ದಾವಣಗೆರೆ : ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಮಾರುಕಟ್ಟೆ ಮಧ್ಯಪ್ರವೇಶದಡಿ ಜಿಲ್ಲೆಯಲ್ಲಿ 5 ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ಜನವರಿ 8 ರಿಂದ ಪ್ರಾರಂಭಿಸಿದ್ದು ಇದುವರೆಗೆ 3412 ಜನ ರೈತರು 110762 ಕ್ಕಿಂಟಾಲ್ ಗಳಿಗೆ ನೊಂದಣಿ ಮಾಡಿಸಿರುತ್ತಾರೆ. ಈ ಪೈಕಿ 2343 ಜನ ರೈತರು ಒಟ್ಟು 87258 ಕ್ವಿಂಟಲ್ ಮೆಕ್ಕೆಜೋಳವನ್ನು ಜಿಲ್ಲೆಯ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಿ ಪಿ.ಡಿ.ಪಿ.ಎಸ್. ಯೋಜನೆಯ ಪ್ರಯೋಜನ ಪಡೆದಿರುತ್ತಾರೆ.
ಜಿಲ್ಲೆಯಲ್ಲಿ ವಿವಿಧ ಕುಕ್ಕುಟ ಆಹಾರ ಉತ್ಪಾದಕ ಘಟಕ ಗಳಿಗೆ 91 ಜನ ರೈತರಿಂದ 2712 ಕ್ವಿಂಟಲ್ ಮೆಕ್ಕೆಜೋಳವನ್ನು ರೂ.2400/- ರಂತೆ ಖರೀದಿಸಿ ಸರಬರಾಜು ಮಾಡಲಾಗಿದೆ. ಜಿಲ್ಲೆಯಲ್ಲಿ ಕೆ.ಎಂ.ಎಫ್ ಇವರಿಂದ 917 ಜನ ರೈತರಿಂದ 21706 ಕ್ವಿಂಟಲ್ ಮೆಕ್ಕೆಜೋಳವನ್ನು ರೂ.2400/- ರಂತೆ ಖರೀದಿಸಿರುತ್ತಾರೆ. ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ನೋಂದಣಿಯನ್ನು ಫೆ. 13 ರವರೆಗೆ ವಿಸ್ತರಿಸಲಾಗಿದೆ, ಮತ್ತು ಯು.ಎಂ.ಪಿ. ವೇದಿಕೆ ಅಡಿ ವಹಿವಾಟನ್ನು ಫೆಬ್ರವರಿ 21 ರವರೆಗೆ ವಿಸ್ತರಿಸಲಾಗಿದೆ.
ಫೆಬ್ರವರಿ 5 ರಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕುಕ್ಕವಾಡ ಗ್ರಾಮ, ( ಮೊ.ನಂ.9353444504 ) ದಾವಣಗೆರೆ ತಾಲ್ಲೂಕು ಇಲ್ಲಿ ದಾವಣಗೆರೆ ಶುಗರ್ಸ್ ಇವರಿಗೆ ಪ್ರತಿ ಕ್ವಿಂಟಾಲ್ ಗೆ ರೂ.2400/- ರಂತೆ 2000 ಕ್ವಿಂಟಾಲ್ ಗಳಿಗೆ ಸೀಮಿತವಾಗಿ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ದಾವಣಗೆರೆ ವತಿಯಿಂದ ರೈತರ ನೋಂದಣಿ ಪ್ರಾರಂಭಿಸಲಾಗುವುದು.
ನೊಂದಾಯಿತ ರೈತರು ಎಫ್.ಎ.ಕ್ಯೂ ಗುಣಮಟ್ಟದ ( ತೇವಾಂಶ 14 % ಇತರ ಕಾಳು 4.5 % ) ಮೆಕ್ಕೆಜೋಳವನ್ನು ಖರೀದಿ ಅಧಿಕಾರಿಗಳು ತಿಳಿಸುವ ದಿನಾಂಕದಂದು ಹದಡಿ ಗ್ರಾಮ ಪಂಚಾಯಿತಿ ಗೋದಾಮಿಗೆ ಮೆಕ್ಕೆಜೋಳವನ್ನು ತರುವುದು.
ಜನವರಿ 31 ರ ಅಂತ್ಯಕ್ಕೆ ರೈತರು ಮಾರಾಟ ಮಾಡಿರುವ ಮೆಕ್ಕೆಜೋಳ ಉತ್ಪನ್ನಕ್ಕೆ ಸರ್ಕಾರ ನಿಗದಿಪಡಿಸಿರುವ ಪ್ರಮಾಣಕ್ಕೆ ವ್ಯತ್ಯಾಸದ ಮೊತ್ತವು ಡಿ.ಬಿ.ಟಿ. ಮೂಲಕ ರೈತರ ಖಾತೆಗೆ ಒಂದು ವಾರದೊಳಗೆ ಜಮೆಯಾಗುತ್ತದೆ.
ಈಗಾಗಲೇ ಕೆಲವು ರೈತರು ಪಿ.ಡಿ.ಪಿ.ಎಸ್. ಯೋಜನೆಯಡಿಯಲ್ಲಿ ಬಯೋಮೆಟ್ರಿಕ್ ನೀಡದೇ ನೋಂದಣಿ ಮಾಡಿಸಿದ್ದು ಸದರಿ ರೈತರು ಸಂಬಂಧಿಸಿದ ಎ.ಪಿ.ಎಂ.ಸಿ.ಗಳಿಗೆ ಭೇಟಿ ನೀಡಿ ಬಯೋಮೆಟ್ರಿಕ್ ಮೂಲಕ ನೋಂದಣಿ ಮಾಡಿಸುವಂತೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
