ದಾವಣಗೆರೆ: ದೇಶದಲ್ಲಿ ಬಹುಭಾಷೆ, ಬಹುವರ್ಣ, ಜಾತಿ, ಧರ್ಮ, ಭಾಷೆ ಇರುವ ಬಹುತ್ವ ಭಾರತದಲ್ಲಿ ಒಂದು ದೇಶ, ಒಂದು ಚುನಾವಣೆ, ಒಬ್ಬನೇ ನಾಯಕ ನೀತಿಗೆ ನರೇಂದ್ರ ಮೋದಿ ಹೊರಟಂತಿದೆ ಎಂದು ಸಿಪಿಐನ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ಹೇಳಿದರು.
ನಗರದ ಶ್ರೀ ಶಿವಯೋಗಿ ಮಂದಿರದಲ್ಲಿ ಭಾರತ ಕಮ್ಯುನಿಷ್ಟ್ ಪಕ್ಷದಿಂದ ಹಮ್ಮಿಕೊಂಡಿದ್ದ ಸಂವಿಧಾನ, ಪ್ರಜಾತಂತ್ರ, ಬಹುತ್ವ ಭಾರತ ಉಳಿಸಲು ರಾಜಕೀಯ ಸಮಾವೇಶ ಉದ್ಘಾಟಿಸಿ, ಏತಕ್ಕಾಗಿ ಬಿಜೆಪಿಯನ್ನು ಸೋಲಿಸಬೇಕೆಂಬ ಕಿರು ಹೊತ್ತಿಗೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಸಿಪಿಐ ಅಷ್ಟೇ ಅಲ್ಲ, ದೇಶ, ಸಂವಿಧಾನ ಪ್ರೀತಿಸುವವರು, ಸಂವಿಧಾನ ಉಳಿಸುವವರು, ಅಂಬೇಡ್ಕರ್ ಆದರ್ಶ ಪಾಲಿಸುವ ದಲಿತರು, ಅಲ್ಪಸಂಖ್ಯಾತರನ್ನು ಪ್ರೀತಿಸುವವರು ಒಂದೇ ವೇದಿಕೆಗೆ ಬರಬೇಕೆಂದು ಕರೆ ನೀಡಿದರು.
ಸಂವಿಧಾನದಿಂದ ಬಡವರಿಗೆ ನೆಮ್ಮದಿ
ದೇಶ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಹಕ್ಕು, ರಕ್ಷಣೆ ಸಂವಿಧಾನದ ಉದ್ದೇಶವಾಗಿದೆ. ಸಂವಿಧಾನದಿಂದ ದಲಿತರು, ಆದಿವಾಸಿಗಳು, ಅಲ್ಪ ಸಂಖ್ಯಾತರು, ಮಹಿಳೆಯರು, ಮಕ್ಕಳು ನೆಮ್ಮದಿಯಾಗಿ ಬಾಳುತ್ತಿದ್ದಾರೆ. ಬಿಜೆಪಿ ಸಂವಿಧಾನದ ಪುಟ ಹರಿದು, ಅಕ್ಷರ ಬರೆದೋ ಹೇಗೆ ಬದಲಾವಣೆ ಮಾಡುತ್ತದೆಂದು ಹೇಳಲಿ ಎಂದು ಪ್ರಶ್ನಿಸಿದರು.
ಮನು ಸಂಸ್ಕೃತಿ ಮರು ಜಾರಿಗೆ ಯತ್ನ
ಮನು ಸಂಸ್ಕೃತಿಯನ್ನು ಮತ್ತೆ ತರಲು, ಸಂವಿಧಾನ ಬದಲಿಸಲು ಹೊರಟ ಸಂಘ ಪರಿವಾರ, ಬಿಜೆಪಿಯಿಂದ ಸಂವಿಧಾನ, ಪ್ರಜಾತಂತ್ರ, ಬಹುತ್ವ ಭಾರತವನ್ನು ಉಳಿಸಲು ಪ್ರತಿಯೊಬ್ಬರೂ ಮುಂದಾಗಬೇಕು. ಮನುಸ್ಮೃತಿ ಆದಾರಿತ ಸಂವಿಧಾನ ಜಾರಿಗಾಗಿ ನಿರಂತರ ಅವು ಪ್ರಯತ್ನ ನಡೆಸಿದೆ,. ಶ್ರೇಣೀಕೃತ ವ್ಯವಸ್ಥೆ ಜಾರಿಗೆ, ವರ್ಣಾಶ್ರಮ ಪದ್ಧತಿ ಜಾರಿಗೆ ಮುಂದಾಗಿದೆ. ಶೂದ್ರರು ಮೇಲಿನ ಮೂರು ವರ್ಣದವರ ಸೇವೆ ಮಾಡಬೇಕಿತ್ತಷ್ಟೇ. ಬಡವರು, ದಲಿತರು, ರೈತರು, ಕಾರ್ಮಿಕರು ಎಲ್ಲರೂ ಶೋಷಿತರಾಗಿದ್ದು, ಮತ್ತೆ ಅಂತಹ ಕಾಲಕ್ಕೆ ನೂಕುವ ಹುನ್ನಾರ ನಡೆದಿದೆ ಎಂದು ಆರೋಪಿಸಿದರು.
