ಮಾತು ಬೆಳ್ಳೀನೂ ಅಲ್ಲ, ಮೌನ ಬಂಗಾರನೂ ಅಲ್ಲ, ಅವೆರೆಡಕ್ಕಿಂತಲೂ ಮೀರಿದ್ದು. ಮಾತು ಆಡಿದರೆ ಮಾತ್ರ ಜಗತ್ತಿಗೆ ಜೀವ ಬರುತ್ತದೆ.ಮಾತೆಂಬುದು ಒಂದು ಬಿಡುಗಡೆ. ಕೃತಿಯ ಪುಟಗಳಲ್ಲಿರುವ ಸಾಲುಗಳು ಸೂಸುವ ಅರ್ಥವಂತಿಕೆ ಇಲ್ಲಿನ ಲೇಖನಗಳಿಗೂ ದಕ್ಕಿದೆ.
‘ಸಂತೆಯಲ್ಲಿ ನಿಂತ ಮುದುಕಿ’ಯ ಬರೆಹಗಳು ಭಾವಾಲಾಪದಲ್ಲಿ ಮಿಂದೆದ್ದ ಚದುರಿದ ಚಿತ್ರಗಳಂತಿವೆ.
ನೆನಪಿನ ದೀಪಮಾಲೆಯ ಬೆಳಕಿನಲ್ಲಿ ಬರುವ ಮಾತುಕತೆಗಳ ವಿವರಗಳು,ವರ್ತಮಾನದ ಕನ್ನಡಿಯಲ್ಲಿ ನಮ್ಮ ಬಿಂಬಗಳನ್ನು ನಾವೇ ನೋಡಿಕೊಳ್ಳುವ ಹಾಗೆ ಮಾಡುತ್ತವೆ.
ಕಥೆಗಾರಿಕೆಯ ಆರಂಭದ ಹಿನ್ನೆಲೆಯನ್ನು ಹೇಳುವ ಲೇಖಕಿ ವೈದೇಹಿ,ನಾನು ಹುಟ್ಟಿ ಬೆಳೆದ ನನ್ನೂರಿನ ನೆಲದ್ದೇ ತುಂಬಾ ಇದೆ ಹೇಳಲಿಕ್ಕೆ.ಅಲ್ಲಿನದ್ದೇ ಇನ್ನೂ ಮುಗಿದಿಲ್ಲ. ಅದು ಮುಗಿಯದೆ ಹೇಗೆ ಈಚೆ ಬರೋದು ನಾನು? ಎಂದು ಕೇಳುವ ಪ್ರಶ್ನೆಗಳಲ್ಲಿ ಲೇಖಕಿಯ ಭಾವ ಕೋಶದಲ್ಲಿ ರಿಜಿಸ್ಟರ್ ಆದ ಪರಿಸರ ಎಷ್ಟೊಂದು ಗಟ್ಟಿಯೆಂಬುದನ್ನು ವಿವರಿಸುತ್ತಾರೆ.
ಧರ್ಮಗ್ರಂಥಗಳ ಗದ್ದಲ,ಕೋಮುಗಲಭೆಗಳನ್ನು ಕಂಡ ಮನಸ್ಸಿಗೆ, ಕಬೀರನ ಮಾತು ನೆನಪಾಗುತ್ತವೆ. ಕಬೀರನು ಹೇಳಿದಂತೆ,’ಪ್ರೇಮ’ಎನ್ನುವ ಎರಡೂವರೆ ಅಕ್ಷರದ ಅರ್ಥವೇ ಇನ್ನೂ ಪೂರ್ತಿಯಾಗಿ ಮಾನವ ಮನಸ್ಸಿಗೆ ಮನವರಿಕೆಯಾಗಿಲ್ಲ.
ಈ ಪುಟ್ಟ ಶಬ್ದವೇ ಹೀಗೆ ತಬ್ಬಲಿ ನಿಂತಿರುವಾಗ ಯಾವ ಮಾತಿನ ಅರ್ಥ ಮನುಷ್ಯ ಮನಸ್ಸಿಗೆ ತಟ್ಟೀತು? ಕಾಲದೇಶಗಳನ್ನು ಕುರಿತ ಲೇಖಚಿತ್ರಗಳ ಕಥನಕಾವ್ಯದ ನಿರೂಪಣೆಯಿಂದ, ಭಾವನಾತ್ಮಕ ದಣಿವಿನಿಂದಾಗಿ ಗಮನಸೆಳೆಯುತ್ತದೆ.
ಒಳಆಕ್ರೋಶ,ಆವೇಶ,ದಣಿವು,ಸಂಘರ್ಷಗಳಿಂದಾಗಿ ಕಂಪಿಸುವ ಮನುಷ್ಯನ ಬದುಕಿನ ಚಿತ್ರಗಳ. ಜೊತೆಗೆ ಬಾಲ್ಯಕಾಲದ ನೆನಪುಗಳಂತೂ ಮಗುವೊಂದು ಅಮ್ಮನ ಸ್ಪರ್ಶದಿಂದ ಪುಳಕಗೊಂಡಂತೆ ಮೂಡಿಬಂದಿವೆ.
ಇದನ್ನೂ ಓದಿ : ಚೂರು ಬಿಂಬ-ಗಟ್ಟಿ ಬಂಧದ ಮನುಷ್ಯ ಶೋಧದ ಕಥನ|ದಿನಮಾನ ಪುಸ್ತಕ ವಿಮರ್ಶೆ:ಬಿ.ಶ್ರೀನಿವಾಸ
ಮನುಷ್ಯತ್ವದ ಜಡತೆಯನ್ನು ಹೋಗಲಾಡಿಸಿ ಆತನನ್ನು ಸದಾ ಎಚ್ಚರದ ಸ್ಥಿತಿಯಲ್ಲಿ ಇಡುವಂಥ ಕ್ರಿಯಾಶೀಲ ಬರೆಹಗಳು ಈ ಕೃತಿಯು ಅನನ್ಯತೆಯನ್ನು ಸಾರುತ್ತವೆ.
ಪುಸ್ತಕ ವಿಮರ್ಶೆ: ಬಿ.ಶ್ರೀನಿವಾಸ
ಸಂತೆಯಲ್ಲಿ ನಿಂತ ಮುದುಕಿ ಮತ್ತು ಇತರ ಬರಹಗಳು
ಲೇ: ವೈದೇಹಿ
ಅಕ್ಷರ ಪ್ರಕಾಶನ, ಹೆಗ್ಗೋಡು,ಸಾಗರ.
