ದಾವಣಗೆರೆ (Davanagere) ಜ್ಞಾನ ಮತ್ತು ಭಕ್ತಿ ಎರಡು ವಿಚಾರಗಳು ಶ್ರೀಮದ್ ಭಾಗವತ ಮಹಾ ಪುರಾಣಗಳಲ್ಲಿ ಸಮರ್ಥವಾಗಿ ಮೂಡಿ ಬಂದಿವೆ. ಇದರಲ್ಲಿ ವೇದ ವೇದಾಂತಗಳ ಸರ್ವಸ್ವವೂ ಅಡಗಿದೆ. ಭಾಗವತವು ವೇದವ್ಯಾಸರು ರಚಿಸಿದ 18 ಪುರಾಣಗಳಲ್ಲೇ ಇದು ಅತ್ಯಂತ ಶ್ರೇಷ್ಠವಾದುದು ಎಂದು ಹಿರಿಯ ಪ್ರವಚನಕಾರರಾದ ವೇದಬ್ರಹ್ಮ ಪಂಡಿತರೂ ಆದ ಪೂಜ್ಯ ಶ್ರೀ ಗೋಪಾಲಾಚಾರ್ ಮಣ್ಣೂರ್ ಇವರು ಅಭಿಪ್ರಾಯಪಟ್ಟರು.
ಭಾನುವಾರ ಸಂಜೆ ನಗರದ ದೇವರಾಜ ಅರಸು ಬಡಾವಣೆ ‘ಸಿ’ ಹಂತದಲ್ಲಿರುವ ಆದರ್ಶ ಯೋಗ ಪ್ರತಿಷ್ಠಾನ (ರಿ), ದಾವಣಗೆರೆ, ಶ್ರೀ ಮಹಮ್ಮಾಯಿ ವಿಶ್ವಯೋಗ ಮಂದಿರ ಹಾಗೂ ಯೋಗ ಚಿಕಿತ್ಸಾ ಕೇಂದ್ರ ಇಲ್ಲಿ ಪೂಜ್ಯ ಶ್ರೀ ಕುದ್ದುಂಜಿ ಮಹಾಬಲರಾವ್ ಪುಣ್ಯಸ್ಮರಣೆ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಶ್ರೀಮದ್ ಭಾಗವತ ಪುರಾಣ ಪ್ರವಚನ ಸಪ್ತಾಹದಲ್ಲಿ ಸಾನ್ನಿಧ್ಯ ವಹಿಸಿ ಜ್ಯೋತಿ ಬೆಳಗಿಸುವುದರೊಂದಿಗೆ ಸಪ್ತಾಹವನ್ನು ಶುಭಾರಂಭಗೊಳಿಸಿದರು.
ಭಾಗವತವು ಶ್ರೀ ವೇದವ್ಯಾಸ ಋಷಿಗಳಿಂದ ಸಜ್ಜನರ ಹಾಗೂ ಭಗವತ್ ಭಕ್ತರ ಅನುಗ್ರಹಕ್ಕಾಗಿ ರಚಿತವಾದ ಅತ್ಯಂತ ಶ್ರೇಷ್ಠವಾದ ಪುರಾಣವೆಣಿಸಿದೆ. ಇದರ ಶ್ರವಣ ಮಾತ್ರದಿಂದ ಮನುಷ್ಯರು ಎಲ್ಲಾ ವಿಧವಾದ ಪಾಪಗಳಿಂದ ಮುಕ್ತರಾಗುತ್ತಾರೆ. ಅಷ್ಟೇ ಅಲ್ಲದೇ ಜೀವನದಲ್ಲಿ ತಮಗೆ ಅಪೇಕ್ಷಿತವಾದ ಎಲ್ಲಾ ಆಸೆಗಳನ್ನು ಪೂರೈಸಿಕೊಂಡು ಮುಂದೆ ಉತ್ತಮವಾದ ಸುಖಃಗಳನ್ನು ಕೊಡುವ ಲೋಕಕ್ಕೆ ಕೊಂಡೊಯ್ಯುತ್ತದೆ. ಶಾಪಗ್ರಸ್ತನಾದ ಪರೀಕ್ಷಿತ ಮಹಾರಾಜನು ಕೇವಲ 7 ದಿನದ ಒಳಗೆ ಸಾಯುವ ವಿಷಯ ತಿಳಿದಾಗ ಭಾಗವತದ ಪ್ರಭಾವದಿಂದ ಅವನಿಗೆ ಸದ್ಗತಿ ದೊರೆತ ಪುಣ್ಯಕಥಾ ಭಾಗವಾದ ಭಾಗವತವು ಸೃಷ್ಠಿ ಸ್ಥಿತಿ, ಲಯ ಇವೆಲ್ಲವುಗಳ ಪಾಠವನ್ನು ತಿಳಿಸಬಲ್ಲ ನಮ್ಮ ಇಂದಿನ ಬದುಕಿಗೂ ಹತ್ತಿರದ ಅನೇಕ ಸಂಗತಿಗಳು ಉತ್ತಮ ಬದುಕನ್ನು ರೂಪಿಸುವಲ್ಲಿ ಭಾಗವತವು ಪ್ರಭಾವ ಬೀರುವುದು ಎಂದು ಹೇಳುತ್ತಾ ಭಾಗವತದ ಉಗಮ, ಅದರ ಉದ್ದೇಶ, ಅದರಿಂದ ಮನುಕುಲಕ್ಕೆ ಆಗುವ ಪ್ರಯೋಜನಗಳನ್ನು ಕಥಾರೂಪಕವಾಗಿ ಅತ್ಯಂತ ಮನೋಜ್ಞವಾಗಿ ಎಲ್ಲರ ಮನಸ್ಸಿಗೆ ಮುಟ್ಟುವಂತೆ ಪೂಜ್ಯರು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಕುಟುಂಬ ಪ್ರಬೋಧನಾ ದಾವಣಗೆರೆ ವರ್ಗದ ಸಂಚಾಲಕಿಯಾದ ಗೀತಕ್ಕ ಮತ್ತು ಸದಸ್ಯರು ಭಾಗವಹಿಸಿ ದೇವರ ನಾಮ ಹಾಡಿದರು.
ಪ್ರಾರಂಭದಲ್ಲಿ ಗಾಯಕಿ ಕು|| ಸಂವೇದಿತಾ, ಪ್ರಾರ್ಥನಾ ಶ್ಲೋಕ ಹಾಡಿದರು. ಯೋಗತಜ್ಞ ಡಾ|| ರಾಘವೇಂದ್ರ ಗುರೂಜಿ ಪ್ರಾಸ್ತಾವಿಕವಾಗಿ ನುಡಿನಮನ ಸಲ್ಲಿಸಿದರು. ಭಾಗವತ ಪುರಾಣಿಕ್ಕೆ ಕೈ ಜೋಡಿಸಿದ ಆಶಾ ಪ್ರದೀಪ್, ಮಂಜುನಾಥ್ ಹೆಚ್. ಪ್ರದೀಪ್, ರೇಖಾ ಕಲ್ಲೇಶ್, ಸಾವಿತ್ರಮ್ಮ, ಶಾಂತಮ್ಮ, ಯೋಗ ವಿದ್ಯಾರ್ಥಿ ಕು|| ಕಾವ್ಯ, ರಾಹುಲ್ ವಿ.ಕೆ. ಮುಂತಾದವರಿಗೆ ಅಭಿನಂದನೆ ಸಲ್ಲಿಸಿದರು.
Read also : Davanagere | ಡಾ.ಎನ್.ಪರಶುರಾಮ್ಗೆ ‘ಯುವ ಶ್ರೀಕಲಾಭೂಷಣ’ ಪ್ರಶಸ್ತಿ ಪ್ರದಾನ