ಯುದ್ಧಗಳು ಆರಂಭವಾದರೆ ಆರಂಭಕ್ಕೂ ಮುನ್ನ ಕಹಳೆಯಾದರೂ ಮೊಳಗುತ್ತದೆ. ಆಧುನಿಕ ಯುದ್ಧ ಕಾಲದ ಈ ದಿನಗಳಲ್ಲಿ ಕನಿಷ್ಟ ಪಕ್ಷ ಶೀತಲ ಸಮರವಾದರೂ ನಡೆಯುತ್ತದೆ.
ಸಾವು- ನೋವು; ಹಿಂಸೆ ಸಂಭವಿಸುತ್ತದೆ. ಶತ್ರು ಎದುರಿಗೇ ಇರುತ್ತಾನೆ. ಸಾಯಲು ಎರಡೂ ಕಡೆಯ ಸೈನಿಕರಿರುತ್ತಾರೆ. ಅದು ರಾಜರುಗಳ ಕಾಲದ ಸಂಪತ್ತಿನ ದಾಹವೋ ಶೌರ್ಯ ಪ್ರತಾಪಗಳ ತೋರಿಕೆಗಾಗಿಯೋ ಅಂತೂ ಯುದ್ಧಗಳು ನಡೆಯುತ್ತಿದ್ದವು. ಯುದ್ಧದಲ್ಲಿ ಭಾಗಿಯಾದವರಲ್ಲಿ ಕೆಲವರಾದರೂ ಸಾಯುತ್ತಿದ್ದರು.ಕೆಲವರು ಗಾಯಗೊಳ್ಳುತ್ತಿದ್ದರು. ಉಳಿದ ಪ್ರಜೆಗಳು ರಾಜನ ಆಳ್ವಿಕೆಯಲ್ಲಿ ಬದುಕುತ್ತಿದ್ದರು.
ಉಸಿರಾಡುವ ಗಾಳಿಯ ಮೇಲೆ ನಿರಂತರ ದಾಳಿಗಳು
ಸೊಂಡೂರಿನಲ್ಲಿ ರಾಜ ಮಹಾರಾಜರುಗಳ ಪಳೆಯುಳಿಕೆಗಳಿದ್ದರೂ ಯುದ್ಧಗಳಿಲ್ಲ , ಯುದ್ಧ ನಿಂತಿಲ್ಲ ಎಂದು ನಾನು ಹೇಳುವುದಿಲ್ಲ.ಇಲ್ಲಿ ಯುದ್ಧಕ್ಕಿಂತ ಭೀಕರ ದಾಳಿಗಳು ಅಮಾಯಕ ನಾಗರಿಕರ ಮೇಲೆ, ಹುಟ್ಟುವ ಮಕ್ಕಳು ಉಸಿರಾಡುವ ಗಾಳಿಯ ಮೇಲೆ ನಿರಂತರ ದಾಳಿಗಳು ನಡೆಯುತ್ತಲೇ ಇವೆ. ಈ ದಾಳಿಗಳಿಂದ ಕೇವಲ ಸಾವುಗಳಾಗುವುದಿಲ್ಲ. ನೋವುಂಟಾಗುವುದಿಲ್ಲ ಆದರೆ ಕೊಲೆಗಳಾಗುತ್ತವೆ.ಕೇವಲ ಕೊಲೆಗಳಾಗುತ್ತವೆ. ಗಣಿಗಾರಿಕೆ ಕೇವಲ ಧಣಿಗಳನ್ನಷ್ಟೆ ಶ್ರೀಮಂತರನ್ನಾಗಿ ಮಾಡಲಿಲ್ಲ.ಬಡ ರೈತರ ಮಣ್ಣನ್ನೂ ಕಸಿದು, ಅವರ ಬೇಸಾಯವನ್ನೂ ಸಾಯಿಸಲಾಯಿತು.
ಮಕ್ಕಳ ಅಕ್ಷರಗಳೂ ಮಣ್ಣಲ್ಲಿ ಸೇರಿಹೋದವು
ಮಕ್ಕಳ ಅಕ್ಷರಗಳೂ ಮಣ್ಣಲ್ಲಿ ಸೇರಿಹೋದವು. ಪಾರಂಪರಿಕ ಜ್ಞಾನಗಳೂ ಅದಿರಿನ ಮಣ್ಣಿನ ಜೊತೆ ಸೇರಿ ಹೋದವು. ಕನಿಷ್ಟ ಪಕ್ಷ ಮನುಷ್ಯರ ನಗು,ಅಳು ; ಅಣ್ಣ ತಮ್ಮ;ಅಕ್ಕ ತಂಗಿಯರೆಂಬ ಭಾವನಾತ್ಮಕ ಸಂಬಂಧಗಳೂ ಸಹ ಗಣಿ ರೊಕ್ಕದಲ್ಲಿ ಮಿಂದೆದ್ದು ರಕ್ತವರ್ಣಕ್ಕೆ ತಿರುಗಿದ್ದು ವಿಪರ್ಯಾಸ. ಆ ಬೆಟ್ಟ ಗುಡ್ಡಗಳಿಗೆಲ್ಲ ಚೆನ್ನಾಗಿ ನೆನಪಿದೆ. ತನ್ನ ಕಾಲ ಬುಡದ ಆ ಕಲ್ಲಿನ ಹೊಲವನ್ನು ರಂಟೆ ಹೊಡೆದು ಹಸನು ಮಾಡಿದ ಅಣ್ಣ ತಮ್ಮಂದಿರ ಶ್ರಮದ ಅರಿವೂ ಇದೆ.

