ಕಳೆದ ವಾರ ಮೈಸೂರು ವಿಮಾನ ನಿಲ್ದಾಣಕ್ಕೆ ಬಂದಿದ್ದ ರಾಹುಲ್ ಗಾಂಧಿ ಬಳಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಬ್ಬರಿಗೂ ಸಮಾಧಾನವಾಗಿಲ್ಲ. ಕಾರಣ? ತಮ್ಮ ತಮ್ಮ ಮನಸ್ಸು ತೋಡಿಕೊಂಡ ಈ ಇಬ್ಬರು ನಾಯಕರಿಗೆ ರಾಹುಲ್ ಗಾಂಧಿ ಅವರು:’ಡೋಂಟ್ ವರಿ,ಕಮ್ ಟು ಡೆಲ್ಲಿ’ಅಂತ ಹೇಳಿದ್ದಾರೆ.
ಅಂದ ಹಾಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಮನಸ್ಸಿನಲ್ಲಿ ಏನಿದೆ ಎಂಬುದು ರಹಸ್ಯವೇನಲ್ಲ.ಈ ಪೈಕಿ ಸಿದ್ದರಾಮಯ್ಯ ಅವರು ತಮ್ಮ ಸಂಪುಟವನ್ನು ಪುನರ್ರಚಿಸಲು ಬಯಸಿದ್ದರೆ, ಅದಕ್ಕಿಂತ ಮುಂಚೆ ತಮಗೆ ಸಿಎಂ ಪಟ್ಟ ಸಿಗಬೇಕು ಅಂತ ಡಿ.ಕೆ.ಶಿವಕುಮಾರ್ ಬಯಸಿದ್ದಾರೆ.
ಅದರೆ ಸಿದ್ದರಾಮಯ್ಯ ಅವರನ್ನು ಬಲವಂತವಾಗಿ ಕೆಳಗಿಳಿಸಲು ತಯಾರಿಲ್ಲದ ರಾಹುಲ್ ಗಾಂಧಿ, ಅದೇ ಕಾಲಕ್ಕೆ ಡಿಕೆಶಿ ಇಚ್ಚೆಗೆ ವಿರುದ್ಧವಾಗಿ ಸಂಪುಟ ಪುನರ್ರಚನೆಗೂ ಅವಕಾಶ ಕೊಡುತ್ತಿಲ್ಲ. ಗಮನಿಸ ಬೇಕಾದ ವಿಷಯವೆಂದರೆ, ಸಿದ್ದರಾಮಯ್ಯ ಅವರನ್ನಿಳಿಸಲು ರಾಹುಲ್ ಗಾಂಧಿ ಎಕೆ ಬಯಸುತ್ತಿಲ್ಲ? ಎಂಬುದು. ಎಲ್ಲಕ್ಕಿಂತ ಮುಖ್ಯವಾಗಿ ಅಹಿಂದ ವರ್ಗಗಳ ಸಾಲಿಡ್ಡು ನಾಯಕರಾಗಿ ನೆಲೆಯಾಗಿರುವ ಸಿದ್ದರಾಮಯ್ತ ಅವರನ್ನಿಳಿಸಿದರೆ ಪಕ್ಷಕ್ಕೆ ಹಾನಿಯಾಗುತ್ತದೆ ಎಂಬುದು ಅವರ ಲೆಕ್ಕಾಚಾರ.
ಆದರೆ ಇದನ್ನು ಡಿ.ಕೆ.ಶಿವಕುಮಾರ್ ಅವರಿಗೆ ನೇರವಾಗಿ ಹೇಳಲು ತಯಾರಿಲ್ಲದ ರಾಹುಲ್ ಗಾಂಧಿಯವರು,ರಾಜ್ಯ ಬಜೆಟ್ ಹತ್ತಿರದಲ್ಲಿರುವಾಗ,ಐದು ರಾಜ್ಯಗಳ ಚುನಾವಣೆ ಸನಿಹಕ್ಕೆ ಬಂದಿರುವಾಗ ಸಿದ್ದ ರಾಮಯ್ಯ ಅವರನ್ನು ಮುಟ್ಟುವುದು ಸರಿಯಲ್ಲ ಎಂಬ ನಿಲುವಿಗೆ ಬಂದಿದ್ದಾರೆ.
