ದಾವಣಗೆರೆ : ಜಿಲ್ಲೆಗೆ ಮುಂದಿನ ಮೂರು ದಿನಗಳಲ್ಲಿ 2050 ಮೆಟ್ರಿಕ್ ಟನ್ ಯೂರಿಯಾ ಪೂರೈಕೆಯಾಗಲಿದ್ದು ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಪ್ರಸಕ್ತ ಸಾಲಿನ ಕೃಷಿ ಇಲಾಖಾ ಯೋಜನೆಗಳ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಸ್ತುತ ಮಾಯಕೊಂಡ, ಜಗಳೂರು, ಚನ್ನಗಿರಿ, ಹೊನ್ನಾಳಿ ಭಾಗದಲ್ಲಿ ಮೆಕ್ಕೆಜೋಳ ಬೆಳೆಗೆ ಯೂರಿಯಾವನ್ನು ಮೇಲುಗೊಬ್ಬರವಾಗಿ ಬಳಕೆ ಮಾಡುತ್ತಿದ್ದು ಮುಂದಿನ 15 ದಿನಗಳಲ್ಲಿ ಇದು ಪೂರ್ಣಗೊಳ್ಳುತ್ತದೆ. ಭದ್ರಾ ಜಲಾಶಯ ಭರ್ತಿ ಹಂತಕ್ಕೆ ತಲುಪಿರುವುದರಿಂದ ಭತ್ತದ ಕೃಷಿ ಚಟುವಟಿಕೆಗಳು ಆರಂಭವಾಗಲಿವೆ. ಭತ್ತಕ್ಕೆ ತಳಗೊಬ್ಬರವಾಗಿ ಯೂರಿಯಾ ಬಳಕೆ ಮಾಡಲಾಗುತ್ತದೆ. ಜಿಲ್ಲೆಯಲ್ಲಿ ಯಾವುದೇ ತರಹದ ರಸಗೊಬ್ಬರದ ಕೊರತೆ ಉಂಟಾಗಿರುವುದಿಲ್ಲ. ಜಿಲ್ಲೆಗೆ ಅಗತ್ಯಕ್ಕೆ ತಕ್ಕ ರಸಗೊಬ್ಬರ ಪೂರೈಕೆಯಾಗುತ್ತಿದೆ. ಭತ್ತ ಬೆಳೆಗೆ ರಸಗೊಬ್ಬರ ಮಾರಾಟಗಾರರು ಗೊಬ್ಬರದ ದಾಸ್ತಾನಿಟ್ಟಿರುವುದರಿಂದ ಮಾರುಕಟ್ಟೆಯಲ್ಲಿ ಗೊಬ್ಬರ ಇಲ್ಲವೆಂದು ರೈತರಲ್ಲಿ ಆತಂಕ ಉಂಟಾಗಿದೆ. ಗೊಬ್ಬರವನ್ನು ಯಾವುದೇ ಮಾರಾಟಗಾರರು ಮಾರಾಟ ಮಾಡದೇ ದಾಸ್ತಾನಿಟ್ಟುಕೊಳ್ಳುವಂತಿಲ್ಲ. ರೈತರಿಗೆ ನೀಡದೆ ದಾಸ್ತಾನಿಟ್ಟಿರುವ ಗೋಡೌನ್ಗಳನ್ನು ತಹಶೀಲ್ದಾರರು, ಉಪವಿಭಾಗಾಧಿಕಾರಿಗಳು ಸೇರಿದಂತೆ ಕೃಷಿ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಎಂದರು.
