ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿ ನಡೆಯಲಿದೆ. ದಿಲ್ಲಿಯಿಂದ ಬರುತ್ತಿರುವ ವರ್ತಮಾನಗಳ ಪ್ರಕಾರ ಸಂಪುಟದಲ್ಲಿರುವ ಹದಿನೈದಕ್ಕೂ ಹೆಚ್ಚು ಮಂತ್ರಿಗಳು ಪಕ್ಷದ ಕೆಲಸಕ್ಕೆ ನಿಯೋಜಿತರಾಗಿ,ಅಷ್ಟೇ ಮಂದಿ ಶಾಸಕರು ಮಂತ್ರಿಗಳಾಗಲಿದ್ದಾರೆ.
ಅಂದ ಹಾಗೆ ಇದುವರೆಗೆ ಮಂತ್ರಿ ಮಂಡಲ ಪುನರ್ರಚನೆಯ ವಿಷಯವನ್ನು ಅಧಿಕಾರ ಹಂಚಿಕೆಗೆ ತಳುಕು ಹಾಕಲಾಗುತ್ತಿತ್ತು . ಅರ್ಥಾತ್, ಎರಡೂವರೆ ವರ್ಷ ಕಳೆದ ನಂತರ ಸಿದ್ದರಾಮಯ್ಯ ಅಧಿಕಾರದಿಂದ ಕೆಳಗಿಳಿಯಲಿದ್ದಾರೆ.ಅವರ ಜಾಗಕ್ಕೆ ಬೇರೆಯವರು ಬಂದ ಕಾಲಕ್ಕೆ ಸಂಪುಟ ಪುನರ್ರಚನೆ ಕಾರ್ಯ ನಡೆಯಲಿದೆ ಎಂಬ ಮಾತು ದಟ್ಟವಾಗಿತ್ತು.
ಈ ಮಧ್ಯೆ ತಮ್ಮ ಸಂಪುಟದಲ್ಲಿರುವ ಕೆಲ ಮಂತ್ರಿಗಳ ವಿಷಯದಲ್ಲಿ ಸಿದ್ಧರಾಮಯ್ಯ ಅಸಹನೆ ಹೊಂದಿದ್ದರಾದರೂ, ಅವರನ್ನು ಕೈ ಬಿಟ್ಟು ಬೇರೆಯವರನ್ನು ತೆಗೆದುಕೊಳ್ಳುವ ವಿಷಯದಲ್ಲಿ ಅವರ ಆಪ್ತರು ಉತ್ಸುಕರಾಗಿರಲಿಲ್ಲ. ‘ಇವತ್ತಿನ ಸ್ಥಿತಿಯಲ್ಲಿ ನೀವು ಯಾರನ್ನಾದರೂ ಸಂಪುಟದಿಂದ ಕೈ ಬಿಟ್ಟರೆ ಅವರಿಗೆ ಭ್ರಷ್ಟಾಚಾರಿ ಎಂಬ ಹಣೆ ಪಟ್ಟಿ ತಗಲುತ್ತದೆ.
ಹೀಗಾಗಿ ಅವರನ್ನು ಕೈ ಬಿಟ್ಟು ಬೇರೆಯವರನ್ನು ಸಂಪುಟಕ್ಕೆ ತೆಗೆದುಕೊಳ್ಳಲು ಸ್ವಲ್ಪ ಕಾಲ ಕಾಯಿರಿ.ಎರಡಯವರೆ ವರ್ಷ ಕಳೆದ ನಂತರ ಸಂಪುಟ ಪುನರ್ರಚನೆಗೆ ಕೈ ಹಾಕಿ’ಎಂಬುದು ಆಪ್ತರ ಸಲಹೆಯಾಗಿತ್ತು.
