ಶಿವಮೊಗ್ಗ : ಮುಂಗಾರು ಬೆಳೆಗೆ ಬಲದಂಡೆ ನಾಲೆಗೆ ಜು.22 ರಿಂದ 120 ದಿನಗಳ ಕಾಲ ನೀರು ಹರಿಸಲಾಗುವುದು. ಎಡದಂಡೆ ನಾಲೆಗೆ ಶೀಘ್ರದಲ್ಲೇ ದಿನಾಂಕ ನಿಗದಿ ಪಡಿಸಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.
ಭದ್ರಾ ಯೋಜನೆಯ ಅಚ್ಚುಕಟ್ಟು ಪ್ರದೇಶದ 2025-26 ನೇ ಸಾಲಿನ ಮುಂಗಾರು ಬೆಳೆಗೆ ನೀರು ಹರಿಸುವ ಕುರಿತು ಸೋಮವಾರ ಮಲವಗೊಪ್ಪದ ಭದ್ರಾ ಕಾಡಾ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ, ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜು.22 ರಿಂದ ಬಲದಂಡೆ ನಾಲೆಗೆ 120 ದಿನಗಳ ಕಾಲ ನೀರು ಹರಿಸಲು ಸಭೆ ನಿರ್ಧರಿಸಿದ್ದು, ಸುರಕ್ಷತಾ ಕ್ರಮಗಳನ್ನು ಕೈಗೊಂಡು ನೀರು ಬಿಡಬೇಕು. ಎಡದಂಡ ನಾಲೆಯಲ್ಲಿ ರಿಪೇರಿ ಕಾರ್ಯ ನಡೆಯುತ್ತಿದ್ದು, ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಿದ್ದು . ಶೀಘ್ರದಲ್ಲೇ ಎಡದಂಡ ನಾಲೆಗೆ ನೀರು ಹರಿಸಲು ದಿನಾಂಕ ನಿಗದಿಗೊಳಿಸಲಾಗುವುದು. ಚಿಕ್ಕಮಗಳೂರು ಜಿಲ್ಲೆಗೆ ನೀರು ಹಂಚಿಕೆ ಕುರಿತು ನೀರಾವರಿ ಸಚಿವರೊಂದಿಗೆ ಸಭೆ ನಿಗದಿಪಡಿಸಿ ಮಾತನಾಡಬೇಕು. ಕಾಡಾ ವ್ಯಾಪ್ತಿಯಲ್ಲಿ 537 ನೀರು ಬಳಕೆದಾರರ ಸಂಘಗಳಿದ್ದು, ಇವುಗಳಿಗೆ ನೀರು ಬಳಕೆ,ಇತರೆ ರೈತ ಚಟುವಟಿಕೆ ಕುರಿತು
ಕಾರ್ಯಾಗಾರ ಮಾಡಿದರೆ ಒಳಿತು ಎಂದು ಸಲಹೆ ನೀಡಿದರು.
ಹರಿಹರ ಶಾಸಕ ಬಿ.ಪಿ.ಹರೀಶ್ ಮಾತನಾಡಿ, ಮಂಗಳವಾರದಿಂದಲೇ ನೀರು ಬಿಟ್ಟರೆ ಒಳಿತಾಗುತ್ತದೆ. ಹರಪನಹಳ್ಳಿ ಕೊನೆ ಭಾಗಕ್ಕೆ ನೀರು ತಲುಪುವುದಿಲ್ಲ. ರೈತಪರ ಕಾಳಜಿವಹಿಸಿ ಕೊನೆ ಭಾಗದ ರೈತರಿಗೆ ನೀರು ತಲುಪಿಸಬೇಕು. ಅಕ್ರಮ ಪಂಪ್ ಸೆಟ್ ತೆರವು ಕಷ್ಟವಾಗಿದೆ. ಕೆರೆ ತುಂಬಿಸಲು, ಕುಡಿಯುವ ನೀರಿಗಾಗಿ ಭದ್ರಾ ನಾಲೆಯನ್ನು ಸೀಳುತ್ತಾ ಹೋಗುವುದು ಅಷ್ಟು ಸರಿಯಲ್ಲ. ಇದರಿಂದ ಮುಂದಿನ ದಿನಗಳಲ್ಲಿ ಕಷ್ಟ ಆಗುತ್ತದೆ. ಜಲಾಶಯ ಉಳಿವಿಗೆ ಹೆಚ್ಚು ಅನುದಾನ ಸರ್ಕಾರ ನೀಡಬೇಕು.ನಾಲೆಗಳು ಕೆಲವೆಡೆ ಹೊಡೆದಿದ್ದು ರಿಪೇರಿ ಹಾಗೂ ಹೂಳು ತೆಗೆಯಲು ಅನುದಾನ ನೀಡಬೇಕು. ಹಾಗೂ ನಾಲೆ ಸೀಳುವುದನ್ನು ಸಭೆ ವಿರೋಧಿಸಬೇಕು ಎಂದು ಮನವಿ ಮಾಡಿದರು.
