ದಾವಣಗೆರೆ (Davanagere): ಆಧುನಿಕ ಶಿಕ್ಷಣ ಪದ್ಧತಿಯು ಇಂದು ಅನೇಕ ಜ್ಞಾನ ಶಿಸ್ತುಗಳನ್ನು ಕಲಿಯುವ ಅವಕಾಶ ವಿದ್ಯಾರ್ಥಿಗಳಿಗೆ ಕಲ್ಪಿಸಿ ಕೊಟ್ಟಿದೆ. ಆ ಆಧುನಿಕ ಶಿಕ್ಷಣದ ಮೂಲಕ ನಿಮ್ಮನ್ನು ನೀವು ಯಶಸ್ಸು ಮತ್ತು ಸಂತೃಪ್ತ ಜೀವನ ನಡೆಸುವ ಕಡೆಗೆ ದಾಪುಗಾಲು ಇಡಬೇಕೆಂದು ದಾವಣಗೆರೆ ವಿವಿ ಆಡಳಿತಾಂಗದ ಕುಲಸಚಿವ ಪ್ರೊ.ಆರ್.ಶಶಿಧರ್ ತಿಳಿಸಿದರು.
ನಗರದ ಎವಿಕೆ ಮಹಿಳಾ ಕಾಲೇಜಿನಲ್ಲಿ 2021-24 ನೇ ಸಾಲಿನ ವಿದ್ಯಾರ್ಥಿನಿಯರ ‘ಪದವೀಧರರ ದಿನಾಚರಣೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿಮ್ಮ ನಾಳಿನ ಭವಿಷ್ಯದ ಶೈಕ್ಷಣಿಕ ಸಾಧನೆಯ ಜೊತೆಗೆ ಸಾಮಾಜಿಕ, ಕೌಟುಂಬಿಕ ಜೀವನವೂ ಕೂಡ ಯಶಸ್ಸು ಮತ್ತು ತೃಪ್ತಿಕರವಾಗಿ ಕೂಡಿರಬೇಕು. ಹಾಗಾದರೆ ಮಾತ್ರ ಬದುಕಿಗೆ ಅರ್ಥ ಬರುತ್ತದೆ ಎಂದು ತಿಳಿಸಿದರು.
ಇಂದು ಆರ್ಟಿಫಿಶಲ್ ಇಂಟಲಿಜೆನ್ಸ್ ಯುಗ ಇದ್ದು, ಇದರ ಮೂಲಕ ಜಗತ್ತು ಹೊಸ ಹೊಸ ಆವಿಷ್ಕಾರ ನಡೆಸುತ್ತಿದೆ. ನೀವೂ ಕೂಡ ಬದಲಾದ ಕಾಲಕ್ಕೆ ಬದುಕನ್ನು ಒಳ್ಳೆಯ ಮಾರ್ಗದಲ್ಲಿ ಬದಲಾಯಿಸಿಕೊಂಡು ಬದುಕಬೇಕಿದೆ ಎಂದರು.
ಅಧ್ಯಾಪಕರು ನಿಮಗೆ ನೀಡಿದ್ದು, ಕೇವಲ ವಿದ್ಯೆ, ಜ್ಞಾನ ಮಾತ್ರವಲ್ಲ ಜೊತೆಗೆ ಬದುಕಿನ ಮಾರ್ಗವನ್ನು ತೋರಿದ್ದಾರೆ. ನೀವು ಉತ್ತಮ ಗುರಿಯನ್ನು ಇಟ್ಟುಕೊಂಡಾಗ ಮಾತ್ರ ಯಶಸ್ಸು ಸಾಧ್ಯ. ನಾಳಿನ ಭವಿಷ್ಯಕ್ಕೆ ಇಂದೇ ನೀವು ಗುರಿ ಇಟ್ಟುಕೊಳ್ಳಬೇಕೆಂದು ಸಲಹೆ ನೀಡಿದರು.