ಅದೇ ರೀತಿ,ಸಿದ್ಧರಾಮಯ್ಯ ಅವರನ್ನು ಬಲವಂತವಾಗಿ ಇಳಿಸುವ ಬದಲು ಮನವೊಲಿಸಿ ಇಳಿಸೋಣ ಅಂತ ಹಲವು ನಾಯಕರ ಮೂಲಕ ಡಿ.ಕೆ.ಶಿವಕುಮಾರ್ ಅವರಿಗೆ ಮೆಸೇಜು ರವಾನಿಸುತ್ತಲೇ ಇದ್ದಾರೆ. ಅದರೆ ಇಂತಹ ಮೆಸೇಜುಗಳನ್ನು ಸ್ವೀಕರಿಸಲು,ಕನ್ವಿನ್ಸ್ ಅಗಲು ರೆಡಿ ಇಲ್ಲದ ಡಿ.ಕೆ.ಶಿವಕುಮಾರ್ ಅವರು ಕಳೆದ ವಾರ ರಾಹುಲ್ ಮೈಸೂರಿಗೆ ಬಂದಿಳಿದಾಗ ನೇರವಾಗಿಯೇ ವಿಷಯ ಪ್ರಸ್ತಾಪಿಸಿದ್ದಾರೆ. ಆದರೆ ಅವರು ವಿಷಯ ಪ್ರಸ್ತಾಪಿಸಿದರೂ ಅದರ ಬಗ್ಗೆ ಚರ್ಚಿಸಲಿಚ್ಚಿಸದ ರಾಹುಲ್ ಗಾಂಧಿ:’ಡೋಂಟ್ ವರಿ ಶಿವಕುಮಾರ್ ಜೀ.ಕಮ್ ಟು ಡೆಲ್ಲಿ’ಅಂದಿದ್ದಾರೆ.
ಇದೇ ಸಂದರ್ಭದಲ್ಲಿ ರಾಹುಲ್ ಗಾಂಧಿಯವರನ್ನು ಭೇಟಿಯಾದ ಸಿಎಂ ಸಿದ್ದರಾಮಯ್ಯ ಅವರು:’ಸಾರ್,ಸಂಪುಟ ಪುನರ್ರಚನೆಗೆ ಅವಕಾಶ ಕೊಟ್ಟರೆ ಅನುಕೂಲವಾಗುತ್ತದೆ ಎಂದಿದ್ದಾರೆ.
ಆಗಲೂ ಈ ಬಗ್ಗೆ ಪ್ರತಿಕ್ರಿಯಿಸದ ರಾಹುಲ್ ಗಾಂಧಿಯವರು:’ಸಿದ್ರಾಮಯ್ಯಾಜೀ,ಈ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಹೆಸರನ್ನು ಕೇಂದ್ರ ಸರ್ಕಾರ ವಿಭಾ ಜೀ ರಾಂ ಜೀ ಅಂತ ಬದಲಿಸಿದೆ. ಇದನ್ನು ವಿರೋಧಿಸಿ ನಾವು ದೇಶಾದ್ಯಂತ ಹೋರಾಟ ಮಾಡಬೇಕು. ಹೀಗಾಗಿ ಸಂಪುಟ ಪುನರ್ರಚನೆಗಿಂತ ಮೊದಲು ನೀವು ವಿಧಾನಸಭೆ ಅಧಿವೇಶನ ನಡೆಸಿ ಕೇಂದ್ರ ಸರ್ಕಾರದ ನಿರ್ಣಯದ ವಿರುದ್ಧ ಒಂದು ನಿರ್ಣಯ ತೆಗೆದುಕೊಳ್ಳಿ’ ಎಂದಿದ್ದಾರೆ.
