ಹರಿಹರ : ತುಮಕೂರು ಜಿಲ್ಲೆ, ತುರುವೇಕೆರೆ ತಾಲ್ಲೂಕಿನ ಗೋಣಿ ತುಮಕೂರು ಗ್ರಾಮದ ಆದಿಶಕ್ತಿ ಅರಸಮ್ಮ ದೇವಾಲಯ ಪ್ರವೇಶಿಸಿದ್ದ ಪ.ಜಾತಿಗೆ ಸೇರಿದ ನವ ದಂಪತಿಗೆ ಹೊರಗೆ ಕಳಿಸಿದ ಘಟನೆಯನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪಸ್ಥಾಪಿತ) ಜಿಲ್ಲಾ ಸಂಚಾಲಕ ಡಿ.ಹನುಂಮತಪ್ಪ ಖಂಡಿಸಿದ್ದಾರೆ.
ಗೋಣಿ ತುಮಕೂರು ಗ್ರಾಮದಂತೆಯೆ ರಾಜ್ಯದ ಬಹುತೇಕ ಗ್ರಾಮಗಳಲ್ಲಿ ಈಗಲೂ ಅಮಾನವೀಯ ಅಸ್ಪೃಷ್ಯತೆ ಜಾರಿಯಲ್ಲಿದೆ.ಕ್ಷೌರ ಮಾಡಿಸಲು, ಹೋಟಲ್,ದೇವಸ್ಥಾನಗಳಲ್ಲಿ ಪ್ರವೇಶಿಸಲು ಈಗಲೂ ಬಿಡದಿರುವುದು ಸಂವಿ ಧಾನಕ್ಕೆ ಅಪಚಾರ ಬಗೆದಂತೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹಿಂದು ನಾವೆಲ್ಲಾ ಒಂದು, ಹಿಂದೂಗಳ ರಕ್ಷಣೆ, ಗೋ ರಕ್ಷಣೆ ಎಂದು ವೀರಾವೇಷದಿಂದ ಚೀರಾಡುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಭಜರಂಗ ದಳ, ಹಿಂದೂ ಜಾಗರಣ ವೇದಿಕೆ, ವಿಶ್ವ ಹಿಂದೂ ಪರಿಷತ್, ಬಿಜೆಪಿ ಮುಖಂಡರು ಈ ಪ್ರಕರಣ ಕುರಿತು ಮಾತನಾಡಬೇಕೆಂದು ಅವರು ಆಗ್ರಹಿಸಿದ್ದಾರೆ.
ಕಲ್ಲಡ್ಕ ಪ್ರಭಾಕರ ಭಟ್, ಪ್ರತಾಪ ಸಿಂಹ, ಸಿ.ಟಿ.ರವಿ ಸೇರಿದಂತೆ ರಾಜ್ಯದಲ್ಲಿ ಹಿಂದು ಸಮುದಾಯದ ರಕ್ಷಕರಂತೆ ಬಿಂಬಿಸಿಕೊಂಡಿರುವ ಸಂಘ ಪರಿವಾರದ ಮುಖಂಡರು ಕೂಡಲೆ ಗೋಣಿ ತುಮಕೂರು ಗ್ರಾಮಕ್ಕೆ ಆಗಮಿಸಿ ಅಸ್ಪೃಷ್ಯತೆ ಆಚರಣೆ ಮಾಡಬಾರದು ಹಿಂದುಗಳೆಲ್ಲ ಒಂದು ಎಂದು ಸವರ್ಣೀಯರಿಗೆ ಮನವರಿಕೆ ಮಾಡಬೇಕೆಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಜಗಳೂರು|ಪ್ರತಿಯೊಂದು ಗ್ರಾಮದಲ್ಲಿಯೂ ಶಾಲೆಗಳ ಅಭಿವೃದ್ಧಿಗೆ ಒತ್ತು ನೀಡಿ:ಎಂ.ಡಿ.ಕೀರ್ತಿಕುಮಾರ್ ಸಲಹೆ
ವಿವಿಧ ಧರ್ಮೀಯರ ನಡುವೆ ಕಲಹವನ್ನುಂಟು ಮಾಡಲು, ಪೊಲೀಸರ ಗುಂಡಿಗೆ ಎದೆ ಕೊಡಲು ಮಾತ್ರ ದಲಿತ, ಹಿಂದುಳಿದ ವರ್ಗಗಳ ಕಾರ್ಯಕರ್ತರು, ಮುಖಂಡರನ್ನು ಸಂಘ ಪರಿವಾರದವರು ಬಳಸುತ್ತಾರೆಯೆ ಹೊರತು ಸಮಾಜದಲ್ಲಿ ಸಮಾನವಾಗಿ ಬದುಕುವ ಹಕ್ಕನ್ನು ನೀಡುವುದಿಲ್ಲ ಎಂಬುದನ್ನು ಆ ವರ್ಗದ ಮುಖಂಡರು ಅರಿಯಬೇಕಾಗಿದೆ ಎಂದು ತಿಳಿಸಿದ್ದಾರೆ.
