ದಾವಣಗೆರೆ (Davanagere) :ಯಾವುದೇ ಕೆಲಸದಲ್ಲಿ ಭಗೀರಥರಂತೆ ಸತತ ಪ್ರಯತ್ನ ಮಾಡಿದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಭಾನುವಾರ ಜಿಲ್ಲಾಡಳಿತ ವತಿಯಿಂದ ಆಯೋಜಿಸಲಾದ ಭಗೀರಥ ಜಯಂತಿಯಲ್ಲಿ ಭಗೀರಥ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಒಂದಲ್ಲ ಒಂದು ಕ್ಷೇತ್ರದಲ್ಲಿ ಪರಿಣಿತಿ ಹೊಂದಿರುತ್ತಾರೆ. ಹಾಗಾಗಿ ಸೋತಾಗ ಕುಗ್ಗದೇ, ಭಗೀರಥರಂತೆ ಸತತ ಪ್ರಯತ್ನ ಪ್ರಾಮಾಣೀಕವಾಗಿ ಮಾಡಿದಲ್ಲಿ ಯಾವುದಾದರೂ ಒಂದು ಕ್ಷೇತ್ರದಲ್ಲಿ ಸಾಧನೆ ನಿಶ್ಚಿತ ಎಂದ ಅವರು, ಪ್ರತಿಯೊಂದು ಕುಟುಂಬದಲ್ಲಿ ಭಗೀರಥರಂತಹ ವ್ಯಕ್ತಿ ಜನಿಸಿದರೆ ದೇಶ, ನಾಡು, ಸಮಾಜ, ಸಂಸ್ಕೃತಿ ಮತ್ತಷ್ಟು ಸಮೃದ್ಧಿಯಾಗಲಿದೆ. ಭಗೀರಥ ಮಹರ್ಷಿ ಅವರ ಜೀವನ, ಆದರ್ಶಗಳು ಭವಿಷ್ಯದ ಪೀಳಿಗೆಗೆ ದಾರಿದೀಪವಾಗಲಿ ಎಂದು ಆಶಯ ವ್ಯಕ್ತಪಡಿಸಿದರು.
Read also : ವಕ್ಫ್ ಉಳಿಸಿ-ಸಂವಿಧಾನ ಉಳಿಸಿ ಬೃಹತ್ ಸಮಾವೇಶದ ಪೋಸ್ಟರ್ ಬಿಡುಗಡೆ
ನಿವೃತ್ತ ಪ್ರಾಂಶುಪಾಲರಾದ ಡಾ.ಎಸ್.ಆರ್. ಅಂಜಿನಪ್ಪ ಮತನಾಡಿ, ಭಗೀರಥನು ಇಕ್ಷ್ವಾಕು ವಂಶದ ರಾಜನಾಗಿದ್ದು, ತನ್ನ ಪೂರ್ವಜರ ಆತ್ಮಗಳಿಗೆ ಶಾಂತಿ ಸಿಗಲೆಂದು ಅವನು ತನ್ನ ನಿಷ್ಠೆ ಹಾಗೂ ಪ್ರಾಮಾಣಿಕ ಕಠಿಣ ತಪಸ್ಸು ಮಾಡಿ ಬ್ರಹ್ಮನನ್ನು ಮೆಚ್ಚಿಸಿ, ಪಂಚಭೂತಗಳಲ್ಲಿ ಒಂದಾದ ಗಂಗೆಯನ್ನು ಧರೆಗಿಳಿಸಿದ ಮಹಾನ್ ಮಾನವತವಾದಿ. ಅಂತಹ ಪವಿತ್ರವಾದ ಗಂಗೆಯನ್ನು ಇಡೀ ಮನುಕುಲಕ್ಕೆ ನೀಡಿದ ಪುರಾಣ ಪುರುಷ. ಸತತ ಪ್ರಯತ್ನದಿಂದ ಅಸಾಧ್ಯವಾದುದು ಸಾಧ್ಯ ಎಂದು ತೋರಿದ ಆದರ್ಶ ಪುರುಷ, ಮನುಷ್ಯ ಪ್ರಯತ್ನಕ್ಕೆ ಮಾದರಿ. ಈ ಭಗೀರಥ ಮಹಾಶಯ. ಇಂತಹ ವ್ಯಕ್ತಿಯನ್ನು ಕೇವಲ ಒಂದು ಜಾತಿ, ಸಮುದಾಯಕ್ಕೆ ಹಾಗೂ ಜಯಂತಿಗಳಂದು ಪುಷ್ಪಾರ್ಚನೆಗೆ ಸೀಮಿತಗೊಳಿಸದೇ, ಅನುಸರಣೆಯ ಹಂತವನ್ನು ಪಡೆಯಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಈ ವೇಳೆ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಹೆಚ್ಚುವರಿ ಪೊಲೀಸ್ವರಿಷ್ಠಾಧಿಕಾರಿ ವಿಜಯ್ ಕುಮಾರ್ ಎಂ ಸಂತೋಷ್, ದೂಡ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಉಪ್ಪಾರ ಸಮಾಜದ ಗೌರವಾಧ್ಯಕ್ಷ ತಿಪ್ಪಣ್ಣ, ಜಿಲ್ಲಾಧ್ಯಕ್ಷ ಎಂ.ರಮೇಶ್, ತಾಲ್ಲೂಕು ಅಧ್ಯಕ್ಷ ಗಿರೀಶ್ ಹೊಸನಾಯಕನಹಳ್ಳಿ, ಕಾರ್ಯದರ್ಶಿ ಹೆಚ್.ಎಸ್,ಹಾಲೇಶ್, ಮಾಜಿ ಉಪ ಮೇಯರ್ ಮಂಜುಳಮ್ಮ ಸಮಾಜದ ಮುಖಂಡರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.