ಆದರೆ ಅವರ ಈ ಸಲಹೆಯನ್ನು ಪಾಸಿಟಿವ್ ಆಗಿ ತೆಗೆದುಕೊಂಡ ಸಿದ್ದರಾಮಯ್ಯಾಅವರು ಮುಜುಗರಕ್ಕೆ ಸಿಲುಕಬೇಕಾಯಿತು. ಕಾರಣ?ಎರಡೂವರೆ ವರ್ಷ ಕಳೆದ ಕೂಡಲೇ ನಾಯಕತ್ವ ಬದಲಾವಣೆ ಗ್ಯಾರಂಟಿ.ಹೀಗಾಗಿ ಅಲ್ಲಿಯವರೆಗೆ ಸಂಪುಟ ಪುನರ್ರಚನೆಗೆ ಹೈಕಮಾಂಡ್ ಅವಕಾಶ ನೀಡುತ್ತಿಲ್ಲ ಎಂಬ ಮಾತು ಕೇಳತೊಡಗಿದ್ದು.
ಆದರೆ ದಿಲ್ಲಿಯಿಂದ ಈಗ ಬರುತ್ತಿರುವ ವರ್ತಮಾನದ ಪ್ರಕಾರ: ಅಧಿಕಾರ ಹಂಚಿಕೆಯ ಮಾತಿಗೂ, ಸಂಪುಟ ಪುನರ್ರಚನೆಗೂ ಸಂಬಂಧವಿಲ್ಲ.ಅದೇ ರೀತಿ ಸಂಪುಟದಿಂದ ಹೊರಗಿರುವ ಅರ್ಹರಿಗೆ ಜಾಗ ಮಾಡಿಕೊಡಲು ಹಲವರಿಗೆ ಕೊಕ್ ಕೊಡದೆ ವಿಧಿಯಿಲ್ಲ ಎಂಬುದು ಕಾಂಗ್ರೆಸ್ ವರಿಷ್ಟರ ಯೋಚನೆ.
ಪರಿಣಾಮ? ಮಂತ್ರಿಗಿರಿಗಾಗಿ ಲಾಬಿ ಮಾಡುತ್ತಿರುವ ಶಾಸಕರು ಈಗಾಗಲೇ ದಿಲ್ಲಿ ಲೆವೆಲ್ಲಿನಲ್ಲಿ ತಮ್ಮ ಕಸರತ್ತು ಶುರು ಮಾಡಿದ್ದಾರೆ.ಮತ್ತು ಸಂಪುಟದಿಂದ ತಮಗೆ ಗೇಟ್ ಪಾಸ್ ಸಿಗಲಿದೆ ಎಂಬ ಆತಂಕಕ್ಕೊಳಗಾದವರು ಬಚಾವಾಗಲು ಕಸರತ್ತು ನಡೆಸತೊಡಗಿದ್ದಾರೆ.
ಮಂತ್ರಿ ಮಂಡಲಕ್ಕೆ ಸೇರುವವರು (Political analysis)
ಅಂದ ಹಾಗೆ ವರ್ಷಾಂತ್ಯದಲ್ಲಿ ನಡೆಯಲಿರುವ ಪುನರ್ರಚನೆಯ ಸಂದರ್ಭದಲ್ಲಿ ಮಂತ್ರಿಗಳಾಗಲಿರುವವರ ಪೈಕಿ ಹಿರಿಯರು ಎಂದರೆ ಆರ್.ವಿ.ದೇಶಪಾಂಡೆ. ಸೀನಿಯಾರಿಟಿ ಮತ್ತು ಪವರ್ರಿನ ದೃಷ್ಟಿಯಿಂದ ದೇಶಪಾಂಡೆಯವರು ಶುರುವಿನಲ್ಲೇ ಮಂತ್ರಿಯಾಗಬೇಕಿತ್ತು.
ಎಷ್ಟೇ ಆದರೂ ಈ ಹಿಂದೆ ಕೆಪಿಸಿಸಿಯನ್ನು ಮುನ್ನಡೆಸಿದ ಮತ್ತು ಹಲವು ಬಾರಿ ಮಂತ್ರಿಯಾಗಿ ಕೆಲಸ ಮಾಡಿರುವ ದೇಶಪಾಂಡೆ ಅವರು,ತಮ್ಮನ್ನು ತಾವು ಸಿಎಂ ಮೆಟೀರಿಯಲ್ಲು ಅಂತ ಘೋಷಿಸಿಕೊಂಡು ಹಲ ಕಾಲವೇ ಆಗಿದೆ.