ಆದರೆ ಪಟ್ಟು ಬಿಡದ ಸಿದ್ದರಾಮಯ್ಯ ಅವರು:’ಸಾರ್,ನೀವು ಹೇಳಿದಂತೆ ಅದಿವೇಶನ ನಡೆಸಿ ನಿರ್ಣಯ ತೆಗೆದುಕೊಳ್ಳುತ್ತೇವೆ. ಆದರೆ ಅದೇ ಕಾಲಕ್ಕೆ ಈ ನಾಯಕತ್ವದ ವಿಚಾರದಲ್ಲಿ ಶುರುವಾಗಿರುವ ಗೊಂದಲ ನಿವಾರಿಸಿ’ಎಂದಿದ್ದಾರೆ. ಯಾವಾಗ ಸಿದ್ದರಾಮಯ್ಯ ಈ ವಿಷಯ ಪ್ರಸ್ತಾಪಿಸಿದರೋ? ಅಗ ತಟಕ್ಕಂತ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿಯವರು:’ಅಗಲಿ ಸಿದ್ದರಾಮಯ್ಯಾಜೀ ಡೋಂಟ್ ವರಿ ಚರ್ಚಿಸೋಣ.ಕಮ್ ಟು ಡೆಲ್ಲಿ’ ಎಂದಿದ್ದಾರೆ.
ಅಲ್ಲಿಗೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರಿಬ್ಬರ ಇಚ್ಚೆಯೂ ಸಧ್ಯಕ್ಕೆ ಈಡೇರುವುದಿಲ್ಲ ಎಂಬುದು ನಿಕ್ಕಿಯಾಗಿದೆ. ಅಂದ ಹಾಗೆ ಡಿ.ಕೆ.ಶಿವಕುಮಾರ್ ಅವರಿಗೆ ತುರ್ತಾಗಿ ಸಿಎಂ ಹುದ್ದೆ ಬೇಕಿದ್ದರೆ, ಸಚಿವ ಸಂಪುಟವನ್ನು ತಕ್ಷಣ ಪುನರ್ರಚಿಸಿ ತಮ್ಮ ನೆಲೆ ಗಟ್ಟಿಯಾಗಿದೆ ಎಂಬ ಮೆಸೇಜು ರವಾನಿಸುವುದು ಸಿದ್ಧರಾಮಯ್ಯ ಅವರಿಗೆ ಬೇಕಾಗಿದೆ.
ಇದೇ ಕಾರಣಕ್ಕಾಗಿ ಇತ್ತೀಚೆಗೆ ರಾಹುಲ್ ಗಾಂಧಿಯವರಿಗೆ ಪಟ್ಟಿಯೊಂದನ್ನು ಕಳಿಸಿದ್ದ ಸಿದ್ಧರಾಮಯ್ಯ:ಸಂಪುಟದಲ್ಲಿರುವ ಹದಿನಾರು ಮಂದಿಯನ್ನು ಕೈ ಬಿಟ್ಟು,ಹದಿನೆಂಟು ಮಂದಿಯನ್ನು ಸಂಪುಟಕ್ಕೆ ಸೇರಿಸಿಕೊಳ್ಳುತ್ತೇನೆ.ಪರ್ಮೀಶನ್ನು ಕೊಡಿ ಅಂತ ಕೇಳಿದ್ದರು.
