ದಾವಣಗೆರೆ (Davanagere): ಜನಪ್ರತಿನಿಧಿಗಳು ಹಾಗೂ ಸಮಾಜದ ನಡುವೆ ದೊಡ್ಡ ಕಂದಕ ಉಂಟಾಗಿದೆ. ಆದ್ದರಿಂದಲೇ ಮತ ನೀಡಿದ ಜನರಿಗೆ ಯಾವುದೇ ಅಭಿವೃದ್ಧಿ ಹಾಗೂ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲ ಎಂದು ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ವಿಷಾದ ವ್ಯಕ್ತಪಡಿಸಿದರು.
ಹರಿಹರ ತಾಲೂಕಿನ ಮಲೇಬೆನ್ನೂರಿನಲ್ಲಿ ಸ್ವಾಭಿಮಾನಿ ಬಳಗವು ಆಯೋಜಿಸಿದ್ದ ಸಾರ್ವಜನಿಕ ಜನತಾ ಅದಾಲತ್ ನಲ್ಲಿ ಜನರಿಂದ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿದ ಅವರು, ಹೊಸಪೇಟೆ- ಶಿವಮೊಗ್ಗ ರಾಜ್ಯ ಹೆದ್ದಾರಿ-25ರಲ್ಲಿ ನಿತ್ಯವೂ ಅಪಘಾತಗಳಾಗುತ್ತಿವೆ. ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಲೆಕ್ಕವಿಲ್ಲದಷ್ಟು ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಹೊನ್ನಾಳಿ, ಹರಿಹರ ಕ್ಷೇತ್ರಗಳಲ್ಲಿ ವಿವಿಧ ಪಕ್ಷಗಳಿಂದ ಆಯ್ಕೆಯಾದವರು ಇದುವರೆಗೂ ಹೆದ್ದಾರಿಯ ಅಗಲೀಕರಣಕ್ಕೆ ಕಾಳಜಿ ತೋರಿಸಿಲ್ಲ ಎಂದು ಆರೋಪಿಸಿದರು.
ಸುಮಾರು ಒಂದೂವರೆ ವರ್ಷದಿಂದ ನಾನೂ ಓಡಾಡುತ್ತಿದ್ದೇನೆ. ಹರಿಹರದಿಂದ ಹೊನ್ನಾಳಿಗೆ ಹೋಗುವ ರಸ್ತೆಯಲ್ಲಿ ಅಪಘಾತಗಳಾಗಿವೆ. ಈ ಭಾಗದ ಜನರಿಗೆ ಅನ್ಯಾಯವಾಗುತ್ತಲೇ ಇದೆ. ವ್ಯಾಪಾರಿಗಳು, ಆಟೋಡ್ರೈವರ್, ಚಾಲಕರು, ಜನರು ತಮ್ಮ ಪಾಡಿಗೆ ಇದ್ದಾರೆ. ಹಾಗಾಗಿ, ಜನಪ್ರತಿನಿಧಿಗಳು ಇತ್ತ ಗಮನ ಹರಿಸುತ್ತಿಲ್ಲ. ಸಮಸ್ಯೆಗಳಿಗೆ ಸ್ಪಂದಿಸಬೇಕಾದ, ಪರಿಹರಿಸಬೇಕಾದವೆ ಸುಮ್ಮನಿದ್ದರೆ ಹೆದ್ದಾರಿ ಅಗಲೀಕರಣ ಆಗುವುದು ಯಾವಾಗ ಎಂದು ಪ್ರಶ್ನಿಸಿದರು.
