ದಾವಣಗೆರೆ (Davanagere): ಗಾಜಾ ಪಟ್ಟಿ ಮೇಲೆ ಇಸ್ರೇಲ್ ನಡೆಸಿರುವ ದಾಳಿಯನ್ನು ಖಂಡಿಸಿ ದಾವಣಗೆರೆಯಲ್ಲಿ ಸಿಪಿಐ, ಸಿಪಿಐ(ಎಂ), ಎಸ್.ಯು.ಸಿ. ಐ, ಕರ್ನಾಟಕ ಜನಶಕ್ತಿ, ಕಟ್ಟಡ ಕಾರ್ಮಿಕ ಸಂಘಟನೆ ಮತ್ತು ಪ್ರಗತಿಪರ ಸಂಘಟನೆಗಳು ಜಂಟಿಯಾಗಿ ಪ್ರತಿಭಟನೆ ನಡೆಸಿದವು.
ನಗರದ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ವಿವಿಧ ಸಂಘಟನೆಗಳು,ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ನಿರಂತರ ನಡೆಸಿದ ವಾಯುದಾಳಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 400 ದಾಟಿದೆ. ಸಶಸ್ತ್ರ ಗುಂಪು ಹಮಾಸ್ ನಡೆಸುತ್ತಿರುವ ಪ್ಯಾಲೇಸ್ಟಿನಿಯನ್ ಆರೋಗ್ಯ ಅಧಿಕಾರಿಗಳು, ದಾಳಿಯಲ್ಲಿ 500 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಹೇಳಿದ್ದು, ಇದು ಇಸ್ರೇಲ್ ನಡೆಸಿದ ಪೈಶಾಚಿಕ ಕೃತ್ಯ ಎಂದು ಕಿಡಿಕಾರಿದರು.
ಅಂತರರಾಷ್ಟ್ರೀಯ ನೀರು ಗಡಿಯಲ್ಲಿ ಗಾಜಾಕ್ಕೆ ಆಹಾರ ಸಹಾಯವನ್ನು ಮಾಡಲು ತೆರಳುತ್ತಿದ್ದ ಮೆಕ್ಲೀನ್ ಆಫ್ ದಿ ಫ್ರೀಡಂ ಫ್ಲಾಟಿಲ್ಲಾ ಗಾಜಾ ಹಡಗಿನ ಮೇಲೆ ಇಸ್ರೇಲ್ ದಾಳಿ ಮಾಡಿರುವುದು ಅತ್ಯಂತ ಹೇಯ ಮತ್ತು ಖಂಡನೀಯ. ಅಮೇರಿಕ ಮತ್ತು ಅದರ ಮಿತ್ರ ರಾಷ್ಟ್ರಗಳ ಬೆಂಬಲದಿಂದ ವಿಶ್ವಸಂಸ್ಥೆ ಮತ್ತು ಜಾಗತಿಕ ಸಮುದಾಯದ ಯಾವ ಎಚ್ಚರಿಕೆಗಳನ್ನೂ ಗೌರವಿಸದೆ ಇಸ್ರೇಲ್ ಮಾನವ ಹತ್ಯೆಗಳ ಚಟುವಟಿಕೆಗಳಲ್ಲಿ ತೊಡಗಿದೆ. ದುರದೃಷ್ಟವಶಾತ್ ಭಾರತ ಸರ್ಕಾರವು ತನ್ನ ಚಾರಿತ್ರಿಕವಾದ – ಪ್ಯಾಲೆಸ್ತೀನ್ ಪರವಾದ – ಧೋರಣೆಯನ್ನು ಕೈಬಿಟ್ಟು ಇಸ್ರೇಲನ್ನು ಓಲೈಸುವ ಕೆಲಸವನ್ನು ಮಾಡುತ್ತಿದೆ. ಭಾರತದ ಸ್ವಾತಂತ್ರ್ಯ ಹೋರಾಟ ಮತ್ತು ಸಾಮ್ರಾಜ್ಯಶಾಹಿ-ವಿರೋಧಿ ನಿಲುವಿಗೆ ಸಂಪೂರ್ಣ ವಿರುದ್ಧ ದಿಕ್ಕಿನಲ್ಲಿ ಭಾರತ ಸರ್ಕಾರದ ನಿಲುವು ಬದಲಾಗಿರುವುದು ಅವಮಾನಕರ ವಿಷಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಹಿನ್ನೆಲೆಯಲ್ಲಿ, ಜೂನ್ 17 ರಂದು ಪ್ಯಾಲೆಸ್ತೀನ್ ಜನರ ಪರವಾಗಿ ರಾಷ್ಟ್ರೀಯ ಸೌಹಾರ್ಧತಾ ದಿನವನ್ನು ದೇಶಾದ್ಯಂತ ಆಚರಿಸಲು ಎಡ ಪಕ್ಷಗಳು ಕರೆ ನೀಡಿವೆ. ಶಾಂತಿಪ್ರಿಯ, ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ಶಕ್ತಿಗಳು ಈ ಕರೆಯನ್ನು ಯಶಸ್ವಿ ಮಾಡಬೇಕು. ಬೆಂಗಳೂರಿನಲ್ಲಿ ಜೂನ್ 17 ರಂದು ಮಧ್ಯಾನ್ನ 3 ಗಂಟೆಗೆ ಸಿಪಿಐ ರಾಜ್ಯ ಕಚೇರಿ ಘಾಟೆ ಭವನ, ಮಲ್ಲೇಶ್ವರ ಇಲ್ಲಿ ಸೌಹಾರ್ಧತಾ ಕಾರ್ಯಕ್ರಮವನ್ನು ನಡೆಸಲು ತೀರ್ಮಾನ ಮಾಡಲಾಗಿದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಆವರಗೆರೆ ಚಂದ್ರು, ಆವರಗೆರೆ ಹೆಚ್.ಜಿ.ಉಮೇಶ್, ಕೆ.ಹೆಚ್. ಆನಂದರಾಜ್, ಕೈದಾಳ್ ಮಂಜುನಾಥ್, ಪವಿತ್ರ, ಸತೀಶ್ ಅರವಿಂದ್, ಕುಕ್ಕವಾಡ ಮಂಜುನಾಥ್, ತಿಪ್ಪೇಸ್ವಾಮಿ, ವಿ.ಲಕ್ಷ್ಮಣ್, ಯಾರಗುಂಟೆ ಸುರೇಶ್, ಷಣ್ಮುಖ ಸ್ವಾಮಿ, ಮಹಮ್ಮದ್ ರಫೀಕ್, ಭಾರತಿ, ಸರೋಜಾ, ಅನಿಲ್, ಐರಣಿ ಚಂದ್ರು, ಸೋಮಶೇಖರ್, ತಿಪ್ಪೇಶ್, ಯಲ್ಲಪ್ಪ, ಪರಶುರಾಮ, ರಾಜು, ರಂಗನಾಥ್ ಮುಂತಾದವರು ಭಾಗಿಯಾಗಿದ್ದರು.