ಹೊನ್ನಾಳಿ ಶಾಸಕರಾದ ಶಾಂತನಗೌಡ ಮಾತನಾಡಿ, ನಾಳೆಯಿಂದಲೇ ನೀರು ಬಿಟುವ ಬಗ್ಗೆ ನೀರಿನ ವಿಳಾಸಪಟ್ಟಿಯನ್ನು ಸಿದ್ದಪಡಿಸಿದರೆ ಒಳಿತು. ಕೊನೆ ಭಾಗದ ರೈತರಿಗೂ ನೀರು ಸಿಗಬೇಕು ಎಂದರು.
ಹರಪನಹಳ್ಳಿ ಶಾಸಕರಾದ ಲತಾ ಮಲ್ಲಿಕಾರ್ಜುನ ಕೊನೆಯ ಭಾಗಕ್ಜೆ ತಲುಪಲು 400 ಕಿ.ಮೀ ಸಾಗಿ ಬರಬೇಕು. ಇಂದೇ ಬಿಟ್ಟರೆ ಒಳಿತು ಎಂದರು.
ತರೀಕೆರೆ ಶಾಸಕರಾದ ಜಿ.ಹೆಚ್.ಶ್ರೀನಿವಾಸ್, ಬಲದಂಡ ನಾಲೆಯ ಅನೇಕ ಭಾಗದಲ್ಲಿ ಹಲವಾರು ಕಡೆ ಅನಧಿಕೃತ ಪಂಪ್ ಸೆಟ್ ಗಳು ಇವೆ. ಲೀಕೇಜ್ ಗಳುವೆ.ಅನಧಿಕೃತ ರೈತರ ಪಂಪ್ ಸೆಟ್ ಕಡಿವಾಣ ಹಾಕಬೇಕು ಎಂದರು.
ಸಮಿತಿ ಸದಸ್ಯರಾದ ತೇಜಸ್ವಿ ಪಟೇಲ್ ಮಾತನಾಡಿ , ವೇಳಾಪಟ್ಟಿ ಬಗ್ಗೆ ಯಾತಲ್ಲೂ ಭಿನ್ನಾಭಿಪ್ರಾಯ ಇಲ್ಲ. ಕಾಲುವೆ ತುಂಬಾ ನೀರು ಹರಿಸಲಾಗುತ್ತದೆ. ಆದರೂ ಕೊನೆಭಾಗ ತಲುಪುತ್ತಿಲ್ಲವೆಂದರೆ , ಲೀಕೇಜ್ ತಡೆದು ಉಳಿಸಬೇಕು. ಹೂಳು, ರಿಪೇರಿ ಸೇರಿದಂತೆ ನಾಲೆಗಳ ನಿರ್ವಹಣೆ ಸಮರ್ಪಕವಾಗಿ ಆಗಬೇಕು. ಎಲ್ಲ ಭಾಗದವರಿಗೂ ಅನುಕೂಲ ಆಗುವಂತಹ ನಿರ್ಧಾರ ತೆಗೆದುಕೊಳ್ಳಬೇಕು ಎಂದರು.
ರೈತ ಮುಖಂಡರು, ತುಂಗಾ ದಿಂದ ಭದ್ರಾ ಜಲಾಶಯಕ್ಕೆ ನೀರು ಲಿಫ್ಟ್ ಮಾಡುವ ಯೋಜನೆ ಜಾರಿ ಮಾಡಬೇಕು ಹಾಗೂ ಎಡದಂಡೆಗೆ ಆ.1 ರಿಂದ ನೀರು ಬಿಡಲು ಮನವಿಮಾಡಿದರು.
