಧಿಕಾರ ಹಂಚಿಕೆಯ ಹಸರಿನಲ್ಲಿ ಸಿದ್ಧರಾಮಯ್ಯ ಅವರು ಸಿಎಂ ಹುದ್ದೆಯನ್ನು ತೊರೆಯುವುದು ಅನಿವಾರ್ಯವಾದರೆ ಕಾಂಗ್ರೆಸ್ಸಿನ ಬಹುತೇಕ ಶಾಸಕರು ಪಕ್ಷ ತೊರೆಯಲು ಸಜ್ಜಾಗುತ್ತಾರೆ ಎಂಬುದು.
ಹೀಗಾಗಿ ಈಗಿನಿಂದಲೇ ಕಾಂಗ್ರೆಸ್ಸಿನಲ್ಲಿರುವ ಸಿದ್ಧರಾಮಯ್ಯ ಬಣದ ಶಾಸಕರೊಂದಿಗೆ ಸಂಪರ್ಕದಲ್ಲಿದ್ದರೆ ದೊಡ್ಡ ಬಣವನ್ನು ಬಿಜೆಪಿ ಮಿತ್ರಕೂಟದ ಕಡೆ ಸೆಳೆದುಕೊಳ್ಳಬಹುದು ಎಂಬ ಲೆಕ್ಕಾಚಾರಕ್ಕಿಳಿದ ಪ್ರಮೋದ್ ಸಾವಂತ್ ಮತ್ತು ದೇವೇಂದ್ರ ಫಡ್ನವೀಸ್ ವಿದ್ಯುಕ್ತವಾಗಿಯೇ ಆ ಕಾರ್ಯಕ್ಕಿಳಿದರು.
ಇದರ ಪರಿಣಾಮವಾಗಿ ಈ ಜೋಡಿಯ ಸಂಪರ್ಕಕ್ಕೆ ಬಂದವರು ಕರ್ನಾಟಕದ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ. ಅಂದ ಹಾಗೆ ಜಾರಕಿಹೊಳಿ ಮತ್ತು ಡಿ.ಕೆ.ಶಿವಕುಮಾರ್ ಅವರ ಮಧ್ಯೆ ಹೊಯ್ದಕ್ಕಿ ಬೇಯುವುದಿಲ್ಲ ಎಂಬುದು ರಹಸ್ಯವೇನಲ್ಲ.
ಹೀಗಾಗಿ ಡಿಕೆಶಿ ಮುಖ್ಯಮಂತ್ರಿಯಾಗುವುದನ್ನು ಜಾರಕಿಹೊಳಿ ಸಹಿಸುವುದೂ ಇಲ್ಲ. ಪರಿಣಾಮ? ಸಾವಂತ್ ಮತ್ತು ಫಡ್ನವೀಸ್ ಅವರ ಲಿಂಕಿಗೆ ಬಂದ ಜಾರಕಿಹೊಳಿ ದಿನಕಳೆದಂತೆ ತಮ್ಮ ಬಣದ ಶಾಸಕರ ಸಂಖ್ಯೆ ಹೆಚ್ಚಾಗುವಂತೆ ನೋಡಿಕೊಂಡರು.
ಹೀಗೆ ಅವತ್ತಿನಿಂದ ಬೆಳೆಯುತ್ತಾ ಹೋದ ಜಾರಕಿಹೊಳಿ ಬಣದ ಶಾಸಕರ ಸಂಖ್ಯೆ ನಲವತ್ತಕ್ಕೇರಿ ಅಲ್ಲೇ ನಿಂತಿದೆ. ಈ ಕ್ಷಣಕ್ಕೂ ಇರುವ ಮಾಹಿತಿಯೆಂದರೆ ಡಿಕೆಶಿ ಕರ್ನಾಟಕದ ಸಿಎಂ ಆಗುವುದು ನಿಕ್ಕಿಯಾದರೆ ಸತೀಶ್ ಜಾರಕಿಹೊಳಿ ಅಂಡ್ ಟೀಮು ಕಾಂಗ್ರೆಸ್ ತೊರೆದು ಪ್ರತ್ಯೇಕ ಗುಂಪಾಗಿ ನಿಲ್ಲುವುದು ಖಚಿತ.
