ದಾವಣಗೆರೆ: ಕಾಂತರಾಜ ಆಯೋಗ ನೀಡಿದ ಜಾತಿಗಣತಿ ವರದಿಯನ್ನು ಬಲಾಢ್ಯ ಸಮುದಾಯಗಳಿಗೆ ಮಣಿದು ಕಸದ ಬುಟ್ಟಿಗೆ ಎಸೆಯಲಾಗಿದೆ. 90 ದಿನಗಳಲ್ಲಿ ಜಾತಿಗಣತಿ ವರದಿ ರೂಪಿಸುವುದು ತುಂಬಾನೇ ಕಷ್ಟ. ಇನ್ನು ಉಳಿದಿರುವುದು 24 ದಿನಗಳು ಕಳೆದು ಹೋಗಿವೆ. ಉಳಿದ 45 ದಿನಗಳಲ್ಲಿ ವರದಿ ತುಂಬಾನೇ ಕಷ್ಟ ಎಂದು ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ಆದೇಶದ ಮೇರೆಗೆ ಹಾಗೂ ಪ್ರತಿ ಹತ್ತು ವರ್ಷ ಆದ ಮೇಲೆ ಹೊಸ ಸರ್ವೆ ಮಾಡಬೇಕೆಂಬ ಕಾರಣ ನೀಡಿ ಜಾತಿ ಗಣತಿ ವರದಿ ತಿರಸ್ಕರಿಸಲಾಗಿದೆ. ಈ ಕಾರಣ ನೀಡಿ 90 ದಿನಗಳಲ್ಲಿ ಮರು ಸರ್ವೆೇ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದರು. ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಈ ಘೋಷಣೆ ಮಾಡಿದ್ದಾರಷ್ಟೇ. ಜಾತಿ ಗಣತಿ ವರದಿ ಜಾರಿ ಭರವಸೆ ಕೊಟ್ಟಿದ್ದೇ ಸರ್ಕಾರ. ಇದೇ ಸರ್ಕಾರ ವರದಿ ಅಂಕಿಅಂಶಗಳ ಬಹಿರಂಗಪಡಿಸಿರುವುದು ಎಸ್ಸಿ, ಎಸ್ಟಿ, ಒಬಿಸಿ ಸಮುದಾಯಗಳಿಗೆ ಬೇಸರ ತರಿಸಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈಗ ಶಾಲೆಗಳು ನಡೆಯುತ್ತಿವೆ. ಪ್ರಿಪೇಟರಿ, ಬೋರ್ಡ್ ಪರೀಕ್ಷೆ ಸಿದ್ಧತೆಗೆ ಶಿಕ್ಷಕರು ಒತ್ತಡದಲ್ಲಿದ್ದಾರೆ. ಆದ್ದರಿಂದ ಶಿಕ್ಷಕರಿಂದ ಮರು ಸರ್ವೆ ಸಾಧ್ಯವಿಲ್ಲ. ಹೊರಗುತ್ತಿಗೆ ಆಧಾರದ ಮೇಲೆ ಕರೆತಂದು ಸರ್ವೆ ಮಾಡಿಸುತ್ತೇವೆ ಎಂದು ಸರ್ಕಾರ ಹೇಳಿದೆ. ಆದ್ರೆ, ಈ ಬಗ್ಗೆ ಸ್ಪಷ್ಟನೆಯನ್ನೂ ಕೊಟ್ಟಿಲ್ಲ. ಸರ್ವೆಗೆ ಹೋಗುವವರ ಅರ್ಹತೆ ಏನು? ಮಾನದಂಡ ಏನು? ತರಬೇತಿ ಆಗಿದೆಯಾ ಎಂಬ ಕುರಿತಂತೆ ಸ್ಪಷ್ಟತೆ ಇಲ್ಲ. ಕರ್ನಾಟಕದ ಏಳೂವರೆ ಕೋಟಿ ಜನರ ಸರ್ವೆ ಮಾಡುವಂಥದ್ದು. ಮೂಲೆ ಮೂಲೆಗೆ, ಮನೆ ಮನೆಗೆ ಹೋಗಿ ಸರ್ವೆ ಮಾಡಲು ಉಳಿದ 45 ದಿನಗಳು ಸಾಕಾಗುವುದಿಲ್ಲ ಎಂದು ಹೇಳಿದ್ದಾರೆ.
