ಹರಿಹರ : ಒಳ ಮೀಸಲಾತಿ ಪರಿಪೂರ್ಣ ಜಾರಿಗೊಳಿಸುವುದು, ಪ.ಜಾತಿ ಮತ್ತು ಪ.ಪಂಗಡಗಳ ಜನಸಂಖ್ಯೆಗೆ ಅನುಗುಣವಾಗಿ ಶೇ.24.1ರಷ್ಟು ಅನುದಾನ ಮೀಸಲಿಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ತಾಲ್ಲೂಕು ಘಟಕದಿಂದ ಬುಧವಾರ ಮುಖ್ಯಮಂತ್ರಿಯವರಿಗೆ ಇಲ್ಲಿನ ತಹಶೀಲ್ದಾರ್ ಸಂತೋಷ್ ಕುಮಾರ್ ಅವರ ಮೂಲಕ ಮನವಿ ಸಲ್ಲಿಸಲಾಯಿತು.
ನಂತರ ಕದಸಂಸ ತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಮಾತನಾಡಿ, ಶೇ. 24.1ರಷ್ಟು ಮೀಸಲಿರಿಸಿದ ಅನುದಾನ ದುರ್ಬಳಕೆ ತಡೆಯಲು ಎಸ್.ಸಿ.ಎಸ್.ಪಿ., ಟಿ.ಎಸ್.ಪಿ ಕಾಯ್ದೆಯ 2013ರ ಸೆಕ್ಷನ್ 7 (ಡಿ) ರದ್ದುಪಡಿಸಿದಂತೆ, 7 (ಸಿ) ರದ್ದುಪಡಿಸಿ 2026-27ನೇ ಬಜೆಟ್ ಅಧಿವೇಶನದಲ್ಲಿ ಆದೇಶ ಹೊರಡಿಸಬೇಕು.
ಕದಸಂಸ ಸಂಸ್ಥಾಪಕ ಪ್ರೊ.ಬಿ.ಕೃಷ್ಣಪ್ಪ ಅವರಿಗೆ ‘ಕರ್ನಾಟಕ ರತ್ನ’ ಮರಣೋತ್ತರ ಪ್ರಶಸ್ತಿ ಘೋಷಿಸಬೇಕು ಹಾಗೂ ಅವರ ಜನ್ಮದಿನ ಜೂನ್ 9 ಅನ್ನು ರಜಾ ರಹಿತ ದಿನವನ್ನಾಗಿ ಆಚರಣೆ ಮಾಡಬೇಕು.
ದೇವದಾಸಿ, ವಿಧವೆಯರು, ವೃದ್ಧರು, ವಿಕಲ ಚೇತನರಿಗೆ ನೀಡುತ್ತಿರುವ ಮಾಸಿಕ ವೇತನ ರೂ.5000ವರೆಗೆ ಹೆಚ್ಚಿಸಬೇಕು. ಹಾಸ್ಟೆಲ್ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಮಾಸಿಕ ಭೋಜನ ವೆಚ್ಚ ರೂ.3000ವರೆಗೆ ಹೆಚ್ಚಳ ಮಾಡಬೇಕು. ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳನ್ನು ವಸತಿ ಕಾಲೇಜುಗಳಾಗಿ ಮೇಲ್ದರ್ಜೆ ಗೇರಿಸಬೇಕು.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೊಳಿಸಿದ ‘ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ-2020’ ಅನ್ನು ರದ್ದುಪಡಿಸಿ, ಭಾರತದಿಂದ ವಿದೇಶಗಳಿಗೆ ದನದ ಮಾಂಸದ ರಫ್ತು ನಿಲ್ಲಿಸಬೇಕು.
ದಾವಣಗೆರೆ ವಿಶ್ವವಿದ್ಯಾನಿಲಯಕ್ಕೆ ಪ್ರೊ.ಬಿ.ಕೃಷ್ಣಪ್ಪ ಅವರ ಹೆಸರನ್ನು ಇಡಬೇಕು. ನಗರದ ಸೂಕ್ತ ಸ್ಥಳದಲ್ಲಿ ಪ್ರೊ.ಬಿ.ಕೃಷ್ಣಪ್ಪ ಅವರ ಸ್ಮಾರಕವನ್ನು ನಿರ್ಮಿಸಬೇಕು. ಗುತ್ತೂರಿನ ಹೆಲಿಪ್ಯಾಡ್ ಜಾಗದಲ್ಲಿ ವಾಸವಿರುವ ಅಲೆಮಾರಿ ಸಮುದಾಯದವರಿಗೆ ಅಲ್ಲಿಯೆ ನಿವೇಶನಗಳನ್ನು ದೊರಕಿಸಿ, ಮನೆ ನಿರ್ಮಿಸಿ ಕೊಡಬೇಕು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕಿಯರ ಹಾಸ್ಟೆಲ್ ನಲ್ಲಿ 2015ರ ಆಗಸ್ಟ್ 3 ಮತ್ತು 4 ರಂದು ಹುಳು ಭರಿತ ಆಹಾರ ವಿತರಣೆ ಮಾಡಿದ ಘಟನೆಗೆ ಸಂಬಂದಿಸಿ ಸಂಬಂಧಿತ ಸಿಬ್ಬಂದಿ, ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು.
ಹೊಟ್ಟಿಗೇನಹಳ್ಳಿ ಗ್ರಾಮದ ರಸ್ತೆಗಳು ಅಕ್ರಮ ಮಣ್ಣು, ಮರಳು ಸಾಗಣೆಯಿಂದಾಗಿ ಸಂಪೂರ್ಣ ಹಾಳಾಗಿದೆ, ಆ ರಸ್ತೆಗಳನ್ನು ಹೊಸದಾಗಿ ನಿರ್ಮಿಸಬೇಕು ಹಾಗೂ ಅಕ್ರಮ ಮಣ್ಣು, ಮರಳು ಸಾಗಣೆಯನ್ನು ತಡೆಯಬೇಕು. ಗ್ರಾಮದಲ್ಲಿ ಸಾರಿಗೆ ಸಂಸ್ಥೆ ಬಸ್ಸುಗಳ ಸಂಚಾರ ಆರಂಭಿಸಬೇಕು.
ತಾಲ್ಲೂಕಿನ ಕಡ್ಲೆಗೊಂದಿ ಮತ್ತು ಭಾನುವಳ್ಳಿ ಗ್ರಾಮದ ಸರ್ಕಾರಿ ಜಾಗದಲ್ಲಿ ವಸತಿ ಯೋಜನೆ ರೂಪಸಿಬೇಕು. ನಗರದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ರೂ.18 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಆರಂಭಿಸಬೇಕು.
ನಗರದ ಜನರ ಕುಡಿಯುವ ನೀರಿಗಾಗಿ ಪ್ರತ್ಯೇಕ ಕೆರೆ ನಿರ್ಮಿಸಬೇಕು. ನಗರದ ವಿವಿಧ ಪ್ರಕಾರದ ಮದ್ಯದ ಅಂಗಡಿಗಳನ್ನು ನಿಗದಿತ ಅವಧಿಯಲ್ಲಿ ಮಾತ್ರ ತೆರೆಯುವಂತೆ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.
Read also : ಜಗಳೂರು:ರಾಗಿಯ ನಂತರ ಶೇಂಗಾ ಬೆಳೆಗೆ ಒತ್ತು ನೀಡಿದ ರೈತರು
ಈ ಸಂದರ್ಭದಲ್ಲಿ ಕೊಕ್ಕನೂರು ಗ್ರಾಪಂ ಸದಸ್ಯ ಹನುಮಂತಪ್ಪ, ಚೌಡಪ್ಪ ಸಿ. ಭಾನುವಳ್ಳಿ, ಅಲೆಮಾರಿ ಸಮುದಾಯದ ಮುಖಂಡ ದುರುಗಪ್ಪ, ಮಂಜುನಾಥ್ ಎಂ.ಎಸ್. ಕೊಕ್ಕನೂರು, ಹೊಸಪಾಳ್ಯ ಯುವರಾಜ್, ರಾಮಪ್ಪ ಹಿಂಡಸಘಟ್ಟ, ಧರ್ಮರಾಜ್ ಹಳ್ಳಿಹಾಳ್, ತಿಮ್ಮಣ್ಣ ಕಡ್ಲೆಗೊಂದಿ, ಸುರೇಶ್ ಕೆಂಚನಹಳ್ಳಿ, ಆಕಾಶ ಎಂ.ಆರ್., ಪುನೀತ ಎಂ.ಎಲ್., ಮಾರುತಿ, ಈರಣ್ಣ, ಚಂದ್ರು, ವಿಶ್ವ, ಮರಿಯ, ಅಭಿ, ಅರುಣ್, ಧನುಷ್ ಡಿ., ಹನುಮಂತಪ್ಪ, ಪ್ರಕಾಶ, ನಿಂಗಪ್ಪ, ದುರುಗಪ್ಪ, ವಿನಾಯಕ, ಗಿರೀಶ್, ಮಧು ಹಾಗೂ ಇತರರು ಇದ್ದರು.
