ದಾವಣಗೆರೆ : ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಅನುಭವದ ಕೊರತೆ ಇದೆ. ಹಾಗಾಗಿ, ರಾಜ್ಯಾಧ್ಯಕ್ಷರ ಬದಲಾವಣೆ ಆಗಲೇಬೇಕು. ಅವರ ಬದಲು ಹಿರಿಯರಾದ ಬಸವನಗೌಡ ಯತ್ನಾಳ್ ರಾಜ್ಯಾಧ್ಯಕ್ಷರಾಗಬೇಕು ಎಂದು ಹರಿಹರ ಶಾಸಕ ಬಿ.ಪಿ. ಹರೀಶ್ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವನಗೌಡ ಯತ್ನಾಳ್ ಅಂತವರು ರಾಜ್ಯಾಧ್ಯಕ್ಷರಾಗಬೇಕು, ಇಲ್ಲವೇ ವಿಪಕ್ಷ ನಾಯಕ ಆಗಬೇಕು ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ವೈಫಲ್ಯದಿಂದ 2028ಕ್ಕೆ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಆದರೆ, ಅದನ್ನು ನಡೆಸಿಕೊಂಡು ಹೋಗುವ ಸಾಮಥ್ರ್ಯ ಬಿವೈವಿಗೆ ಇಲ್ಲ. ಕಾಂಗ್ರೆಸ್ ವೈಫಲ್ಯ ಎತ್ತಿಹಿಡಿಯಲು ಹಾಗೂ ಎದುರಿಸಲು ಸಮರ್ಥ ನಾಯಕ ಬೇಕು. ಅದು ಯತ್ನಾಳ್ ಅವರಲ್ಲಿದೆ ಎಂದರು.
ಬಿಎಸ್ವೈ ಬೇಡವೆಂದು ನಿಮಗೆ ಅವಕಾಶ ನೀಡಿದೆ. ಆದರೆ, ಈವರೆಗೆ ನಿಮ್ಮ ಸಾಧನೆ ಶೂನ್ಯ. ಸದನದಲ್ಲಿ ಆಡಳಿತ ಪಕ್ಷದವರು ನಿಮ್ಮದು ಬಂಡವಾಳ ಬಿಚ್ಚಲಾ? ಎಂದರೆ ಸಾಕು ನೀವು ಹಿಂಬಾಗಿಲಿನಿಂದ ಓಡಿ ಹೋಗ್ತೀರಿ. ಅವರಿಗೆ ಉತ್ತರಿಸುವ ಕನಿಷ್ಠ ಧೈರ್ಯ ನಿಮಗಿಲ್ಲವೇ? ಎಂದು ಪ್ರಶ್ನಿಸಿದರು.
ಶಿಕಾರಿಪುರ ಚುನಾವಣೆ ವಿಚಾರದಲ್ಲಿ ಡಿಕೆಶಿ ಭಿಕ್ಷೆ ಕೊಟ್ಟಿದ್ದಾರೆ ಎಂದರು. ಆದರೆ, ಅದಕ್ಕೆ ಉತ್ತರಿಸುವ ಕೆಲಸ ಬಿವೈವಿ ಮಾಡಲಿಲ್ಲ. ಅವರ ವಿರುದ್ಧ ಪ್ರತಿಭಟಿಸಲಿಲ್ಲ. ಯಾವುದಕ್ಕೂ ಉತ್ತರ ಕೊಡಲು ಸಿದ್ಧರಿಲ್ಲ. ಇಂತಹವರಿಂದ ಕಾಂಗ್ರೆಸ್ನವರಿಗೆ ಹಬ್ಬವಾಗಿದೆ. ಇದರಿಂದ ನಮಗೆ ನಾಚಿಕೆಯಾಗ್ತಿದೆ ಎಂದು ಹರಿಹಾಯ್ದರು.