ಪಕ್ಷದಲ್ಲಿ ಅಧಿಕಾರ ಹಂಚಿಕೆಯ ಮಾತು ಸುನಾಮಿಯಂತೆ ಮೇಲೆದ್ದ ಸಂದರ್ಭದಲ್ಲಿ ದಿಲ್ಲಿಗೆ ಹೋಗಿದ್ದ ದೇಶಪಾಂಡೆಯವರು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡಿದ್ದಲ್ಲದೆ, ತಮ್ಮ ಮನದಿಂಗಿತವನ್ನು ನೇರವಾಗಿ ತೋಡಿಕೊಂಡಿದ್ದರು.
‘ಸಾರ್, ಸಿದ್ಧರಾಮಯ್ಯನವರು ಸಿಎಂ ಹುದ್ದೆಯಿಂದ ಕೆಳಗಿಳಿಯುವುದು ನಿಜವಾದರೆ ಆ ಜಾಗಕ್ಕೆ ನೀವು ಬನ್ನಿ. ಇಲ್ಲವೇ ಸಿಎಂ ಹುದ್ದೆಗೆ ನನ್ನ ಹೆಸರನ್ನು ಸೂಚಿಸಿ’ಅಂತ ಹೇಳಿ ಬಂದಿದ್ದರು.
ಹೀಗೆ ಸಿಎಂ ಆಗುವ ಬಯಕೆಯನ್ನು ಮುಂದಿಟ್ಟು ಬಂದಿದ್ದ ದೇಶಪಾಂಡೆಯವರಿಗೆ ಮಿನಿಮಮ್ ಮಂತ್ರಿಗಿರಿಯಾದರೂ ಸಿಗದಿದ್ದರೆ ಹೇಗೆ? ಹಾಗಂತಲೇ ಮಲ್ಲಿಕಾರ್ಜುನ ಖರ್ಗೆ ಅವರು ಪುನರ್ರಚನೆಯ ಸಂದರ್ಭದಲ್ಲಿ ದೇಶಪಾಂಡೆ ಮಂತ್ರಿಯಾಗಲೇಬೇಕು ಅಂತ ಪಟ್ಟು ಹಿಡಿದಿದ್ದಾರೆ.
ಇದೇ ರೀತಿ ಸಿದ್ಧರಾಮಯ್ಯ ಸಂಪುಟಕ್ಕೆ ಸೇರಲಿರುವ ಹಿರಿಯ ನಾಯಕರೆಂದರೆ ಬಿ.ಕೆ.ಹರಿಪ್ರಸಾದ್.ಕೆಲ ದಿನಗಳ ಹಿಂದೆ ಮಂತ್ರಿ ಮಂಡಲದಲ್ಲಿರುವ ಎನ್.ಎಸ್. ಭೋಸರಾಜು ಅವರನ್ನು ವಿಧಾನಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ತಂದು, ಬಿ.ಕೆ.ಹರಿಪ್ರಸಾದ್ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಲು ಸಿದ್ದರಾಮಯ್ಯ ಬಯಸಿದ್ದರಾದರೂ ಎರಡೂವರೆ ವರ್ಷ ಮುಗಿಯಲಿ ಎಂಬ ವರಿಷ್ಟರ ಮಾತಿಗೆ ಕಟ್ಟುಬಿದ್ದು ಸುಮ್ಮನಾಗಿದ್ದರು.ಅದರೆ ಈ ಬಾರಿ ಹರಿಪ್ರಸಾದ್ ಅವರು ಮಂತ್ರಿ ಮಂಡಲಕ್ಕೆ ಸೇರುವುದು ಬಹುತೇಕ ನಿಕ್ಕಿ.
ಇನ್ನು ಸಿದ್ದರಾಮಯ್ಯ ಅವರ ಸಂಪುಟಕ್ಕೆ ಸೇರಲಿರುವ ಹಿರಿಯ ಶಾಸಕರಲ್ಲಿ ಅಪ್ಪಾಜಿ ನಾಡಗೌಡ ಒಬ್ಬರು.ಹಲವು ಬಾರಿ ಶಾಸಕರಾಗಿ ಆರಿಸಿ ಬಂದರೂ ಮಂತ್ರಿಗಿರಿಯಿಂದ ದೂರವೇ ಉಳಿಯುತ್ತಿರುವ ನಾಡಗೌಡರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ತರುವುದು ಸಿದ್ದರಾಮಯ್ಯ ಅವರ ಕನಸಾಗಿತ್ತಾದರೂ ಅದು ನನಸಾಗುತ್ತಿಲ್ಲ. ಹೀಗಾಗಿ ಸಧ್ಯಕ್ಜೆ ನಾಡಗೌಡರು ಸಂಪುಟಕ್ಕೆ ಸೇರಲಿ ಎಂಬುದು ಸಿದ್ದರಾಮಯ್ಯನವರ ಲೆಕ್ಕಾಚಾರ.
