ದಾವಣಗೆರೆ : ಮನೆ-ಮನೆಗೆ ಪೊಲೀಸ್ ಪೊಲೀಸ್ ಅತ್ಯಂತ ಸರಳವಾಗಿ ಮನೆಗಳಿಗೆ ತಲುಪಿ ಜನಸ್ನೇಹಿಯಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ರೂಪಿಸಿದ ಯೋಜನೆ ಇದಾಗಿದ್ದು ಯಶಸ್ವಿಗೊಳಿಸುವ ಜವಾಬ್ದಾರಿ ಇಲಾಖೆ ಮೇಲಿದೆ ಎಂದು ಗೃಹ ಸಚಿವ ಡಾ; ಜಿ.ಪರಮೇಶ್ವರ್ ತಿಳಿಸಿದರು.
ಭಾನುವಾರ ಪೊಲೀಸ್ ಇಲಾಖೆಯಿಂದ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಏರ್ಪಡಿಸಲಾದ ಮನೆ-ಮನೆಗೂ ಪೊಲೀಸ್ ಮಿತ್ರಪಡೆ, ಪೊಲೀಸ್ ನಡೆ ಸಮುದಾಯದ ಕಡೆ ಕಾರ್ಯಕ್ರಮ ಉದ್ಘಾಟಿಸಿ ಪೊಲೀಸ್ ಮಿತ್ರಪಡೆ, ಜಂಟಿ ಕೈಗಳಾಗಿ ಕೆಲಸ ಮಾಡುವ ಸಾರ್ವಜನಿಕರಿಗೆ ಪ್ರಶಂಸನೀಯ ಪತ್ರ ನೀಡಿ, ಮನೆ-ಮನೆಗೆ ಪೊಲೀಸ್ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದರು.
ರಾಜ್ಯದಲ್ಲಿ ಮೂರುಭಾರಿ ಗೃಹ ಸಚಿವನಾಗಿದ್ದು ಇಲಾಖೆಗೆ ಕಾಯಕಲ್ಪ ತರಬೇಕು ಮತ್ತು ಮಾನವ ಸಂಬಂಧಗಳನ್ನು ಹೊಂದಿರುವ ಇಲಾಖೆ ಬಗ್ಗೆ ಸಾರ್ವಜನಿಕರಿಗಿರುವ ತಪ್ಪು ಕಲ್ಪನೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಸುಧಾರಣೆ ಮಾಡಲಾಗುತ್ತಿದೆ. ಮನೆ-ಮನೆಗೆ ಪೊಲೀಸ್ ಎಂಬುದು ಇದರ ಭಾಗವಾಗಿದೆ. ಜರ್ಮನ್ ರೀತಿ ಜನಸ್ನೇಹಿ ವ್ಯವಸ್ಥೆಯನ್ನು ರಾಜ್ಯದಲ್ಲಿ ತರಬೇಕೆಂದು ಅಲ್ಲಿಗೆ ಹಿರಿಯ ಅಧಿಕಾರಿಗಳೊಂದಿಗೆ ಅಧ್ಯಯನ ಪ್ರವಾಸ ಕೈಗೊಳ್ಳಲಾಗಿತ್ತು. ಅಲ್ಲಿನ ಪೊಲೀಸ್ ಠಾಣೆ, ಆಡಳಿತ ಕಚೇರಿ, ತರಬೇತಿ ಕೇಂದ್ರಗಳಿಗೆ ಭೇಟಿ ನೀಡಿ ಅಧ್ಯಯನ ಮಾಡಲಾಯಿತು. ಅಲ್ಲಿನ ಪೊಲೀಸ್ ವ್ಯವಸ್ಥೆ ಬಗ್ಗೆ ಎರಡನೇ ಮಹಾಯುದ್ದದಿಂದಾಗಿ ಜನರಿಗೆ ಅತ್ಯಂತ ಕೆಟ್ಟ ಮನೋಭಾವವಿತ್ತು. ಅದನ್ನು ಹೋಗಲಾಡಿಸಲು ಅಲ್ಲಿನ ಸರ್ಕಾರಕ್ಕೆ ನಲವತ್ತು ವರ್ಷಗಳೇ ಬೇಕಾಯಿತು ಎಂದು ಪೊಲೀಸ್ ಸುಧಾರಣಾ ವ್ಯವಸ್ಥೆಯ ಬಗ್ಗೆ ಮಾತನಾಡಿದರು.
