ದಾವಣಗೆರೆ (Davanagere): ಸಿಎನ್ಜಿ ಫಿಲ್ಲಿಂಗ್ ಸ್ಟೇಷನ್ಗಳನ್ನು ಹೆಚ್ಚಳ ಮಾಡುವಂತೆ ಒತ್ತಾಯಿಸಿ ದಾವಣಗೆರೆ ಸ್ಮಾರ್ಟ್ ಸಿಟಿ ಆಟೋ ಚಾಲಕರ–ಮಾಲೀಕರ ಸಂಘ ಹಾಗೂ ಶಾಲಾ ಮಕ್ಕಳ ಆಟೊ, ವ್ಯಾನ್ ಚಾಲಕರ ಸಂಘದ ಸದಸ್ಯರು ಸಂಸದರ ಮನೆ ಬಳಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ನಂತರ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಮನವಿ ಸಲ್ಲಿಸಿದರು.
ಶಾಲಾ ಮಕ್ಕಳ ಆಟೊ ಹಾಗೂ ವ್ಯಾನ್ ಚಾಲಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವಿ.ಮಂಜುನಾಥ್ ಮಾತನಾಡಿ, ಆಟೊಗಳ ಸಂಖ್ಯೆ ಜಾಸ್ತಿ ಇದೆ. ಇತರೆ ವಾಹನಗಳಾದ ಕಾರು, ಟಾಟಾ ಏಸ್, ಲಾರಿ, ಬಸ್ಗಳಿಗೂ ಸಿಎನ್ಜಿ ಬಳಸಲಾಗುತ್ತಿದೆ. ನಗರದಲ್ಲಿರುವ 3 ಸಿಎನ್ಜಿ ಫಿಲ್ಲಿಂಗ್ ಸ್ಟೇಷನಗಳಿಗೆ ಸರಿಯಾಗಿ ಸಿಎನ್ಜಿ ಪೂರೈಕೆಯಾಗುತ್ತಿಲ್ಲ. ಇದರಿಂದಾಗಿ ಆಟೊ ಚಾಲಕರು, ಮಾಲೀಕರಿಗೆ ತೊಂದರೆ ಉಂಟಾಗುತ್ತಿದೆ. ಸಿಎನ್ಜಿ ತುಂಬಿಸಿಕೊಳ್ಳಲು ಬಂಕ್ಗಳ ಮುಂದೆ ಗಂಟೆಗಟ್ಟಲೇ ಕಾಯುವ ಸ್ಥಿತಿ ನಿರ್ಮಾಣವಾಗಿದೆ ಎಂದರು.
ನಗರದಲ್ಲಿ ಸಿಎನ್ಜಿ ದೊರೆಯದಿದ್ದಾಗ ಹರಿಹರ, ಚಿತ್ರದುರ್ಗ , ರಾಣೇಬೆನ್ನೂರು, ಹಾವೇರಿಗೆ ಹೋಗಬೇಕಾದ ಸ್ಥಿತಿ ಇದೆ. ಆಟೊ ಓಡಿಸುವುದನ್ನು ಬಿಟ್ಟು, ಗ್ಯಾಸ್ ತುಂಬಿಸುವುದೇ ಕಾಯಕವಾಗಿದೆ. ಸಿಎನ್ಜಿ ಸಮಸ್ಯೆಯಿಂದಾಗಿ ಶೇ 80ರಷ್ಟು ಆಟೊಗಳನ್ನು ಮನೆ ಮುಂದೆ ನಿಲ್ಲಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
Read also : ಗೃಹ ಬಳಕೆ ಸಿಲೆಂಡರ್, ಡಿಸೇಲ್ ಮತ್ತು ಅಗತ್ಯ ದಿನಬಳಕೆಯ ವಸ್ತುಗಳ ಬೆಲೆ ಏರಿಕೆ : ಪ್ರತಿಭಟನೆ
ನಗರದಲ್ಲಿ ಇನ್ನೂ 6 ಕಡೆಗಳಲ್ಲಿ ಸಿಎನ್ಜಿ ಫಿಲ್ಲಿಂಗ್ ಸ್ಟೇಷನಗಳನ್ನು ಆರಂಭಿಸಬೇಕು. ಶಾಮನೂರು ರಸ್ತೆಯಲ್ಲಿ 2, ಪಿ.ಬಿ. ರಸ್ತೆಯ ಡಿಸಿ ಸರ್ಕಲ್ ಬಳಿ 2, ಬೂದಾಳ್ ರಸ್ತೆಯಲ್ಲಿ 2 ಸಿಎನ್ಜಿ ಬಂಕ್ಗಳನ್ನು ತೆರೆಯಬೇಕಿದ್ದು, ಈ ಬಗ್ಗೆ ಸಂಬಂಧಪಟ್ಟ ಏಜೆನ್ಸಿಗಳಿಗೆ ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಎಸ್.ಎಂ .ಕೊಟ್ರೇಶಪ್ಪ, ಖಜಾಂಚಿ ಎಚ್.ಆರ್.ರಾಘವೇಂದ್ರ, ಉಪಾಧ್ಯಕ್ಷ ರೇವಣಸಿದ್ದಪ್ಪ, ಗಂಗಪ್ಪ ಕೆ.ಜಿ. ಸೇರಿದಂತೆ ಹಲವು ಚಾಲಕರು ಭಾಗವಹಿಸಿದ್ದರು.