ಹಾಗಂತಲೇ ಪ್ರಮೋದ್ ಸಾವಂತ್ ಮತ್ತು ದೇವೇಂದ್ರ ಫಡ್ನವೀಸ್ ಇಂತಹ ಸಾಧ್ಯತೆಗಳ ಮೇಲೆ ಕಣ್ಣು ನೆಟ್ಟು ಕುಳಿತಿದ್ದಾರೆ. ಆದರೆ ಅವರ ಪ್ಲಾನು ವರ್ಕ್ ಔಟ್ ಆಗಬೇಕು ಎಂದರೆ ಸಿಎಂ ಸಿದ್ಧರಾಮಯ್ಯ ಅವರು ಡಿ.ಕೆ.ಶಿವಕುಮಾರ್ ಅವರಿಗೆ ಅಧಿಕಾರ ಹಸ್ತಾಂತರ ಮಾಡುವ ಒತ್ತಡಕ್ಕೆ ಸಿಲುಕಬೇಕು.ಒಂದು ವೇಳೆ ಇದು ಸಾಧ್ಯವಾಗದೆ ಸಿದ್ಧರಾಮಯ್ಯ ಅವರೇ ಮುಂದುವರಿದರೆ ಸತೀಶ್ ಜಾರಕಿಹೊಳಿ ಅಂಡ್ ಗ್ಯಾಂಗು ಸುಮ್ಮನಾಗುತ್ತದೆ.
ಒಂದು ವೇಳೆ ಹಾಗಾದರೆ ಪ್ರಮೋದ್ ಸಾವಂತ್ ಮತ್ತು ದೇವೇಂದ್ರ ಫಡ್ನವೀಸ್ ಅಸಹಾಯಕರಾಗುತ್ತಾರೆ.ಮತ್ತು ಅವರ ಆಪರೇಷನ್ ಗೆ ಬ್ರೇಕ್ ಬೀಳುತ್ತದೆ. ಹೀಗೆ ಸಾವಂತ್ ಮತ್ತು ಫಡ್ನವೀಸ್ ಅವರ ಆಪರೇಷನ್ನಿಗೆ ಬ್ರೇಕ್ ಬೀಳಬಹುದು ಎಂಬ ಕಾರಣಕ್ಕಾಗಿಯೇ ಮೋದಿ-ಅಮಿತ್ ಶಾ ಈಗ ಹೊಸ ವಿಂಗನ್ನು ಆಪರೇಷನ್ನಿಗೆ ಇಳಿಸಿದ್ದಾರೆ. ಬಿಜೆಪಿ ಮೂಲಗಳ ಪ್ರಕಾರ;ಈ ವಿಂಗ್ ನಲ್ಲಿರುವವರು ಕೇಂದ್ರ ಸಚಿವರಾದ ನಿತೀನ್ ಗಡ್ಕರಿ ಮತ್ತು ರಾಜನಾಥ್ ಸಿಂಗ್.
ಡಿಕೆಶಿಗೆ ಸಿಎಂ ಪಟ್ಟ ಸಿಗದಿದ್ದರೆ? (Political analysis)
ಅಂದ ಹಾಗೆ ಸಾವಂತ್ ಮತ್ತು ಫಡ್ನವೀಸ್ ಅವರು ಸಿಎಂ ಹುದ್ದೆಗೆ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸನ್ನಿವೇಶ ನಿರ್ಮಾಣವಾದರೆ ಏನು ಮಾಡಬೇಕು?ಎಂಬ ಆಪರೇಷನ್ನಿನ ಭಾಗವಾಗಿದ್ದರೆ,ಈಗ ಫೀಲ್ಡಿಗಿಳಿದಿರುವ ಗಡ್ಕರಿ ಮತ್ತು ಸಿಂಗ್ ಅವರು:ಸಿದ್ಧು ಸಿಎಂ ಹುದ್ದೆಯಿಂದ ಕೆಳಗಿಳಿಯದೆ ಹೋದರೆ ಏನು ಮಾಡಬಹುದು? ಎಂಬ ಆಪರೇಷನ್ನಿಗೆ ಕೈ ಹಾಕಿದ್ದಾರೆ. ಅವರ ಪ್ರಕಾರ,ನಿಗದಿತ ಸಮಯಕ್ಕೆ ಸರಿಯಾಗಿ ಸಿದ್ದರಾಮಯ್ಯ ತಮಗೆ ಖುರ್ಚಿ ಬಿಟ್ಟು ಕೊಡದಿದ್ದರೆ ಡಿ.ಕೆ.ಶಿವಕುಮಾರ್ ಕನಲುವುದು ನಿಶ್ಚಿತ.