ಪೊಲೀಸ್ ವ್ಯವಸ್ಥೆಯನ್ನು ಜನಸ್ನೇಹಿಯಾಗಿಸುವುದರಿಂದ ಅನೇಕ ಅರಪಾಧಗಳನ್ನು ತಡೆಯಬಹುದು ಮತ್ತು ಘಟನೆಗಳು ನಡೆಯದಂತೆ ತಡೆಗಟ್ಟಬಹುದಾಗಿದೆ. ಜನರ ಸಂಕಷ್ಟಗಳಿಗೆ ನೇರವಾಗಲು ಸಿಗುವವರು ಪೊಲೀಸ್ ಮಾತ್ರ, ಆದ್ದರಿಂದ ಜನರ ಸಹಭಾಗಿತ್ವವನ್ನು ಪಡೆಯುವ ಮೂಲಕ ರಕ್ಷಣೆ ಬಹಳ ಸುಲಭವಾಗಿದೆ ಎಂದರು.
ಸಬ್ ಬೀಟ್ ಪರಿಕಲ್ಪನೆ; ಪ್ರತಿ ಕಾನ್ಸ್ಟೇಬಲ್ಗೆ ಗ್ರಾಮಗಳಲ್ಲಿನ 50-60 ಮನೆಗಳನ್ನು ಬೀಟ್ ಮಾಡುವುದನ್ನು ನೀಡುವ ಮೂಲಕ ಆ ಮನೆಗಳಲ್ಲಿನ ಎಲ್ಲರ ಬಗ್ಗೆ ವಿವರ, ಮಾಹಿತಿ ಸಂಗ್ರಹಿಸುವ ಮತ್ತು ದಿನನಿತ್ಯ ನಡೆಯುವ ಘಟನೆಗಳ ಮಾಹಿತಿ ಸಂಗ್ರಹಿಸುವ ಜವಾಬ್ದಾರಿಯನ್ನು ನೀಡುವುದಾಗಿದೆ. ಒಂದು ಗ್ರಾಮದಲ್ಲಿ ಯಾವುದೊ ಒಂದು ಮನೆಗೆ ಪೊಲೀಸ್ ಹೋದರೆ ಜನರು ಅನುಮಾನ ವ್ಯಕ್ತಪಡಿಸಿ ಮಾತನಾಡಿಕೊಳ್ಳುತ್ತಾರೆ. ಅದರ ಬದಲಾಗಿ ಎಲ್ಲರ ಮನೆಗೆ ಪೊಲೀಸ್ ಹೋಗಿ ಅವರಿಗಾಗುವ ಸಮಸ್ಯೆ, ತೊಂದರೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿದಲ್ಲಿ ಜನರು ಸಹ ಅಪರಾಧಿಕ ಪ್ರಕರಣಗಳ ಮಾಹಿತಿ ನೀಡುವರು. ಕೆಲವು ಒಂಟಿ ಮಹಿಳೆ, ಏಕ ಪೋಷಕರಿರುವ ಮಕ್ಕಳು ಇರುತ್ತಾರೆ. ಈ ಪೋಷಕರಿಗೆ ತಮ್ಮ ಮಕ್ಕಳ ಬಗ್ಗೆ ಗೊತ್ತಿರಲ್ಲ, ಅವರು ಮಾದಕ ವಸ್ತುಗಳಿಗೆ ಬಲಿಯಾಗಿರುತ್ತಾರೆ. ಅಂತಹ ಮಾಹಿತಿಯು ಬೀಟ್ ಪೊಲೀಸರಿಗೆ ಸಿಗಲಿದೆ. ಬೀಟ್ ಪೊಲೀಸರು ಎಲ್ಲರ ಮಾಹಿತಿ ಸಂಗ್ರಹಿಸುವುದರಿಂದ ಅಂಕಿ ಅಂಶಗಳ ಸಮೇತ ಮಾಹಿತಿ ಇಲಾಖೆಯಲ್ಲಿ ಲಭ್ಯವಾಗಲಿದೆ. ಈ ಮೂಲಕ ಅತ್ಯಂತ ಸರಳವಾಗಿ ಜನರ ಬಳಿಗೆ ತಲುಪಲು ಮನೆ-ಮನೆಗೆ ಪೊಲೀಸ್ ವ್ಯವಸ್ಥೆಯಿಂದ ಸಾಧ್ಯವಾಗಲಿದೆ ಎಂದರು.
