ದಾವಣಗೆರೆ ಏ.14 : ಡಾ. ಬಿ.ಆರ್ ಅಂಬೇಡ್ಕರ್ ರವರು ಹಾಕಿಕೊಟ್ಟಂತಹ ಸಂವಿಧಾನದಿಂದ ಭಾರತ ವಿಶ್ವದಲ್ಲಿಯೇ ಒಂದು ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಯಶಸ್ಸು ಕಂಡಿದೆ ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ. ತಿಳಿಸಿದರು.
ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಮಹಾನಗರ ಪಾಲಿಕೆ ಆಶ್ರಯದಲ್ಲಿ ತುಂಗಭದ್ರಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ರವರ 133 ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ನಂತರ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಡಾ.ಬಿ.ಆರ್. ಅಂಬೇಡ್ಕರ್ ಅವರು ಚಿಕ್ಕ ವಯಸ್ಸಿನಿಂದಲೆ ಸಾಕಷ್ಟು ಕಷ್ಟ, ಅಸ್ಪೃಶ್ಯತೆಯನ್ನು ಎದುರಿಸಿದ್ದಾರೆ. ಆದರೂ ಎಂತಹ ಕಷ್ಟಗಳು ಬಂದರೂ ಸಹ ಆತ್ಮಸ್ಥೈರ್ಯ ಕಳೆದುಕೊಳ್ಳದೆ ಸಮಾಜದಲ್ಲಿರುವ ಸಂಘರ್ಷಗಳನ್ನ ಸಮರ್ಥವಾಗಿ ಎದುರಿಸಿ ಭಾರತ ದೇಶದ ರತ್ನವಾಗಿ ಅವರು ಬೆಳೆದರು. ಅಂತಹ ಆದರ್ಶ ಪುರುಷನನ್ನ ನಾವೆಲ್ಲರೂ ಸ್ಮರಿಸುವ ದಿನ ಇದಾಗಿದ್ದು ಅವರು ತಮ್ಮ ನಿರಂತರ ಅಧ್ಯಯನಶೀಲತೆಯಿಂದ ವಿಶ್ವವೇ ಬೆರಗಾಗುವಂತೆ ಮಾಡಿದ್ದಾರೆ. ಅವರು ನ್ಯೂಯಾರ್ಕ್ ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ ಸಂಶೋಧನಾ ಪದವಿ ಪಡೆದು, ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಪದವಿ ಪಡೆದರು. ಕೊಲಂಬಿಯಾ ವಿಶ್ವವಿದ್ಯಾನಿಲಯ ಅಧ್ಯಯನ ವರದಿಯನ್ವಯ ಇಲ್ಲಿ ಅಭ್ಯಾಸ ಮಾಡಿದಂತಹ ವಿದ್ಯಾರ್ಥಿಗಳಲ್ಲಿ ಇಡೀ ವಿಶ್ವದಲ್ಲಿ ಹೆಚ್ಚು ಪ್ರಭಾವವುಂಟು ಮಾಡಿದವರಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ರವರು ಪ್ರಥಮ ಆದ್ಯತೆಗೆ ಬರುತ್ತಾರೆ ಎಂದರು.
ಸಮ ಸಮಾಜದ ನಿರ್ಮಾಣ ಮಾಡಲು ನಾವು ಕೂಡ ಕಾರಣಭೂತರಾಗೋಣ
ಡಾ.ಬಾಬಾ ಸಾಹೇಬರು ಹಾಕಿಕೊಟ್ಟಂತಹ ಆದರ್ಶಗಳು, ತತ್ವಗಳು, ಸಿದ್ಧಾಂತಗಳು , ಸಕರಾತ್ಮಕ ಪರಿಣಾಮವನ್ನು ಉಂಟು ಮಾಡಿವೆ. ಇದು ಒಂದು ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಅವರು ಕಾರಣೀಭೂತರಾಗಿದ್ದಾರೆ ಎಂಬುದನ್ನು ಇಡೀ ವಿಶ್ವಕ್ಕೆ ತೋರಿಸಿಕೊಡಲಾಗಿದೆ. ಅಂತಹ ಅಧ್ಯಯನ ಮಾಡಿರುವ ಡಾ.ಬಿ.ಆರ್ .ಅಂಬೇಡ್ಕರ್ ಅವರಿಗೆ ನಾವೆಲ್ಲರೂ ಋಣಿಯಾಗಿರಬೇಕಾಗಿರುತ್ತದೆ. ಅಂಬೇಡ್ಕರ್ ಅವರು ರಚಿಸಿದಂತಹ ಸಂವಿಧಾನವನ್ನು ಇನ್ನೂ ಆಳವಾಗಿ ಅಧ್ಯಯನ ಮಾಡಬೇಕು, ಅದರಲ್ಲಿ ಸಮಾನತೆ, ಬ್ರಾತೃತ್ವದ ಪರಿಕಲ್ಪನೆಗಳು, ಸಮ ಸಮಾಜದ ಸೃಷ್ಟಿ ಮಾಡಬೇಕೆಂಬ ದೃಷ್ಟಿಕೋನ, ಉತ್ತಮ ಸಮಾಜವನ್ನು ನಿರ್ಮಾಣ ಮಾಡಲಿದೆ. ಅಂತಹ ಆದರ್ಶ ಪುರುಷ ಹಾಕಿಕೊಟ್ಟಂತಹ ಸಿದ್ಧಾಂತಗಳನ್ನು ಪಾಲಿಸಿ ಅಸ್ಪೃಶ್ಯತೆ ವಿರೋಧಿಗಳಾಗಿ, ಸಮ ಸಮಾಜದ ನಿರ್ಮಾಣ ಮಾಡಲು ನಾವು ಕೂಡ ಕಾರಣಭೂತರಾಗೋಣ ಎಂದರು.
