ದಾವಣಗೆರೆ (Davanagere): ನಾಲೆಯಲ್ಲಿ ಈಜಲು ಹೋದ ಬಾಲಕರು ಇಬ್ವರು ನೀರು ಪಾಲಾಗಿರುವ ಘಟನೆ ತಾಲೂಕಿನ ಕುರ್ಕಿ ಗ್ರಾಮದಲ್ಲಿ ಭಾನುವಾರ ನಡೆದಿದೆ.
ಕುರ್ಕಿ ಗ್ರಾಮದ ಪಾಂಡು (16) , ತುರ್ಚಘಟ್ಟ ಗ್ರಾಮದ ಯತೀಂದ್ರ (16) ನೀರು ಪಾಲಾದ ಬಾಲಕರು.
ದಾವಣಗೆರೆಯ ಗುರುಕುಲ ವಸತಿ ಶಾಲೆಯಲ್ಲಿ ಈ ಬಾಲಕರು ಎಸ್ಸೆಸ್ಸೆಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಭಾನುವಾರ ಶಾಲೆಗೆ ರಜೆ ಇದ್ದರಿಂದ ಕಟ್ಟಿಂಗ್ ಮಾಡಿಸಿಕೊಳ್ಳಲು ಇಬ್ವರು ಕುರ್ಕಿ ಗ್ರಾಮಕ್ಕೆ ಬಂದಿದ್ದಾರೆ.
ಗ್ರಾಮದ ಬಳಿ ಹರಿಯುತ್ತಿರುವ ದೊಡ್ಡದಾದ ಭದ್ರಾ ಕಾಲುವೆಯಲ್ಲಿ ಪಾಂಡು ಮತ್ತು ಯತೀಂದ್ರ ಈಜಲು ಬಂದಿದ್ದಾರೆ. ಪಾಂಡುಗೆ ಈಜಲು ಬರುತ್ತಿತ್ತು. ಯತೀಂದ್ರ ಈಜಲು ಬರುತ್ತಿರಲಿಲ್ಲ. ಮೊದಲು ಪಾಂಡು ಕಾಲುವೆಗೆ ಜಿಗಿದು ಈಜಾಡುತ್ತಿದ್ದ. ನಂತರ ಯತೀಂದ್ರ ಜಿಗಿದಿದ್ದಾನೆ. ಈ ವೇಳೆ ಯತೀಂದ್ರ ಮುಳುಗಿ ಏಳುತ್ತಿದ್ದಾಗ ಪಾಂಡು ಅವನನ್ನು ರಕ್ಷಣೆ ಮಾಡಲು ಬಂದಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರು ನೀರು ಪಾಲಾಗಿದ್ದಾರೆ ಎನ್ನಲಾಗಿದೆ. ಅವರು ಈಜುತ್ತಿದ್ದ ಸಮೀಪವೇ ಗೇಟು ಇದ್ದು, ಈ ಗೇಟ್ ಬಳಿ ಪಾಂಡು ಮೃತದೇಹ ಪತ್ತೆಯಾಗಿದೆ. ಯತೀಂದ್ರನ ಮೃತದೇಹ ಸಿಕ್ಕಿಲ್ಲ.
ಘಟನೆ ಸ್ಥಳಕ್ಕೆ ಶಾಸಕ ಬಸವಂತಪ್ಪ ಭೇಟಿ:
ಸುದ್ದಿ ತಿಳಿದ ಕೂಡಲೇ ಘಟನೆ ಸ್ಥಳಕ್ಕೆ ಶಾಸಕ ಕೆ.ಎಸ್.ಬಸವಂತಪ್ಪ ಭೇಟಿ ನೀಡಿ ನೀರು ಪಾಲಾದ ಬಾಲಕರ ಮೃತದೇಹ ಹೊರ ತೆಗೆಯಲು ಸಹಕರಿಸಿದ್ದಾರೆ. ನುರಿತ ಈಜುಗಾರರನ್ನು ಕರೆಸಿದ್ದು, ಪಾಂಡು ಮೃತದೇಹ ಸಿಕ್ಕಿದೆ. ಯತೀಂದ್ರನ ಮೃತದೇಹ ಪತ್ತೆಯಾಗಿಲ್ಲ. ಹದಡಿ ಪೊಲೀಸರು ಮೃತದೇಹ ಹುಡುಕಾಟ ನಡೆಸಿದ್ದಾರೆ.
ಕಾಲುವೆ ಬಳಿ ಜನಸಾಗರ:
ಇಬ್ಬರು ಬಾಲಕರು ನೀರು ಪಾಲಾದ ಸುದ್ದಿ ಹಬ್ವುತ್ತಿದ್ದಂತೆ ಕುರ್ಕಿ ಗ್ರಾಮ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಜನರು ಬೈಕ್, ಕಾರು, ಟ್ರ್ಯಾಕ್ಟರ್ ಗಳಲ್ಲಿ ದೌಡಾಯಿಸಿದ್ದು, ಕಾಲುವೆ ಬಳಿ ಜನಸಾಗರ ಸೇರಿದೆ.
ಮುಗಿಲು ಮುಟ್ಟಿದ ಪೋಷಕರ ಅಕ್ರಂದನ:
ನೀರು ಪಾಲಾದ ಪೋಷಕರ ಅಕ್ರಂದನ ಮುಗಿಲು ಮುಟ್ಟಿದ್ದು, ಕೈಗೆ ಬಂದ ಮಕ್ಕಳನ್ನು ಕಳೆದುಕೊಂಡ ತಂದೆ-ತಾಯಿಗಳ ರೋದನಕ್ಕೆ ಸೇರಿದ್ದ ಜನರು ಕೂಡ ಕಂಬನಿ ಮಿಡಿದರು. ಮಕ್ಕಳ ಪೋಷಕರಿಗೆ ಇದೇ ಸಂದರ್ಭದಲ್ಲಿ ಶಾಸಕ ಕೆ.ಎಸ್.ಬಸವಂತಪ್ಪ ಸಾಂತ್ವನ ಹೇಳಿದರು.