ಹೀಗೆ ಕನಲುವ ಅವರು ಕನಿಷ್ಟ ನಲವತ್ತರಷ್ಟು ಶಾಸಕರ ಜತೆಗೂಡಿ ಕಾಂಗ್ರೆಸ್ ತೊರೆಯಲು ಸಜ್ಜಾಗಬಹುದು ಎಂಬುದು ಬಿಜೆಪಿ ವರಿಷ್ಟರ ಲೆಕ್ಕಾಚಾರ. ಮೂಲಗಳ ಪ್ರಕಾರ,ಇಂತಹ ಸಾಧ್ಯತೆಗಳ ಬಗ್ಗೆ ರಾಜನಾಥ್ ಸಿಂಗ್ ಮತ್ತು ನಿತೀನ್ ಗಡ್ಕರಿ ಮೂರು ಬಾರಿ ಅಜ್ಞಾತ ಮೂಲಗಳ ಜತೆ ಚರ್ಚಿಸಿದ್ದಾರೆ.
ಅಷ್ಟೇ ಅಲ್ಲ,ದೇಶದ ಪವರ್ ಫುಲ್ ಇಂಡಸ್ಟ್ರಿಯಲಿಸ್ಟ್ ಅವರ ಮೂಲಕ ದುಬೈನಲ್ಲಿ ಇಂಥದೇ ಅಜ್ಞಾತ ಮೂಲಗಳ ಜತೆ ರಾಜನಾಥ ಸಿಂಗ್ ಚರ್ಚಿಸಿದ್ದಾರೆ. ಈ ಚರ್ಚೆಯ ಸಂದರ್ಭದಲ್ಲಿ ಪರ್ಯಾಯ ಸರ್ಕಾರವನ್ನು ಕರ್ನಾಟಕದಲ್ಲಿ ಮೇಲೆಬ್ಬಿಸಬಹುದೇ?ಎಂಬ ವಿಷಯದ ಬಗ್ಗೆಯೂ ಮಾತುಕತೆಯಾಗಿದೆ.
ಅರ್ಥಾತ್,ಡಿ.ಕೆ.ಶಿವಕುಮಾರ್ ಅವರಿಗೆ ಸಿಎಂ ಹುದ್ದೆ ಸಿಗದಿದ್ದರೆ ಏನೇನಾಗಬಹುದು?ಎಂಬ ಸಾಧ್ಯತೆಗಳ ಬಗ್ಗೆ ನಿತೀನ್ ಗಡ್ಕರಿ ಮತ್ತು ರಾಜನಾಥ್ ಸಿಂಗ್ ಮಾಡುತ್ತಿರುವ ವರ್ಕ್ ಔಟ್ ಪ್ರಗತಿಯಲ್ಲಿದೆ.
ಅಲ್ಲಿಗೆ ಬಿಜೆಪಿ ವರಿಷ್ಟರು ಏಕಕಾಲಕ್ಕೆ ಸಿದ್ದರಾಮಯ್ಯ ಬಣ ಮತ್ತು ಡಿಕೆಶಿ ಬಣಗಳ ಮೇಲೆ ಬಲೆ ಹಾಸಿ ಆಟ ಮುಂದುವರಿಸಿದ್ದಾರೆ.ಇದು ಮುಂದೇನು ಸ್ವರೂಪ ಪಡೆಯಲಿದೆಯೋ?ಕಾದು ನೋಡಬೇಕು.
