ಆಚೆ ಯಾರದೋ ಬಿಕ್ಕು
ಮತ್ಯಾರದೋ ರಕ್ತ
ಹೆತ್ತವರ ಮುಂದೆಯೇ ಹರಿಯುತಿದೆ
ಮಕ್ಕಳ ನೆತ್ತರು!
ಸಾಲಿಗೆ ಹೋದರೂ

ಜೊತೆಯಲಿರಲೇಬೇಕೀಗ
ಅಸಹಾಯಕ ದೇವರು!
ಆ ದೇವನಿಗೆ
ಈ ದೇವ
ವಿರುದ್ಧವಾದ ದುಃಖ
ಬೆತ್ತಲಾದ ದೇವರದೇ ಸುದ್ದಿ
ಸದ್ಯದ ಸಂತೆಯಲಿ!
ಬಸವನ ಎದುರು ಕನಕ
ಕನಕನ ಎದುರು ಶರೀಫ!
ಪ್ರತಿಮೆಗಳು ಅಳುವುದಿಲ್ಲ
ಆದರೆ….
ದುಃಖಿಸುತ್ತವೆ.
ಶರೀಫ ಸಾಬರನಂತೆ ಹೌದಾ..?
ಕೇಳುವನೊಬ್ಬನೀಗ
ಹುಲಗೂರ ಸಂತಿಯಲಿ!
ಹೆತ್ತವರು,
ಮೇಷ್ಟರು,
ಲೋಕದ ಸಾಲಿಯಲಿ
ಸೋತ ಸುದ್ದಿಯಿದೆ.
ಬಿ.ಶ್ರೀನಿವಾಸ