ಈ ಮಧ್ಯೆ ಹಾಲಿ ಸಂಪುಟದಲ್ಲಿರುವ ಅಲ್ಪಸಂಖ್ಯಾತರ ಪೈಕಿ ಒಬ್ಬರನ್ನು ತೆಗೆದು ಸಲೀಂ ಅಹ್ಮದ್ ಅವರನ್ನು ಸೇರಿಸಿಕೊಳ್ಳುವ ಲೆಕ್ಕಾಚಾರ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರಲ್ಲಿದೆ.
ಅಂದ ಹಾಗೆ ಸಿದ್ದರಾಮಯ್ಯ ಸಂಪುಟಕ್ಕೆ ಸಲೀಂ ಅಹಮದ್ ಸೇರಲಿ ಎಂಬುದು ಡಿ.ಕೆ.ಶಿವಕುಮಾರ್ ಇಚ್ಚೆಯಾಗಿತ್ತಾದರೂ ಅದು ಸಾಧ್ಯವಾಗಿರಲಿಲ್ಲ.ರಾಜೀವ್ ಗಾಂಧಿಯವರ ಕಾಲದಲ್ಲೇ ಬೆಳಕಿಗೆ ಬಂದು ಪ್ರಭಾವಿಯಾಗಿದ್ದ ಸಲೀಂ ಅಹ್ಮದ್ ಯಾವತ್ತೋ ಮಂತ್ರಿಯಾಗಬೇಕಿದ್ದ ಮೆಟೀರಿಯಲ್ಲು. ಈಗ ಅವರಿಗೆ ಮಂತ್ರಿಯಾಗುವ ಕಾಲ ಕೂಡಿ ಬಂದಂತಿದೆ.
ಇನ್ನು ಮೈಸೂರು ಜಿಲ್ಲೆಯಿಂದ ಮಂತ್ರಿಗಳಾಗಿರುವವರ ಪೈಕಿ ಒಬ್ಬರನ್ನು ಕೈ ಬಿಟ್ಟು, ಮತ್ತೊಬ್ಬ ನಾಯಕ ತನ್ವೀರ್ ಸೇಠ್ ಅವರನ್ನು ಮಂತ್ರಿ ಮಂಡಲಕ್ಕೆ ಸೇರಿಸುವುದು ಬಹುತೇಕ ನಿಶ್ಚಿತ.
ಅಂದ ಹಾಗೆ ಸರ್ಕಾರ ಅಸ್ತಿತ್ವಕ್ಕೆ ಬಂದ ಕಾಲದಲ್ಲಿ ತನ್ವೀರ್ ಮಂತ್ರಿಯಾಗಬೇಕಿತ್ತಾದರೂ,ಆ ಸಂದರ್ಭದಲ್ಲಿ ಅವರು ಸಿದ್ಧು ವಿರೋಧಿ ಕ್ಯಾಂಪಿನಲ್ಲಿದ್ದರು.
ಪರಿಣಾಮ? ಸುರ್ಜೇವಾಲಾ ಅವರಂತವರು ಬಯಸಿದರೂ ತನ್ವೀರ್ ಸೇಠ್ ಗೆ ಅಕ್ಕು ಒಲಿದಿರಲಿಲ್ಲ.ಆದರೆ ತನ್ವೀರ್ ಸೇಠ್ ಈಗ ಸಿದ್ಧು ಕ್ಯಾಂಪಿಗೆ ನುಗ್ಗಿದ್ದಾರೆ. ಮತ್ತದೇ ಕಾರಣಕ್ಕಾಗಿ ಅವರು ಮಂತ್ರಿಯಾಗುವುದು ನಿಶ್ಚಿತವಾಗಿದೆ.