ಮೂಲಗಳ ಪ್ರಕಾರ:’ಬಿ.ಕೆ.ಹರಿಪ್ರಸಾದ್,ಲಕ್ಷ್ಮಣ ಸವದಿ,ಅರ್.ವಿ.ದೇಶಪಾಂಡೆ, ಶಿವಲಿಂಗೇಗೌಡ, ಬಸವರಾಜ ರಾಯರೆಡ್ಡಿ, ತನ್ವೀರ್ ಸೇಠ್, ರಘುಮೂರ್ತಿ, ಬಿ.ನಾಗೇಂದ್ರ, ಶ್ರೀಮತಿ ರೂಪಕಲಾ, ರಾಘವೇಂದ್ರ ಹಿಟ್ನಾಳ್ ಸೇರಿದಂತೆ ಹದಿನೆಂಟು ಮಂದಿಯನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲು ಸಿದ್ದರಾಮಯ್ಯ ಬಯಸಿದ್ದಾರೆ.ಅವರ ಈ ಬಯಕೆಗೆ ರಾಹುಲ್ ಗಾಂಧಿ ಓಕೆ ಅಂದಿದ್ದರೂ, ಗ್ರೀನ್ ಸಿಗ್ನಲ್ ಕೊಟ್ಟರೆ ಡಿ.ಕೆ.ಶಿವಕುಮಾರ್ ಮುನಿಸಿಕೊಳ್ಳುತ್ತಾರೆ ಎಂಬ ಕಾರಣದಿಂದ ದಿನ ತಳ್ಳತೊಡಗಿದ್ದಾರೆ.
ಹೀಗಾಗಿ ಇಬ್ಬರ ಪೈಕಿ ಯಾರೇ ಅಗಲಿ ತಮ್ಮ ಮನದಿಂಗಿತ ತೋಡಿಕೊಳ್ಳಲು ಮುಂದಾದರೆ:’ಡೋಂಟ್ ವರಿ.ಕಮ್ ಟು ಡೆಲ್ಲಿ’ಅನ್ನುತ್ತಿದ್ದಾರೆ.ಅದರೆ ಅವರ ಮಾತಿನಂತೆ ಡೆಲ್ಲಿಗೆ ಹೋದರೆ ಏನೂ ವರ್ಕ್ ಔಟ್ ಅಗುವುದಿಲ್ಲ ಎಂಬುದು ಗೊತ್ತಿರುವುದರಿಂದ ಸಿದ್ದರಾಮಯ್ಯ ಡೆಲ್ಲಿಯ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ.ಅದರೆ ಅದೇ ಕಾಲಕ್ಕೆ ಡಿ.ಕೆ.ಶಿವಕುಮಾರ್ ಪದೇ ಪದೇ ಡೆಲ್ಲಿಗೆ ಹೋಗುತ್ತಿದ್ದಾರಾದರೂ ಯಾವ ವರ್ಕ್ ಔಟೂ ಅಗುತ್ತಿಲ್ಲ.
ಈಶ್ವರಪ್ಪ ಎಂಟ್ರಿ ಯಾವಾಗ? (Political analysis)
ಇನ್ನು ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಅವರನ್ನು ಬಿಜೆಪಿಗೆ ಮರಳಿ ಕರೆತರುವ ಪ್ರಯತ್ನ ಶುರುವಾಗಿದೆ. ಅಂದ ಹಾಗೆ ಪಕ್ಷ ಒಂದು ಕುಟುಂಬದ ಹಿಡಿತಕ್ಕೆ ಸಿಲುಕಿದೆ ಅಂತ ಅಬ್ಬರಿಸಿದ ಈಶ್ವರಪ್ಪ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರ ವಿರುದ್ದ ಸ್ಪರ್ಧಿಸಿದ್ದರು.