ಕ್ಯಾಪ್ ಬದಲಾವಣೆ; ಪೊಲೀಸ್ ಕಾನ್ಸಟೇಬಲ್ಗಳು ಹಾಕುವ ಕ್ಯಾಪ್ ಮಳೆಗೆ ನೆನೆದಾಗ ಇದರಿಂದ ಭಾರ ಹೆಚ್ಚುವುದರಿಂದ ಬದಲಾಯಿಸಬೇಕೆಂಬ ಪ್ರಸ್ತಾವನೆ ಬಹಳ ದಿನಗಳಿಂದ ಇದ್ದು ಸ್ಲೋಚ್ಗಳನ್ನು ಬದಲಿಸಲಾಗುತ್ತದೆ. ಅಧಿಕಾರಿಗಳಂತೆ ಪೊಲೀಸ್ ಕಾನ್ಸ್ಟೇಬಲ್ಗಳು ಅಧಿಕಾರಿಗಳಿದ್ದಂತೆ, ಅವರನ್ನು ಅಧಿಕಾರಿಗಳನ್ನಾಗಿ ಕಾಣುತ್ತೇನೆ. ಅವರ ಬಲವರ್ಧನೆಯು ಬಹಳ ಮುಖ್ಯವಾಗಿದೆ ಎಂದರು.
ಸೈಬರ್ ಅಪರಾಧ ತಡೆಗೆ ತರಬೇತಿ : ಸೈಬರ್ ಅಪರಾಧಗಳು ಹೆಚ್ಚಾಗುತ್ತಿದ್ದು ತರಬೇತಿ ಪಡೆದ ನುರಿತ ಸಿಬ್ಬಂದಿಗಳ ಸಂಖ್ಯೆ ಕಡಿಮೆ ಇದೆ. ಎಲ್ಲಾ ಜಿಲ್ಲಾ ಕೇಂದ್ರದಲ್ಲಿ ಸೈಬರ್ ಅಪರಾಧ ತಡೆಗೆ ಎಲ್ಲಾ ಸಿಬ್ಬಂದಿಗಳಿಗೆ ತರಬೇತಿ ಅತ್ಯವಶ್ಯಕವಾಗಿದೆ. ಹಂತ-ಹಂತವಾಗಿ ಎಲ್ಲರಿಗೂ ಸೈಬರ್ ಅಪರಾಧ ತಡೆ ಬಗ್ಗೆ ತರಬೇತಿ ಕಡ್ಡಾಯ ಮಾಡಲಾಗುತ್ತದೆ. ಸೈಬರ್ ಅಪರಾಧ ಮಾಡುವವರು ನಿಪುಣರಿರುತ್ತಾರೆ, ಅವರಿಗಿಂತಲೂ ಇಲಾಖೆ ಸಿಬ್ಬಂದಿಗಳು ನುರಿತವರಾಗಿರಬೇಕು. ದಿನಬೆಳಗಾಗುವಲ್ಲಿ ಹ್ಯಾಕ್ ಮೂಲಕ ಕೋಟಿಗಟ್ಟಲೆ ಹಣವನ್ನು ದೋಚುತ್ತಾರೆ, ಇದನ್ನು ತಡೆಯಬೇಕಾಗಿದೆ ಎಂದರು.
ಪೊಲೀಸ್ ಠಾಣೆಗಳ ಕಮಾಂಡ್ ಸೆಂಟರ್; ರಾಜ್ಯದಲ್ಲಿ 1000 ಕ್ಕಿಂತ ಹೆಚ್ಚು ಪೊಲೀಸ್ ಠಾಣೆಗಳಿದ್ದು ಜಿಲ್ಲಾ ಮಟ್ಟದಲ್ಲಿ ಎಲ್ಲಾ ಪೊಲೀಸ್ ಠಾಣೆಗಳನ್ನು ಒಳಗೊಂಡ ಕಮಾಂಡ್ಸೆಂಟರ್ ಸ್ಥಾಪಿಸಲಾಗುತ್ತದೆ. ಕಮಾಂಡ್ ಸೆಂಟರ್ ಮೂಲಕ ಲೈವ್ ಮೂಲಕ ಯಾವ ಠಾಣೆಯಲ್ಲಿ ಏನು ನಡೆಯುತ್ತಿದೆ ಎಂಬ ದೃಶ್ಯಗಳು ನೇರವಾಗಿ ಸಿಗಲಿವೆ ಎಂದರು.