ನೀವು ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ ಸಹಾಯ ಮಾಡಿ ಎಂದು ಕೇಳಲು ಆಗುತ್ತದೆಯೇ. ಸಮಸ್ಯೆಗಳಿದ್ದಾಗ ಸುಮ್ಮನೆ ಇರಬೇಕಾ, ಕೈಕಟ್ಟಿ ಕೂರಬೇಕಾ. ಜನರ ಕಷ್ಟಗಳಿಗೆ ಸ್ಪಂದಿಸುವ, ಸಮಸ್ಯೆಗಳ ಬಗ್ಗೆ ಮಾಹಿತಿ ಕಲೆ ಹಾಕಿ ಸಂಬಂಧಪಟ್ಟವರಿಗೆ ತಲುಪಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಲೋಕಸಭೆ ಚುನಾವಣೆಗೆ ಮುನ್ನ ಮತ ಕೇಳಲು ಬಂದಾಗ ರಾಜ್ಯ ಹೆದ್ದಾರಿ ಅಗಲೀಕರಣ ಮಾಡುತ್ತೇವೆ. ಭೈರನಪಾದ ಏತ ನೀರಾವರಿ ಯೋಜನೆ ಜಾರಿಗೊಳಿಸುತ್ತೇವೆ ಎಂಬ ಭರವಸೆ ನೀಡಿದ್ದರು. ಶಾಸಕರು, ಸಚಿವರು, ಸಂಸದರು ಮನಸ್ಸು ಮಾಡಿದರೆ ಹೆದ್ದಾರಿ ಮೂರು ತಿಂಗಳಿನಲ್ಲಿ ಮಾಡಬಹುದು. ಇದಕ್ಕೆ ಇಚ್ಛಾಶಕ್ತಿ ಬೇಕು. 2011ರಲ್ಲಿ ಭೈರನಪಾದ ಯೋಜನೆಗೆ ಅನುಮೋದನೆ ಸಿಕ್ಕಿದ್ದರೂ ಇದುವರೆಗೆ ಒಂದು ಹನಿ ನೀರು ಬಂದಿಲ್ಲ. ನಾಲ್ಕು ಸಾವಿರ ಹೆಕ್ಟೇರ್ ಪ್ರದೇಶಗಳಿಗೆ ನೀರುಣಿಸುವ ಯೋಜನೆ ಇನ್ನೂ ಜಾರಿಗೆ ಬಂದಿಲ್ಲ. ರೈತರ ಬೇಡಿಕೆಗೆ ಮನ್ನಣೆ ಸಿಕ್ಕಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ನಾವು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷದವರಾಗಿ ಬಂದಿಲ್ಲ. ರಾಜಕೀಯಕ್ಕೆ ಹಾಗೂ ಹರಿಹರ ಶಾಸಕನಾಗಬೇಕೆಂಬ ಬಯಕೆ ಇಟ್ಟುಕೊಂಡು ಸಾರ್ವಜನಿಕ ಜನತಾ ಅದಾಲತ್ ನಡೆಸುತ್ತಿಲ್ಲ. ಸಾಮಾನ್ಯ ನಾಗರಿಕರಾಗಿ, ರಾಜಕೀಯ ಪ್ರಜ್ಞೆ ಇಟ್ಟುಕೊಂಡು ಬಂದಿದ್ದೇವೆ. ಸ್ಥಳೀಯವಾಗಿ ಸಮಸ್ಯೆಗಳ ಮಾಹಿತಿ ಪಡೆದು ಎಲ್ಲಿ ಮುಟ್ಟಿಸಬೇಕೋ ಅಲ್ಲಿಗೆ ಮುಟ್ಟಿಸುತ್ತೇವೆ. ಕೇವಲ ಇಲ್ಲಿ ಮಾತ್ರವಲ್ಲ, ಯಾದಗಿರಿ ಸೇರಿದಂತೆ ರಾಜ್ಯದ ಎಲ್ಲೆಡೆಯೂ ಇಂಥ ಅದಾಲತ್ ನಡೆಸುತ್ತೇವೆ. ಜನರ ಕೇಳದೇ ಇರುವುದರಿಂದ ಸಮಸ್ಯೆಗಳು ಪರಿಹಾರ ಆಗುತ್ತಿಲ್ಲ. ಚುನಾವಣೆಯಲ್ಲಿ ಗೆದ್ದು ಹೋದ ಬಳಿಕ ನಮ್ಮ ಮೇಲಿನ ದಬ್ಬಾಳಿಕೆ ಮುಂದುವರಿಯುತ್ತಲೇ ಇದೆ. ಸ್ವಾತಂತ್ರ್ಯ ಬಂದಿದ್ದು ಅಭಿವೃದ್ಧಿ ಸಿಗಲಿ ಎಂದು. ನೀವೆಲ್ಲರೂ ಪ್ರಶ್ನಿಸುವ ಗುಣ ಬೆಳೆಸಬೇಕು. ಬೇಡಿಕೆ ಈಡೇರಿಸಿಕೊಳ್ಳಲು ಹೋರಾಟ ನಡೆಸಬೇಕು ಎಂದು ಜಿ. ಬಿ. ವಿನಯ್ ಕುಮಾರ್ ಕರೆ ನೀಡಿದರು.