ಇದೇ ಕಾರಣಕ್ಕಾಗಿ ಬಿಜೆಪಿಯಿಂದ ಉಚ್ಚಾಟಿತರಾಗಿದ್ದ ಈಶ್ವರಪ್ಪ ಅವರನ್ನು ಮರಳಿ ಪಕ್ಚಕ್ಕೆ ಕರೆತರಬೇಕು ಎಂಬ ಒತ್ತಡ ಈಗ ಕಾರ್ಯಕರ್ತರ ಮಟ್ಟದಲ್ಲಿ ಶುರುವಾಗಿದೆ. ಅಂದ ಹಾಗೆ ಕಾರ್ಯಕರ್ತರ ಮಟ್ಟ ದಲ್ಲಿರುವ ಈ ಒತ್ತಡಕ್ಕೆ ರಾಜ್ಯ ಬಿಜೆಪಿಯ ಹಲ ನಾಯಕರ ಒತ್ತಾಸೆಯೂ ಇದೆ.ಆದರೆ ಸಮಸ್ಯೆ ಎಂದರೆ ಈಶ್ವರಪ್ಪ ಅವರನ್ನು ಮರಳಿ ಪಕ್ಷಕ್ಕೆ ಕರೆತರಬೇಕು ಎಂದರೆ ರಾಜ್ಯದ ನಾಯಕರ ಪೈಕಿ ಯಾರಾದರೂ ಮುಂದೆ ನುಗ್ಗಬೇಕು.ಅರ್ಥಾತ್,ಈಶ್ವರಪ್ಪ ಅವರನ್ನು ಮರಳಿ ಪಕ್ಷಕ್ಕೆ ಕರೆಸಿಕೊಳ್ಳಬೇಕಾದ ಅನಿವಾರ್ಯತೆಯ ಬಗ್ಗೆ ಅವರು ರಾಷ್ಟ್ರೀಯ ನಾಯಕರ ಗಮನಕ್ಕೆ ತರಬೇಕು.
ಈ ಹಿಂದೆ ಯಡಿಯೂರಪ್ಪ ಅವರು ಪಕ್ಷದಿಂದ ಹೊರಗೆ ಹೋದಾಗ ಅವರನ್ನು ಮರಳಿ ಕರೆತರುವ ಅನಿವಾರ್ಯತೆಯ ಬಗ್ಗೆ ಇದೇ ಈಶ್ವರಪ್ಪನವರು ಪಕ್ಷದ ವರಿಷ್ಟರಿಗೆ ವಿವರಿಸಿದ್ದರು ಮತ್ತು ಯಡಿಯೂರಪ್ಪ ಪಕ್ಷಕ್ಕೆ ವಾಪಸ್ಸಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು.ಅವರ ಈ ಯತ್ನಕ್ಕೆ ರಾಜ್ಯದ ಇನ್ನೂ ಕೆಲ ನಾಯಕರು ಸಾಥ್ ನೀಡಿದ್ದರು ಎಂಬುದೂ ನಿಜ.
ಈಗ ಚಿತ್ರ ಬದಲಾಗಿದೆ.ಅವತ್ತು ಯಡಿಯೂರಪ್ಪ ಅವರಿದ್ದ ಜಾಗದಲ್ಲಿ ಇವತ್ತು ಈಶ್ವರಪ್ಪ ಅವರಿದ್ದಾರೆ.ಆದರೆ ಹಿಂದೆ ಈಶ್ವರಪ್ಪ ಅವರು ಮಾಡಿದ ಕೆಲಸವನ್ನು ಇವತ್ತು ಯಡಿಯೂರಪ್ಪ ಮಾಡುವುದು ಅನು ಮಾನ.ಒಂದು ವೇಳೆ ಅವರು ಮುನಿಸು ಮರೆತು ಈ ಕೆಲಸ ಮಾಡಿದರೆ ನಿಜಕ್ಕೂ ಬಿಜೆಪಿಗೆ ದೊಡ್ಡ ಬಲ ಬಂದಂತಾಗುತ್ತದೆ.ಕಾರಣ?ಇವತ್ತು ಪಕ್ಷದಲ್ಲಿ ಎಷ್ಟೇ ನಾಯಕರಿದ್ದರೂ ಬಿಜೆಪಿಯ ಸಿದ್ಧಾಂತಗಳ ಬಗ್ಗೆ ಈಶ್ವರಪ್ಪ ಅವರಷ್ಟು ಗಟ್ಟಿಯಾಗಿ ಪ್ರತಿಪಾದಿಸುವುದು ಕಷ್ಟ.