ಆಂಧ್ರದಲ್ಲಿ ಧೂಳೆಬ್ಬಿಸಿದ ಕರ್ನಾಟಕ (Political analysis)
ಈ ಮಧ್ಯೆ ಕರ್ನಾಟಕದ ರಾಜಕಾರಣ ನೆರೆಯ ಆಂಧ್ರದಲ್ಲಿ ಧೂಳೆಬ್ಬಿಸಿದೆ.ಕಾರಣ? ಕರ್ನಾಟಕ ವಿಧಾನಸಭೆಗೆ ತಕ್ಷಣವೇ ಚುನಾವಣೆ ನಡೆದರೆ ಫಲಿತಾಂಶ ಏನಾಗಲಿದೆ ಎಂಬ ಚರ್ಚೆ. ಈ ಕುರಿತಂತೆ ಆಂಧ್ರ ಮೂಲದ ಪೀಪಲ್ಸ್ ಪಲ್ಸ್ ನಡೆಸಿರುವ ಸರ್ವೆ ರಿಪೋರ್ಟು ಕಳೆದ ಶನಿವಾರ ಆಂಧ್ರಪ್ರದೇಶದ ಟಿವಿ ಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಕರ್ನಾಟಕದ ಪ್ರಸಕ್ತ ಸನ್ನಿವೇಶವನ್ನು ಅಧ್ಯಯನ ಮಾಡಿ ಪೀಪಲ್ಸ್ ಪಲ್ಸ್ ಸಂಗ್ರಹಿಸಿರುವ ಮಾಹಿತಿಯ ಪ್ರಕಾರ,ಇಲ್ಲಿ ತಕ್ಷಣವೇ ವಿಧಾನಸಭೆ ಚುನಾವಣೆ ನಡೆದರೆ ಬಿಜೆಪಿ ಬಹುಮತ ಗಳಿಸಿ ಅಧಿಕಾರ ಹಿಡಿಯಲಿದೆಯಂತೆ.
ಅದರ ಪ್ರಕಾರ ಬಿಜೆಪಿ 136 ರಿಂದ 159 ಕ್ಷೇತ್ರಗಳಲ್ಲಿ ಗೆಲುವು ಗಳಿಸಲಿದ್ದು,ಕಾಂಗ್ರೆಸ್ ಪಕ್ಷ 62 ರಿಂದ 82 ಕ್ಷೇತ್ರಗಳಲ್ಲಿ ಗೆಲುವು ಗಳಿಸಲಿದೆ.
ಈ ಮಧ್ಯೆ ಬಿಜೆಪಿಯ ಮಿತ್ರ ಪಕ್ಷ ಜೆಡಿಎಸ್ ಮೂರರಿಂದ ಆರು ಕ್ಷೇತ್ರಗಳಲ್ಲಿ ಜಯ ಗಳಿಸಲಿದೆ ಎಂದಿರುವ ವರದಿ,ಜಾತಿವಾರು ಮತಗಳು ಹೇಗೆ ಚಲಾವಣೆಯಾಗಲಿವೆ? ಅಂತ ವಿವರಿಸಿದೆ. ಅದರ ಪ್ರಕಾರ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶೇಕಡಾ 36 ರಷ್ಟು ಮತಗಳನ್ನು ಪಡೆದಿದ್ದ ಬಿಜೆಪಿ ಈಗ ಶೇಕಡಾ 51 ರಷ್ಟು ಮತಗಳನ್ನು ಗಳಿಸಲಿದೆ.
ಇದೇ ರೀತಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶೇಕಡಾ 42.88 ರಷ್ಟು ಮತಗಳನ್ನು ಗಳಿಸಿದ್ದ ಕಾಂಗ್ರೆಸ್ ಈಗ ಚುನಾವಣೆ ನಡೆದರೆ ಶೇಕಡಾ 40.3 ರಷ್ಟು ಮತಗಳನ್ನು ಗಳಿಸಲಿದೆ. ಇನ್ನು ಕಳೆದ ಚುನಾವಣೆಯಲ್ಲಿ ಶೇಕಡಾ 13.29 ರಷ್ಟು ಮತಗಳನ್ನು ಗಳಿಸಿದ್ದ ಜೆಡಿಎಸ್ ಈ ಬಾರಿ ಕುಸಿತ ಕಾಣಲಿದ್ದು ಶೇಕಡಾ 3.6 ರಷ್ಟು ಮತಗಳನ್ನಷ್ಟೇ ಗಳಿಸಲಿದೆ ಎಂಬುದು ಪೀಪಲ್ಸ್ ಪಲ್ಸ್ ವರದಿಯ ಸಾರಾಂಶ.