ಬಳಗದ ರಾಜ್ಯ ಉಪಾಧ್ಯಕ್ಷ ಶಿವಕುಮಾರ್ ಶೆಟ್ಟರ್, ರಾಜು ಮೌರ್ಯ, ರಾಜು ಕಣಗಣ್ಣನವರ್, ರಾಜ್ಯ ಸಂಘಟನಾ ಕಾರ್ಯದರ್ಶಿ ವಿರೂಪಾಕ್ಷಪ್ಪ ಪಂಡಿತ್, ರಾಜ್ಯ ಸಂಚಾಲಕಾರದ ಮೊಹಮ್ಮದ್ ಸಾಧಿಕ್, ಎಸ್. ಚಂದ್ರಶೇಖರ್, ಅಜ್ಜಯ್ಯ ಮತ್ತಿತರರು ಹಾಜರಿದ್ದರು.
ಭಾಷಣಕ್ಕೆ ಅಡ್ಡಿ!
ಇನ್ನು ಜಿ. ಬಿ. ವಿನಯ್ ಕುಮಾರ್ ಅವರು ಮಾತನಾಡುವಾಗ ಮಲೇಬೆನ್ನೂರು ಪುರಸಭೆ ಅಧಿಕಾರಿಗಳು ಮಾತನಾಡಲು ಅಡ್ಡಿಪಡಿಸಿದ ಪ್ರಸಂಗವೂ ನಡೆಯಿತು. ಮೈಕ್ ಆಫ್ ಮಾಡಿ ಎಂದು ಪದೇ ಪದೇ ಹೇಳಿದರು. ವಿನಯ್ ಕುಮಾರ್ ಅವರು ಯಾಕೆ ಒತ್ತಡ ಹಾಕುತ್ತೀರಾ. ಜನರ ಸಮಸ್ಯೆಗಳಿಗೆ ಸ್ಪಂದಿಸಲು ಬಂದಿದ್ದೇವೆ ಎಂದರು. ಆದ್ರೂ ಪುರಸಭೆಯ ಸಿಬ್ಬಂದಿ ಮೈಕ್ ನಲ್ಲಿ ಮಾತನಾಡಬೇಡಿ ನಿಲ್ಲಿಸಿ ಎಂದು ಪದೇ ಪದೇ ಕಿರಿಕಿರಿಯನ್ನುಂಟು ಮಾಡಿದರು. ಯಾರ ಒತ್ತಡಕ್ಕೆ ಮಣಿದು ಈ ರೀತಿ ಮಾಡುತ್ತಿದ್ದೀರಾ ಎಂದು ವಿನಯ್ ಕುಮಾರ್ ಪ್ರಶ್ನಿಸಿದರು.
Read also : ಸೆಂಟ್ ಪಾಲ್ಸ್ ಶಾಲೆಯ ಗೈಡ್ಸ್ ತಂಡ ಪಥ ಸಂಚಲನದಲ್ಲಿ ಪ್ರಥಮ