ಆರೆಸ್ಸೆಸ್ ಆಶಯ ಜಾರಿಗೆ ಹುನ್ನಾರ
ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಕಿರು ಹೊತ್ತಿಗೆ ಬಿಡುಗಡೆಯಾಗುತ್ತಿದೆ. ಇದೊಂದು ಗೇಮ್ ಚೇಂಜರ್ ಕಿರು ಹೊತ್ತಿಗೆ. ಬಿಜೆಪಿ, ಸಂಘ ಪರಿವಾರ ಮನೆ ಮನೆಗೆ ಹೋಗಿ ಸುಳ್ಳು ಹೇಳಲು ಬಂದಾಗ ಪ್ರಶ್ನಿಸಲು ಈ ಕೈಪಿಡಿ ಆಸರೆ ಯಾಗುತ್ತದೆ. ಸಂವಿಧಾನ, ಪ್ರಜಾಪ್ರಭುತ್ವ, ದೇಶದ ಬಹುತ್ವ ಉಳಿಸಲು ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ. 2014ರಿಂದ ಈವರೆಗೆ ಸಂವಿಧಾನ ಬದಲಿಸುವ ಹೇಳಿಕೆ ನೀಡುವ ಬಿಜೆಪಿ ನಾಯಕರನ್ನು ನೋಡುತ್ತಾ ಬಂದಿದ್ದೇವೆ. ಸಂಸದ ಅನಂತಕುಮಾರ ಹೆಗಡೆ ಮಾತೆತ್ತಿದರೆ ಸಂವಿಧಾನ ಬದಲಾವಣೆಗೆ ಅನ್ನೋರು. ನಿತಿನ್ ಗಡ್ಕರಿ ಹೇಳಿದ್ದು, ಆರೆಸ್ಸೆಸ್ ಆಶಯ ಜಾರಿಗೊಳಿಸುವ ಘೋಷಣೆ ಮಾಡಿದ್ದನ್ನು ಜನತೆ ಅರಿಯಬೇಕು ಎಂದು ತಿಳಿಸಿದರು.
ಸಿಪಿಐ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷ ಎಸ್.ಎಸ್.ಬಕ್ಕೇಶ, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ ಕೆ.ಶೆಟ್ಟಿ, ಆಮ್ ಅದ್ಮಿ ಜಿಲ್ಲಾಧ್ಯಕ್ಷ ಶಿವಕುಮಾರಪ್ಪ, ಸಿಪಿಐ ಖಜಾಂಚಿ ಆನಂದರಾಜ, ಮುಖಂಡರಾದ ಕೆ.ರಾಘವೇಂದ್ರ ನಾಯರಿ, ಆವರಗೆರೆ ಎಚ್.ಜಿ.ಉಮೇಶ, ಕಾಂಗ್ರೆಸ್ ಮುಖಂಡರಾದ ಕೆ.ಜಿ.ಶಿವಕುಮಾರ, ಎಸ್.ಮಲ್ಲಿಕಾರ್ಜುನ, ವಕೀಲರಾದ ರಾಮಚಂದ್ರ ಕಲಾಲ್, ಅನೀಸ್ ಪಾಷ, ಮಾಜಿ ಮೇಯರ್ ಅನಿತಾ ಬಾಯಿ, ಮೈನುದ್ದೀನ್, ಡೋಲಿ ಚಂದ್ರು, ಶಾರದಮ್ಮ, ನೆರಳು ಸಂಸ್ಥೆಯ ಜಬೀನಾ ಖಾನಂ, ಎಂ.ಕರಿಬಸಪ್ಪ, ಆವರಗೆರೆ ವಾಸು, ನರೇಗಾ ರಂಗನಾಥ, ಐರಣಿ ಚಂದ್ರು ಇತರರು ಇದ್ದರು.