ಭದ್ರಾ ಕಾಡಾ ಅಧ್ಯಕ್ಷ ಡಾ.ಅಂಶುಮಂತ್ ಮಾತನಾಡಿ, ಕಟ್ಟಕಡೆಯ ರೈತರಿಗೂ ಯಾವುದೇ ತೊಂದರೆಯಾಗದಂತೆ ನೀರು ಬಿಡುತ್ತೇವೆ. ರೈತರ ಹಿತ ಕಾಪಾಡಲು ಸದಾ ಸಿದ್ದವಾಗಿದ್ದೇವೆ.ತಾಂತ್ರಿಕ, ಕೃಷಿ ವಿಭಾಗಗಳು ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿವೆ. ಸವಳು ಜವಳು ಯೋಜನೆ ಜಾರಿ ಮಾಡಲು ರೈತ ರ ಸಹಕಾರ ಬೇಕು. ಭೂಮಿ ಫಲವತ್ತತೆಯ,ಸುರಕ್ಷತೆ ಬಗ್ಗೆ ಸಹ ಕಾಡಾ ಕೆಲಸ ಮಾಡುತ್ತಿದೆ.ಕಾಡಾ ವ್ಯಾಪ್ತಿಯಲ್ಲಿ 35 ನೀರಾವರಿ ಯೋಜನೆಗಳು ಬರುತ್ತವೆ.537 ೫೩೭ ನೀರು ಬಳಕೆದಾರರ ಸಂಘಗಗಳು ಇವೆ. 110ಸಂಘಗಳಿಗೆ ಸರ್ಕಾರ ರೂ. 1 ಲಕ್ಷ ಅನುದಾನ ನೀಡಲಾಗಿದೆ.ಸಹಕಾರ ವ್ಯವಸ್ಥೆ ಇದೆ. ನರೇಗಾ ಸಹಭಾಗಿತ್ವದಲ್ಲಿ ಕೆಲಸಕ್ಕೆ ಮುಂದಾಗಿದ್ದೇವೆ. ಯಾವುದೇ ನೀರಾವರಿ ಸಮಸ್ಯೆ ಪರಿಹರಿಸಲು ಕಾಡಾ ಬದ್ದವಾಗಿದೆ ಎಂದರು
ಸಭೆಯಲ್ಲಿ ಮುಂಗಾರು ಬೆಳೆಗೆ ನೀರು ಹರಿಸಲು ದಿನಾಂಕವನ್ನು ನಿರ್ಧರಿಸುವ ಕುರಿತು ಹಾಗೂ ನೀರಾವರಿಗೆ ಸಂಬಂಧಿಸಿದಂತೆ ಇತರೆ ವಿಷಯಗಳ ಕುರಿತು ಜನಪ್ರತಿನಿಧಿಗಳು, ಸದಸ್ಯರು, ರೈತ ಮುಖಂಡರಿಂದ ಅಗತ್ಯ ಸಲಹೆಗಳನ್ನು ಪಡೆಯಲಾಯಿತು.
Read also : ದಾವಣಗೆರೆ | ನಗರದ ಪ್ರಮುಖ ವೃತ್ತಕ್ಕೆ ಶ್ರೀ ಮಡಿವಾಳ ಮಾಚಿದೇವ ಹೆಸರಿಡುವಂತೆ ಆಗ್ರಹಿಸಿ ಮನವಿ
ಭದ್ರಾವತಿ ತಾಲ್ಲೂಕಿನ ಕಾಗೆಕೋಡಮಗ್ಗೆ ನೀರು ಬಳಕೆದಾರರ ಸಂಘದ ಸಾಧನೆಗೆ ರಾಷ್ಟ್ರ ಮಟ್ಟದಲ್ಲಿ ಎರಡನೇ ಸ್ಥಾನ ಬಂದಿದ್ದು, ಸಂಘದ ಕಾರ್ಯದರ್ಶಿ ರವಿಕುಮಾರ್ ಮಾತನಾಡಿದರು.
ಸಭೆಯಲ್ಲಿ ವಿಧಾನ ಸಭೆ ಶಾಸಕರಾದ ಶಾಸಕ ಕೆ.ಎಸ್.ಬಸವಂತಪ್ಪ , ಎಸ್ ಎನ್ ಚನ್ನಬಸಪ್ಪ, ಶಾಂತನಗೌಡ, ಬಸವರಾಜಪ್ಪ , ವಿಪ ಶಾಸಕರಾದ ಬಲ್ಕೀಶ್ ಬಾನು , ಸಲಹಾ ಸಮಿತಿ ಸದಸ್ಯರು, ರೈತ ಮುಖಂಡರು, ಆಡಳಿತಾಧಿಕಾರಿ, ಮುಖ್ಯ ಇಂಜಿನಿಯರ್ , ಇತರೆ ಅಧಿಕಾರಿಗಳು ಹಾಜರಿದ್ದರು