ಇದು ಸಂಘ ಪರಿವಾರದ ನಾಯಕರಿಗೂ ಗೊತ್ತು.ಆದರೆ ಈಶ್ವರಪ್ಪ ಅವರನ್ನು ಮರಳಿ ಪಕ್ಷಕ್ಕೆ ಕರೆಸಿಕೊಳ್ಳಬೇಕು ಅಂತ ಅವರು ಯಾರ ಬಳಿ ಹೇಳಬೇಕು?ಇದ್ದುದರಲ್ಲಿ ರಾಜ್ಯದ ಕೆಲ ನಾಯಕರು ಅರೆಸ್ಸೆಸ್ ನ ನಂಬರ್ ಟೂ ನಾಯಕ ದತ್ತಾತ್ರೇಯ ಹೊಸಬಾಳೆ ಅವರ ಬಳಿ ಹೋಗಿ ಈಶ್ವರಪ್ಪ ಅವರನ್ನು ವಾಪಸ್ಸು ಕರೆತರಬೇಕು ಎಂಬ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ.ಆಗೆಲ್ಲ ದತ್ತಾತ್ರೇಯ ಹೊಸಬಾಳೆಯವರು: ಎಲ್ಲ ಸರಿಯಾಗುತ್ತದೆ.ಈಶ್ವರಪ್ಪ ಮರಳಿ ಪಕ್ಷಕ್ಕೆ ಬರುತ್ತಾರೆ.ಹೀಗಾಗಿ ಸಮಾಧಾನದಿಂದಿರಿ’)ಅಂತ ಹೇಳಿ ಕಳಿಸಿದ್ದಾರೆ.
ಇದುವೇ ಸದಾನಂದ ಮಂತ್ರಂ (Political analysis)
ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಮಾಜಿ ಸಿಎಂ ಸದಾನಂದಗೌಡರು ಭೋದಿಸಿದ ಗೌಪ್ಯ ಮಂತ್ರದ ಬಗ್ಗೆ ಬಿಜೆಪಿಯಲ್ಲಿ ಕುತೂಹಲ ಕಾಣಿಸಿಕೊಂಡಿದೆ. ಮೂಲಗಳ ಪ್ರಕಾರ,ಇತ್ತೀಚೆಗೆ ವಿಜಯೇಂದ್ರ ಅವರ ಜತೆ ರಹಸ್ಯ ಸಭೆ ನಡೆಸಿದ್ದ ಸದಾನಂದಗೌಡರು ಕೆಲವು ಟಿಪ್ಸ್ ಗಳನ್ನು ನೀಡಿದ್ದರಂತೆ.
‘ವಿಜಯೇಂದ್ರ ಅವರೇ.ನೀವು ಪಕ್ಷದ ರಾಜ್ಯಾಧ್ಯಕ್ಷರಾಗಿ ನೆಮ್ಮದಿಯಿಂದ ಮುಂದುವರಿಯಬೇಕು ಎಂದರೆ ನಿಮ್ಮ ಜತೆ ಹಿರಿಯರ ಪಡೆ ಇರುವಂತೆ ನೋಡಿಕೊಳ್ಳಿ.ಬರೀ ಯುವಕರನ್ನೇ ಇಟ್ಟುಕೊಂಡು ಯುದ್ದ ಗೆಲ್ಲುತ್ತೇವೆ ಅಂದರೆ ಸಾಧ್ಯವಿಲ್ಲ.ಈಗ ಯುದ್ದ ಮಾಡಲು ಉತ್ಸಾಹ ಇದ್ದರೆ ಸಾಲದು.ಈ ಹಿಂದೆ ಉತ್ಸಾಹದಿಂದ ಯುದ್ದ ಮಾಡಿದವರೂ ಇರಬೇಕು.ಯಾಕೆಂದರೆ ಯುದ್ದ ಮಾಡುವವರು ಏನೆಲ್ಲ ಕಷ್ಟ ಪಡಬೇಕು ಅನ್ನುವುದು ಅವರಿಗೆ ಗೊತ್ತಿರುತ್ತದೆ. ಮತ್ತು ಅವರ ಅನುಭವ ನಿಮಗೆ ಪ್ಲಸ್ ಅಗುತ್ತದೆ.