ಮತದಾನ ಮಾಡಿ ಪ್ರಜಾಪ್ರಭುತ್ವ ಗಟ್ಟಿಗೊಳಿಸಿ
ಮೇ 7ನೇ ರಂದು ಲೋಕಸಭಾ ಚುನಾವಣೆ ಮತದಾನ ನಡೆಯುತ್ತಿದೆ, ಡಾ.ಬಿ.ಆರ್.ಅಂಬೇಡ್ಕರ್ ರವರ ಪರಿಶ್ರಮಕ್ಕೆ ಸಾಕಾರವಾಗಿ 18 ವರ್ಷ ತುಂಬಿದ ಪ್ರತಿಯೊಬ್ಬರು ಅಂದು ಮತಗಟ್ಟೆಗೆ ಬಂದು ಮುಕ್ತ, ನ್ಯಾಯಸಮ್ಮತವಾಗಿ, ಮತದಾನ ಮಾಡಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವಲ್ಲಿ ಸಾರ್ಥಕತೆ ಮೆರೆಯೋಣ ಎಂದು ತಿಳಿಸಿದರು.
ಅಂಬೇಡ್ಕರ್ ಅವರ ಜೀವನ ನಮಗೆ ಆದರ್ಶ
ಜಿ ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ ಇಟ್ನಾಳ್ ಮಾತನಾಡಿ, ಅಂಬೇಡ್ಕರ್ ಅವರ ಜೀವನ ನಮಗೆ ಆದರ್ಶ, ಸ್ಪೂರ್ತಿ, ಕೊರೆತೆಗಳು ಇದ್ದರೂ ಕೂಡ ಅವರು ಉನ್ನತ ಶಿಕ್ಷಣ ಪಡೆದರು. ಉನ್ನತ ವ್ಯಾಸಂಗ ಮಾಡಿದರು, ತದನಂತರ ಸಮಾಜದಲ್ಲಿ ಇರುವಂತಹ ಪಿಡುಗುಗಳ, ಲೋಪದೋಷಗಳ ವಿರುದ್ಧ ಸಾಕಷ್ಟು ಹೋರಾಟದ ಮೂಲಕ ಜನರನ್ನು ಸಂಘಟಿತರನ್ನಾಗಿ ಮಾಡಿದರು.
ಅಂಬೇಡ್ಕರ ತತ್ವ , ಆದರ್ಶಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು
ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿ ಸಂವಿಧಾನ ಶಿಲ್ಪಿಯಾಗಿ ಎಲ್ಲಾ ಪಿಡುಗುಗಳನ್ನು ಹೊಡೆದು ಹಾಕುವ ನಿಟ್ಟಿನಲ್ಲಿ ನಮಗೆಲ್ಲರಿಗೂ ಅಧಿಕಾರ, ಮೂಲಭೂತ ಹಕ್ಕುಗಳು, ಸಾಂವಿಧಾನಿಕ ಹಕ್ಕುಗಳು ಹಾಗೂ ಕಾನೂನಾತ್ಮಕ ಹಕ್ಕುಗಳನ್ನು ಕೊಟ್ಟಿದ್ದಾರೆ. ಸಮ ಸಮಾಜದ ನಿರ್ಮಾಣಕ್ಕಾಗಿ ಅವರ ಕೊಡುಗೆ ಅಪಾರವಾಗಿದೆ. ಹಾಗಾಗಿ ಅವರು ಕೊಟ್ಟಿರುವಂತಹ ಎಲ್ಲಾ ತತ್ವಗಳು, ಆದರ್ಶಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ಇದು ಕೇವಲ ಮಾತಿನ ಚಾಟಿಯಾಗದೆ ಜೀವನ ಮತ್ತು ವೃತ್ತಿಯಲ್ಲಿ ಅಳವಡಿಸಿಕೊಂಡು ತೋರಿಸಿದಾಗ ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿಶ್ರಮ ಸಾರ್ಥಕತೆಯಾಗುತ್ತದೆ ಎಂದು ತಿಳಿಸಿದರು.
ದಾವಣಗೆರೆ ವಿಶ್ವವಿದ್ಯಾನಿಲಯದ ಶಿಕ್ಷಣಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ರಂಗಸ್ವಾಮಿ.ಸಿ ಉಪನ್ಯಾಸ ನೀಡಿದರು.
ಅಪರ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರೀನ್ ಭಾನು ಎಸ್. ಬಳ್ಳಾರಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ್ ಎಂ ಸಂತೋಷ, ತಹಶೀಲ್ದಾರ ಅಶ್ವಥ್ ಸಿ, ಯೋಜನಾ ನಿರ್ದೇಶಕ ಮಹಾಂತೇಶ್ ಇನ್ನಿತರರು ಉಪಸ್ಥಿತರಿದ್ದರು. ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ನಾಗರಾಜ್ ಸ್ವಾಗತಿಸಿದರು.