ಇದ್ದರೆ ಅವರಂತೆ ಇರಬೇಕು. ಎಂಬಂಥ ಬಂಧ!
ಅಣ್ಣನಿಗೆ-ತಮ್ಮ; ತಮ್ಮನಿಗೆ -ಅಣ್ಣ
ಜೀವಕ್ಕೆ ಜೀವ ಕೊಡಬಲ್ಲವರು.
ಬಿರು ಬಿಸಿಲಿನಲ್ಲಿ ರಂಟೆ ಹೊಡೆಯುವ ಅಣ್ಣ ತಮ್ಮಂದಿರ ಹೊಂದಾಣಿಕೆಯ ಬದುಕು ಎಲ್ಲರಿಗೂ ಮಾದರಿಯಾಗಿತ್ತು.
ಗಳೇವು ನಿಲ್ಲಿಸಿದ ಅಣ್ಣನಿಗೆ ನೀರು ಕೊಟ್ಟು , ತಮ್ಮ ರಂಟೆ ಹೊಡೆಯುತ್ತಿದ್ದ.
ತುಸು ಹೊತ್ತು ಹೊಂಗೆ ಮರದ ನೆರಳಿನಲ್ಲಿ ಕುಂತ ಅಣ್ಣನಿಗೆ, ತಮ್ಮ ಬಿಸಿಲಿನಲ್ಲಿ ರಂಟೆ ಹೊಡೆಯುವುದ ನೋಡಿ ಕರುಳು ಚುರುಕ್ ಎನ್ನಿಸಿದಂತಾಗಿ, ಪುನಃ ತಾನು ಗಳೇವು ಕೈಗೊಳ್ಳುತ್ತಿದ್ದ. ಅಣ್ಣ ತಮ್ಮ ಅಂದ್ರೆ ಹಿಂಗಿರಬೇಕು ಎಂಬಂತೆ ಎರಡು ಜೀವಗಳು ಅನೋನ್ಯವಾಗಿದ್ದವು.
ಆಗೆಲ್ಲ ‘ಗಣಿ’ ಎಂದರೆ ‘ಗಿಣಿ’ ಎಂಬಂತೆ ಕೇಳಿಸುವ ದಿನಗಳಿದ್ದವು. ನಿತ್ಯವೂ ಊರ ಸಂತೆ; ಜಾತ್ರೆಯಿರುವಂತೆ ಸದಾ ಗಜಿ ಬಿಜಿಯಿರುತ್ತಿತ್ತು. ಗಣಿಗಾರಿಕೆಯ ಟ್ರಕ್ಕುಗಳ ಅಬ್ಬರಕ್ಕೆ,ಅರ್ಧಕ್ಕೆ ಶಾಲೆ ಬಿಟ್ಟು ಬಡವನಾದ ಹುಡುಗನ ಮನಸ್ಥಿತಿಯಲ್ಲಿ ಹೊಲಗಳಿದ್ದವು. ಬ್ಯಾಸಾಯದ ಹೊಲಗಳು-ಗಣಿಗಾರಿಕೆಯೆದುರು ತಪ್ಪಿತಸ್ಥನಂತೆ ನಿಂತ ಮನುಷ್ಯರ ಸಾಲುಗಳ ಹಾಗೆ ಕಾಣುತ್ತಿದ್ದವು.
ಎಲ್ಲಿ ನೋಡಿದರೂ ರಾಶಿ ರಾಶಿ ರೊಕ್ಕದ್ದೇ ಮಾತು!
…..….ಅಂಥದ್ದೇ ಒಂದು ದಿನ,ಗಣಿ ಧಣಿಯೊಬ್ಬ ಮನೆ ಮುಂದೆ ಬಂದು ನಿಂತಿದ್ದ. ಆ ಕುಟುಂಬದ ಹತ್ತು ಹೊಟ್ಟೆಗಳನ್ನು ತಣಿಸುವ ಹೊಲದ ಮೇಲೆ ಅವನ ಕಣ್ಣಿತ್ತು. ಹೊಲದ ಮೇಲೆ ಲಕ್ಷ ಲಕ್ಷದ ಮಾತುಗಳು ಹರಿದಾಡಿದವು. ಹ್ಞೂ…ಎಂದರೆ ಎರಡು ಎಕರೆ ಭೂಮಿಗೆ ಐವತ್ತು ಲಕ್ಷ! ಅರ್ಧರ್ಧವೆಂದರೂ ತಲಾ ಇಪ್ಪತ್ತೈದು ಲಕ್ಷ.!!
ಇಪ್ಪತ್ತೈದು …ಲಕ್ಷ.!
ಅಣ್ಣ -ತಮ್ಮನ ಮುಖ ನೋಡಿದ
ತಮ್ಮ-ಅಣ್ಣನ ಮುಖ ನೋಡಿದ
ತಂತಮ್ಮ ಮುಖಗಳು ಎಂದಿನಂತಿರಲಿಲ್ಲವೆಂಬುದು ಇಬ್ಬರಿಗೂ ಮನವರಿಕೆಯಾಯಿತು.
ಮುಂಜಾನೆ ಆ ಕೇರಿಯಲ್ಲಿ ಒಂದು ಕೊಲೆಯಾಗಿತ್ತು
.!
ಬಿ.ಶ್ರೀನಿವಾಸ.