ಈ ಮಧ್ಯೆ ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಶಾಸಕ ಬಿ.ಕೆ.ಸಂಗಮೇಶ್ ಈ ಬಾರಿ ಮಂತ್ರಿಯಾಗುವುದು ಬಹುತೇಕ ನಿಚ್ವಳ. ನಾಲ್ಕು ಬಾರಿ ಶಾಸಕರಾದರೂ ಒಂದಿಲ್ಲೊಂದು ಕಾರಣದಿಂದ ಸಂಗಮೇಶ್ ಅವಕಾಶ ಕಳೆದುಕೊಳ್ಳುತ್ತಾ ಬಂದಿದ್ದರು.ಆದರೆ ಈ ಸಲ ಅವರಿಗೆ ಹಲವು ಅಂಶಗಳು ಪ್ಲಸ್ ಆಗಿರುವುದರಿಂದ ಮಂತ್ರಿಯಾಗುವ ಅವಕಾಶ ಹೆಚ್ಚು.
ಇನ್ನು ಮಂತ್ರಿಗಿರಿಗಾಗಿ ಜಪಿಸುತ್ತಲೇ ಇರುವ ಬಸವರಾಜ ರಾಯರೆಡ್ಡಿ ಈ ಬಾರಿ ಮಂತ್ರಿಯಾಗಲಿದ್ದಾರೆ. ಈ ಹಿಂದೆ ಜನತಾದಳ ಸರ್ಕಾರದಿಂದ ಹಿಡಿದು ಹಲವು ಬಾರಿ ಮಂತ್ರಿಯಾಗಿ ಕೆಲಸ ಮಾಡಿರುವ ರಾಯರೆಡ್ಡಿ ಅವರು ಕಳೆದ ಬಾರಿಯೇ ಮಂತ್ರಿಯಾಗಬೇಕಿತ್ತು.
ಆದರೆ ರಾಹುಲ್ ಗಾಂಧಿ ಅವರು ರಾಯಚೂರಿನ ಭೋಸರಾಜು ಮಂತ್ರಿಯಾಗಲೇಬೇಕು ಎಂದು ಪಟ್ಟು ಹಿಡಿದಿದ್ದರಿಂದ ರಾಯರೆಡ್ಡಿ ಹೆಸರು ಹಿಂದೆ ಸರಿದಿತ್ತು.ಆದರೆ ಈ ಸಲ ಅವರು ಮಂತ್ರಿಯಾಗುವುದು ಬಹುತೇಕ ನಿಚ್ಚಳ.
ಇನ್ನು ಕೋಲಾರ ಜಿಲ್ಲೆಯಿಂದ ನಾರಾಯಣಸ್ವಾಮಿ ಇಲ್ಲವೇ ಶ್ರೀಮತಿ ರೂಪಕಲಾ ಅವರ ಹೆಸರು ಮಂತ್ರಿಗಿರಿಯ ರೇಸಿನಲ್ಲಿವೆ.
ಇದೇ ರೀತಿ ಕೊಡಗು ಜಿಲ್ಲೆಯ ಪೊನ್ನಣ್ಣ ಮತ್ತು ಚಳ್ಳಕೆರೆಯ ರಘುಮೂರ್ತಿ ಮತ್ತು ಬಳ್ಳಾರಿಯ ನಾಗೇಂದ್ರ ಅವರು ಮಂತ್ರಿಗಿರಿಗೆ ಹತ್ತಿರವಾಗಿದ್ದು ಉತ್ತರ ಕರ್ನಾಟಕ ಪಾಕೀಟಿನಿಂದ ಹಂಪನಗೌಡ ಅವರ ಹೆಸರು ಮಂತ್ರಿಗಿರಿಗೆ ಹತ್ತಿರವಾಗಿದೆ.