ಅರ್ಥಾತ್, ಬಿಜೆಪಿ ಈ ಬಾರಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಮತಗಳನ್ನು ಸೆಳೆದು ತನ್ನ ಶಕ್ತಿಯನ್ನು ವೃದ್ಧಿಸಿಕೊಳ್ಳಲಿದೆ.
ಅಂದ ಹಾಗೆ ಕಳೆದ ವಿದಾನಸಭಾ ಚುನಾವಣೆಯ ಸಂದರ್ಭದಲ್ಲಿ ಇದೇ ಸಂಸ್ಥೆ ನೀಡಿದ ವರದಿ, ಕಾಂಗ್ರೆಸ್ ಪಕ್ಷ ತೊಂಭತ್ತೊಂಬತ್ತು ಪ್ಲಸ್ ಕ್ಷೇತ್ರಗಳಲ್ಲಿ ಗೆಲುವು ಗಳಿಸಲಿದೆ ಎಂದು ಹೇಳಿತ್ತು.
ಈಗ ಅದರ ಲೆಕ್ಕಾಚಾರದ ಪ್ರಕಾರ ಬಿಜೆಪಿಯ ಗ್ರಾಫು ಏರಿದೆ. ಹೀಗೆ ಅದು ಕೊಟ್ಟಿರುವ ವರದಿಯ ಬಗ್ಗೆ ಏನೇ ಅಭಿಪ್ರಾಯಗಳಿರಲಿ,ಆದರೆ ಇಂತಹ ವರದಿಗಳನ್ನು ಬಿಜೆಪಿ ವರಿಷ್ಟರು ಬಹುವಾಗಿ ನಂಬಿರುವಂತೆ ಕಾಣುತ್ತಿದೆ. ಹೀಗಾಗಿ ಕರ್ನಾಟಕದಲ್ಲಿ ಪರ್ಯಾಯ ಸರ್ಕಾರ ರಚಿಸುವ ಇಲ್ಲವೇ ಮಧ್ಯಂತರ ಚುನಾವಣೆ ನಡೆಸುವ ಸನ್ನಿವೇಶ ನಿರ್ಮಾಣವಾಗುತ್ತಿದೆ ಅಂತ ಅದು ಬಲವಾಗಿ ನಂಬಿರುವಂತೆ ಕಾಣುತ್ತಿದೆ.
ಲಾಸ್ಟ್ ಸಿಪ್ Political analysis
ಅಂದ ಹಾಗೆ ಕರ್ನಾಟಕ ಬಿಜೆಪಿಯಲ್ಲಿ ಶುರುವಾಗಿದ್ದ ನಾಯಕತ್ವ ವಿವಾದಕ್ಕೆ ಬ್ರೇಕ್ ಬೀಳಲು ಬಿಜೆಪಿ ವರಿಷ್ಟರ ಈ ಲೇಟೆಸ್ಟು ಲೆಕ್ಕಾಚಾರವೇ ಕಾರಣ.
ಹಾಲಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಬದಲಿಸಬೇಕು ಅಂತ ಪಟ್ಟು ಹಿಡಿದ ಭಿನ್ನರಿಗೆ ವರಿಷ್ಟರು ಮಣೆ ಹಾಕಿಲ್ಲವಾದರೂ,ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಕರ್ನಾಟಕಕ್ಕೆ ಕಳಿಸಿ ವಿಜಯೇಂದ್ರ ಅವರ ಮರು ಪಟ್ಟಾಭಿಷೇಕಕ್ಕೂ ವರಿಷ್ಟರು ಆಸಕ್ತಿ ತೋರುತ್ತಿಲ್ಲ. ಅವರ ಈ ನಿರಾಸಕ್ತಿಗೆ ಕರ್ನಾಟಕದ ರಾಜಕೀಯ ಬೆಳವಣಿಗೆಗಳು ಯಾವ ತಿರುವು ಪಡೆಯಬಹುದು?ಎಂಬ ನಿರೀಕ್ಚೆಯೇ ಕಾರಣ.
ಆರ್.ಟಿ.ವಿಠ್ಠಲಮೂರ್ತಿ