ಯಾವುದೇ ಮಾರಾಟಗಾರರು ಅನವಶ್ಯಕವಾಗಿ ಗೊಬ್ಬರ ದಾಸ್ತಾನಿಟ್ಟಲ್ಲಿ ಕಾನೂನು ಕ್ರಮಜರುಗಿಸಲಾಗುತ್ತದೆ. ರೈತರು ಸಹ ಯೂರಿಯಾ ಗೊಬ್ಬರವನ್ನು ಹೆಚ್ಚು ಬಳಸದೆ ನ್ಯಾನೋ ಯೂರಿಯಾ ಬಳಕೆಗೆ ಮುಂದಾಗಬೇಕು. ನ್ಯಾನೋ ಯೂರಿಯಾ ಬಳಕೆ ಹರಳು ರೂಪದ ಯೂರಿಯಾಕ್ಕಿಂತಲೂ ಹೆಚ್ಚು ಗುಣಮಟ್ಟ, ಸಮೃದ್ದತೆ ಹೊಂದಿರುತ್ತದೆ. ಕೆಲವು ಮಾರಾಟಗಾರರು ಕೃತಕ ಅಭಾವ ಸೃಷ್ಟಿಸಿ ಯೂರಿಯಾ ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿರುವ ಬಗ್ಗೆ ವರದಿ ಬಂದಿದೆ. ರೈತರು ಸಹ ಯಾರಾದರೂ ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿದ್ದಲ್ಲಿ ದೂರುಗಳನ್ನು ನೀಡಲು ಮುಂದೆ ಬರಬೇಕೆಂದು ತಿಳಿಸಿದರು.
Read also : ದಾವಣಗೆರೆ , ಶಿವಮೊಗ್ಗ ಜಿಲ್ಲೆಗಳ ಮೆಕ್ಕೆಜೋಳ ವರ್ತಕರಿಗೆ ಸಚಿವ ಶಿವಾನಂದ ಪಾಟೀಲ ಭರವಸೆ
ರೈತರು ಫಸಲಿನ ಹೆಚ್ಚು ಇಳುವರಿ ತೆಗೆಯಲು ಬೆಳೆ ಪರಿವರ್ತನೆ ಪದ್ದತಿಯನ್ನು ಅನುಸರಿಸಬೇಕು. ದ್ವಿದಳಧಾನ್ಯ ಬೆಳೆಯುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ. ಇದರಿಂದ ರಸಗೊಬ್ಬರದ ಮೇಲಿನ ಹೆಚ್ಚು ಅವಲಂಭನೆ ತಪ್ಪುತ್ತದೆ. ಮತ್ತು ಬೆಳೆ ಪರಿವರ್ತನೆ ಅನುಸರಿಸದೇ ಒಂದೇ ಬೆಳೆ ಬೆಳೆಯುವುದು ಮತ್ತು ಇದಕ್ಕೆ ಹೆಚ್ಚು ರಸಗೊಬ್ಬರ ಬಳಕೆಯಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗಿ ಬೆಳೆಗಳಲ್ಲಿ ನುಸಿರೋಗ ಹೆಚ್ಚಳ ಮತ್ತು ಮುಳ್ಳು ಸಜ್ಜೆಯಂತಹ ಕಳೆ ಹೆಚ್ಚಾಗುತ್ತದೆ. ಇದರ ನಿಯಂತ್ರಣಕ್ಕಾಗಿ ರಾಸಾಯಿನಿಕ ಸಿಂಪರಣೆ ಮಾಡಬೇಕಾಗುತ್ತದೆ. ಇದು ರೈತರಿಗೆ ಆರ್ಥಿಕ ನಷ್ಟದ ಜೊತೆಗೆ ಕೂಲಿ ಕಾರ್ಮಿಕರ ಹೊರೆಯಾಗುತ್ತದೆ. ಆದ್ದರಿಂದ ಅಂತರ್ ಬೆಳೆಗಳು, ಬೆಳೆ ಪರಿವರ್ತನೆ ಜೊತೆಗೆ ನ್ಯಾನೋ ಯೂರಿಯಾ ಬಳಕೆಗೆ ಮುಂದಾಗಬೇಕೆಂದು ಮನವಿ ಮಾಡಿದ್ದಾರೆ.