ಇವರ ಮಂತ್ರಿಗಿರಿ ಭದ್ರ (Political analysis)
ಹೀಗೆ ಸಿದ್ಧರಾಮಯ್ಯ ಸಂಪುಟಕ್ಕೆ ಸೇರುವವರ ಬ್ರಿಗೇಡ್ ಸಿದ್ಧವಾಗುತ್ತಿದ್ದರೆ,ಮತ್ತೊಂದೆಡೆ ಹೊರ ಬೀಳುವವರ ಪಡೆ ಸಜ್ಜಾಗುತ್ತಿದೆ. ಈ ಪೈಕಿ ಸಂಪುಟಕ್ಕೆ ಸೇರುವವರ ಹೆಸರುಗಳನ್ನು ಗಮನಿಸಿದರೆ ಸಂಪುಟದಿಂದ ಹೊರಬೀಳುವವರು ಯಾರು?ಎಂಬುದು ಬಹುತೇಕ ಸ್ಪಷ್ಟವಾಗುತ್ತದೆ.
ಉದಾಹರಣೆಗೆ ಆರ್.ವಿ.ದೇಶಪಾಂಡೆ ಅವರ ಹೆಸರನ್ನೇ ಗಮನಿಸಿ.ಅವರನ್ನು ಸಂಪುಟಕ್ಕೆ ಸೇರಿಸಿಕೊಂಡರೆ ಏಕಕಾಲಕ್ಕೆ ಬ್ರಾಹ್ಮಣ ಕೋಟಾ ಮತ್ತು ಕಾರವಾರ ಜಿಲ್ಲೆಯ ಕೋಟಾ ಭರ್ತಿಯಾಗುತ್ತದೆ ಎಂಬುದು ವರಿಷ್ಟರ ಲೆಕ್ಕಾಚಾರ.
ಈ ಲೆಕ್ಕಾಚಾರದ ಆಳಕ್ಕಿಳಿದರೆ ಸಂಪುಟದಿಂದ ಹೊರಬೀಳುವವರ ಮುಖ ಬಹುತೇಕ ಸ್ಪಷ್ಟವಾಗುತ್ತದೆ. ಉಳಿದಂತೆ ಸಂಪುಟದಲ್ಲಿ ಭದ್ರವಾಗಿರುವ ಮತ್ತೊಂದು ಬ್ರಿಗೇಡ್ ನ ರೂಪ ಸ್ಪಷ್ಟವಾಗಿದ್ದು,ಈ ಬ್ರಿಗೇಡ್ ನಲ್ಲಿ ಘಟಾನುಘಟಿ ನಾಯಕರಿದ್ದಾರೆ.
ಡಿ.ಕೆ.ಶಿವಕುಮಾರ್, ಡಾ.ಜಿ.ಪರಮೇಶ್ವರ್, ಡಾ.ಹೆಚ್.ಸಿ.ಮಹಾದೇವಪ್ಪ, ರಾಮಲಿಂಗಸರೆಡ್ಡಿ, ಸತೀಶ್ ಜಾರಕಿಹೊಳಿ, ಕೆ.ಜೆ.ಜಾರ್ಜ್,ಸಂತೋಷ್ ಲಾಡ್, ಪ್ರಿಯಾಂಕ್ ಖರ್ಗೆ, ಕೃಷ್ಣ ಭೈರೇಗೌಡ, ಜಮೀರ್ ಅಹ್ಮದ್, ಎಸ್.ಎಸ್.ಮಲ್ಲಿಕಾರ್ಜುನ್, ಈಶ್ವರ್ ಖಂಡ್ರೆ ಅವರೆಲ್ಲ ಸಿದ್ಧು ಬ್ರಿಗೇಡ್ ನಲ್ಲಿ ಭದ್ರವಾಗಿರಲಿದ್ದಾರೆ.
ಬಿಜೆಪಿ-ಆರೆಸ್ಸೆಸ್ ನಲ್ಲಿ ಹೊಸ ಕೂಗು (Political analysis)
ಈ ಮಧ್ಯೆ ಬಿಜೆಪಿ-ಆರೆಸ್ಸೆಸ್ ನಲ್ಲಿ ಹೊಸ ಕೂಗು ಶುರುವಾಗಿದ್ದು,ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಆತೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರೇ ಮೂಲ.
ಅರ್ಥಾತ್, ಈ ಇಬ್ಬರು ನಾಯಕರು ಎಪ್ಪತ್ತೈದು ವರ್ಷದ ಗಡಿ ದಾಟಿದ್ದು,ಗಡಿ ದಾಟಿದ ನಂತರವೂ ಅಧಿಕಾರದಲ್ಲಿ ಮುಂದುವರಿದಿರುವುದು ದೊಡ್ಡ ಕೂಗಿಗೆ ಕಾರಣವಾಗಿದೆ.