ಸ್ಪರ್ಧಾತ್ಮಕ ಜಗತ್ತಿನಲ್ಲಿ ನೀವು ಪದವಿಗಳ ಜೊತೆ ಜೊತೆಗೆ ನೀವು ಅನೇಕ ಆನ್ಲೈನ್ ಕೋರ್ಸ್ ಪಡೆಯಬಹುದಾಗಿದೆ. ಈ ವಿದ್ಯೆ ಪಡೆಯಲು ಧನಾತ್ಮಕ ಆಲೋಚನೆ ಇಟ್ಟುಕೊಂಡು ಸಾಗಬೇಕು. ಉದ್ಯೋಗಕ್ಕೆ ಅನೇಕ ಅವಕಾಶ ಇದ್ದರೂ ಕೂಡ ಅದಕ್ಕೆ ತಕ್ಕುದಾದ ಜ್ಞಾನ ನಮ್ಮ ಯುವ ಜನಾಂಗದಲ್ಲಿ ಸಿಗುವುದು ಕಷ್ಟವಾಗಿದೆ. ಅದೆಷ್ಟೋ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಬಗ್ಗೆ ಮಾಹಿತಿಯೇ ಇಲ್ಲ. ನೀವೆಲ್ಲರೂ ಸ್ಪರ್ಧಾತ್ಮಕ ಪರೀಕ್ಷೆ ಬಗ್ಗೆ ಮಾಹಿತಿ ಇಟ್ಟುಕೊಳ್ಳಿ, ಆ ಮೂಲಕ ನಿಮ್ಮನ್ನು ನೀವು ಸಾಧಕರಾಗಿ. ನಿಮ್ಮ ಬಾಳಿನಲ್ಲಿ ಆಶಾದಾಯಕ ಭಾವನೆಗಳು ಸದಾಕಾಲವೂ ಇರಲಿ. ಇಂದಿನ ಕಾಲದಲ್ಲಿ ಉತ್ತಮ ಹುದ್ದೆಯಲ್ಲಿ ಮಹಿಳೆಯರು ಸಾಧನೆ ಮಾಡಿದ್ದಾರೆ, ಮಾಡುತ್ತಿದ್ದಾರೆ. ಆ ಮಾರ್ಗದಲ್ಲಿ ನೀವೆಲ್ಲರೂ ಸಾಗಬೇಕು ಎಂದು ಹೇಳುತ್ತಾ, ಪದವಿ ಪಡೆದ ಎಲ್ಲಾ ವಿದ್ಯಾರ್ಥಿನಿಯರಿಗೆ ಶುಭ ಹಾರೈಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಾಪೂಜಿ ವಿದ್ಯಾಸಂಸ್ಥೆಯ ಸದಸ್ಯ ಸಂಪನ್ನ ಮುತಾಲಿಕ್, ಯಶಸ್ಸಿನ ಹಿಂದೆ ನಿಮಗೆ ವಿದ್ಯೆ ನೀಡಿದ ಗುರುಗಳ ಪರಿಶ್ರಮ ಇದೆ. ಅಲ್ಲದೇ ಹೆಣ್ಣು ಮಕ್ಕಳು ಶಿಕ್ಷಣ ಪಡೆಯುವ ಮೂಲಕ ಇನ್ನೂ ಹೆಚ್ಚು ಹೆಚ್ಚು ಕ್ಷೇತ್ರದಲ್ಲಿ ಸಾಧನೆ ಮಾಡುವಂತೆ ಆಗಬೇಕು. ಆ ಉದ್ದೇಶದಿಂದ ಎವಿಕೆ ಮಹಿಳಾ ಕಾಲೇಜು ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿಯೇ ಸ್ಥಾಪನೆ ಮಾಡಲಾಗಿದೆ ಎಂದರು.
ಅಲ್ಲದೇ ಒಳ್ಳೆಯ ಶಿಕ್ಷಣ ಪಡೆದು ಗಂಡು ಹೆಣ್ಣು ಎಂಬ ಭೇದ-ಭಾವ ಮರೆತು ಸಹಬಾಳ್ವೆಯಿಂದ ಒಟ್ಟಿಗೆ ಬಾಳುವ ಶಿಕ್ಷಣ ನಿಮ್ಮದಾಗಿರಬೇಕು ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕಮಲಾ ಸೊಪ್ಪಿನ್, ನಮ್ಮ ಕಾಲೇಜಿನಲ್ಲಿ ಎರಡನೇ ಬಾರಿಗೆ ಗ್ರ್ಯಾಜುಯೇಷನ್ ಡೇ ಆಚರಿಸುತ್ತಿದ್ದೇವೆ. ವಿದ್ಯಾರ್ಥಿನಿಯರು ದಾವಣಗೆರೆ ವಿವಿ ಪದವಿ ಪರೀಕ್ಷೆಯಲ್ಲಿ 10 ರಾಂಕ್ ಬಂದಿದೆ. ಇದೊಂದು ಮೈಲಿಗಲ್ಲು ದಿನ ನಮಗೆ. ಈ ವಿದ್ಯಾರ್ಥಿನಿಯರಿಗೆ ನಮ್ಮ ಬಾಪೂಜಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಶಾಮನೂರು ಶಿವಶಂಕರಪ್ಪ ಅವರು ತಲಾ 5001 ರೂ. ಚೆಕ್ ನೀಡಿ ಗೌರವಿಸಿದ್ದಾರೆ ಎಂದರು.
232 ವಿದ್ಯಾರ್ಥಿನಿಯರು ಗೌನ್ ಹ್ಯಾಟ್, ಪದವಿ ಪಡೆದ ಪ್ರಮಾಣ ಪತ್ರ ಹಿಡಿದು ಫೋಟೋ ತೆಗೆಸಿಕೊಂಡು ಸಂಭ್ರಮಿಸಿದರು.
ಐಕ್ಯೂಎಸಿ ಸಂಯೋಜಕ ಪ್ರೊ.ಆರ್.ಆರ್.ಶಿವಕುಮಾರ್ ಮಾತನಾಡಿದರು. ಸಸ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ.ಪ್ರಭಾವತಿ ಎಸ್.ಹೊರಡಿ, ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಕೆ.ಗುರುರಾಜ್, ಡಾ. ಆರ್.ಜಿ.ಕವಿತಾ, ಡಾ.ಜೆ.ಜಿ.ನಾಗವೇಣಿ, . ಎಲ್ಲಾ ವಿಭಾಗದ ಮುಖ್ಯಸ್ಥರು, ಗ್ರಂಥಪಾಲಕರು, ಬೋಧಕ- ಬೋಧಕೇತರ ವರ್ಗದವರು ಇದ್ದರು.