Read also : “ಸಂಕಲ್ಪ” ಉಚಿತ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆ: ಸಂಸದೆ ಡಾ.ಪ್ರಭಾ ಭೇಟಿ
ವಸತಿ ಶೇ 70 ಕ್ಕೆ ಹೆಚ್ಚಿಸುವ ಗುರಿ; ಗೃಹ ಸರ್ಕಾರದ ಪ್ರಮುಖ ಇಲಾಖೆಯಾಗಿದೆ. ಇಲ್ಲಿ ಕೆಲಸ ಮಾಡುವ ಕಾನ್ಸ್ಟೇಬಲ್ಗಳಿಂದ ಅಧಿಕಾರಿಗಳ ವರೆಗೆ ವಸತಿ ಸೌಕರ್ಯ ಇರಬೇಕು. ಪ್ರಸ್ತುತ ಶೇ 40 ರಷ್ಟು ಸಿಬ್ಬಂದಿಗಳಿಗೆ ಮನೆಗಳಿವೆ. ಮುಂದಿನ 3 ವರ್ಷಗಳಲ್ಲಿ ಶೇ 70 ರಷ್ಟು ಸಿಬ್ಬಂದಿಗಳಿಗೆ ವಸತಿ ಸೌಲಭ್ಯ ಕಲ್ಪಿಸಲು ಪ್ರತಿ ವರ್ಷ ಪೊಲೀಸ್ ವಸತಿ ಗೃಹಗಳನ್ನು ನಿರ್ಮಾಣ ಮಾಡಲಾಗುತ್ತದೆ ಎಂದರು.
ಸ್ಪಷ್ಟನೆ; ಬೆಂಗಳೂರಿನಲ್ಲಿ ನಡೆದ ಐಪಿಎಲ್ ವಿಜಯೋತ್ಸವದ ಕಾಲ್ತುಳಿತ ಪ್ರಕರಣದಲ್ಲಿ 11 ಜನರು ಮೃತರಾಗಿದ್ದು ನ್ಯಾಯಾಂಗ ತನಿಖೆಗೆ ಸರ್ಕಾರ ಸೂಚಿಸಿತ್ತು. ವರದಿಯನ್ನು ನೀಡಲಾಗಿದ್ದು ವರದಿ ಸರ್ಕಾರಕ್ಕೆ ಕೈಸೇರದೆಯೇ ಪೊಲೀಸರ ತಪ್ಪಿದೆ ಎಂದು ವರದಿ ನೀಡಲಾಗಿದೆ ಎಂದು ಮಾಧ್ಯಮದಲ್ಲಿ ಸುದ್ದಿ ಮಾಹಿತಿ ಕೊರತೆಯಿಂದ ಪ್ರಸಾರವಾಯಿತು ಎಂಬ ಬಗ್ಗೆ ಸ್ಪಷ್ಟನೆ ನೀಡಿದರು.
ಹರಿಹರ ಶಾಸಕ ಬಿ.ಪಿ.ಹರೀಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಮನೆ-ಮನೆಗೂ ಪೊಲೀಸ್ ಕಾರ್ಯಕ್ರಮ ಉತ್ತಮವಾಗಿದ್ದು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಟಾನವಾಗಲೆಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್ ಉಪಸ್ಥಿತರಿದ್ದರು. ಪೂರ್ವ ವಲಯ ಪೊಲೀಸ್ ಮಹಾನಿರೀಕ್ಷಕ ಡಾ; ಆರ್.ರವಿಕಾಂತೇಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ಸ್ವಾಗತಿಸಿದರು.
ವೇದಿಕೆಯಲ್ಲಿ ಹೆಚ್ಚುವರಿ ರಕ್ಷಣಾಧಿಕಾರಿ ಪರಮೇಶ್ವರ ಹೆಗಡೆ, ತುಮಕೂರು ಹೆಚ್ಚುವರಿ ರಕ್ಷಣಾಧಿಕಾರಿ ಗೋಪಾಲ್ ಉಪಸ್ಥಿತರಿದ್ದರು. ಹೆಚ್ಚುವರಿ ರಕ್ಷಣಾಧಿಕಾರಿ ಜಿ.ಮಂಜುನಾಥ್ ವಂದಿಸಿದರು.