ಬಲಿಷ್ಠ ಜಾತಿಗಳ ಲಾಬಿ, ಹೆದರಿಕೆಗೆ ಮಣಿದು ಈ ನಿರ್ಧಾರ ಮಾಡಲಾಗಿದೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಕಾಂತರಾಜ ಆಯೋಗದ ವರದಿಯು ಶೇಕಡಾ 75ರಷ್ಟು ಅಂದರೆ ಸುಮಾರು 4.1 ಕೋಟಿಯಷ್ಟು ಒಬಿಸಿ ಸಮುದಾಯದ ಜನರಿದ್ದಾರೆ ಎಂದು ಹೇಳಿದ್ದರೆ, ಮತ್ತೊಂದು ವರದಿ ಪ್ರಕಾರ 211 ಕ್ಷೇತ್ರಗಳಲ್ಲಿ ಒಬಿಸಿ ಮತಗಳು ನಿರ್ಣಾಯಕವಾಗಿವೆ. ಕಾಂತರಾಜ ಆಯೋಗದ ವರದಿ ಬಹಿರಂಗಪಡಿಸಿದರೆ ಖುರ್ಚಿಗೆ ಕುತ್ತು ಬರುತ್ತದೆ. ಅಧಿಕಾರ ಸಿಗುವುದಿಲ್ಲ ಎಂಬ ಕಾರಣದಿಂದ ಕೆಲ ಶಾಸಕರು, ಸಚಿವರು ಸರ್ಕಾರದ ಮೇಲೆ ಒತ್ತಡ ಹಾಕಿ ವರದಿ ಬಿಡುಗಡೆ ಮಾಡದಂತೆ ಒತ್ತಡ ಹೇರುವ ಸಾಧ್ಯತೆ ನಿಚ್ಚಳವಾಗಿದೆ ಎಂದು ತಿಳಿಸಿದ್ದಾರೆ.
ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರೂಪಿಸಿದ್ದ ಜಾತಿಗಣತಿ ಬಿಡುಗಡೆ ಬಗ್ಗೆಎಲ್ಲೂ ಚರ್ಚೆಯಾಗಿಲ್ಲ. ಎಲ್ಲರೂ ಮೌನವಾಗಿದ್ದಾರೆ. ಧ್ವನಿ ಎತ್ತುತ್ತಿಲ್ಲ. ಬೇರೆ ಬೇರೆ ರೀತಿಯಲ್ಲಿ ರಹಸ್ಯ ಸಭೆಗಳಾಗುತ್ತಿವೆ. ಕೇಂದ್ರ ಸರ್ಕಾರವು ಜಾತಿಗಣತಿ, ಜನಗಣತಿ ಮಾಡಲಿ. ಆದರೂ ಕಾಂತರಾಜ ವರದಿಯಲ್ಲಿರುವುದನ್ನು ಬಹಿರಂಗಪಡಿಸಿ ಎಂಬ ಆಗ್ರಹವೂ ಕೇಳಿ ಬರುತ್ತಿದೆ. ಚಿಕ್ಕದಾಗಿ ಕೂಗು ಕೇಳಿ ಬರುತ್ತಿದೆಯೇ ಹೊರತು ದೊಡ್ಡ ಮಟ್ಟದ ಹೋರಾಟ ಕಾಣಿಸುತ್ತಿಲ್ಲ. ಸಿದ್ದರಾಮಯ್ಯರು ಅಧಿಕಾರದಿಂದ ಇಳಿದ ಮೇಲೆ ರಾಜಕೀಯ ಪರಿಸ್ಥಿತಿ ಅಷ್ಟು ಸುಲಭವಾಗಿರುವುದಿಲ್ಲ. ಎಸ್ಸಿ, ಎಸ್ಟಿ, ಒಬಿಸಿ ವರ್ಗದವರ ಪರ ನಿಲ್ಲುವವರು ಯಾರು? ಹಿತಾಸಕ್ತಿ ಕಾಪಾಡುವರು ಯಾರು? ಎಂಬ ಪ್ರಶ್ನೆ ಎದ್ದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಎಸ್ಸಿ, ಎಸ್ಟಿ, ಒಬಿಸಿ ವರ್ಗದವರ ಹಿತಾಸಕ್ತಿ ಕಾಪಾಡುವ ವ್ಯಕ್ತಿ ಇದ್ದಾಗಲೇ ಜಾತಿಗಣತಿ ವರದಿ ಬಿಡುಗಡೆ ಆಗಲಿಲ್ಲ. ಮುಂದಿನ ದಿನಗಳಲ್ಲಿ ರಾಜಕೀಯ ಅಧಿಕಾರ ಇಲ್ಲದಿರುವ ಅವಧಿಯಲ್ಲಿ ಯಾರು ಹಿತಾಸಕ್ತಿ ಕಾಪಾಡುತ್ತಾರೆ. ಈ ಸಮುದಾಯಗಳು ಶೈಕ್ಷಣಿಕವಾಗಿ ಮುಂದೆ ಬರುವುದು ಕಷ್ಟ. ಅಧಿಕಾರಿಗಳಾಗುವುದು, ಅಧಿಕಾರದಲ್ಲಿರುವ ಅಧಿಕಾರಿಗಳ ಹಿತಾಸಕ್ತಿ ಮೂಲೆಗುಂಪು ಮಾಡುವ ಪ್ರಯತ್ನ ನಡೆಯುತ್ತದೆ. ಬೆಂಗಳೂರು ಕಮೀಷನರ್ ಬಿ. ದಯಾನಂದ್ ಅವರು ಎಸ್ಟಿ ಸಮುದಾಯದವರು. ಅವರ ಪರವಾಗಿ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಲಿಲ್ಲ. ಮುಂದಿನ ದಿನಗಳು ಕರಾಳ ಆಗುವ ಸಾಧ್ಯತೆ ಇದೆ. ಈ ಬಗ್ಗೆ ಚರ್ಚೆಯಾಗಬೇಕು. ಸರ್ಕಾರ ಹೇಳಿದ್ದೇ ಸತ್ಯ ಎಂದು ಕುಳಿತರೆ ಆಗದು ಎಂದು ಹೇಳಿದ್ದಾರೆ.
Read also : ದಾವಣಗೆರೆ | ವಿಕಲಚೇತನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನ
ಕೆಲ ಸಂಘಟನೆಗಳು ಸರ್ಕಾರ ಹಾಗೂ ಪಕ್ಷವೊಂದರ ಪರ ಕೆಲಸ ಮಾಡುತ್ತಿರುವುದು ಕಂಡು ಬರುತ್ತಿದೆ. ಸಮಾಜಗಳ ಪರವಾಗಿ ಧ್ವನಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ಅಭಿಪ್ರಾಯ ಜನಸಾಮಾನ್ಯರಿಂದ ವ್ಯಕ್ತವಾಗುತ್ತಿದೆ. ಸರ್ಕಾರ ಉಳಿಸಲು, ವ್ಯಕ್ತಿ ಬೆಳೆಸಲು ಹೋರಾಟ ಮಾಡುವುದರಿಂದ ಶೋಷಿತ ವರ್ಗಗಳಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಲು ಆಗದು. ಈ ಬಗ್ಗೆ ತುಂಬಾ ಚಿಂತನೆ ಮಾಡಬೇಕು. ಜಾಗೃತಿ ಮೂಡಿಸಬೇಕು. ಆಗ ಮಾತ್ರ ಸಮಸಮಾಜ ನಿರ್ಮಾಣ ಮಾಡಲು ಸಾಧ್ಯ. ಇಲ್ಲದಿದ್ದರೆ ಅಸಮಾನತೆ ಇನ್ನೂ ಆಳವಾಗಿ ಬೆಳೆಯುತ್ತಾ ಹೋಗುತ್ತದೆ. ಗುಲಾಮರಾಗಿ ಬದುಕುವ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ಜಿ. ಬಿ. ವಿನಯ್ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.