ಹೀಗಾಗಿ ಹಿರಿಯರ ಪಡೆಯನ್ನು ಜತೆಗಿಟ್ಟುಕೊಳ್ಳಿ.ಇಲ್ಲದಿದ್ದರೆ ಕಷ್ಟಪಡುತ್ತೀರಿ’ಅಂತ ಸದಾನಂದಗೌಡರು ನೇರವಾಗಿ ವಿಜಯೇಂದ್ರ ಅವರಿಗೆ ಹೇಳಿದ್ದಾರೆ. ಹೀಗೆ ಸದಾನಂದಗೌಡರು ಭೋಧಿಸಿದ ಗೋಪ್ಯ ಮಂತ್ರ ವನ್ನು ವಿಜಯೇಂದ್ರ ಅವರೂ ಅಕರಾಸ್ಥೆಯಿಂದ ಕೇಳಿ ಬಂದಿದ್ದಾರೆ. ಆದರೆ ಈ ಮಂತ್ರದ ಅರ್ಥ ಅವರಿಗೆ ಎಷ್ಟರ ಮಟ್ಟಿಗೆ ದಕ್ಕುತ್ತದೋ ಕಾದು ನೋಡಬೇಕು.
ಲಾಸ್ಟ್ ಸಿಪ್ Political analysis|
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕೋಗಿಲು ಕ್ರಾಸ್ ಎಪಿಸೋಡಿನ ನಂತರ ಬಿಜೆಪಿ ವರಿಷ್ಟರು ಪಕ್ಷದ ರಾಜ್ಯ ನಾಯಕರ ಮೇಲೆ ಕೋಪಗೊಂಡಿದ್ದಾರೆ. ಕಾರಣ? ಕೋಗಿಲು ಕ್ರಾಸ್ ಬಳಿ ಸರ್ಕಾರಿ ಜಾಗದಲ್ಲಿ ಒಬ್ಬರು ಆಕ್ರಮವಾಗಿ ಲೇ ಔಟ್ ಮಾಡಿದರು. ಹಲವರು ಈ ಆಕ್ರಮ ಲೇ ಔಟಿನಲ್ಲಿ ಸೆಟ್ಲಾದರು.ಹೀಗೆ ಸೆಟ್ಲಾದವರಲ್ಲಿ ಬಾಂಗ್ಲಾದ ನುಸುಳುಕೋರರೂ ಇದ್ದರು.
ಅದರೆ ಹೀಗೆ ಸರ್ಕಾರಿ ಜಾಗದಲ್ಲಿ ಆಕ್ರಮವಾಗಿ ಲೇ ಔಟ್ ಮಾಡಿದವರು ಒಬ್ಬರಾದರೆ,ಅವರ ಹಿಂದಿದ್ದವರು ಸರ್ಕಾರದಲ್ಲಿರುವ ಪ್ರಭಾವಿ ನಾಯಕರೊಬ್ಬರ ಸಹೋದರ. ಹೀಗಾಗಿ ಮನೆಗಳನ್ನು ಬೀಳಿಸಿದ ನಂತರದ ಬೆಳವಣಿಗೆಗಳನ್ನು ಹಿಡಿದುಕೊಂಡು ಅ ಪ್ರಭಾವಿ ನಾಯಕರ ವಿರುದ್ದ ಮುಗಿಬೀಳಬಹುದಿತ್ತು.ಅವರ ರಾಜೀನಾಮೆಗೆ ಪಟ್ಟು ಹಿಡಿಯಬಹುದಿತ್ತು.ಆದರೆ ನಮ್ಮವರು ಅದರ ಜಾಡನ್ನೇ ಹಿಡಿಯಲಿಲ್ಲ ಎಂಬುದು ಬಿಜೆಪಿ ವರಿಷ್ಟರ ಆಕ್ರೋಶ.
ಆರ್.ಟಿ.ವಿಠ್ಠಲಮೂರ್ತಿ