ಅಂದ ಹಾಗೆ ಇತ್ತೀಚಿನ ವರ್ಷಗಳಲ್ಲಿ ಎಪ್ಪತ್ತೈದು ವರ್ಷದ ಗಡಿ ತಲುಪಿದವರನ್ನು ಗೌರವಯುತವಾಗಿ ಬೀಳ್ಕೊಡುವ ಕೆಲಸ ಬಿಜೆಪಿ ಮತ್ತು ಸಂಘಪರಿವಾರದಲ್ಲಿ ನಡೆಯುತ್ತಿತ್ತು. ಹೀಗೆ ವಯಸ್ಸಿನ ಕಾರಣ ನೀಡಿ ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಹಿರಿಯ ನಾಯಕರಿಗೆ ಟಿಕೆಟ್ ನಿರಾಕರಿಸಲಾಗಿತ್ತಲ್ಲದೆ,ಮತ್ತದನ್ನು ಸಮರ್ಥಿಸಿಕೊಳ್ಳುವ ಕೆಲಸವೂ ಆಗಿತ್ತು.
ಆದರೆ ಈಗ ಪ್ರಧಾನಿ ನರೇಂದ್ರಮೋದಿ ಮತ್ತು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಎಪ್ಪತ್ತೈದರ ಗಡಿ ದಾಟಿ ನಿರಾತಂಕವಾಗಿ ಮುಂದುವರಿದಿರುವುದು ಚರ್ಚೆಗೆ ಗ್ರಾಸವಾಗಿದೆ.
ಈ ಪೈಕಿ ಮೋಹನ್ ಭಾಗವತ್ ನಿವೃತ್ತರಾಗಿದ್ದರೆ,ದತ್ತಾತ್ರೇಯ ಹೊಸಬಾಳೆ ಅವರಷ್ಟೇ ಅಲ್ಲದೆ,ಮಹಾರಾಷ್ಟ್ರದ ಅತುಲ್ ಕುಲಕರ್ಣಿ,ಕರ್ನಾಟಕದ ಮುಕುಂದ್ ಜೀ ಅವರು ಸೇರಿದಂತೆ ಹಲವರ ಹೆಸರುಗಳು ಫ್ರಂಟ್ ಲೈನಿಗೆ ಬರುತ್ತಿದ್ದವು.
ಇದೇ ರೀತಿ ಪಕ್ಷದ ವಯಸ್ಸಿನ ನೆಪ ಮುಂದೊಡ್ಡಿ ಕೆ.ಎಸ್.ಈಶ್ವರಪ್ಪ,ಜಗದೀಶ್ ಶೆಟ್ಟರ್ ಅವರಂತಹ ನಾಯಕರಿಗೆ ಟಿಕೆಟ್ ನಿರಾಕರಿಸದೆ ಇದ್ದಿದ್ದರೆ ಕಳೆದ ಚುನಾವಣೆಯಲ್ಲಿ ಕರ್ನಾಟಕ ಬಿಜೆಪಿ ಮತ್ತಷ್ಟು ಸುಸ್ಥಿತಿಯಲ್ಲಿರುತ್ತಿತ್ತು ಎಂಬುದು ಈಗ ಕೇಳುತ್ತಿರುವ ಕೂಗು.
ಪರಿಣಾಮ? ಕರ್ನಾಟಕ ಸೇರಿದಂತೆ ದೇಶದ ಬಹುತೇಕ ರಾಜ್ಯಗಳಲ್ಲಿ ನಿವೃತ್ತಿಯತ್ತ ಮುಖ ಮಾಡಿದ್ದ ಬಹುತೇಕ ನಾಯಕರು ಈಗ ಯೂ ಟರ್ನ್ ಹೊಡೆದಿದ್ದು ಈಗಿನ ಚರ್ಚೆಗೆ ಮತ್ತಷ್ಟು ಬಿರುಸು ತುಂಬಿದ್ದಾರೆ.
ಆರ್.ಟಿ.ವಿಠ್ಠಲಮೂರ್ತಿ